Advertisement

ಬೊಂಬೆಗಳು ಪಾಠ ಹೇಳುತ್ತಾವೆ!

09:01 PM Nov 24, 2019 | Lakshmi GovindaRaj |

ಯಳಂದೂರು: ಬಿಳಿ ಬಣ್ಣದ ದೊಡ್ಡ ಪರದೆ, ಇದರ ಹಿಂದೆ ವಿದ್ಯುತ್‌ ದೀಪ ನಡುವೆ ತಾಳವಾದ್ಯಗಳೊಂದಿಗೆ ಅಲೆಅಲೆಯಾಗಿ ತೇಲಿ ಬರುವ ನಾದ, ಸ್ವರಗಳು, ನೋಡು, ನೋಡುತ್ತಿದ್ದಂತೆಯೇ ಪರದೆಯ ಮಧ್ಯೆ ಸಾಗಿ ಬರುವ ಬಣ್ಣಬಣ್ಣದ ಬೊಂಬೆಗಳು. ಶರೀರ ನಟನೆ ಮಾಡುತ್ತಿದ್ದಂತೆಯೇ ತಕ್ಕಂತೆ ತೆರೆ ಮರೆಯಲ್ಲೇ ಕೇಳಿ ಬರುವ ಸಂಭಾಷಣೆ. ಅರೆ ಎಲ್ಲೋ ಯಾವುದೋ ಸಿನಿಮಾದಲ್ಲೂ ಕಾಣಿಸಿಕೊಂಡ ದೃಶ್ಯ ನಾ? ಎಂದು ನೀವು ಪ್ರಶ್ನೆ ಹಾಕಿಕೊಂಡರೆ ಇದು ತಪ್ಪು, ಇದನ್ನು ನೋಡಬೇಕೆಂದರೆ ನೀವು ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದ ಪ್ರೌಢಶಾಲೆಗೆ ಬರಬೇಕು.

Advertisement

ಶಾಲಾ ಮಕ್ಕಳಿಗೆ ತರಬೇತಿ: ಕಳೆದ ಹಲವು ವರ್ಷಗಳಿಂದ ಶಾಲಾ ಮಕ್ಕಳಿಗೆ ನಟನೆ, ನಾಟಕದ ಅಭಿರುಚಿಯನ್ನು ಹತ್ತಿಸಿ ಇಡೀ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ವಿದ್ಯಾರ್ಥಿ ಪ್ರತಿಭೆ ತಿಳಿಸಿದ ಶಾಲೆ ಈಗ ಮತ್ತೂಂದು ರಂಗಸಜ್ಜಿಕೆಗೆ ಸನ್ನದ್ಧಗೊಂಡಿದೆ. ಈ ಬಾರಿಯ ಪ್ರಯೋಗ ಸ್ವಲ್ಪ ಭಿನ್ನವಾಗಿದ್ದು. ಗೊಂಬೆಗಳು ಇದರಲ್ಲೂ ತೊಗಲು ಗೊಂಬೆಗಳ ಮೂಲಕ ಪಾಠದ ಕತೆಯನ್ನು ಹೇಳುವ ಕಲೆಯನ್ನು ಇಲ್ಲಿನ ಶಾಲಾ ಮಕ್ಕಳಿಗೆ ಹೇಳಿ ಕೊಡಲಾಗುತ್ತಿದೆ.

ವಿಭಿನ್ನ ಪ್ರಯೋಗ: ಸಾರ್ವಜನಿಕ ಶಿಕ್ಷಣ ಇಲಾಖೆ, ಇಂಡಿಯಾ ಫೌಂಡೇಷನ್‌ ಫಾರ್‌ ದಿ ಆರ್ಟ್‌ ಸಹಯೋಗದಲ್ಲಿ “ಗೊಂಬೆಯೊಂದಿಗೆ ಪಾಠ’ ಎಂಬ ಪರಿಕಲ್ಪನೆಯಲ್ಲಿ ಇಲ್ಲಿನ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ. ಇಲ್ಲಿನ ನಾಟಕ ಶಿಕ್ಷಕ ನೀನಾಸಂನ ಮಧುಕರ್‌ ಹೊಲೆಯಾರ್‌ ಇಂಥ ಕಲೆಯಲ್ಲಿ ನಿಷ್ಣಾತ ಶಿಕ್ಷಕರಾದ ಚಿಂತಾಮಣಿಯ ಸುದರ್ಶನ್‌, ಗಂಗಾಧರ್‌ 8ನೇ ತರಗತಿ ಮಕ್ಕಳಿಗೆ ಈ ಕಲೆಯನ್ನು ಹೇಳಿಕೊಡುತ್ತಿದ್ದಾರೆ.

