Advertisement

ಮಾನವನನ್ನು ಕ್ಷಮಿಸಿಯಾಳೇ ಧರಿತ್ರಿ?

01:13 AM Feb 22, 2021 | Team Udayavani |

ಭೂಮಿಯು ತನ್ನ ಕಕ್ಷೆಯ ಮೇಲೆ ಚಲಿಸಬೇಕಾದರೆ ಅದಕ್ಕೆ ಸೂರ್ಯ ಹಾಗೂ ಇತರ ಗ್ರಹಗಳ ನಡುವೆ ಇರುವ ಕಾಂತೀಯ ಆಕರ್ಷಣೆಯೇ ಕಾರಣ. ಸೌರಮಂಡಲದ ಎಲ್ಲ ಗ್ರಹಗಳು ತಮ್ಮ ತಮ್ಮ ಕಕ್ಷೆಯಲ್ಲಿ ಚಲಿಸದೆ ಆಚೀಚೆಯಾದರೆ ಉಷ್ಣಾಂಶದಲ್ಲಿ ಗಮನಾರ್ಹ ಏರಿಕೆ ಸಾಧ್ಯ. ಅದು ಏನೇ ಇರಲಿ, ಈ ಗ್ರಹಗಳು ಕಕ್ಷೆ ಬಿಡಲು ಕಾರಣವೇನಿರಬಹುದು ಎಂದು ಯೋಚಿಸೋಣ. ಭೂಮಿಯ ಸುತ್ತ ಅನೇಕ ಉಪಗ್ರಹಗಳನ್ನು ಹಾರಿಸಿ ಬಿಟ್ಟಿದ್ದಾನೆ ಮನುಷ್ಯ. ಜಾಗತಿಕವಾಗಿ ಉಪಗ್ರಹ ಉಡಾವಣೆಯಲ್ಲಿ ಪೈಪೋಟಿ ಏರ್ಪಟ್ಟಿದೆ. ಈ ಉಪಗ್ರಹಗಳು ತಮ್ಮ ಆಯುಷ್ಯ ಮುಗಿದ ಮೇಲೆ ಭೂಮಿಗೆ ಬಾರದೆ ಅಂತರಿಕ್ಷದಲ್ಲಿ ಭೂಮಿಯ ಸುತ್ತ ಸುತ್ತಿಕೊಂಡಿರುತ್ತವೆ ಅಥವಾ ಸುಟ್ಟು ಬೂದಿಯಾಗುತ್ತವೆ. ಈ ಮಾನವ ನಿರ್ಮಿತ ಅಂತರಿಕ್ಷ ತ್ಯಾಜ್ಯವೂ ಭೂಮಿ ಮತ್ತು ಸೂರ್ಯನ ನಡುವಿನ ಕಾಂತೀಯ ಆಕರ್ಷಣೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು.

Advertisement

ಇತ್ತೀಚಿನ ನಾಲೈದು ವರ್ಷಗಳಿಂದ ಚರ್ಚಿತವಾಗುತ್ತಿರುವ ವಿಷಯ ಹವಾಮಾನ ವೈಪರೀತ್ಯ. ಇವಕ್ಕೆಲ್ಲ ಕಾರಣ ಕಾಡುಗಳ ನಾಶ, ನಗರೀಕರಣ, ವಾಹನಗಳಿಂದ ಹೊರಸೂಸುವ ಹೊಗೆಯಿಂದಾದ ವಾಯುಮಾಲಿನ್ಯ ಇತ್ಯಾದಿಗಳಿಂದ ಪರಿಸರದಲ್ಲಿ ಬದಲಾವಣೆಯಾಗಿದೆ. ಸಹಜವಾಗಿಯೇ ಜಾಗತಿಕ ತಾಪಮಾನ ಜಾಸ್ತಿಯಾಗಿ ಈ ಎಲ್ಲ ವೈಪರೀತ್ಯಕ್ಕೆ ಕಾರಣವಾಗಿದೆ ಎಂಬುದು ತಜ್ಞರ ಸಾರ್ವತ್ರಿಕ ಅಭಿಪ್ರಾಯ.

