Advertisement

Desi Swara: ಫ್ರಾಂಕ್‌ಫ‌ರ್ಟ್‌ನಲ್ಲಿ ಮೇಳೈಸಿದ ಕನ್ನಡದ ಸೊಗಡು

12:43 PM Jul 13, 2024 | Team Udayavani |

ಹಲವು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರು ಕನ್ನಡ ಸಂಸ್ಕೃತಿ, ವಿಚಾರ, ವೈಚಾರಿಕತೆಯನ್ನು ಬಿತ್ತರಿಸುವ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಇದರಲ್ಲಿ ನಾವಿಕ ಸಂಸ್ಥೆಯು ಪ್ರತೀ ವರ್ಷ ನಡೆಸುವ ವಿಶ್ವ ಕನ್ನಡ ಸಮ್ಮೇಳನವು ಹಲವು ವಿದೇಶಿ ನೆಲದಲ್ಲಿರುವ ಹಲವು ಕನ್ನಡ ಮನಸ್ಸುಗಳನ್ನು ಒಂದೆಡೆ ಒಗ್ಗೂಡಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

Advertisement

ಈ ಬಾರಿಯು 7ನೇ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನವು ಯುರೋಪಿನಲ್ಲಿ ಮೊದಲ ಬಾರಿಗೆ ನಡೆಯಿತು. ಜರ್ಮನಿಯ ಫ್ರಾಂಕ್‌ಫ‌ರ್ಟ್‌ನಲ್ಲಿ ಜುಲೈ 6ರಂದು ನಾವಿಕ ಸಂಸ್ಥೆ ಹಾಗೂ ಜರ್ಮನಿಯ ರೈನ್‌ಮೈನ್‌ ಕನ್ನಡ ಸಂಘದ ಸಹಯೋಗದೊಂದಿಗೆ ವಿಜೃಂಭಣೆಯಿಂದ ಆಚರಿಸಿತು. ಯೂರೋಪಿನ ವಿವಿಧ ದೇಶಗಳಿಂದ ಮಾತ್ರವಲ್ಲದೇ, ಅಮೆರಿಕ ದೇಶದಿಂದಲೇ ಸುಮಾರು 200 ಜನರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ನಿಘಂಟುಕಾರ ಕಿಟೆಲ್‌ ಕುಟುಂಬ ಸಮ್ಮಾನ
ಜರ್ಮನಿ ಅಂದಾಕ್ಷಣ ಕನ್ನಡಿಗರ ನೆನಪಿಗೆ ಬರುವುದು ಇತಿಹಾಸದಲ್ಲಿಯೇ ಮೊಟ್ಟ ಮೊದಲ “ಕನ್ನಡ – ಇಂಗ್ಲಿಷ್‌’ ಶಬ್ದಕೋಶವನ್ನು ರಚಿಸಿದ ಫೇರ್ಡಿನಂಡ್‌ ರಿವೆಂರಂಡ್‌ ಡಾ| ಕಿಟಲ್‌. ಈ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕಿಟಲ್‌ ಫ್ಯಾಮಿಲಿಯ ನಾಲ್ಕನೇ ಮತ್ತು 5ನೇ ತಲೆಮಾರಿನ (ಮರಿ ಮೊಮ್ಮಕ್ಕಳನ್ನು) ಸದಸ್ಯರಾದ ಅಲ್ಮುತ್‌ ಮೆಯೆರ್‌ಕಿಟಲ್‌, ಯುವ್ಸ್‌ ಪಾಟ್ರಿಕ್‌ ಮೆಯೆರ್‌ ಮುಂತಾದವರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಿ ಸಮ್ಮಾನಿಸಲಾಯಿತು.

ಸಮ್ಮೇಳನವು ಬೆಳಗ್ಗೆ ಕನ್ನಡ ತಾಯಿ ಭುವನೇಶ್ವರಿಯ ಮೆರವಣಿಗೆಯೊಂದಿಗೆ ಪ್ರಾರಂಭವಾಯಿತು. ಮೆಲೋಡಿ ಕಿಂಗ್‌ ರಾಜೇಶ್‌ ಕೃಷ್ಣನ್‌ ಮತ್ತು ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮ ಹಾಗೂ ಪ್ರೊ| ಕೃಷ್ಣೇಗೌಡ ಮತ್ತು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಡಾ| ಮಹೇಶ್‌ ಜೋಶಿ ನಡೆಸಿಕೊಟ್ಟ ಕನ್ನಡ ಸಾಹಿತ್ಯ ವೇದಿಕೆಯ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಿದ್ದವು.

