Advertisement

ಬೇಸಗೆಯ ಹೊಡೆತಕ್ಕೆ ಧಗಧಗಿಸಲಿದೆ ಧರೆ

06:00 AM Mar 05, 2018 | |

ವಾತಾವರಣದ ತಾಪಮಾನವು ಅತಿಯಾಗಿ ಹೆಚ್ಚಿದ ಸಂದರ್ಭದಲ್ಲಿ ಸೂರ್ಯನ ಬಿಸಿಲಿಗೆ ನೇರವಾಗಿ ಮೈಯ್ಯೊಡ್ಡದಿರಿ. ಅನಿವಾರ್ಯ ಸಂದರ್ಭ ದಲ್ಲಿ ಛತ್ರಿಯನ್ನು ಬಳಸಿ. ಧಾರಾಳವಾಗಿ ನೀರು, ಪಾನಕ ಹಾಗೂ ಹಣ್ಣಿನ ರಸ ಇತ್ಯಾದಿ ದ್ರವಗಳನ್ನು ಸೇವಿಸಿ. ಗಂಭೀರ ವ್ಯಾಧಿಗಳಿಂದ ಬಳಲುತ್ತಿರುವ ರೋಗಿಗಳ ಶರೀರದ ಉಷ್ಣತೆಯು ಹೆಚ್ಚದಂತೆ ಹವಾನಿಯಂತ್ರಕ ಅಥವಾ ಕೂಲರ್‌ ಬಳಸಿ. ಈ ಸೌಲಭ್ಯ ಇಲ್ಲದಿದ್ದರೆ ತಣ್ಣೀರಿನಲ್ಲಿ ಅದ್ದಿದ ಒದ್ದೆ ಬಟ್ಟೆಯಿಂದ ರೋಗಿಯ ಶರೀರವನ್ನು ಆಗಾಗ ಒರೆಸುತ್ತಿರಿ.

Advertisement

ಸಾಮಾನ್ಯವಾಗಿ ಕರಾವಳಿ ಭಾಗದಲ್ಲಿ ಬೇಸಗೆಯ ಧಗೆ ಮಾರ್ಚ್‌ ತಿಂಗಳಿನ ಮಧ್ಯಭಾಗದಲ್ಲಿ ಆರಂಭವಾಗುತ್ತದೆ. ಬಳಿಕ ಧಗೆಯ ತೀವ್ರತೆ ಹೆಚ್ಚುತ್ತ ಏಪ್ರಿಲ್‌ ತಿಂಗಳಿನಲ್ಲಿ ಪ್ರತ್ಯಕ್ಷವಾಗುವ ಏಪ್ರಿಲ್‌ ಶವರ್ಸ್‌ ಎಂದು ಕರೆಯಲ್ಪಡುವ ಮಳೆ ಸುರಿದಂತೆಯೇ ತುಸು ಕಡಿಮೆಯಾಗುತ್ತದೆ. ತದನಂತರ ಮೇ ತಿಂಗಳಿನ ಅಂತ್ಯದಲ್ಲಿ ಅಥವಾ ಜೂನ್‌ ಮೊದಲ ವಾರದಲ್ಲಿ ಮುಂಗಾರು ಮಳೆ ಆರಂಭವಾಗುವ ತನಕ ಬೇಸಗೆಯ ಧಗೆಯು ಮತ್ತಷ್ಟು ಹೆಚ್ಚುತ್ತಾ ಹೋಗುತ್ತದೆ. 

2015ರಲ್ಲಿ ಬಹುತೇಕ ರಾಜ್ಯಗಳಲ್ಲಿ ಬೇಸಗೆಯ ಸಂದರ್ಭದಲ್ಲಿ ಕಂಡುಬಂದಿದ್ದ ತಾಪಮಾನದ ಮಟ್ಟವು ನೂತನ ದಾಖಲೆಯನ್ನೇ ಸೃಷ್ಟಿಸಿತ್ತು. ಆದರೆ 2016ರ ಬೇಸಗೆಯಲ್ಲಿ ಈ ದಾಖಲೆ ಮುರಿಯಲ್ಪಟ್ಟಿತು. ಬಳಿಕ 2017ರಲ್ಲಿ ಈ ದಾಖಲೆಯೂ ಮುರಿಯಲ್ಪಟ್ಟಿದ್ದು, 2018 ರಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು, ಹೊಸ ದಾಖಲೆ ಸ್ಥಾಪನೆಯಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಇದಕ್ಕೆ ಪೂರಕವಾಗಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮವಾಗಿ 2016ರಲ್ಲಿ ರಾಜ್ಯದ 177 ತಾಲೂಕುಗಳಲ್ಲಿ 136 ತಾಲೂಕುಗಳು ಬರಪೀಡಿತ ಎಂದು ಘೋಷಿಸಲಾಗಿದ್ದು, 2017ರಲ್ಲಿ ಈ ಸಂಖ್ಯೆಯು 160ಕ್ಕೆ ಏರಿತ್ತು. ಈ ವರ್ಷ ಬರಪೀಡಿತ ತಾಲೂಕುಗಳ ಸಂಖ್ಯೆ ಮತ್ತಷ್ಟು ಹೆಚ್ಚುವುದೇ ಎನ್ನುವುದನ್ನು ಕಾದುನೋಡಬೇಕಷ್ಟೆ. 