ಅಪರೂಪ, ವಿಶಿಷ್ಟ: ಬೊಂಬೆಯನ್ನು ಆಡಿಸುವ ಕಲೆಯು ರಾಜ್ಯದಲ್ಲಿ ಈಗ ಮರೆಯಾಗುತ್ತಿದೆ. ಇದನ್ನು ಜೀವಂತವಾಗಿರುವ ನಿಟ್ಟಿನಲ್ಲಿ ರಾಜ್ಯದಲ್ಲಿ ಎರಡು-ಮೂರು ತಂಡಗಳು ಮಾತ್ರ ಉಳಿದಿವೆ. ಇದೊಂದು ವಿಭಿನ್ನ ಕಲೆಯಾಗಿದೆ. ಇದರಲ್ಲಿ ಮಕ್ಕಳಿಗೆ ದೃಶ್ಯ ಹಾಗೂ ಶ್ರವ್ಯ ಮಾಧ್ಯಮದ ಮೂಲಕ ಪಾಠ ಹೇಳಿಕೊಡುವುದರಿಂದ ಇದು ಸುಲಭವಾಗಿ ಅರ್ಥವಾಗುತ್ತದೆ. 8ನೇ ತರಗತಿಯ ಕನ್ನಡ ಪಠ್ಯದಲ್ಲಿ ಬರುವ ಹೂವಾದ ಹುಡುಗಿ ಎಂಬ ಪಾಠವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಇದಕ್ಕೆ ಮಕ್ಕಳಿಂದಲೇ ಅಪರೂಪದ ಕಲೆಯಾಗಿರುವ ತೊಗಲು ಬೊಂಬೆಗಳನ್ನು ಮಾಡಿಸಿ, ಇದನ್ನು ಮಕ್ಕಳ ಕೈಗಳ ಮೂಲಕ ಭಾವನೆ ತೋರಿಸುವ, ಇದಕ್ಕೆ ಹಿನ್ನೆಲೆಯಾಗಿ ಅವರೇ ಧ್ವನಿಯಾಗಿ, ಪಾಠದಲ್ಲಿ ಬರುವ ಎಲ್ಲಾ ವಿಷಯಗಳನ್ನು ಹೇಳುವ ಜೊತೆಗೆ ಇದಕ್ಕೆ ತಕ್ಕಂತೆ ಸನ್ನಿವೇಶಗಳನ್ನು ಸೃಷ್ಟಿಸಿ, ಸಂಗೀತ, ವಾದ್ಯಗಳನ್ನು ನುಡಿಸಿ ಇನ್ನಷ್ಟು ಹತ್ತಿರವಾಗಿಸುವ ಕೆಲಸ ಮಾಡಲಾಗುತ್ತಿದೆ ಎನ್ನುತ್ತಾರೆ ನಾಟಕ ಶಿಕ್ಷಕ ಮಧುಕರ್‌ ಹೊಲೆಯಾರ್‌.

Advertisement

ಗೊಂಬೆಯಾಟ ಪುರಾತನ ಕಲೆ: ಗೊಂಬೆಯಾಟ ಪುರಾತನ ಕಲೆಯಾಗಿದೆ. ರಾಮಾಯಣ, ಮಹಾಭಾರತದಲ್ಲೂ ಇದರ ಉಲ್ಲೇಖವಿದೆ. ಪ್ರಾಚೀನ ಗ್ರೀಕ್‌ ನಾಗರಿಕತೆಯಲ್ಲೂ ಗೊಂಬೆಗಳ ಆಟದ ಬಗ್ಗೆ ಉಲ್ಲೇಖಗಳಿವೆ. ಮಾತು ಬಾರದ ಆದಿ ಮಾನವ ಶಿಲೆಗಳಲ್ಲಿ ಇಂಥ ಗೊಂಬೆಗಳನ್ನು ಕೆತ್ತನೆ ಮಾಡಿದ್ದ ಎಂಬ ಕುರುಹುಗಳಿವೆ. ಇದರೊಂದಿಗೆ ಇದಕ್ಕೆ ಸಾವಿರಾರೂ ವರ್ಷಗಳ ಇತಿಹಾಸವಿದೆ. ಇದರಲ್ಲಿ ತೊಗಲು, ಸೂತ್ರ, ಕೀಲು, ಬೆರಳು ಹಾಗೂ ಕೈಗವಸು ಗೊಂಬೆಯಾಟ ಎಂಬ ಅನೇಕ ಪ್ರಕಾರಗಳಿವೆ ಎನ್ನುತಾರೆ ಶಿಕ್ಷಕರಾದ ಎಂ.ವೀರಭ ದ್ರಸ್ವಾಮಿ, ಕುಮಾರಸ್ವಾಮಿ.

