Advertisement

Doddaballapur: ದೊಡ್ಡಬಳ್ಳಾಪುರ ಬಸ್‌ ನಿಲ್ದಾಣಗಳಿಗೆ ಬೇಕಿದೆ ಕಾಯಕಲ್ಪ 

03:37 PM Oct 31, 2023 | Team Udayavani |

ದೊಡ್ಡಬಳ್ಳಾಪುರ: ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಹೊರತುಪಡಿಸಿದರೆ ಕೊಂಗಾಡಿಯಪ್ಪ ಬಸ್‌ ನಿಲ್ದಾಣದಲ್ಲಿ ಮೂಲ ಸೌಕರ್ಯಗಳಿಲ್ಲ. ಸರ್ಕಾರಿ ಪದವಿ ಪೂರ್ವ ಕಾಲೇಜು ಸಮೀಪದ ಕೆಎಸ್‌ಆರ್‌ಟಿಸಿ ಬಸ್‌ ನೂತನ ನಿಲ್ದಾಣ ಇಂದು ಬಸ್‌ಗಳ ಸಂಚಾರವಿಲ್ಲದೇ ಪಾಳು ಬಿದ್ದಿದೆ. ಈ ನಡುವೆ ಈ ಬಸ್‌ ನಿಲ್ದಾಣದಲ್ಲಿ ಖಾಸಗಿ ಪೆಟೊ›àಲ್‌ ಮತ್ತು ಡೀಸೆಲ್‌ ಬಂಕ್‌ ತೆರೆಯುವ ಕುರಿತು ನಡೆಯುತ್ತಿರುವ ಸಿದ್ಧತೆಗೆ ವಿರೋಧ ವ್ಯಕ್ತವಾಗಿದೆ.

Advertisement

ಹೊಸ ಬಸ್‌ ನಿಲ್ದಾಣದ ಆರಂಭ- ಅವಸಾನ:  90ರ ದಶಕದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮೀಪದಲ್ಲಿ ಹೊಸ ಬಸ್‌ ನಿಲ್ದಾಣ ತಲೆ ಎತ್ತಿತು. ಇದು ಈ ಪ್ರದೇಶದ ಲ್ಯಾಂಡ್‌ ಮಾರ್ಕ್‌ ಸಹ ಆಗಿತ್ತು. ಬೆಂಗಳೂರು, ತುಮಕೂರು ಮೊದಲಾದ ಮಾರ್ಗಕ್ಕೆ ನಿಗದಿತ ಬಸ್‌, ಧರ್ಮಸ್ಥಳ, ಹೊರನಾಡು ಮೊದಲಾದ ಕ್ಷೇತ್ರಗಳ ದೂರದ ಮಾರ್ಗಗಳಿಗೆ ಹೊಸ ಬಸ್‌ ನಿಲ್ದಾಣದಿಂದಲೇ ಬಸ್‌ ಸಂಚರಿಸುತ್ತಿದ್ದವು. ವಿದ್ಯಾರ್ಥಿಗಳ ಹಾಗೂ ಉದ್ಯೋಗಿಗಳ ಬಸ್‌ ಪಾಸ್‌ ಮಾಡಿಸಬೇಕಾದರೂ ಇಲ್ಲಿಗೆ ಬರಬೇಕಿತ್ತು. ನಂತರ ಬಸ್‌ ನಿಲ್ದಾಣದ ಸಮೀಪದಲ್ಲಿಯೇ ಬಸ್‌ ಡಿಪೋ ಆರಂಭವಾಯಿತು.