ಆದರೆ ಈ ವರ್ಷ ಫೆಬ್ರವರಿ ತಿಂಗಳಿನ ಮಧ್ಯಭಾಗದಲ್ಲೇ ಉದ್ಭವಿಸಿದ‌ ಬೇಸಗೆಯ ಧಗೆಯು ಇದಕ್ಕೂ ಮುನ್ನ ಮೇ ತಿಂಗಳಿನಲ್ಲಿ ಕಂಡುಬರುತ್ತಿದ್ದ ತಾಪಮಾನದಷ್ಟೇ ಆಗಿದ್ದು ವಿಶೇಷ . ಪ್ರಸ್ತುತ ಬೆಳಿಗ್ಗೆ ಸುಮಾರು 30 ಡಿಗ್ರಿ ಸೆಲ್ಸಿಯಸ್‌ನಿಂದ ಆರಂಭಿಸಿ, ಮಧ್ಯಾಹ್ನದ ವೇಳೆ 41 ಡಿಗ್ರಿಯ ತನಕ ಏರುತ್ತಿರುವ ತಾಪಮಾನವನ್ನು, ಇದುವರೆಗೆ ಕರಾವಳಿಯ ಜನತೆ ಅನುಭವಿಸಿರಲಿಲ್ಲ. ಇದೇ ಸಂದರ್ಭದಲ್ಲಿ ಮಧ್ಯರಾತ್ರಿಯ ಬಳಿಕ ಬೆಳಗಿನ ಜಾವದ ತನಕ ವಾತಾವರಣದ ಉಷ್ಣತೆಯು ಸುಮಾರು 21 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದ್ದು, ಚುಮುಚುಮು ಚಳಿಯೂ ಇರುತ್ತದೆ. ದೇಶದ ಉದ್ದಗಲಕ್ಕೂ ಕಂಡುಬರುತ್ತಿರುವ ಹವಾಮಾನದ ವೈಪರೀತ್ಯಕ್ಕೆ ಇದು ಒಂದು ಉದಾಹರಣೆಯಾಗಿದೆ. 