ಭಾರತೀಯರಾದ ನಾವು ಭೂಮಿಯನ್ನು ಸೂರ್ಯನ ಸುತ್ತ ತಿರುಗುವ ಒಂದು ಗ್ರಹವಾಗಿ ಮಾತ್ರ ನೋಡದೆ ಭೂದೇವಿ, ವಿಷ್ಣುಪತ್ನಿ, ವಸುಂಧರೆ, ಧರಣಿ, ಧಾರಿಣಿ, ಮೇಧಿನಿ ಹೀಗೆ ಅನೇಕ ಹೆಸರುಗಳಿಂದ ಕರೆದು ಆರಾಧಿಸು ತ್ತೇವೆ. ನಾವು ಯಾವ ದೌರ್ಜನ್ಯ ಮಾಡಿದರೂ ಸಹಿಸಿ ಕ್ಷಮಿಸುವ ಗುಣವಿರುವುದರಿಂದ “ಕ್ಷಮಯಾ ಧರಿತ್ರಿ’ ಎಂದೂ ಕರೆಯುತ್ತೇವೆ. ಮುಂಜಾನೆ ಎದ್ದು ಮೊದಲು ಹೇಳುವ ಶ್ಲೋಕವಾದ “ಕರಾಗ್ರೇ ವಸತೇ ಲಕ್ಷ್ಮೀ..ಯಲ್ಲಿ ಪಾದಸ್ಪರ್ಶಮ್‌ ಕ್ಷಮಸ್ವಮೇ ಎನ್ನುತ್ತೇವೆ. ಆದರೆ ಆಕೆ ಬರಿಯ ಪಾದಸ್ಪರ್ಶವನ್ನಷ್ಟೇ ಕ್ಷಮಿಸುವವಳು ಎನ್ನುವುದನ್ನು ಮರೆತು ನಮ್ಮಿಂದ ಆದಷ್ಟು ದೌರ್ಜನ್ಯಗಳನ್ನು ಆಕೆಯ ಮೇಲೆ ತಲೆತಲಾಂತರದಿಂದ ಮಾಡಿಕೊಂಡು ಬಂದಿದ್ದೇವೆ. ಹೀಗೆಯೇ ಮುಂದುವರಿದರೆ ಒಂದಲ್ಲ ಒಂದು ದಿನ ಆಕೆ ಮೈಕೊಡವಿಕೊಳ್ಳುವುದಂತೂ ನಿಶ್ಚಿತ.