ಡಿಪೋ-ಕ್ಯಾಂಟಿನ್‌ ಕೂಡ ಇತ್ತು: ಸಂಸದರಾಗಿದ್ದ ಆರ್‌.ಎಲ್‌.ಜಾಲಪ್ಪ ಈ ಬಸ್‌ ನಿಲ್ದಾಣದ ಆರಂಭಕ್ಕೆ ಕಾರಣರಾಗಿದ್ದರು. ಮಲ್ಲಿಕಾರ್ಜುನ ಖರ್ಗೆ ರಾಜ್ಯ ಸಾರಿಗೆ ಸಚಿವರಾಗಿದ್ದಾಗ ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ ಮೆಷನ್‌ ಅನ್ನು ಇಡೀ ರಾಜ್ಯಕ್ಕೆ ಪರಿಚಯಿಸುವ ಕಾರ್ಯಕ್ರಮವನ್ನು ಇದೇ ಬಸ್‌ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆರಂಭದಲ್ಲಿ ಡಿಪೋದಲ್ಲಿಯೇ ಪೂರ್ತಿ ಆಡಳಿತ ಇತ್ತು. ನಂತರ ಹಲವಾರು ವಿರೋಧಗಳ ನಡುವೆಯೂ ಡಿಪೋ ಆಡಳಿತವನ್ನು ಚಿಕ್ಕಬಳ್ಳಾಪುರ ವಿಭಾಗಕ್ಕೆ ವರ್ಗಾಯಿಸಲಾಯಿತು. ಉತ್ತಮವಾಗಿಯೇ ಕಾರ್ಯ ನಿರ್ವಹಿಸುತ್ತಿದ್ದ ನೂತನ ಬಸ್‌ ನಿಲ್ದಾಣದಲ್ಲಿ ಕ್ರಮೇಣ ಮೂಲ ಸೌಕರ್ಯಗಳ ಕೊರತೆ ಕಾಣತೊಡಗಿತು. ಹಾಗೆಯೇ ಗಬ್ಬು ನಾರುವ ಶೌಚಾಲಯ, ಡಾಂಬರು ಇಲ್ಲದ ರಸ್ತೆ, ಸಮಯಕ್ಕೆ ಬಾರದ ಬಸ್‌ ಮತ್ತಿತರ ಹಲವಾರು ಅವ್ಯವಸ್ಥೆಗಳಿಂದಾಗಿ ಇಲ್ಲಿನ ಕ್ಯಾಂಟಿನ್‌ ಮುಚ್ಚಿತು. ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾಗಿ ಈಗ ಬಸ್‌ ಸಂಚಾರ ಸ್ಥಗಿತಗೊಂಡಿದೆ. ಬಸ್‌ ನಿಲ್ದಾಣದ ಕಟ್ಟಡವೂ ಪಾಳು ಬಿದ್ದ ಬಂಗಲೆಯಂತಾಗಿದೆ.

ಹೈಟೆಕ್‌ ಬಸ್‌ ನಿಲ್ದಾಣದ ಉಗಮ: ತೀವ್ರ ಗತಿಯಲ್ಲಿ ಬೆಳೆಯುತ್ತಿರುವ ದೊಡ್ಡಬಳ್ಳಾಪುರಕ್ಕೆ ಸುಸಜ್ಜಿತ ಬಸ್‌ ನಿಲ್ದಾಣವೇನೋ ಬೇಕು. ಆದರೆ, ಜಾಗ ಎಲ್ಲಿ ಎನ್ನುವ ಪ್ರಶ್ನೆ ಬರತೊಡಗಿತು. ಮೊದಲು ಡಿ.ಕ್ರಾಸ್‌ ಬಳಿಯ ನಾಗರಕೆರೆ ಅಂಚಿನಲ್ಲಿ ಬಸ್‌ ನಿಲ್ದಾಣ ಸ್ಥಾಪಿಸಬೇಕೆನ್ನುವ ಪ್ರಸ್ತಾಪ ಬಂದಾಗ ಪರಿಸರವಾದಿಗಳ ತೀವ್ರ ವಿರೋಧ ಎದುರಾಗಿ ಪ್ರಸ್ತಾಪ ಕೈಬಿಡಲಾಯಿತು. ನಂತರ ಹಳೇ ಬಸ್‌ ನಿಲ್ದಾಣದಲ್ಲಿಯೇ ಅಂದಿನ ಕೆಇಬಿಗೆ ಸೇರಿದ ಜಾಗ ತೆರವು ಮಾಡಿ ಬಸ್‌ ನಿಲ್ದಾಣ ನಿರ್ಮಿಸಲು ತೀರ್ಮಾನವಾಯಿತು. ಈ ಹಿಂದೆ ಮಾಜಿ ಸಚಿವ ಆರ್‌.ಎಲ್‌.ಜಾಲಪ್ಪ ಅವರು ಅಂದಿನ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ರಿಗೆ ಕೆಇಬಿ ಜಾಗ ತೆರವು ಮಾಡುವ ಬಗ್ಗೆ ಮಾಡಿದ್ದ ಮನವಿ ತಿರಸ್ಕಾರವಾಗಿತ್ತು. ನಂತರ ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ರಾಮಲಿಂಗಾರೆಡ್ಡಿ ಸಾರಿಗೆ ಸಚಿವರಾಗಿದ್ದಾಗ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ಅವರ ನೇತೃತ್ವದಲ್ಲಿ ಬೆಸ್ಕಾಂಗೆ ಬೇರೆ ಕಡೆ ಜಾಗ ನೀಡಿ, ಈ ಜಾಗದಲ್ಲಿ ಬಸ್‌ ನಿಲ್ದಾಣ ಮಾಡುವ ಒಪ್ಪಂದವಾಯಿತು. ಇದರಲ್ಲಿ ನಗರಸಭೆಗೆ 20 ಅಂಗಡಿ ಜಾಗ ನೀಡಲಾಗಿದೆ. ಇನ್ನೂ 2 ಎಕರೆ ಜಾಗದಲ್ಲಿ ದೊಡ್ಡ ಬಸ್‌ ನಿಲ್ದಾಣದ ಯೋಜನೆಗೆ ಹಣ ಮಂಜೂರು ಮಾಡಬೇಕೆಂದು ಸಾರಿಗೆ ಸಚಿವರಿಗೆ ಟಿ.ವೆಂಕಟರಮಣಯ್ಯ ಮನವಿ ಮಾಡಿದ್ದರು. ಜುಲೈ 2020ರಂದು ಅಂದಿನ ಸಾರಿಗೆ ಸಚಿವ ಲಕ್ಷ್ಮಣ ಸವದಿ ನೂತನ ಬಸ್‌ ನಿಲ್ದಾಣ ಉದ್ಘಾಟಿಸಿದ್ದರು.