ಕಾರಣವೇನು?
ಪ್ರಾಯಶಃ ನಿರಂತರವಾಗಿ ಹೆಚ್ಚುತ್ತಿರುವ ದೇಶದ ಜನಸಂಖ್ಯೆ, ವಾಹನಗಳ ಸಂಖ್ಯೆ, ವಾಯು ಹಾಗೂ ಜಲಮಾಲಿನ್ಯ, ಪರಿಸರ ಮಾಲಿನ್ಯ,ಅತಿಯಾದ ತ್ಯಾಜ್ಯ ಉತ್ಪಾದನೆ, ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ, ಮಿತಿಮೀರಿದ ನಗರೀಕರಣ, ಕಾಂಕ್ರೀಟ್‌ ಕಾಡುಗಳ ನಿರ್ಮಾಣ, ಅರಣ್ಯ – ಕೃಷಿ ಭೂಮಿಗಳನ್ನು ನಾಶಪಡಿಸಿ ತಲೆ ಎತ್ತುತ್ತಿರುವ ಉದ್ದಿಮೆ, ಕೈಗಾರಿಕೆ, ವಿದ್ಯುತ್‌ ಉತ್ಪಾದನಾ ಘಟಕಗಳು ಹಾಗೂ ವಿಶೇಷ ವಿತ್ತವಲಯಗಳು, ಜಲಸಂರಕ್ಷಣೆಯ ಬಗ್ಗೆ ನಿರ್ಲಕ್ಷÂ, ಕೃಷಿಗಾಗಿ ಕೃತಕ ರಾಸಾಯನಿಕಗಳ ಅತಿಯಾದ ಬಳಕೆ, ಸಾಂಪ್ರದಾಯಿಕ ಉರುವಲುಗಳ ಬಳಕೆ ಇತ್ಯಾದಿಗಳ ಪರಿಣಾಮವಾಗಿ ವೃದ್ಧಿಸುತ್ತಿರುವ ಜಾಗತಿಕ ತಾಪಮಾನ ಮತ್ತು ಹವಾಮಾನದ ವ್ಯತ್ಯಯಗಳೇ ಈ ಬದಲಾವಣೆಗೆ ಕಾರಣವಾಗಿರಬಹುದು. ಅನಿಯಂತ್ರಿತವಾಗಿ ಹೆಚ್ಚುತ್ತಿರುವ ಜನಸಸಂಖ್ಯೆಯೇ ಎಲ್ಲ ಸಮಸ್ಯೆಗಳ ಮೂಲ. ಆದರೆ ಜನಸಂಖ್ಯೆ ನಿಯಂತ್ರಿಸಲು ಬೇಕಾದ ಕಾನೂನುಗಳನ್ನು ರೂಪಿಸಲು ನಮ್ಮನ್ನಾಳುವವರು ಹಿಂಜರಿಯುತ್ತಿದ್ದಾರೆ. 

Advertisement

ಹವಾಮಾನ ವ್ಯತ್ಯಯ 
ಹವಾಮಾನ ವ್ಯತ್ಯಯದ ಭಯಾನಕ ದುಷ್ಪರಿಣಾಮಗಳಲ್ಲಿ ಜಾಗತಿಕ ತಾಪಮಾನದ ಮತ್ತು ಉಷ್ಣ ಅಲೆಗಳ ಹೆಚ್ಚಳಗಳು ಪ್ರಮುಖವಾಗಿವೆ. ಈ ಸಮಸ್ಯೆಯ ಸಂಭಾವ್ಯತೆ ಮತ್ತು ತೀವ್ರತೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಈಗಾಗಲೇ ಸಾಕಷ್ಟು ವಾದವಿವಾದಗಳಿಗೆ ಗ್ರಾಸವಾಗಿರುವ ಜಾಗತಿಕ ತಾಪಮಾನದ ಹೆಚ್ಚಳವು ಬೇಸಗೆಯ ಧಗೆಯನ್ನು ಹೆಚ್ಚಿಸುವುದರೊಂದಿಗೆ ಹವಾಮಾನದ ವೈಪರೀತ್ಯಗಳಿಗೂ ಕಾರಣವೆನಿಸುತ್ತಿದೆ. ತತ್ಪರಿಣಾಮವಾಗಿ ಕಡು ಬೇಸಗೆಯ ದಿನಗಳಲ್ಲೂ ಗುಡುಗು ಮಿಂಚುಗಳೊಂದಿಗೆ ಧಾರಾಕಾರ ಮಳೆಸುರಿಯುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯೂ ಸುರಿಯುತ್ತದೆ. 