Advertisement

ಸ್ಮರಣ ಸಂಚಿಕೆ “ಮೈನಾಕ’ ಬಿಡುಗಡೆ
ಈ ಸಮ್ಮೇಳನದಲ್ಲಿ ಸ್ಮರಣ ಸಂಚಿಕೆ “ಮೈನಾಕ’ ಅನ್ನು ಬಿಡುಗಡೆ ಮಾಡಲಾಯಿತು. ಮುಖ್ಯ ವೇದಿಕೆಯ ಮೇಲೆ ಜರ್ಮನಿಯಲ್ಲಿರುವ ಭಾರತದ ರಾಯಭಾರಿ ಪರ್ವತನೇನಿ ಹರೀಶ್‌ ಮತ್ತು ಕಿಟ್ಟಲ್‌ ಕುಟುಂಬದವರು “ಮೈನಾಕ’ವನ್ನು ಬಿಡುಗಡೆ ಮಾಡಿದರು. ಈ ಸಮ್ಮೇಳನದ ಸ್ಮರಣ ಸಂಚಿಕೆ “ಮೈನಾಕ” ತುಂಬಾ ಸೊಗಸಾಗಿ ಹೊರಬಂದಿದ್ದು ಇದರಲ್ಲಿ ಯುರೋಪಿನಲ್ಲಿರುವ ಸುಮಾರು ಇಪ್ಪತ್ತು ಕನ್ನಡ ಸಂಘಗಳು ಮತ್ತು ಕನ್ನಡ-ಕಲಿ ಶಾಲೆಗಳ ಬಗ್ಗೆ ಲೇಖನಗಳು, ಜತೆಗೆ ವೈವಿಧ್ಯಮಯ ಆಸಕ್ತಿದಾಯಕ ಲೇಖನಗಳು, ಕವನಗಳು, ಚಿತ್ರಕಲೆ ಇತ್ಯಾದಿಗಳು ಇವೆ ಎಂದು ಪ್ರಧಾನ ಸಂಪಾದಕರಾದ ಬೆಂಕಿ ಬಸಣ್ಣ ಸಭಿಕರಿಗೆ ತಿಳಿಸಿದರು.

“ಮೈನಾಕ ಎಂಬ ಹೆಸರು ಕೊಡಲು ಕಾರಣವೇನು? ಎಂಬ ಪ್ರಶ್ನೆ ಸಹಜವಾಗಿ ನಿಮ್ಮ ಮನಸ್ಸಿನಲ್ಲಿ ಏಳುತ್ತದೆ. ಮೈನಾಕ ಎಂದಾಕ್ಷಣ ನಮ್ಮ ರಸಿಕ ಮನಸ್ಸಿಗೆ ಬರುವುದು ವಿಶ್ವಾಮಿತ್ರ ಮುನಿಯ ತಪಸ್ಸನ್ನು ಭಂಗ ಮಾಡಿದ ಅಪೂರ್ವ ಸುಂದರಿ, ಅಪ್ಸರೆ “ಮೇನಕಾ’ ! “ಮೈನಾಕ’ ಹೆಸರು ( ಮೈ = ಮೈನ್‌ ನದಿಯ ತೀರದಲ್ಲಿ ಈ ಸಮ್ಮೇಳನ ನಡೆಯಲಿರುವ ಫ್ರಾಂಕ#ಫ‌ರ್ಟ್‌ ನಗರವಿದೆ ಮತ್ತು ರೈನ್‌ “ಮೈ’ ನ್‌ ಕನ್ನಡ ಸಂಘ, ಫ್ರಾಂಕ#ಫ‌ರ್ಟ್‌ ) + (ನಾ = ನಾವಿಕ) + ( ಕ =ಕನ್ನಡಿಗರು ) ಹೀಗೆ ಮೂರು ಅಕ್ಷರಗಳನ್ನು ಕೂಡಿಸಿ ಸೃಷ್ಟಿಸಲಾಗಿದೆ.

ಕನ್ನಡ ಸಾಹಿತ್ಯ ವೇದಿಕೆ: ಯುರೋಪಿನ ಎಲ್ಲ ಕನ್ನಡ ಸಾಹಿತ್ಯಾಭಿಮಾನಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಮೊಟ್ಟಮೊದಲ ಬಾರಿಗೆ ಯುರೋಪಿನ ಕನ್ನಡ ಸಾಹಿತ್ಯ ಲೋಕದ ಅನಾವರಣ ಮಾಡಲಾಯಿತು. ಇದನ್ನು ಮ್ಯೂನಿಕ್‌ನಲ್ಲಿರುವ ಸಿರಿಗನ್ನಡ ಕೂಟದ ವಿಶೇಷ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ಪ್ರೊ| ಕೃಷ್ಣೇಗೌಡ ಮತ್ತು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಡಾ| ಮಹೇಶ್‌ ಜೋಶಿಯವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ವೇದಿಕೆ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿ ನಡೆಯಿತು.