ವಿಜ್ಞಾನದ ಪ್ರಕಾರ ಭೂಮಿಯು ಸೂರ್ಯನ ಸುತ್ತ ತಿರುಗುವ ಕಿತ್ತಲೆಯಾಕಾರದ ಒಂದು ಗ್ರಹ. ಅದು ಸೂರ್ಯನ ಸುತ್ತ ಇರುವ ತನ್ನ ಪಥದಲ್ಲಿ ಸೂರ್ಯನಿಗೆ ಒಂದು ಸುತ್ತು ಬರಲು ತೆಗೆದುಕೊಳ್ಳುವ ಅವಧಿ 365.25 ದಿನಗಳು. ಹಾಗೆಯೇ ಸೂರ್ಯನಿಗೆ ಸುತ್ತು ಬರುವುದರೊಂದಿಗೆ ತಾನು ಇರುವ ಜಾಗದಲ್ಲೇ ಸುತ್ತು ಹೊಡೆಯುತ್ತದೆ. (ದೇವತಾಕಾರ್ಯಗಳಲ್ಲಿ ಪ್ರದಕ್ಷಿಣೆ ಬರಲು ಜಾಗವಿಲ್ಲದಿದ್ದಲ್ಲಿ ನಾವು ಎದ್ದುನಿಂತು ಪ್ರದಕ್ಷಿಣೆ ಎಂದು ಪದೇ ಪದೆ ನಿಂತಲ್ಲೇ ಸುತ್ತಿದ ಹಾಗೆ). ಭೂಮಿಯು ಸೂರ್ಯನ ಸುತ್ತ ಸುತ್ತುವ ಕ್ರಿಯೆಯು ಋತು ಬದಲಾವಣೆಗಳಿಗೆ ಕಾರಣವಾದರೆ ತನ್ನಷ್ಟಕ್ಕೆ ಸುತ್ತುವ ಕ್ರಿಯೆಯು ಹಗಲು ರಾತ್ರಿಗಳಿಗೆ ಕಾರಣವಾಗಿದೆ. ಭೂಮಿಯು ತನ್ನ ಕಕ್ಷಪಾತಳಿಯ ಮೇಲೆ ನೇರವಾಗಿ ನಿಲ್ಲದೆ 23 ಡಿಗ್ರಿಯಷ್ಟು ವಾಲಿಕೊಂಡಿದೆ. ಹೀಗೆ ವಾಲಿಕೊಂಡಿರದಿದ್ದರೆ ಪ್ರತೀ ಹದಿನೈದು ದಿನಗಳಿಗೊಂದು ಗ್ರಹಣವಾಗುತ್ತಿತ್ತು. ಭೂಮಿಯು ತನ್ನ ಕಕ್ಷೆಯಲ್ಲಿ ಸೆಕೆಂಡಿಗೆ 30 ಕಿ.ಮೀ. ವೇಗದಲ್ಲಿ ಸೂರ್ಯನಿಗೆ ಸುತ್ತುತ್ತಿರುತ್ತದೆ. ಇದರಂತೆ ಇತರ (ನಮಗೆ ತಿಳಿದಿರುವ ಕೆಲವು ಹಾಗೂ ತಿಳಿಯದಿರುವ ಹಲವು) ಗ್ರಹಗಳೂ ಸೂರ್ಯನ ಸುತ್ತ ತಿರುಗುತ್ತಿರುತ್ತವೆ. ಭೂಮಿ ಮತ್ತು ಸೂರ್ಯನ ಹಾಗೂ ಇತರ ಗ್ರಹಗಳ ನಡುವಿನ ಕಾಂತೀಯ ಆಕರ್ಷಣೆಯೇ ಭೂಮಿಯನ್ನು ತನ್ನ ಸ್ಥಾನ ಬಿಡದಂತೆ ಹಿಡಿದಿರುವ ಶಕ್ತಿಯಾಗಿದೆ.

ನಾವೆಲ್ಲ ಗಮನಿಸಿರುವ ವಿಷಯವೆಂದರೆ ಇತ್ತೀಚಿನ ದಿನಗಳಲ್ಲಿ ಹವಾಮಾನ ಹಾಗೂ ಋತುಗಳಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ನಮ್ಮ ಕರಾವಳಿ ಪ್ರದೇಶದಲ್ಲಿ ಚಳಿಗಾಲವೇ ಇಲ್ಲವಾಗಿದೆ. ಬೇಸಗೆ ಕಾಲ ನಾಲ್ಕೈದು ತಿಂಗಳುಗಳಷ್ಟಿದ್ದು, 2020ರಲ್ಲಂತೂ ವರ್ಷಪೂರ್ತಿ ಮಳೆ ಬಂದಿದೆ. ಹೀಗೆಲ್ಲ ಹವಾಮಾನ ವೈಪರೀತ್ಯಕ್ಕೆ ಮಾನವನಿಂದ ಪರಿಸರದ ಮೇಲೆ ಆಗುತ್ತಿರುವ ದೌರ್ಜನ್ಯಗಳು ಕಾರಣವೆಂದು ಹೇಳಲಾಗುತ್ತಿದೆ. ಕಾಡುಗಳನ್ನು ಕಡಿಯುವುದು, ಸಿಮೆಂಟ್‌ ಕಟ್ಟಡಗಳು, ಗಣಿಗಾರಿಕೆಗಳೇ ನೆರೆ ಹಾಗೂ ಬರಕ್ಕೆ ಕಾರಣ. ಇದು ಜಾಗತಿಕ ಉಷ್ಣಾಂಶದ ಏರಿಕೆಗೆ ಕಾರಣವೂ ಹೌದು ಎನ್ನುವುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.

