Advertisement

Desi Swara; ಸಮಾನತೆಯ ಪಾಠ ಮನೆಯಿಂದಲೇ ಕಲಿಯಬೇಕಿದೆ !

10:54 AM Apr 29, 2023 | Team Udayavani |

ಆಗ ನಾನು ಒಂದನೇ ತರಗತಿಯಲ್ಲಿದ್ದರಬಹುದು. ಪ್ರಾರ್ಥನೆ ವೇಳೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಏನಾದರೊಂದು ವಿಷಯ ಹೇಳುವ ಪರಿಪಾಠವಿತ್ತು. ಆಗ ಮುಖ್ಯಶಿಕ್ಷಕರು ಮುಂದೆ ಬಂದು ವಿದ್ಯಾರ್ಥಿಗಳೆಲ್ಲ ಶಾಲೆಯಲ್ಲಿ ವಾರದ ಪ್ರತಿದಿನ ಸಮವಸ್ತ್ರ ಧರಿಸಬೇಕು ಎಂಬ ನಿಯಮ ಏಕೆ ಇದೆ ಎಂದು ಪ್ರಶ್ನಿಸಿದರು. ಯಾವ ವಿದ್ಯಾರ್ಥಿಯು ಉತ್ತರ ಕೊಡಲಿಲ್ಲ. ಅವರು ತಮ್ಮ ಮಾತು ಮುಂದುವರಿಸುತ್ತಾ, ನಾವೆಲ್ಲರೂ ಒಂದೇ ಎಂಬ ಭಾವನೆ ಸಣ್ಣ ವಯಸ್ಸಿನಲ್ಲೇ ನಮ್ಮ ಮನದಲ್ಲಿ ಬಿತ್ತಬೇಕು. ಜಾತಿ, ಮತ, ಬಡವ, ಶ್ರೀಮಂತ, ಜಾಣ, ದಡ್ಡ, ಹೆಣ್ಣು, ಗಂಡು ಎಂಬ ಬೇಧಭಾವ ತೋರದೆ ನಾವೆಲ್ಲರೂ ಒಂದೇ ತಾಯಿ ಭಾರತಾಂಬೆಯ ಮಕ್ಕಳು ಎನ್ನುವುದನ್ನು ಅರಿಯಬೇಕು. ಈ ಉದ್ದೇಶದಿಂದಲೇ ಶಾಲೆಯಲ್ಲಿ ಕಡ್ಡಾಯವಾಗಿ ಎಲ್ಲರೂ ಸಮವಸ್ತ್ರ ಧರಿಸಬೇಕು ಎಂದರು.

Advertisement

ಸಮಾನತೆಯ ಪಾಠವನ್ನು ನಾವು ಸಣ್ಣ ವಯಸ್ಸಿನಲ್ಲೇ ಕಲಿತಿದ್ದರೂ ಬೆಳೆದು ದೊಡ್ಡವರಾದಂತೆ ಅದನ್ನು ಮರೆತುಬಿಡುತ್ತೇವೆ. ಅದು ಯಾವಾಗ ನಮ್ಮ ಮನದೊಳಗೆ ಬೇರು ಬಿಟ್ಟು ವೃಕ್ಷವಾಗಿರುತ್ತದೋ ಎಂಬುದು ಅರಿವೇ ಆಗಿರುವುದಿಲ್ಲ. ಆದರೆ ಮೇಲು, ಕೀಳು , ಹೆಣ್ಣು, ಗಂಡು , ಜಾತಿ, ಧರ್ಮ, ಕಪ್ಪು, ಬಿಳಿ, ಜಾಣ, ದಡ್ಡ, ಬಡವ ಶ್ರೀಮಂತ ಎಂದು ಹೊಡೆದಾಡ ತೊಡಗಿದಾಗ ಮತ್ತೆ ನಮ್ಮೊಳಗೆ ಸಮಾನತೆಯ ಅರಿವು ಎದ್ದು ನಿಲ್ಲುತ್ತದೆ.