ಇದರಲ್ಲಿ “ಯುರೋಪಿನಲ್ಲಿ ಕನ್ನಡ ಭಾಷೆ ಅಭಿವೃದ್ಧಿಯ ಮತ್ತು ಕುಂದು ಕೊರತೆಗಳಲ್ಲಿ ಜರ್ಮನಿ ಮತ್ತು ಕರ್ನಾಟಕ ಸರಕಾರದ ಸಹಕಾರದ ಅಗತ್ಯತೆ’ ಎಂಬ ವಿಷಯದ ಮೇಲೆ ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಜತೆಗೆ “ಯುರೋಪಿನಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆ ಮತ್ತು ಪ್ರಾಮುಖ್ಯತೆ’ ವಿಷಯ ಮಂಡನೆಯನ್ನು ಏರ್ಪಡಿಸಲಾಗಿತ್ತು.

ವೈದ್ಯಕೀಯ ಫೋರಮ್‌: ಅಮೆರಿಕದಲ್ಲಿ ವೈದ್ಯ ವೃತ್ತಿಯಲ್ಲಿರುವವರು ನಿರಂತರವಾಗಿ ಅಧ್ಯಯನವನ್ನು ಮುಂದುವರಿಸಬೇಕಾಗಿರುತ್ತದೆ. ಪ್ರತೀ ವರ್ಷ ನಿಗದಿತ ಶೈಕ್ಷಣಿಕ ಅಗತ್ಯತೆಗಳನ್ನು ಪ್ರತ್ಯಕ್ಷವಾಗಿ ಅಥವಾ ಅಂತರ್ಜಾಲದ ಮೂಲಕ ಪೂರೈಸಬಹುದು. ಈ ನಾವಿಕೋತ್ಸವ 2024 ಸಮಾರಂಭದಲ್ಲಿ ಭಾಗವಹಿಸುತ್ತಿರುವ ವೈದ್ಯರು 2 ಗಂಟೆಗಳ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಇದರಲ್ಲಿ ಯೂರೋಪಿನ ಮತ್ತು ಅಮೆರಿಕದ ವೈದ್ಯರು ಭಾಗವಹಿಸಿದ್ದರು. ವೈದ್ಯಕೀಯ ಪ್ರಗತಿಗಳು ಮತ್ತು ಪ್ರಮುಖ ವೈದ್ಯಕೀಯ ವಿಷಯಗಳ ಕುರಿತು ಉನ್ನತ ಮಟ್ಟದ ಚರ್ಚೆಗಳು ನಡೆದವು ಮತ್ತು ಆಲೋಚನೆಗಳ ವಿನಿಮಯ ಆಯಿತು ಮತ್ತು ಎಲ್ಲ ವೈದ್ಯರು (Continuing Medical Education(CME) ಕ್ರೆಡಿಟ್‌ಗಳನ್ನು ಪಡೆದರು.