Advertisement

ಇನ್ನೊಂದು ಅಪಾಯಕಾರಿ ವಿಷಯವೆಂದರೆ ದೇಶ ದೇಶಗಳ ನಡುವೆ ನಡೆಯುತ್ತಿರುವ ಪರಮಾಣು ಅಸ್ತ್ರ ಪರೀಕ್ಷೆಯ ಪೈಪೋಟಿ. ಅತ್ಯಂತ ಶಕ್ತಿಶಾಲಿ ಪರಮಾಣು ಅಸ್ತ್ರಗಳನ್ನು ಭೂಗರ್ಭದಲ್ಲೋ ಅಥವಾ ಸಾಗರದ ಆಳದಲ್ಲೋ ನ್ಪೋಟಿಸಿ ಪರೀಕ್ಷಿಸಲಾಗುತ್ತದೆ. ಇಂತಹ ಪ್ರಯೋಗಗಳಲ್ಲಿ ಕೆಲವನ್ನು ಹೊರಪ್ರಪಂಚಕ್ಕೆ ಹೇಳಿ ಮಾಡುವುದಾದರೆ ಹಲವು ಬಹಳ ರಹಸ್ಯವಾಗಿ ನಡೆಯುತ್ತವೆ. ಏನಿದ್ದರೂ ಈ ಶಕ್ತಿಶಾಲಿ ಸ್ಫೋಟಗಳಿಂದ ಭೂಮಿಯು ತನ್ನ ಕಕ್ಷೆಯಿಂದ ತಳ್ಳಲ್ಪಡುವುದೋ ಅಥವಾ ವಾಲುವಿಕೆಯನ್ನು ಹೆಚ್ಚು ಕಡಿಮೆ ಮಾಡಿಕೊಳ್ಳುವುದೂ ಸಾಧ್ಯ.

ಈ ಎರಡೂ ಸಾಧ್ಯತೆಗಳ ನಿಟ್ಟಿನಲ್ಲಿ ಸಂಶೋಧನೆಗಳು ಆಗಬೇಕಷ್ಟೆ ಹಾಗೂ ವಾಸ್ತವಗಳನ್ನು ಒಪ್ಪಿಕೊಳ್ಳುವ ಮನೋಭಾವ ಬೆಳೆಯಬೇಕು. ನಾವು ಭೂಮಿಯಿಂದ ಬರುವ ರಹಸ್ಯ ಸದ್ದುಗಳ ಬಗ್ಗೆ ಹಾಗೂ ಗುಡ್ಡ ಜರಿತ, ಸುನಾಮಿ, ಪರ್ವತಗಳಲ್ಲಾಗುವ ಬದಲಾವಣೆಗಳು, ಧ್ರುವಗಳಲ್ಲಾಗುವ ಬದಲಾವಣೆಗಳ ಬಗ್ಗೆ ವಿಜ್ಞಾನಿಗಳ ಅಭಿಪ್ರಾಯಗಳನ್ನು ಓದಿದ್ದೇವೆ. ಆದರೆ ಆಧುನಿಕ ಶಸ್ತ್ರಾಸ್ತ್ರ ಪರೀಕ್ಷೆಗಳು ಹಾಗೂ ಅಂತರಿಕ್ಷ ತ್ಯಾಜ್ಯಗಳಿಂದ ಭೂಮಿಯ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಸಂಶೋಧನೆ ನಡೆಸಿ ಅವುಗಳನ್ನು ಧೈರ್ಯವಾಗಿ ಪ್ರಕಟಿಸಬೇಕಾಗಿದೆ. ಜ್ಞಾನ ಹಾಗೂ ವಿಜ್ಞಾನದ ಬಳಕೆಯನ್ನು ವಿವೇಚನೆಯಿಂದ ಮಾಡಿದರಷ್ಟೇ ಜಗತ್‌ ಕಲ್ಯಾಣವಷ್ಟೆ!

– ಡಾ| ಸತೀಶ ನಾಯಕ್‌ ಆಲಂಬಿ

Advertisement

Udayavani is now on Telegram. Click here to join our channel and stay updated with the latest news.

Next