Advertisement

Desi Swara: ಕನ್ನಡ ಕೂಟ ನ್ಯೂಯಾರ್ಕ್‌ 2024ರ ಬೇಸಗೆಯಲ್ಲಿ ವಿಜೃಂಭಣೆ

12:17 PM Aug 10, 2024 | Team Udayavani |

ನ್ಯೂಯಾರ್ಕ್‌: ಕಳೆದ ವರ್ಷವಷ್ಟೇ ಸುವರ್ಣ ಮಹೋತ್ಸವವನ್ನು ವೈಭವದಿಂದ ಆಚರಿಸಿದ ಕನ್ನಡ ಕೂಟ ನ್ಯೂಯಾರ್ಕ್‌ 51ನೇ ವರ್ಷದಲ್ಲಿ ಕನ್ನಡಿಗರ ರಾಯಭಾರಿಯಾಗಿ ಅಮೆರಿಕದಲ್ಲಿ ವಿಜೃಂಭಿಸುತ್ತಿದೆ. ಬದರಿನಾಥ್‌ ಅಂಬಾಟಿ ಅವರ ನೇತೃತ್ವದ ಯುವ ತಂಡ ಹಾಸುಹೊರೆಯ ಸೇವೆ ಮತ್ತು ಶ್ರದ್ಧೆಯ ಮೂಲಕ, ಕನ್ನಡ ಸಮುದಾಯದ ಅಭಿವೃದ್ಧಿಯೊಂದಿಗೆ, ವಿಶ್ವದ ಮೇಲೆ ಕನ್ನಡಿಗರ ಪ್ರಭಾವವನ್ನು ಹೆಚ್ಚಿಸುತ್ತಿದ್ದಾರೆ ಮತ್ತು ಸಶಕ್ತೀಕರಣದ ಮಾರ್ಗವನ್ನು ನೀಡುತ್ತಾ ಮುನ್ನಡೆದಿದ್ದಾರೆ ಎಂಬುದು ಹಿರಿಯರಾದ ನಾವು ಹೆಮ್ಮೆಪಡುವ ವಿಚಾರ. ಈ ವರ್ಷದ ಬೇಸಗೆಯಲ್ಲಿ ಆರಂಭದಿಂದಲೂ ಹಿಂದಿನ ವರ್ಷಗಳ ಕೇವಲ ಆಟೋಟಗಳ ಉದ್ಯಾನ ವಿಹಾರಕ್ಕೆ ಸೀಮಿತವಾಗದೆ ಕನ್ನಡ ಸಂಸ್ಕೃತಿ ಸಾಹಿತ್ಯ ಒಳಗೊಂಡು ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೆರವೇರಿಸಿ ಮುನ್ನುಗುತ್ತಿದೆ ಮತ್ತು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.

Advertisement

ಸಮ್ಮಾನಗಳು
ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನಾಡೋಜ ಡಾ| ಮಹೇಶ್‌ ಜೋಶಿ ಅವರನ್ನು ವಿಶ್ವಸಂಸ್ಥೆಯಲ್ಲಿ ಅಧ್ಯಕ್ಷ ಬದರಿನಾಥ್‌ ಮತ್ತು ಮಾಜಿ ಅಧ್ಯಕ್ಷ ಡಾ| ಬ.ರಾ. ಸುರೇಂದ್ರ ಅವರು ವಿಶೇಷ ಫಲಕವನ್ನು ಕೊಟ್ಟು ಸಮ್ಮಾನಿಸಿದರು. ಡಾ| ಮಹೇಶ್‌ ಜೋಶಿ ಅವರನ್ನು ಕನ್ನಡ ಕೂಟ ಒಂದು ವಿಶೇಷ ಕಾರ್ಯಕ್ರಮದಲ್ಲಿ ಡಾ| ಬ.ರಾ ಸುರೇಂದ್ರ ಅವರು ರಚಿಸಿದ ಕವನದೊಂದಿಗೆ “ವಿಶ್ವ ಕನ್ನಡ ಸೇವಾರತ್ನ’ ಎಂಬ ಬಿರುದನ್ನು ಕೊಟ್ಟು ಸಮ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಡಾ| ಮಹೇಶ್‌ ಜೋಶಿ ಅವರು ಸಕ್ರಿಯವಾಗಿ ನಡೆಸುತ್ತಿರುವ ಕನ್ನಡ ಕಲಿ ಶಾಲೆಯ ಬಗ್ಗೆ ಅಪಾರ ಮೆಚ್ಚುಗೆಯನ್ನು ಸೂಚಿಸಿ ಅನೇಕ ವಿಚಾರಧಾರೆಗಳನ್ನು ನಾಡಿನಿಂದ ಹೊರನಾಡಿನ ಕನ್ನಡಿಗರಿಗೆ ಹೃದಯಂಗಮವಾಗಿ ತಲುಪಿಸಿದರು. ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರು ಬಹುಶಃ ಎರಡು ದರ್ಶಕಗಗಳ ಅಂತರದಲ್ಲಿ ನೀಡಿದ ಭೇಟಿ ಇದಾಗಿತ್ತು.

