Advertisement

ಕರ್ನಾಟಕ ಚುನಾವಣೆ 2023; ಆಡಳಿತಾರೂಢ ಬಿಜೆಪಿಗೆ ಅಡ್ಡಿಯಾಗುವುದೇ ಅಂತಿಮ ಕ್ಷಣದ ಮಿನಿ ಬಂಡಾಯ ?

01:52 PM Dec 14, 2022 | Team Udayavani |

ಬೆಂಗಳೂರು: ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಎರಡು ರಾಜ್ಯಗಳಲ್ಲಿ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಸಾಕಷ್ಟು ಪ್ರಯೋಗಗಳನ್ನು ನಡೆಸಿತ್ತು. ಆ ಬದಲಾವಣೆಯ ಅಸ್ತ್ರ ಗುಜರಾತ್ ನಲ್ಲಿ ಫಲ ನೀಡಿದರೆ ಹಿಮಾಚಲದಲ್ಲಿ ತಿರುಗು ಬಾಣವಾಗಿದೆ. ಹೀಗಾಗಿ ಒಂದು ರಾಜ್ಯಕ್ಕೆ ಅನ್ವಯವಾಗುವ ಬಿಜೆಪಿಯ ಚುನಾವಣಾ “ಮಾಡೆಲ್ “ ಇನ್ನೊಂದು ರಾಜ್ಯಕ್ಕೆ ವ್ಯತಿರಿಕ್ತವಾಗುತ್ತದೆ ಎಂಬುದಕ್ಕೆ ಈ ಫಲಿತಾಂಶವೇ ಉದಾಹರಣೆಯಾಗಿದೆ. ಈ ಬಗ್ಗೆ ಚರ್ಚೆ ನಡೆಯುತ್ತಿರುವ ಹಂತದಲ್ಲೇ ಕರ್ನಾಟಕ ವಿಧಾನಸಭಾ ಚುನಾವಣೆಗೆ ತಂತ್ರಗಾರಿಕೆ ಸಿದ್ಧತೆಯ ತರಾತುರಿಯಲ್ಲಿ ಬಿಜೆಪಿ ಇದೆ.

Advertisement

ಇದನ್ನೂ ಓದಿ:ಗಾಲಿ ಜನಾರ್ದನ ರೆಡ್ಡಿ, ಸ್ಥಳೀಯ ಮುಖಂಡರ ಅನುಪಸ್ಥಿತಿಯಲ್ಲಿ ರೆಡ್ಡಿ ಪತ್ನಿಯಿಂದ ಗೃಹ ಪ್ರವೇಶ

ಹಾಗಾದರೆ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಮಾಡೆಲ್ ಯಾವುದು ?ಈ ಪ್ರಶ್ನೆ ಎದುರಾದಾಗಲೆಲ್ಲ ರಾಜ್ಯ ಬಿಜೆಪಿ ನಾಯಕರು “ಗುಜರಾತ್ ಮಾಡೆಲ್” ಎಂದು ಉತ್ತರಿಸುತ್ತಲೇ ಬಂದಿದ್ದಾರೆ. ಒಂದು ರಾಜ್ಯದಲ್ಲಿ ಆಡಳಿತಾತ್ಮಕ ಸ್ಥಿರತೆ ತರುವುದಕ್ಕೆ ಗುಜರಾತೇ ಮಾದರಿ. ಅದಾಗಬೇಕಾದರೆ ಗುಜರಾತ್ ರೀತಿಯಲ್ಲಿ ಚುನಾವಣಾ ಪರಿಷ್ಕರಣೆಗಳೂ ಕರ್ನಾಟಕದಲ್ಲಿ ಆಗಬೇಕೆಂಬುದು ಸಂಘ ಪರಿವಾರದ ಹಿರಿಯರ ಜತೆಗೆ ಮೂಲ ಬಿಜೆಪಿ ನಾಯಕರ ಅಂಬೋಣವೂ ಆಗಿದೆ.