ಡಾ| ಚಂದ್ರಮೌಳಿ ಸಿಂಕೋಪ್‌ ಮೌಲ್ಯಮಾಪನ ಮತ್ತು ನಿರ್ವಹಣೆ ಬಗ್ಗೆ, ಡಾ| ರಾಜಣ್ಣ ರಾಮಸ್ವಾಮಿ ನಿದ್ರೆಯಲ್ಲಿ ಉಸಿರು ಕಟ್ಟುವಿಕೆ ಬಗ್ಗೆ , ಡಾ| ಸುಬ್ರಹ್ಮಣ್ಯ ಭಟ್‌ ನಿಮ್ಮ ವೈದ್ಯಕೀಯ ಪರವಾನಗಿಯನ್ನು ಹೇಗೆ ರಕ್ಷಿಸುವುದು ಎಂಬ ಬಗ್ಗೆ, ಡಾ| ನವೀನ್‌ ಉಲಿ ಮಧುಮೇಹವನ್ನು ನಿರ್ವಹಿಸುವಲ್ಲಿ ಮಾದರಿ ಬದಲಾವಣೆಗಳು, ಡಾ| ಮನಮೋಹನ್‌ ಕಟಪಾಡಿ ಯುವ ಅಕಾಲಿಕ ಮರಣ ಮತ್ತು ತಡೆಗಟ್ಟಬಹುದಾದ ಸಾವಿನ ಕುರಿತು ಉಪನ್ಯಾಸ ನೀಡಿದರು. ಅನಂತರ ವೈದ್ಯಕೀಯ ಪ್ಯಾನೆಲ್‌ ಚರ್ಚೆ ಮತ್ತು ಪ್ರಶ್ನೋತ್ತರ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳು: ಕ್ಯಾಲಿಫೋರ್ನಿಯಾದ “ರಂಗಧ್ವನಿ” ತಂಡವು ವಲ್ಲೀಶ ಶಾಸ್ತ್ರಿ ನಿರ್ದೇಶನದ ಸಂದೀಪ್‌ ಆಚಾರ್‌ ವಿರಚಿತ ಹಾಸ್ಯ ನಾಟಕ “ಬೇಸ್ತು ಬಿದ್ದ ರಾಜ’ ಅನ್ನು ಪ್ರಸ್ತುತ ಪಡಿಸಿ ಪ್ರೇಕ್ಷಕರನ್ನು ರಂಜಿಸಿತು. ಸಂಗೀತ ರಸ ಸಂಜೆ ಕಾರ್ಯಕ್ರಮದಲ್ಲಿ ಮೆಲೋಡಿ ಕಿಂಗ್‌ ರಾಜೇಶ್‌ ಕೃಷ್ಣನ್‌ ಮತ್ತು ಅವರ ತಂಡದವರು ಮನಮೋಹಕ ಗಾಯನವನ್ನು ಪ್ರಸ್ತುತ ಪಡಿಸಿದರು.

“ಬೇಸ್ತು ಬಿದ್ದ ರಾಜ’ ನಾಟಕ: ಕ್ಯಾಲಿಫೋರ್ನಿಯಾದ “ರಂಗಧ್ವನಿ” ತಂಡ ಪ್ರಸ್ತುತ ಪಡಿಸಿದ ವಲ್ಲೀಶ ಶಾಸ್ತ್ರಿ ನಿರ್ದೇಶನದದ ಸಂದೀಪ್‌ ಆಚಾರ್‌ ವಿರಚಿತ ಹಾಸ್ಯ ನಾಟಕ “ಬೇಸ್ತು ಬಿದ್ದ ರಾಜ’ ಪ್ರೇಕ್ಷಕರನ್ನು ರಂಜಿಸಿತು. ನಾಟಕದ ಮುಖ್ಯ ಪಾತ್ರಧಾರಿಗಳು – ರಾಜನಾಗಿ ವಲ್ಲೀಶ ಶಾಸ್ತ್ರಿ, ಮಂತಿಯಾಗಿ ಅನಂತ ಕೃಷ್ಣ, ರಾಣಿಯಾಗಿ ವೀಣಾ ಅನಂತ್‌, ಮತ್ತೆ ರಾಜಗುರುಗಳಾಗಿ ಅನಂತ ಪ್ರಸಾದ್‌ ನಟಿಸಿದರು. ಸಂದೀಪ್‌ ಆಚಾರ್‌ ನಾಟಕ ರಚಿಸಿ, ವಲ್ಲೀಶ ಶಾಸ್ತ್ರಿ ನಿರ್ದೇಶಿಸಿದ್ದರು. ಈ ನಾಟಕಕ್ಕೆ ಬೇಕಾದ ಎಲ್ಲ ವಸ್ತ್ರ, ಉಡುಗೆ, ತೊಡುಗೆ ಮತ್ತು ಸಕಲ ಅಲಂಕಾರಿಕ ವಸ್ತುಗಳನ್ನು ಅಮೆರಿಕದಿಂದ ತಮ್ಮ ಸೂಟಕೇಸ್‌ಗಳಲ್ಲಿ ಜರ್ಮನಿಗೆ ತಂಡ ಈ ಹವ್ಯಾಸಿ ನಾಟಕ ತಂಡದ ಶ್ರಮ ನಿಜಕ್ಕೂ ಶ್ಲಾಘನೀಯ.