ಬೊಂಬೆಗೆ ಮೇಕೆಗಳ ಚರ್ಮ ಬಳಕೆ: ಈ ಬಗ್ಗೆ “ಉದಯವಾಣಿ’ ಜತೆ ಕಲಾವಿದರಾದ ಸುದರ್ಶನ್‌, ಗಂಗಾಧರ್‌ ಮಾತನಾಡಿ, ತೊಗಲು ಗೊಂಬೆಗಳನ್ನು ಮಾಡಲು ಮೇಕೆ ಚರ್ಮ ಒಣಗಿಸಿ ಹದ ಮಾಡಿ, ಬೇಕಾದ ಆಕಾರಕ್ಕೆ ಕತ್ತರಿಸಿ ಇದಕ್ಕೆ ಬಣ್ಣವನ್ನು ತುಂಬಲಾಗುತ್ತದೆ. ಎರಡೂ ಕಡೆ ಬಣ್ಣ ಬಳಿಯುವ ಕೆಲಸ ಸವಾಲಿನದ್ದು. ಇದು ಗಾಳಿ ಹಾಗೂ ನೀರಿನ ಸಂಪರ್ಕಕ್ಕೆ ಬರದಿದ್ದರೆ ಸಾವಿರಾರೂ ವರ್ಷ ಬಳಕೆ ಮಾಡಬಹುದು. ಗಂಗಾವತಿ ತಾಲೂಕಿನ ಬೊಮ್ಮಲಾಟಪುರ ಗ್ರಾಮಸ್ಥರ ಕಸುಬಾಗಿದೆ. ಅಲ್ಲದೆ ಹೈದರಾಬಾದ್‌ ಕರ್ನಾಟಕದಲ್ಲಿ ಇಂಥ ಚರ್ಮದ ಗೊಂಬೆಗಳನ್ನು ಮಾಡಿ ದೇವರ ಮನೆಯಲ್ಲಿಟ್ಟು ಪೂಜಿಸುವ ವಾಡಿಕೆಯೂ ಇದೆ. ಆ ಭಾಗದಲ್ಲಿ ಇದರ ಪ್ರದರ್ಶನವೂ ನಡೆಯುತ್ತದೆ.

1 ರಿಂದ 7 ಅಡಿ ಎತ್ತರದ ಗೊಂಬೆಗಳು ಬಳಕೆಯಾಗುತ್ತವೆ. ಈಗ ಮಕ್ಕಳಿಗೆ ಪಾಠ ಮಾಡುವ ಸಲುವಾಗಿ ಪಠ್ಯದಲ್ಲಿನ ವಸ್ತು ವಿಷಯಕ್ಕೆ ಸಂಬಂಧಿಸಿದಂತೆ 1 ಅಡಿಯ ಬೊಂಬೆಗಳನ್ನು ಬಳಸಲಾಗುತ್ತದೆ. ಆದರೆ ಇತ್ತೀಚೆಗೆ ಇದು ನಶಿಸುವ ಹಂತದಲ್ಲಿದ್ದು ಇದನ್ನು ಜೋಪಿಡುವ ಕೆಲಸ ಮಕ್ಕಳ ಕೈಯಲ್ಲಿ ಮಾಡಿಸುತ್ತಿರುವುದು ಖುಷಿ ತಂದಿದೆ ಎಂದರು.

ನಾವು ತೊಗಲು ಗೊಂಬೆಯಾಟ ಹೇಳಿಕೊಡುತ್ತಿದ್ದೇವೆ. ಮಕ್ಕಳಲ್ಲಿ ಪಾಠವನ್ನು ಕಲಿಸಲು ಇದೊಂದು ಉತ್ತಮ ಮಾಧ್ಯಮವಾಗಿದೆ. ಇದರಲ್ಲಿ ಚಿತ್ರಗಳೇ ಕತೆ ಹೇಳುವುದರಿಂದ ಪಾಠ ಸುಲಭವಾಗಿ ಅರ್ಥವಾಗುತ್ತದೆ. ಧ್ವನಿ, ಅಭಿನಯವನ್ನು ಮಕ್ಕಳೇ ಮಾಡುವುದರಿಂದ ಅವರಲ್ಲಿ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ 9ನೇ ತರಗತಿಯ 35 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ.
-ಎಂ.ಸಿ.ಮಹಾದೇವಸ್ವಾಮಿ, ಮುಖ್ಯ ಶಿಕ್ಷಕ

* ಫೈರೋಜ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next