ಎಲ್ಲರೂ ಸಮಾನರು ಎನ್ನುವ ದೃಷ್ಟಿಕೋನವಿಟ್ಟುಕೊಂಡು ಬಾಳಿದರೆ ಬದುಕು ಪಾವನವಾಗುವುದು. ದೇಶದಲ್ಲಿ ಶಾಂತಿ, ನೆಮ್ಮದಿ ನೆಲೆಯಾಗಲು ಸಾಧ್ಯವಿದೆ. ಎಷ್ಟೇ ಕಾನೂನು ಕಟ್ಟಳೆಗಳನ್ನು ತಂದರೂ ಪ್ರತಿಯೊಬ್ಬನು ಅದನ್ನು ಪಾಲಿಸುವವರೆಗೆ ಸಮಾನತೆ ಎನ್ನುವುದು ಕೇವಲ ಪುಸ್ತಕದಲ್ಲಷ್ಟೇ ಉಳಿದುಕೊಂಡಿರುತ್ತದೆ. ವಿಶ್ವದ ಯಾವುದೇ ರಾಷ್ಟ್ರವಾಗಿರಲಿ ಅಲ್ಲಿರುವ ಕಾನೂನು ಅಸಮಾನತೆಯನ್ನು ಬೆಂಬಲಿಸುವುದಿಲ್ಲ. ಕಾನೂನಿನ ಸಲಹೆ ಪಡೆಯದೇ ಸಮಾನತೆಯನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರೆ ಸಮಾನತೆ ಕಾಪಾಡುವಲ್ಲಿ ನನ್ನ ಕರ್ತವ್ಯ ಏನು ಎಂಬುದನ್ನು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ. ಆಗ ಅದಕ್ಕೆ ಒಂದಷ್ಟು ಉತ್ತರ ಸಿಗಬಲ್ಲದು.

ಇಂದು ಮನೆಮನೆಗಳಲ್ಲಿ, ಮನಮನಗಳ ಸಮಾನತೆ ಬಹುಮುಖ್ಯವಾಗಿದೆ. ಒಂದೇ ಹೊಟ್ಟೆಯಲ್ಲಿ ಹುಟ್ಟಿ ಒಂದೇ ಮನೆಯಲ್ಲಿ ಬೆಳೆದು ನಾವು ಒಬ್ಬರಿಗೊಬ್ಬರು ಸ್ಪರ್ಧೆಗೆ ಇಳಿಯುವುದು, ನ ಮುಂದು ತಾ ಮುಂದು ಎಂದು ಈರ್ಷೆಗೆ ಒಳಗಾಗುವುದು, ಒಬ್ಬರು ಮುಂದೆ ಹೋದಾಗ ಹೊಟ್ಟೆ ಕಿಚ್ಚು ಪಡುವುದು, ಇವೆಲ್ಲ ನಮ್ಮ ಮನೆಗಳಲ್ಲಿಯೇ ಅಸಮಾನತೆಯನ್ನು ಹುಟ್ಟಿ ಹಾಕುತ್ತವೆ. ಹೀಗಾಗಿ ನಾವು ನಮ್ಮ ಮನಮನಗಳಲ್ಲಿ ಸಮಾನತೆಯ ಬೀಜವನ್ನು ಬಿತ್ತಬೇಕು.

ನಾವು ಎಷ್ಟೇ ಉಳ್ಳವರಾಗಿದ್ದರೂ ಅದರಿಂದ ಯಾವುದೇ ಪ್ರಯೋಜನವಿಲ್ಲ. ನಾಲ್ಕಾರು ದಿನ ವಿಜ್ರಂಭಣೆಯ ಜೀವನವನ್ನು ಸಾಗಿಸಬಹುದು. ಹೊರತು ಜೀವನದ ಅಸಲಿ ಸದುದ್ದೇಶವನ್ನಂತೂ ಜೀವಿಸಲಾಗುವುದಿಲ್ಲ. ಆದ್ದರಿಂದ ನಾವೆಲ್ಲರೂ ಮೇಲು ಕೀಳೆಂಬ ಭಾವನೆಯನ್ನು ಕಿತ್ತೆಸೆದು ಮುಂದಿನ ಪೀಳಿಗೆಗೆ ಆದರ್ಶರಾಗಿರಬೇಕು.

Advertisement

ಯುಗಯುಗಗಳಿಂದ ಗಂಡು, ಹೆಣ್ಣು ತಮ್ಮ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ತಮ್ಮ ಪಾತ್ರವನ್ನು ಸರಿಯಾಗಿಯೇ ನಿರ್ವಹಿಸಿದರೂ ದ್ವೇಷ ಅಸೂಯೆ, ಸ್ಪರ್ಧೆಗಳಿಂದ , ಸಾಮಾಜಿಕ, ಧಾರ್ಮಿಕ ಒತ್ತಡಗಳಿಂದ ಗಂಡು -ಹೆಣ್ಣು ಎಂಬ ತಾರತಮ್ಯ ಮುಂದುವರಿಯುತ್ತಲೇ ಇದೆ. ಆದ್ದರಿಂದ ನಾವು ಇಂದು ಗಂಡು- ಹೆಣ್ಣು ಸರಿಸಮ ಎಂದು ಅರಿತು ಒಪ್ಪಿಕೊಂಡಾಗ ಮಾತ್ರ ಈ ಅಸಮಾನತೆಯನ್ನು ಹೋಗಲಾಡಿಸಬಹುದಾಗಿದೆ.

