Advertisement

ಡೊಂಬಿವಲಿ ಶ್ರೀ ಬಸವ ಸೇವಾ ಮಂಡಳ: ಬಸವೇಶ್ವರ ಜಯಂತಿ 

02:08 PM Apr 24, 2018 | Team Udayavani |

ಡೊಂಬಿವಲಿ: ವೀರಶೈವ ಹಾಗೂ ಲಿಂಗಾಯತರು ಧರ್ಮದ ವಿಷಯದಲ್ಲಿ ಕಾದಾಡದೆ ಪರಸ್ಪರ ಒಗ್ಗಟ್ಟಿನಿಂದ ಮುನ್ನಡೆದು ಇಷ್ಟಲಿಂಗದ ಉಪಾಸನೆ ಮಾಡುವುದರಿಂದ ಸಾರ್ಥಕ ಜೀವನ ನಡೆಸಲು ಸಾಧ್ಯ ಎಂದು ಸತಾರಾ ಶ್ರೀಕ್ಷೇತ್ರವಾಮಿ ಮಠದ ಶ್ರೀ ಮಹಾದೇವ ಶಿವಾಚಾರ್ಯ ಮಹಾರಾಜರು ಅವರು  ನುಡಿದರು.

Advertisement

ಎ. 21 ರಂದು ಸಂಜೆ ಡೊಂಬಿವಲಿ ಪೂರ್ವದ ಸರ್ವೇಶ ಸಭಾಗೃಹದಲ್ಲಿ ಡೊಂಬಿ ವಲಿಯ ಶ್ರೀ ಬಸವ ಸೇವಾ ಮಂಡಳದ ವತಿಯಿಂದ ನಡೆದ ಜಗಜ್ಯೋತಿ ಶ್ರೀ ಬಸವೇಶ್ವರ 886 ನೇ ಜಯಂತಿ ಉತ್ಸವದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಇಂದು ಆಧ್ಯಾತ್ಮಿಕತೆಯ ಬೇರುಗಳು ಸಡಿಲಗೊಂಡಿವೆ. ನಮ್ಮ ಅಂತ:ಕರಣ ಮಲೀನವಾಗಿವೆ. ನಾವು ಜಾತಿಯಿಂದ ಲಿಂಗಾಯಿತರಾಗಿರದೆ ಸಂಸ್ಕಾರದಿಂದ ಲಿಂಗಾಯತರಾಗಬೇಕು. ಜಾತೀಯತೆಯ ಲಿಂಗಾಯತ ಧರ್ಮಕ್ಕಿಂತ ಬಸವ ತತ್ವಗಳ ಆಧಾರಿತ ದೃಷ್ಟಿಯಲ್ಲಿ ದೇಹವೇ ದೇಗುಲವಾಗಿದ್ದು, ಅದರಲ್ಲಿ ನಾವು ಆ ಪರಮಾತ್ಮನನ್ನು ಪ್ರತಿಷ್ಠಾಪಿಸಬೇಕಾಗಿದೆ. ಸಕಲ ಮಾನವ ಕುಲಕ್ಕೆ ಲೇಸನ್ನೆ ಬಯಸುವ ಬಸವ ತತ್ವಗಳು ಎಂದೆಂದಿಗೂ ಪ್ರಸ್ತುತವಾಗಿವೆ. ಡೊಂಬಿವಲಿಯ ಶ್ರೀ ಬಸವ ಸೇವಾ ಮಂಡಳದ ಕಾರ್ಯವೈಖರಿ ಅಭಿನಂದನೀಯವಾಗಿದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ವಿಶ್ವ ಲಿಂಗಾಯತ ಸಮಿತಿಯ ಕಾರ್ಯಾಧ್ಯಕ್ಷ ಡಾ| ಶಶಿಕಾಂತ್‌ ಪಟ್ಟಣ ಅವರು ಮಾತನಾಡಿ, 12 ನೇ ಶತಮಾನದಲ್ಲಿ ಸಮಾನತೆಗಾಗಿ ಬಹುದೊಡ್ಡ ಕ್ರಾಂತಿಯನ್ನೇ ಮಾಡಿದ ಹೆಗ್ಗಳಿಕೆ ಜಗಜ್ಯೋತಿ ಬಸವೇಶ್ವರರದ್ದಾಗಿದೆ. ಡಾ| ಬಾಬಾ ಸಾಹೇಬ ಅಂಬೇಡ್ಕರ್‌ ಅವರು ಸಂವಿಧಾನದ ಶಿಲ್ಪಿಯಾದರೆ, ಬಸವೇಶ್ವರರು ಸಂವಿ ಧಾನದ ಜನಕರಾಗಿದ್ದಾರೆ. ಕಾರ್ಲ್ ಮಾರ್ಕ್ಸ್

ನಂತವರು ಸಮಾನತೆಯಲ್ಲಿ ಒಂದು ಹೆಜ್ಜೆ ಮುಂದಿದ್ದ ಬಸವೇಶ್ವರರ ಕಾಯಕಕ್ಕೆ ಪಾವಿತ್ರÂತೆ ನೀಡಿದರಲ್ಲದೆ ಮಹಿಳೆಯರಿಗೆ ಸಮಾನತೆಯನ್ನು ದೊರಕಿಸಿಕೊಡಲು ಪ್ರಯತ್ನಿಸಿದರು. ನಮ್ಮ ದೃಷ್ಟಿಯಲ್ಲಿ ಬಸವೇಶ್ವರರೇ ಜಗದ್ಗುರು. ಜನ ಸಾಮಾನ್ಯರಿಗೂ ಮೂಲಭೂತ ಅರ್ಥವನ್ನು ಒದಗಿಸಿಕೊಟ್ಟ ಮಹಾನ್‌ ಸಾಧಕ ಬಸವಣ್ಣನವರಾಗಿದ್ದಾರೆ ಎಂದು ನುಡಿದು, ವಿಶ್ವಗುರು ಬಸವೇಶ್ವರರ ವಚನಗಳ ಬಗ್ಗೆ ವಿವರಿಸಿದರು.