ಇದೇ ಸಂದರ್ಭದಲ್ಲಿ ಸ್ಯಾಂಡಲ್‌ವುಡ್‌ ಪ್ರಖ್ಯಾತ ತಾರೆ ರಂಗಿತರಂಗದ ನಿರೂಪ್‌ ಭಂಡಾರಿ ಅವರನ್ನು ಸಮ್ಮಾನಿಸಿ, ಅವರ ಹಿರಿಯ ಸಹೋದರ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ, ಸಾಹಿತಿ ಮತ್ತು ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಅನೂಪ್‌ ಭಂಡಾರಿ ಅವರಿಗೂ ಸಹ, ಡಾ| ಬ.ರಾ ಸುರೇಂದ್ರ ಅವರು ರಚಿಸಿದ “ಅನೂಪ್‌ ಭಂಡಾರಿ ಕಲಾ ಕಾಂತಿಮಣಿ’ ಕವನವನ್ನು ಅರ್ಪಿಸಲಾಯಿತು.

Advertisement

ಹಿರಿಯರಿಗಾಗಿ ವಯೋಮಾದಿ ಯೋಜನೆಗಳು:
ಕೂಟಕ್ಕೆ ಸೇವೆ ಸಲ್ಲಿಸಿದ ಅನೇಕ ಹಿರಿಯರ ಮನಸೂರೆಗೊಳ್ಳಲು ಮತ್ತು ಅನುಕೂಲವಾಗಲು; ತೀರ್ಥಯಾತ್ರಾ ಪ್ರವಾಸ, ರೆಡ್ಡಿ ಕೇರ್‌ ಸೀನಿಯರ್‌ ವೆಲ್‌ನೆಸ್‌ ಕಾರ್ಯಾಗಾರ, ಹಿರಿಯರಿಗಾಗಿ ಯೋಗ, ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ, ಹ್ಯಾರಿಮನ್‌ ಸ್ಟೇಟ್‌ ಪಾರ್ಕ್‌ನ ಹೈಕಿಂಗ್‌ ಅನುಭವ ಮತ್ತು ಮಹಿಳೆಯರ ಉದ್ಯೋಗ ಪ್ರೋತ್ಸಾಹದ ಯೋಜನೆಗಳನ್ನು ಆಯೋಜಿಸಲಾಯಿತು.

ವಿಶೇಷ ಚಿತ್ರಕಲೆ ಕಾರ್ಯಕ್ರಮ
ಬೇಸಗೆಯಲ್ಲಿ ಶಾಲಾ ರಜಾ ಇರುವ ಕಾರಣ ಮಕ್ಕಳಿಗಾಗಿ ವಿಶೇಷ ಚಿತ್ರಕಲೆ ಕಾರ್ಯಕ್ರಮ “ಕಿಡಾ ಕ್ರಿಯೇಟಿವ್‌ ಕ್ಯಾನ್ವಾಸ್‌’ ಅನ್ನು ಏರ್ಪಡಿಸಿತ್ತು. ಈ ಬಾರಿ ಈ ಚಟುವಟಿಕೆಯ ಥೀಮ್‌ “ಬೀಚ್‌’ ಆಗಿತ್ತು. ಎಲ್ಲರೂ ತಮ್ಮ ಕಲಾತ್ಮಕತೆಯನ್ನು ಈ ಥೀಮ್‌ ಒಳಗೊಂಡಂತೆ ಅನೇಕ ಸುಂದರ ಚಿತ್ರಗಳನ್ನು ಬಣ್ಣಗಳಲ್ಲಿ ರಚಿಸಿ ಹರ್ಷಿಸಿದರು. ಈ ಕಾರ್ಯಕ್ರಮದ ವಿಶೇಷತೆಯಾದ ಕಲಾ ಸಾಮಗ್ರಿಗಳನ್ನು ನೀಡುವುದಕ್ಕಾಗಿ, ಕಲಾ ಶಿಕ್ಷಕಿ ಅಮಿ ಸಂಗವಿ ಸ್ವಯಂಪ್ರೇರಿತವಾಗಿ ಮುಂದೆ ಬಂದು, ಎಲ್ಲ ಬಗೆಯ ಚಿತ್ರಕಲೆ ಸಾಮಗ್ರಿಗಳನ್ನು ಒದಗಿಸಿದರು.

ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸ್ವರೂಪ ಮತ್ತು ಸಂತೋಷ ಅವರು ಆತಿಥೇಯರಾಗಿ ಮುನ್ನಡೆಸಿದರು. ಈ ಚಿತ್ರಕಲೆ ಕಾರ್ಯಕ್ರಮದಲ್ಲಿ ಹಲವಾರು ಮಕ್ಕಳು ಪಾಲ್ಗೊಂಡಿದ್ದು, ತಮ್ಮ ಕಲ್ಪನೆಗಳನ್ನು ಕಾಗದದ ಮೇಲೆ ಚಿತ್ರಿಸಿ, ಬಣ್ಣಗಳನ್ನು ತುಂಬಿ, ಎಲ್ಲರ ಮನವೊಲಿಸಿದರು. ಇಂತಹ ವಿಶೇಷ ಕಾರ್ಯಕ್ರಮಗಳು ಮಕ್ಕಳ ಸೃಜನಶೀಲತೆಯನ್ನು ಉತ್ತೇಜಿಸುತ್ತವೆ ಹಾಗೂ ಕನ್ನಡ ಕೂಟದ ಸಮುದಾಯದ ಒಗ್ಗಟ್ಟನ್ನು ಬೆಳೆಸಲು ಸಹಾಯ ಮಾಡುತ್ತವೆ.

ಉದ್ಯಾನ ವಿಹಾರ
ಈ ವರ್ಷದ ಉದ್ಯಾನ ವಿಹಾರ ಅನೇಕ ಆಟೋಟಗಳ ಚಟುವಟಿಕೆಗಳೇ ಅಲ್ಲದೆ “ಭಾವೈಕ ಲಹರಿ’ ತಂಡದಿಂದ ಸಂಗೀತ ನೃತ್ಯಗಳನ್ನು ಒಳಗೊಂಡಂತಹ ವಿಶೇಷ ಮನೋರಂಜಾತ್ಮಕ ಕಾರ್ಯಕ್ರಮ ಅದ್ಭುತವಾಗಿತ್ತು. ಇತ್ತೀಚಿಗೆ ನಮ್ಮನ್ನು ಅಗಲಿದ ಅತ್ಯಂತ ಹಿರಿಯ ಸದಸ್ಯರು ಮತ್ತು ಕಲಾವಿದರು ಆದ ಶ್ರೀ ಕೃಷ್ಣ ಕಾರಂತರ ನೆನಪಿನ ಸಂದರ್ಭದಲ್ಲಿ ನಡೆಸಿದ ರಸಪ್ರಶ್ನೆ ಕಾರ್ಯಕ್ರಮ ಗಮನಾರ್ಹ.

ಅಧ್ಯಕ್ಷ ಬದರಿನಾಥ್‌ ರವರು ವಿವಿಧ ಕ್ಷೇತ್ರಗಳಲ್ಲಿ ಕನ್ನಡಿಗರ ಅಪ್ರತಿಮ ಸೇವೆಯನ್ನು ಗುರುತಿಸಲು ನ್ಯೂಯಾರ್ಕ್‌ ಸಿಟಿ ಮೇಯರ್‌ ಅವರಿಂದ ಮನ್ನಣೆ ಪಡೆದು ಅಪ್ರತಿಮ ಸಾಧನೆಯ ಮತ್ತು ಕೊಡುಗೆಗಳ ಸಂಕೇತವಾಗಿ ಪ್ರಮಾಣ ಪತ್ರ ಮತ್ತು ಫಲಕಗಳನ್ನು ಕೊಟ್ಟು ಸಮ್ಮಾನಿಸಿದರು.

ಸಮ್ಮಾನಿತ ಸಾಧಕರು
ಅಜಿತ್‌ ಭಾಸ್ಕರ್‌(T20 ಕ್ರಿಕೆಟ್‌ ವಿಶ್ವ ಕಪ್‌ ಒಳಗೊಳ್ಳುವಿಕೆ), ಶಿವಕುಮಾರ್‌ಬೆಂಗಳೂರು (ಯುರೋಪ್‌ನಲ್ಲಿ ನಾವಿಕೋತ್ಸವ ಅಧ್ಯಕ್ಷರು), ಸವಿತಾ ನಾವಡ (ಯೋಗ ತರಗತಿಗಳು), ನಂದಾ ಸುರೇಂದ್ರ (ಆರೋಗ್ಯ ಮತ್ತು ಕ್ಷೇಮ).