ಹಳೆಯ ಬಸ್‌ ನಿಲ್ದಾಣದಲ್ಲಿ ಅವ್ಯವಸ್ಥೆ ಆಗರ :

Advertisement

ಈಗಿರುವ ಹಳೆ ಬಸ್‌ ನಿಲ್ದಾಣದಲ್ಲಿ ನಗರಸಭೆಗೆ ಸೇರಿದ ಕೊಂಗಾಡಿಯಪ್ಪ ಬಸ್‌ ನಿಲ್ದಾಣ ಒಂದು ಭಾಗ ವಾದರೆ, ಸರ್ಕಾರಿ ಬಸ್‌ ನಿಲ್ದಾಣ ಇನ್ನೊಂದು ಭಾಗದಲ್ಲಿದೆ. ಕೊಂಗಾಡಿಯಪ್ಪ ಬಸ್‌ ನಿಲ್ದಾಣದಲ್ಲಿ ಖಾಸಗಿ ಬಸ್‌ ಸಂಚಾರ ಹೆಚ್ಚಾಗಿದೆ. ಇನ್ನು  ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸಂಸ್ಥೆ ಬಸ್‌ ಮಾತ್ರ ನಿಲುಗಡೆಗೆ ಅವಕಾಶವಿದೆ. ಇನ್ನು ಬಿಎಂಟಿಸಿ ಬಸ್‌ಗೆ ಸೂಕ್ತ ಜಾಗವಿಲ್ಲದೇ ರಸ್ತೆ ಬದಿಯಲ್ಲಿಯೋ ಕೊಂಗಾಡಿಯಪ್ಪ ಬಸ್‌ ನಿಲ್ದಾಣದ ಒಂದು ಭಾಗದಲ್ಲಿಯೋ ನಿಂತಿರುತ್ತವೆ. ಕೊಂಗಾಡಿಯಪ್ಪ ಬಸ್‌ ನಿಲ್ದಾಣದಲ್ಲಿ ಪ್ರಯಾಣಿ ಕರು ಕುಳಿತುಕೊಳ್ಳುತ್ತಿದ್ದ ಕುರ್ಚಿ ತೆಗೆದುಹಾಕಲಾಗಿದೆ. ಬಸ್‌ ಶೆಲ್ಟರ್‌ ಸುತ್ತಮುತ್ತ ಮಲ ಮೂತ್ರ ವಿಸರ್ಜಿಸ ಲಾಗುತ್ತಿದೆ. ಇಲ್ಲಿ ಕುಡುಕರ ಹಾಗೂ ಕಿಡಿಗೇಡಿಗಳ ತೊಂದರೆಯೂ ಇದೆ. ಕೊಂಗಾಡಿಯಪ್ಪ ಬಸ್‌ ನಿಲ್ದಾ ಣದಲ್ಲಿ ಬಿಎಂಟಿಸಿ ಬಸ್‌ ನಿಲುಗಡೆ ಮಾಡಿ ಸೌಕರ್ಯಕ್ಕೆ ಒತ್ತು ನೀಡಬೇಕಿದೆ ಎನ್ನುತ್ತಾರೆ ಪ್ರಯಾಣಿಕರು.