ಹೀಗಾಗಿ ರಾಜ್ಯ ವಿಧಾನಸಭೆ ಚುನಾವಣೆಗೆ ಗುಜರಾತ್ ಮಾದರಿ ಅನುಸರಣೆ ಬಗ್ಗೆ ಈಗ ಚರ್ಚೆಯಾಗುತ್ತಿದೆ. ಏಕೆಂದರೆ ಗುಜರಾತ್ ರೀತಿಯಲ್ಲಿ ಕರ್ನಾಟಕದಲ್ಲೂ ಹಳೆಯ ರಾಜಕಾರಣಿಗಳನ್ನು ಮನೆಗೆ ಕಳುಹಿಸಬೇಕೆಂಬ ಆಗ್ರಹ ಈಗ ಬಲವಾಗಿದೆ. ಒಂದು ರಾಜಕೀಯ ವ್ಯವಸ್ಥೆಯಲ್ಲಿ ಹೊಸ ನೀರು, ಹೊಸ ಆಲೋಚನೆ ಹರಿದು ಬರುತ್ತಲೇ ಇರಬೇಕು. “ನಿಂತ ನೀರಲ್ಲಿ ಹುಟ್ಟುವುದು ರೋಗ ಹಬ್ಬಿಸುವ ಸೊಳ್ಳೆ” ಎಂಬುದು ಬಿಜೆಪಿಯ ಒಳಮನೆಯ ಚಿಂತಕರ ವಾದ. ಗುಜರಾತ್ ನಲ್ಲಿ ಈ ಕಾರಣಕ್ಕಾಗಿ 42 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಹೊಸದಾಗಿ ಟಿಕೆಟ್ ಪಡೆದವರಲ್ಲಿ 40 ಜನರು ಗೆದ್ದಿದ್ದಾರೆ. ಹೀಗಾಗಿ ಬದಲಾವಣೆಗೆ ಜನ ಮನ್ನಣೆ ನೀಡಿಯೇ ನೀಡುತ್ತಾರೆ ಎಂಬ ಉದಾಹರಣೆ ಸಹಿತ ವಾದ ಮುಂದಿಡುತ್ತಿದ್ದಾರೆ. ಆದರೆ ಇದೇ ವಾದ ಹಿಮಾಚಲದಲ್ಲಿ ಸ್ವಲ್ಪ ಮಟ್ಟಿಗೆ ತಿರುಗುಬಾಣವಾಗಿದೆಯಲ್ಲ ಎಂಬ ವಾದಕ್ಕೆ ಇನ್ನೂ ಸ್ಪಷ್ಟ ಸಮರ್ಥನೆ ಸಿಕ್ಕಿಲ್ಲ.

ಏಕೆಂದರೆ ಹಿಮಾಚಲ ಪ್ರದೇಶದಲ್ಲಿ ಹಿರಿಯರನ್ನು ಕೈ ಬಿಟ್ಟಿದ್ದಕ್ಕಾಗಿ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂಬುದು ಎಷ್ಟು ಸತ್ಯವೋ ಹಿರಿಯರಿಂದ ಗೆಲುವು ಸಿಕ್ಕಿಲ್ಲ ಎಂಬುದೂ ಅಷ್ಟೆ ಸತ್ಯ. ಹಾಲಿ ಸರ್ಕಾರದಲ್ಲಿ ಸಚಿವರಾಗಿದ್ದ ಏಳು ಜನ ಹಿರಿಯರು ಈ ಚುನಾವಣೆಯಲ್ಲಿ ಸೋಲನುಭವಿಸಿದರೆ, ಅಷ್ಟೇ ಪ್ರಮಾಣದಲ್ಲಿ ಹೊಸಬರಿಗೆ ಹಿನ್ನಡೆಯಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿಯಾಗಿದ್ದ ಜೈರಾಂ ಠಾಕೂರ್ ಹಾಗೂ ಕೇಂದ್ರ ಸಚಿವ ಅನುರಾಗ್ ಠಾಕೂರ್ ನಡುವಿನ ಕೊನೆಯ ಕ್ಷಣದವರೆಗಿನ ಭಿನ್ನಮತವೇ ಅಲ್ಲಿ ಬಿಜೆಪಿ ಸೋಲಿಗೆ ಅಸಲಿ ಕಾರಣವಾಗಿದ್ದು, ಕರ್ನಾಟಕದಲ್ಲೂ ಅದೇ ಸಮಸ್ಯೆ ತಲೆದೋರಬಹುದೇ ಎಂಬ ಚರ್ಚೆ ಪ್ರಾರಂಭವಾಗಿದೆ.