ಇಂದು ಹೆಣ್ಣಿಗೆ ಸಮಾನತೆ ಸಿಗುತ್ತಾ ಇಲ್ಲ ಎಂದು ಹೋರಾಡಿದರೆ ಗಂಡು ಹಿಂದುಳಿಯಬಹುದು. ಹೀಗಾಗಿ ಹೆಣ್ಣಾಗಲಿ, ಗಂಡಾಗಲಿ ಯಾವುದೇ ಭೇದಭಾವವಿಲ್ಲದೆ ಮುನ್ನಡೆದರೆ ಮಾತ್ರ ಸಮಾನತೆಯನ್ನು ಕಾಯ್ದುಕೊಳ್ಳಬಹುದು.
ಎಲ್ಲರಿಗೂ ಅವರವರ ಜಾತಿ ಧರ್ಮಗಳು ಅಷ್ಟೇ ಮಹತ್ವದ್ದಾಗಿವೆ. ಯಾವ ಜಾತಿಯೂ ಪರರಿಗೆ ಕೆಟ್ಟದ್ದನ್ನು ಬಯಸುವುದಿಲ್ಲ. ಆದರೆ ಜನರು ಅದನ್ನು ತಪ್ಪಾಗಿ ಬಳಕೆ ಮಾಡುತ್ತಾರೆ. ನಮ್ಮ ಜಾತಿ, ಧರ್ಮಗಳನ್ನು ಪಾಲಿಸುವುದರೊಂದಿಗೆ ಇತರರ ಜಾತಿ ಧರ್ಮಗಳನ್ನು ಗೌರವಿಸಬೇಕು. ಆಗಲೇ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಯಾಗಲು ಸಾಧ್ಯ.

ಎಲ್ಲ ಬಣ್ಣಗಳಂತೆ ಕಪ್ಪು ಬಿಳುಪುಗಳೂ ಬಣ್ಣಗಳು. ಆದರೆ ಕಪ್ಪು ಎಂದಾಗ ತಾರತಮ್ಯ ಬಾರದೇ ಇರಲಾರದು. ಇಂದು ಕಪ್ಪು ಬಣ್ಣದ ಬಟ್ಟೆ ಎಲ್ಲರಿಗೆ ಇಷ್ಟವಾದರೆ ಕಪ್ಪು ಬಣ್ಣದ ಜನರು ಇಷ್ಟವಾಗುವುದಿಲ್ಲ. ಬಣ್ಣಗಳು ಬರೀ ಬಹಿರಂಗವಾಗಿರುವಂತವು. ಆದರೆ ನಾವೆಲ್ಲ ಬೆಲೆ ಕೊಡಬೇಕಾದದ್ದು ಗುಣಗಳಿಗೆ ಬಣ್ಣಗಳಿಗಲ್ಲ. ತಂತ್ರಜ್ಞಾನದ ಯುಗದಲ್ಲಿ ಇಂದು ನಾವಿದ್ದೇವೆ. ಜಾಣತನಕ್ಕೆ ಇಲ್ಲಿ ಪ್ರಮುಖ ಸ್ಥಾನವಿದೆ. ಜಾಣರು ತಮ್ಮ ಜೀವನವನ್ನು ಚೆನ್ನಾಗಿ ರೂಪಿಸಿಕೊಂಡರೆ ಜಾಣರಲ್ಲದವರು ತಮ್ಮ ಜೀವನದಲ್ಲಿ ಜಿಗುಪ್ಸೆಗೊಳಗಾಗುತ್ತಿದ್ದಾರೆ. ಆದ್ದರಿಂದ ಎಲ್ಲರಿಗೂ ಬಾಳಲು ಅವಕಾಶ ಮಾಡಿಕೊಡಬೇಕು. ಆರ್ಥಿಕವಾಗಿ ಸಬಲರಲ್ಲದಿದ್ದರೂ, ಮಾನಸಿಕವಾಗಿ ಎಲ್ಲರೂ ಸಬಲರಾಗುವಂತೆ ಮಾಡಬೇಕು. ಅಸಮಾನತೆಯ ಕಾರಣಗಳನ್ನು ಹುಡುಕಿ ಅವುಗಳಿಗೆ ಪರಿಹಾರ ಯೋಜನೆಯನ್ನು ಮೊದಲು ಮನೆಯಿಂದಲೇ ಪ್ರಾರಂಭಿಸಬೇಕು. ಆಗ ಸಮಾಜದಲ್ಲಿ ಬದಲಾವಣೆ ಖಂಡಿತಾ ಸಾಧ್ಯವಿದೆ.

*ಜಯಾ ಛಬ್ಬಿ, ಓಮನ್‌

Advertisement

Udayavani is now on Telegram. Click here to join our channel and stay updated with the latest news.

Next