ಹೊಸ ಬಸ್‌ ನಿಲ್ದಾಣ ಕೂಡಲೇ ನವೀಕರಿಸಿ :

ವೇಗವಾಗಿ ಬೆಳೆಯುತ್ತಿರುವ ನಗರಕ್ಕೆ ನಗರ ಸಾರಿಗೆ ಬಸ್‌ ಸೇವೆ ಅಗತ್ಯ ಇದೆ. ಅಂದು ನಿರ್ಮಾಣಗೊಂಡ ಕೆಎಸ್‌ಆರ್‌ಟಿಸಿ ಹೊಸ ಬಸ್‌ ನಿಲ್ದಾಣದಲ್ಲಿ ಖಾಸಗಿ ಪೆಟೊ›àಲ್‌ ಮತ್ತು ಡೀಸೆಲ್‌ ಬಂಕ್‌ ತೆರೆಯಲು ಉದ್ದೇಶಿಸಲಾಗಿದೆ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಈ ಬಸ್‌ ನಿಲ್ದಾಣದಿಂದ ನಗರ ಸಾರಿಗೆ ಸೇರಿ ಗ್ರಾಮೀಣ ಪ್ರದೇಶಗಳ ಕಡೆಗೆ ಸಂಚರಿಸುವ ಬಸ್‌ಗಳ ಸೇವೆ ಪ್ರಾರಂಭಿಸಬೇಕು. ಬಸ್‌ ನಿಲ್ದಾಣ ಖಾಸಗಿ ವ್ಯಕ್ತಿಗಳ ಸ್ವತ್ತಾಗಲು ಅವಕಾಶ ನೀಡಬಾರದು, ಇದರಿಂದ ಗ್ರಾಮಾಂತರ ರೈತರು, ವಿದ್ಯಾರ್ಥಿಗಳು ಈ ಭಾಗದಲ್ಲಿನ ಕಾಲೇಜು, ಈ ಬಗ್ಗೆ ಬಸ್‌ ಡಿಪೋ ವ್ಯವಸ್ಥಾಪಕ ಸಂತೋಷ್‌ರಿಗೆ ಮನವಿ ಸಲ್ಲಿಸಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ಅಧ್ಯಕ್ಷ ಬಿ.ಎಸ್‌.ಚಂದ್ರಶೇಖರ್‌, ಕಾರ್ಯದರ್ಶಿ ರಮೇಶ್‌ ತಿಳಿಸಿದ್ದಾರೆ.

ಮೇಲಧಿಕಾರಿಗಳ ಗಮನಕ್ಕೆ ತರುವೆ:

ಬಸ್‌ ನಿಲ್ದಾಣಗಳಲ್ಲಿ ಪೆಟ್ರೋಲ್ ಬಂಕ್‌ ಅಥವಾ ಯಾವುದೇ ವಾಣಿಜ್ಯ ಉದ್ದೇಶದ ಮಳಿಗೆ ತೆರೆಯುವ ನಿರ್ಧಾರವನ್ನು ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿ ಅಧಿಕಾರಿಗಳು ನಿರ್ಧರಿಸುತ್ತಾರೆ. ಇನ್ನು ಒಂದು ನಗರಕ್ಕೆ 2 ಬಸ್‌ ನಿಲ್ದಾಣ ಮಂಜೂರು ಮಾಡಲು ತಾಂತ್ರಿಕ ತೊಡಕಿದೆ. ಇದರಿಂದ ಜನರಿಗೆ ಬಸ್‌ ನಿಲ್ದಾಣಗಳ ಬಗ್ಗೆ ಗೊಂದಲವೂ ಉಂಟಾಗುತ್ತದೆ. ಪೆಟ್ರೋಲ್ ಬಂಕ್‌ ಸ್ಥಾಪನೆಗೆ ಇರುವ ವಿರೋಧದ ಕುರಿತು ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ದೊಡ್ಡಬಳ್ಳಾಪುರ ಡಿಪೋ ವ್ಯವಸ್ಥಾಪಕರಾದ ಸಂತೋಷ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಹೊಸ ಬಸ್‌ ನಿಲ್ದಾಣಕ್ಕೆ ಮತ್ತೆ ಚಾಲನೆ ದೊರಕುವುದೋ ಇಲ್ಲವೋ ಬೇರೆ ವಿಚಾರ. ಆದರೆ, ಇರುವ ಬಸ್‌ ನಿಲ್ದಾಣಗಳನ್ನು ಸುಸಜ್ಜಿತವಾಗಿರುವಂತೆ ಮಾಡಿ, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕಿದೆ.-ನಟರಾಜ್‌, ನೇತ್ರಾ, ಸಂದೀಪ್‌, ಪ್ರಯಾಣಿಕರು 

– ಡಿ.ಶ್ರೀಕಾಂತ

Advertisement

Udayavani is now on Telegram. Click here to join our channel and stay updated with the latest news.

Next