ಒಂದೆಡೆ ಅತಿವೃಷ್ಟಿ ಮತ್ತೂಂದೆಡೆ ಅನಾವೃಷ್ಟಿ ಮತ್ತೆ ಕೆಲವೆಡೆ ಅತಿಯಾದ ಸೆಕೆ ಅಥವಾ ಅತಿಯಾದ ಚಳಿ ಇತ್ಯಾದಿ ವೈಪರೀತ್ಯಗಳಿಗೆ ಮೇಲೆ ನಮೂದಿಸಿದ ಕಾರಣಗಳಲ್ಲದೇ ಅನ್ಯ ಕಾರಣಗಳೂ ಇರುವ ಸಾಧ್ಯತೆಗಳಿವೆ. ಪ್ರಾಕೃತಿಕ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಹವಾಮಾನ ತಜ್ಞರು -ವಿಜ್ಞಾನಿಗಳು ಸೂಕ್ತ ಪರಿಹಾರವನ್ನು ಪತ್ತೆಹಚ್ಚಲು ಶ್ರಮಿಸುತ್ತಿದ್ದರೂ, ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ.ಇದೇ ಕಾರಣದಿಂದಾಗಿ ಮನುಷ್ಯರ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಎನಿಸುತ್ತಿರುವ ಈ ಸಮಸ್ಯೆಯನ್ನು ಕನಿಷ್ಠ ಪಕ್ಷ ನಿಯಂತ್ರಿಸುವ ನಿಟ್ಟಿನಲ್ಲಿ ನಾವಿಂದು ಕಾರ್ಯಪ್ರವೃತ್ತರಾಗಬೇಕಿದೆ. ಏಕೆಂದರೆ ಮುಂದಿನ ಒಂದೆರಡು ದಶಕಗಳಲ್ಲಿ ಜಗತ್ತಿನ ಸರಾಸರಿ ತಾಪಮಾನದ ಮಟ್ಟವು ಎರಡರಿಂದ ಆರು ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಲಿದೆ ಎಂದು ಹವಾಮಾನ ತಜ್ಞರು ಭವಿಷ್ಯ ನುಡಿದಿದ್ದಾರೆ. ಆದರೆ ಪ್ರಸ್ತುತ ಶರವೇಗದಲ್ಲಿ ಏರುತ್ತಿರುವ ತಾಪಮಾನವನ್ನು ಗಮನಿಸಿದಾಗ ಮುಂದಿನ ಒಂದೆರಡು ವರ್ಷಗಳಲ್ಲೇ ಎರಡರಿಂದ ಆರು ಡಿಗ್ರಿಗಳಷ್ಟು ತಾಪಮಾನ ಹೆಚ್ಚುವುದೇ ಎನ್ನುವ ಸಂದೇಹ ಜನಸಾಮಾನ್ಯರ ಮನದಲ್ಲಿ ಮೂಡಬಹುದು. 

ಉಷ್ಣ ಅಲೆ 
ವಾತಾವರಣದ ತಾಪಮಾನ ಅತಿಯಾದ ಸಂದರ್ಭದಲ್ಲಿ ಉದ್ಭವಿಸುವ ಉಷ್ಣ ಸಂದರ್ಭದಲ್ಲಿ ಅಲೆಯು ಎರಡು ವಿಧಗಳಲ್ಲಿ ತನ್ನ ಮಾರಕತೆಯನ್ನು ತೋರ್ಪಡಿಸುತ್ತದೆ. ಇವುಗಳಲ್ಲಿ ಉಷ್ಣ ಆಘಾತಕ್ಕೆ ಒಳಗಾದ ವ್ಯಕ್ತಿಯ ಶರೀರದ ಉಷ್ಣತೆಯು ವಿಪರೀತ ಹೆಚ್ಚುವುದರಿಂದ ಉದ್ಭವಿಸುವ ನಿರ್ಜಲೀಕೃತ ಸ್ಥಿತಿ ಮತ್ತು ಆತನ ಮೆದುಳಿಗೆ ಸಂಭವಿಸುವ ಹಾನಿಯೂ ಆತನ ಆಕಸ್ಮಿಕ ಮರಣಕ್ಕೆ ಕಾರಣವೆನಿಸಬಲ್ಲದು. ಎರಡನೆಯ ವಿಧದಲ್ಲಿ ವಯೋವೃದ್ಧರು ಹಾಗೂ ಹೃದಯ, ಶ್ವಾಸಕೋಶಗಳು, ಮೂತ್ರಪಿಂಡಗಳಂತಹ ಪ್ರಮುಖ ಅಂಗಗಳಿಗೆ ಸಂಬಂಧಿಸಿದ ಮತ್ತು ಅನ್ಯ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ರಕ್ತ ಸಂಚಲನ ವ್ಯವಸ್ಥೆಯ ವೈಫ‌ಲ್ಯದಿಂದ ಮರಣ ಸಂಭವಿಸುವ ಸಾಧ್ಯತೆಗಳಿವೆ. ಇದಲ್ಲದೇ ಹಸುಗೂಸುಗಳು ಮತ್ತು ಮಕ್ಕಳ ಆರೋಗ್ಯದ ಮೇಲೂ ಉಷ್ಣ ಅಲೆ ದುಷ್ಪರಿಣಾಮವನ್ನು ಬೀರುತ್ತದೆ. 