ಇತರೆ ಚಟುವಟಿಕೆಗಳು
* ಹಿರಿಯರು ಮತ್ತು ಮಕ್ಕಳಿಗಾಗಿ ಕಲೆ ಮತ್ತು ಕರಕುಶಲ ಕೇಂದ್ರ
*ತಡೆರಹಿತ ಪ್ಲೇಪಟ್ಟಿ ಮತ್ತು ಡಿಜೆ ಸಂಗೀತ ಇಡೀ ದಿನ ಪ್ರತಿಯೊಬ್ಬರನ್ನು ಆನಂದಿಸುವಂತೆ ಮಾಡಿತು.
* ರೀಲ್‌(Reel) ಕನ್ನಡ ಹಾಡುಗಳು ಸ್ಟೇಷನ್‌.
*ಡಾ| ಶಾರದಾ ಜಯಗೋಪಾಲ್‌ ಅವರ ಗೋಗ್ರೀನ್‌ ಉಪಕ್ರಮ ಮತ್ತು ಬೆಂಗಳೂರಿನಲ್ಲಿ ಹಿರಿಯರಿಗಾಗಿ ಬಟ್ಟೆ ಸಂಗ್ರಹಣೆ.
*ಬ್ಯಾಡ್ಮಿಂಟನ್‌, ಕಾರ್ನ್ ಹೋಲ್‌, ವಾಲಿಬಾಲ್‌, ಕ್ರಿಕೆಟ್‌, ಟಗ್‌ ಆಫ್‌ ವಾರ್‌, ಹ್ಯಾಮ್‌ಸ್ಟರ್‌ರೋಲ್‌, ಮಕ್ಕಳ ಆಟಗಳು ಚುರುಮುರಿ ನಿಂಬೆಹಣ್ಣಿನ ಶರಬತ್ತು, ಬಾಯಿ ನೀರೂರಿಸುವ ಅನೇಕ ಖಾದ್ಯಗಳು, ಹಣ್ಣು ಹಂಪಲುಗಳು ಜನರನ್ನು ಸಂತೃಪ್ತರನ್ನಾಗಿಸಿ ಮುಂದಿನ ಉದ್ಯಾನ ವಿಹಾರಕ್ಕಾಗಿ ಒಂದು ವರ್ಷ ಕಾಯಬೇಕಲ್ಲ ಎಂಬ ಭಾವನೆಯಿಂದ ಮರಳಿದರು.

ಕನ್ನಡ ಕೂಟ ನ್ಯೂಯಾರ್ಕ್‌ ಸಮುದ್ರಯಾನ (ಕ್ರೂಸ್‌)
ಅಂತಿಮವಾಗಿ ಆ.5ರಂದು ಬೆಂಗಳೂರು ಮೂಲದ “ಸಮರ್ಥನಂ ಟ್ರಸ್ಟ್‌- ದೃಷ್ಟಿ ವಿಕಲಚೇತನರ ಅಂಧರ ಕ್ರಿಕೆಟ್‌ ತಂಡವು, ನ್ಯೂಯಾರ್ಕ್‌ನಲ್ಲಿ ಕ್ರಿಕೆಟ್‌ ಪ್ರದರ್ಶನವನ್ನು ನೀಡಿದ ಪ್ರಯುಕ್ತ ಆ ತಂಡವನ್ನು ರಂಜಿಸಲು ಮತ್ತು ಸಮ್ಮಾನಿಸಲು ಸಮುದ್ರಯಾನ ಆಯೋಜಿಸಲಾಯಿತು. ನ್ಯೂಯಾರ್ಕ್‌ ನಗರದ ನೀರಿನಲ್ಲಿ ಪ್ರಯಾಣಿಸುವಾಗ ಅವರು ಭೇಟಿ ಮಾಡಲು, ಸ್ವಾಗತಿಸಲು ಮತ್ತು ಆನಂದಿಸಲು, ಸ್ಥಳೀಯ ಕನ್ನಡಿಗರು ಉತ್ಸುಕದಿಂದ ಪಾಲ್ಗೊಂಡು ಆನಂದವನ್ನು ವ್ಯಕ್ತಪಡಿಸಿದ್ದಾರೆ.

ಈ ಸುಸಂದರ್ಭದಲ್ಲಿ ಕನ್ನಡ ಕೂಟ ನ್ಯೂಯಾರ್ಕ್‌ ಡಾ| ಮಹಾಂತೇಶ ಜಿ. ಕಿವದಾಸಣ್ಣವರ್‌ ಸಹ ಸಂಸ್ಥಾಪಕರು, ಸಮರ್ಥನಂ ಟ್ರಸ್ಟ್‌ ಫಾರ್‌ ದಿ ಡಿಸೇಬಲ್‌ ಅವರಿಗೆ ದಾರ್ಶನಿಕ ನಾಯಕತ್ವದ ಮಾನ್ಯತೆ ಮತ್ತು ಸಂಭ್ರಮಾಚರಣೆಯ ಪ್ರಮಾಣಪತ್ರವನ್ನು ನೀಡಿ ಸಮ್ಮಾನಿಸಲಾಯಿತು.

ವರದಿ: ಡಾ| ಬ. ರಾ. ಸುರೇಂದ್ರ, ನ್ಯೂಯಾರ್ಕ್‌

Advertisement

Udayavani is now on Telegram. Click here to join our channel and stay updated with the latest news.

Next