ಇನ್ನೋರ್ವ ಅತಿಥಿ ಮಂಜುನಾಥ ವಿದ್ಯಾ ಲಯ ಡೊಂಬಿವಲಿ ಇದರ ಪ್ರಾಂಶುಪಾಲ ಡಾ| ವಿ. ಎಸ್‌. ಅಡಿಗಲ್‌ ಅವರು ಮಾತನಾಡಿ, ಶ್ರೀ ಬಸವೇಶ್ವರರು ಜನಸಾಮಾನ್ಯರಿಗೂ ತಿಳಿಯು ವಂತಹ ವಚನಗಳನ್ನು ರಚಿಸಿದ್ದು, 23 ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಅನುವಾದಿತ ಗೊಂಡಿವೆ. ಇಡೀ ವಿಶ್ವವೇ ಮೆಚ್ಚಿದ ಈ ವಿಶ್ವಗುರುವಿನ ತತ್ವಗಳನ್ನು ಜೀವನದಲ್ಲಿ ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಸಾಧ್ಯ ವಾಗಿಲ್ಲ. ಮೂಡನಂಬಿಕೆಯ ವಿರುದ್ಧ ಹಾಗೂ ಮಹಿಳಾ ಸಬಲಿಕರಣಕ್ಕಾಗಿ ಹೋರಾಡಿದ ವ್ಯಕ್ತಿ ಬಸವೇಶ್ವರರಾಗಿದ್ದು, ಅವರ ಹೆಸರು ಹಾಗೂ ತತ್ವಗಳನ್ನು ಜಯಘೋಷವಾಗಿ ಮೀಸಲಿಡದೆ ಜನಮನಗಳನ್ನು ಮುಟ್ಟಿಸುವಂತೆ ನಾವೆಲ್ಲರು ಪ್ರಯತ್ನಿಸಬೇಕು. ಡೊಂಬಿವಲಿಯ ಶ್ರೀ  ಬಸವ ಸೇವಾ ಮಂಡಳದ ಕಾರ್ಯ ನಿಜವಾಗಿಯೂ ಅನುಕರಣೀಯವಾಗಿದೆ ಎಂದರು.

Advertisement

ವಚನ ಸಾಹಿತ್ಯದ ಅಭ್ಯಾಸಕ ಬಸವರಾಜ ಪೂಜಾರಿ ಅವರು ಕನ್ನಡ ವಚನ ಸಾಹಿತ್ಯಕ್ಕೆ  ಹರ್ಡಿಕರ ಮಂಜಪ್ಪ ಮತ್ತು ಫ. ಗು. ಹಳಕಟ್ಟಿ ಅವರ ಕೊಡುಗೆಗಳನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಸಮಾಜದ ಹಿರಿಯ ನಾಗರಿಕರು ಹಾಗೂ ಪ್ರತಿಭಾವಂತ ಮಕ್ಕಳನ್ನು ಅಭಿನಂದಿಸಿ ಗೌರವಿಸಲಾಯಿತು.

75 ನೇ ಹುಟ್ಟುಹಬ್ಬ ಮತ್ತು ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಅಚರಿಸಿದ ಶ್ರೀ ಬಸವ ಸೇವಾ ಮಂಡಳ ಡೊಂಬಿವಲಿ ಇದರ ಅಧ್ಯಕ್ಷ, ಉದ್ಯಮಿ ಆರ್‌. ಬಿ. ಹೆಬ್ಬಳ್ಳಿ ದಂಪತಿಯನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಆರ್‌. ಬಿ. ಹೆಬ್ಬಳ್ಳಿ ಇವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಕಾರ್ಯದರ್ಶಿ ರಮೇಶ್‌ ನ್ಹಾವಕರ ಕಾರ್ಯಕ್ರಮ ನಿರೂಪಿಸಿದರು. ಮಲ್ಲಪ್ಪಾ ಬಿರಾದಾರ ವಂದಿಸಿದರು. ಕಾರ್ಯಾಧ್ಯಕ್ಷ ಬಸವಲಿಂಗಪ್ಪ ಸೊಡ್ಡಗಿ ಸಂಸ್ಥೆ ನಡೆದು ಬಂದ ಬಗೆಯನ್ನು ವಿವರಿಸಿದರು. ನೂರಾರು ಬಸವ ಅನುಯಾಯಿಗಳು, ಭಕ್ತರು ಉಪಸ್ಥಿತರಿದ್ದರು. 

ಚಿತ್ರ-ವರದಿ : ಗುರುರಾಜ ಪೋತನೀಸ್‌

Advertisement

Udayavani is now on Telegram. Click here to join our channel and stay updated with the latest news.

Next