ಬಡವರು ಬಲಿ 
ಯಾವುದೇ ದೇಶದಲ್ಲಿ ಉಷ್ಣ ಅಲೆಗೆ ಬಲಿಯಾಗುವವರಲ್ಲಿ ಬಡವರ ಸಂಖ್ಯೆಯೇ ಅಧಿಕವಾಗಿದೆ. ಅದರಲ್ಲೂ ಹೊರಾಂಗಣದಲ್ಲಿ ದುಡಿಯುವ ಕೃಷಿಕರು, ಕೂಲಿ ಕಾರ್ಮಿಕರು, ರಸ್ತೆ ಮತ್ತು ಕಟ್ಟಡಗಳ ನಿರ್ಮಾಣ ಕಾಮಗಾರಿಗಳಲ್ಲಿ ದುಡಿಯುವ ಕಾರ್ಮಿಕರು, ನೆರಳಿನ ಆಸರೆಯಿಲ್ಲದೇ ಸೂರ್ಯನ ಬಿಸಿಲಿಗೆ ಮೈ ಒಡ್ಡುವುದರಿಂದ ಉಷ್ಣ ಅಲೆಯ ಹಾವಳಿಗೆ ಸುಲಭದಲ್ಲೇ ಬಲಿಯಾಗುತ್ತಾರೆ. ಅಂತೆಯೇ ಕೆಲವೊಂದು ಗಂಭೀರವಾದ ವ್ಯಾಧಿಗಳಿಂದ ಬಳಲುತ್ತಿರುವವರು, ವಾತಾವರಣದ ಉಷ್ಣತೆ ಅತಿಯಾಗಿ ಹೆಚ್ಚಿದ ಸಂದರ್ಭಗಳಲ್ಲಿ ಮೂತ್ರಪಿಂಡಗಳ ವೈಫ‌ಲ್ಯ ಹಾಗೂ ಹೃದಯಾಘಾತ ಇತ್ಯಾದಿಗಳಿಂದ ಮೃತಪಡುತ್ತಾರೆ. 

ಮುಂಜಾಗ್ರತೆ 
ವಾತಾವರಣದ ತಾಪಮಾನವು ಅತಿಯಾಗಿ ಹೆಚ್ಚಿದ ಸಂದರ್ಭದಲ್ಲಿ ಸೂರ್ಯನ ಬಿಸಿಲಿಗೆ ನೇರವಾಗಿ ಮೈಯ್ಯೊಡ್ಡದಿರಿ. ಅನಿವಾರ್ಯ ಸಂದರ್ಭದಲ್ಲಿ ಛತ್ರಿಯನ್ನು ಬಳಸಿ. ಧಾರಾಳವಾಗಿ ನೀರು, ಪಾನಕ ಹಾಗೂ ಹಣ್ಣಿನ ರಸ ಇತ್ಯಾದಿ ದ್ರವಗಳನ್ನು ಸೇವಿಸಿ. ಗಂಭೀರ ವ್ಯಾಧಿಗಳಿಂದ ಬಳಲುತ್ತಿರುವ ರೋಗಿಗಳ ಶರೀರದ ಉಷ್ಣತೆಯು ಹೆಚ್ಚದಂತೆ ಹವಾನಿಯಂತ್ರಕ ಅಥವಾ ಕೂಲರ್‌ ಬಳಸಿ. ಈ ಸೌಲಭ್ಯ ಇಲ್ಲದಿದ್ದರೆ ತಣ್ಣೀರಿನಲ್ಲಿ ಅದ್ದಿದ ಒದ್ದೆ ಬಟ್ಟೆಯಿಂದ ರೋಗಿಯ ಶರೀರವನ್ನು ಆಗಾಗ ಒರೆಸುತ್ತಿರಿ. ಇಂತಹವರ ಆರೋಗ್ಯದಲ್ಲಿ ಕೊಂಚ ಏರುಪೇರು ಸಂಭವಿಸಿದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯಿರಿ. ಉಷ್ಣ ಅಲೆಯ ಸಂದರ್ಭದಲ್ಲಿ ಜ್ವರ, ವಾಂತಿ ಹಾಗೂ ಭೇದಿಗಳಂತಹ ಸಮಸ್ಯೆಗಳು ಬಾಧಿಸಿದಲ್ಲಿ ಇದನ್ನು ನಿರ್ಲಕ್ಷಿಸದೇ ವೈದ್ಯರ ಸಲಹೆ ಮತ್ತು ಚಿಕಿತ್ಸೆಯನ್ನು ಪಡೆದುಕೊಳ್ಳಿ.

– ಡಾ| ಸಿ. ನಿತ್ಯಾನಂದ ಪೈ 

Advertisement

Udayavani is now on Telegram. Click here to join our channel and stay updated with the latest news.

Next