“ಮೇಧಿನಿ ಸೃಷ್ಟಿ’ ಯಕ್ಷಗಾನ: ಜರ್ಮನಿಯಲ್ಲಿರುವ ಯಕ್ಷಮಿತ್ರರು ತಂಡದವರು ನಡೆಸಿಕೊಟ್ಟ “ಮೇಧಿನಿ ಸೃಷ್ಟಿ” ಯಕ್ಷಗಾನವು ಶ್ವೇತ ವರಾಹ ಕಲ್ಪದ ಆರಂಭದಲ್ಲಿ ಮೇಧಿನಿ ನಿರ್ಮಾಣವಾದ ಸ್ವಾರಸ್ಯಕರ ಪ್ರಸಂಗದ ಬಗ್ಗೆ ಇದ್ದು ಅಮೋಘವಾಗಿ ಮೂಡಿಬಂದಿತು.

ಇತರೆ ಪ್ರಮುಖ ಕಾರ್ಯಕ್ರಮಗಳು:
ನಾವಿಕ ಕಾರ್ಯಕಾರಿಣಿ ಸಮಿತಿಯಿಂದ ಹಚ್ಚೇವು ಕನ್ನಡದ ದೀಪ ನೃತ್ಯ, ಅಮೆರಿಕದ ಟೆಕ್ಸಾಸ್‌ನ ರಶ್ಮಿ ಶಶಿ ಸ್ಟುಡಿಯೋ ಮುದ್ರಾ ಸ್ಕೂಲ್‌ ಆಫ್‌ ಡಾನ್ಸ್‌ ತಂಡದಿಂದ ನೃತ್ಯ ಕಾರ್ಯಕ್ರಮ, ಅಮೆರಿಕದ ವೀರ ರಘುನಾಥ್‌, ಕಲ್ಪನಾ ರಾಮಸ್ವಾಮಿ, ಶಂಕರಮೂರ್ತಿ ಮತ್ತು ಗಂಗಾ ಅವರಿಂದ ಗಾನಸುಧೆ ಕಾರ್ಯಕ್ರಮ, ಮಯೂರಿಸ್‌ ಮತ್ತು ಲಯ ತಂಡಗಳಿಂದ ನವನೀತ ನಾಟ್ಯ ಪ್ರದರ್ಶನ, “ವಿದೇಶದಲ್ಲಿ ದೇಶೀಯ ಸೊಗಡು’ ತಂಡದಿಂದ ಕನ್ನಡ ನಾಡಿನ ವಿವಿಧ ಉಡುಪು ಮತ್ತು ತೊಡುಗೆಗಳ ಪ್ರಸ್ತುತಿ, ಸೌರಭ ಆರ್ಟ್ಸ್ ಮತ್ತು ಆರೋಹಣಂ ತಂಡಗಳಿಂದ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾ ವೈಭವ, ಜರ್ಮನಿಯ ಬಾಲ ನಾಗರಾಜ್‌ ಅವರ ತಂಡದಿಂದ ಭಾವಗೀತೆಗಳು, ಬೆಂಗಳೂರಿನಿಂದ ಆಗಮಿಸಿದ್ದ ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಲಾವಿದರಾದ ವಿದ್ವಾನ್‌ ಸದಾಶಿವ್‌ ಭಟ್‌ ಮತ್ತು ಅವರ ಪತ್ನಿ ಸಿಂಚನಾ ಮೂರ್ತಿಯವರಿಂದ ಭಕ್ತಿ-ಭಾವ ಸಂಗೀತ ಕಾರ್ಯಕ್ರಮಗಳು ನಾವಿಕೋತ್ಸವದಲ್ಲಿ ನೆರೆದಿದ್ದವರನ್ನು ಮನಸೂರೆಗೊಳಿಸತು.

ಈ ಸಮ್ಮೇಳನಕ್ಕಾಗಿ ಕಳೆದ ಹಲವಾರು ತಿಂಗಳುಗಳಿಂದ ಅವಿರತವಾಗಿ ಶ್ರಮಿಸಿದ ಕಾರ್ಯಕರ್ತರಿಗೆ ನಾವಿಕ ಸಂಸ್ಥೆಯ ಅಧ್ಯಕ್ಷರಾದ ಶಿವಕುಮಾರ್‌, ರೈನ್‌-ಮೈನ್‌ ಕನ್ನಡ ಸಂಘ (RMKS)ದ ಅಧ್ಯಕ್ಷರಾದ ವೇದ ಕುಮಾರಸ್ವಾಮಿ, ಸಂಚಾಲಕರಾದ ವಿಶ್ವನಾಥ ಬಾಳೇಕಾಯಿ, ಸಂಯೋಜಕರಾದ ರವೀಂದ್ರ ಕುಲಕರ್ಣಿ ಧನ್ಯವಾದಗಳನ್ನು ತಿಳಿಸಿದರು.

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್‌

 

Advertisement

Udayavani is now on Telegram. Click here to join our channel and stay updated with the latest news.

Next