Advertisement

ಕರ್ನಾಟಕದಲ್ಲಿ ಬಂಡಾಯವೆದ್ದು, ಪ್ರತ್ಯೇಕ ಪಕ್ಷ ಸ್ಥಾಪನೆ ಮಾಡಿ ಬಿಜೆಪಿಗೆ ನೇರ ನಷ್ಟವುಂಟು ಮಾಡುವ ಸಾಮರ್ಥ್ಯವೇನಾದರೂ ಇದ್ದರೆ ಅದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾತ್ರ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅವರು ಪಕ್ಷದಿಂದ ಸಿಡಿದು ಹೋಗುವ ಸ್ಥಿತಿಯಲ್ಲಂತೂ ಇಲ್ಲ. ಹಾಗಂಥ ಬಿಜೆಪಿ ವರಿಷ್ಠರ ಎಲ್ಲ ನಿರ್ಧಾರಗಳ ಬಗ್ಗೆ ಅವರು ಸಮಾಧಾನವನ್ನೂ ಹೊಂದಿಲ್ಲ. ಸಿಎಂ ಬಸವರಾಜ್ ಬೊಮ್ಮಾಯಿ ಅವರ ಜತೆಗಂತೂ ಅವರು ಇತ್ತೀಚೆಗೆ ಅಂತರವನ್ನೇ ಕಾಯ್ದುಕೊಳ್ಳುತ್ತಿದ್ದಾರೆ. ತಮ್ಮ ವಿರುದ್ಧ ಮಾತನಾಡುವ ಸ್ವಪಕ್ಷೀಯರ ವಿರುದ್ಧ ಹೈಕಮಾಂಡ್ ಜಾಣ ಮೌನ ವಹಿಸಿರುವುದು ಯಡಿಯೂರಪ್ಪನವರಿಗೆ ಸುತಾರಾಂ ಇಷ್ಟವಿಲ್ಲ. ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡಿದ್ದರೂ ಸಕ್ರಿಯ ರಾಜಕಾರಣದಲ್ಲೇ ಇರುತ್ತೇನೆ ಎಂದಿರುವ ಯಡಿಯೂರಪ್ಪನವರ ಗುಪ್ತ ನಡೆ ಈ ಚುನಾವಣೆಯಲ್ಲಿ ಮಹತ್ತರ ಪಾತ್ರ ವಹಿಸಲಿದೆ.

ಇದೆಲ್ಲದರ ಮಧ್ಯೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದಾರೆ. ಸದ್ಯದಲ್ಲೇ ಪ್ರತ್ಯೇಕ ಪಕ್ಷ ಸ್ಥಾಪನೆಗೆ ಅವರು ದಿನಾಂಕ ನಿಗದಿಮಾಡಿಕೊಂಡಿದ್ದಾರೆ. ರೆಡ್ಡಿ ಜತೆಗೆ ಅವರ ಪರಮಾಪ್ತ ಬಿ.ಶ್ರೀರಾಮುಲು ಕೈ ಜೋಡಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ ಉಪಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ತಮಗೆ ಉಸಿರುಗಟ್ಟಿಸುವ ವಾತಾವರಣವನ್ನು ಬಿಜೆಪಿ ನಾಯಕರು ಸೃಷ್ಟಿ ಮಾಡಿದ್ದಾರೆ ಎಂದು ರಾಮುಲು ಆಪ್ತರ ಬಳಿ ಅಲವತ್ತುಕೊಂಡಿದ್ದಾರೆ. ಹೀಗಾಗಿ ಜನಾರ್ದನ ರೆಡ್ಡಿ ಮಾತಿನ ಹಿಂದೆ ಶ್ರೀರಾಮುಲು ಧ್ವನಿ ಅಡಗಿರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಹೀಗಾದ ಪಕ್ಷದಲ್ಲಿ ಬಿಜೆಪಿಯ ಪ್ರಬಲ ವೋಟ್ ಬ್ಯಾಂಕ್ ಆದ ವಾಲ್ಮೀಕಿ ಸಮುದಾಯದಲ್ಲಿ ತುಸು ವಿಚಲಿತ ಭಾವ ಮೂಡುವ ಸಾಧ್ಯತೆ ಇದೆ.

ಇನ್ನು ಹಿರಿಯರಿಗೆ ಹಾಗೂ ಅವರ ಕುಟುಂಬ ವರ್ಗಕ್ಕೆ ಟಿಕೆಟ್ ನಿರಾಕರಣೆ ಮಾಡುವುದು ದಿಟವಾದ ಪಕ್ಷದಲ್ಲಿ ಸ್ಥಳೀಯವಾಗಿ ಪ್ರಬಲವಾಗಿರುವ ಅನೇಕ ಮುಖಂಡರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಆಗ ಹಿಮಾಚಲ ಪ್ರದೇಶದ ರೀತಿಯಲ್ಲೇ ಬಿಜೆಪಿಗೆ ಕೊನೆಯ ಹಂತದ ಬಂಡಾಯ ಶಮನವೇ ಪ್ರಧಾನ ಕೆಲಸವಾಗಿಬಿಡುವ ಅಪಾಯವಿದೆ. ಹೀಗಾಗಿ ಈ ಮಿನಿ ಮಂಡಾಯ ಶಮನದ ಬಗ್ಗೆ ಈಗಿನಿಂದಲೇ ಬಿಜೆಪಿ ತಲೆಕೆಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next