Advertisement

Desi Swara: ಅಮೆರಿಕ- “ಕಲಿ ನೀ ಕನ್ನಡ’ ದೃಶ್ಯಗೀತೆ ಬಿಡುಗಡೆ

01:41 PM Nov 18, 2023 | Team Udayavani |

ಅಮೆರಿಕ:ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಸಾಮಾಜಿಕ ತಾಣಗಳಲ್ಲಿ ಕೇವಲ ನಾಡಿನಾದ್ಯಂತ ಕನ್ನಡ ಅಭಿಮಾನ ಮೊಳಗಿದ್ದಲ್ಲದೇ ದೇಶಾದ್ಯಂತ ಮತ್ತು ಪ್ರಪಂಚಾದ್ಯಂತ ನೆಲೆಸಿರುವ ಕನ್ನಡಿಗರಿಂದ ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂಬ ಏಕವಾಣಿ ಮೊಳಗಿದೆ. ಕೇವಲ ಸಾಮಾಜಿಕ ತಾಣಗಳಲ್ಲಿ ಏಕಕಂಠದಿಂದ ಮೊಳಗಿದ ಮಾತ್ರಕ್ಕೆ, ಒಂದು ದಿನವೋ ಅಥವೋ ಒಂದು ವಾರವೋ ಉತ್ಸವಗಳನ್ನು ನಡೆಸಿದ ಮಾತ್ರಕ್ಕೆ ಕನ್ನಡ ಭಾಷೆ ಬೆಳೆಯಲಾರದು ಮತ್ತು ಉಳಿಯಲಾರದು ಎಂದು ಅರಿತೇ ಲೋಕಾದ್ಯಂತ ಕನ್ನಡ ಪರ ಅಭಿಯಾನಗಳು ನಡೆದಿವೆ, ನಡೆಯುತ್ತಿವೆ ಮತ್ತು ನಡೆಯುತ್ತಲೇ ಇರುತ್ತದೆ.

Advertisement

ಇಂಥಾ ಒಂದು ಅಭಿಯಾನದಲ್ಲಿ ಒಂದಾಗಿ ನ.1ರಂದು ಲೋಕಾರ್ಪಣೆಯಾದ ಕಲಿ ನೀ ಕನ್ನಡ ದೃಶ್ಯಗೀತೆ. ಅಮೆರಿಕ ಕನ್ನಡಿಗರಿಂದ ವಿಶ್ವ ಕನ್ನಡಿಗರಿಗೋಸ್ಕರ ಲೋಕಾರ್ಪಣೆಯಾದ ದೃಶ್ಯಗೀತೆ. ಈ ಗೀತೆಯನ್ನು ಲೋಕದ ಮುಂದೆ ಪ್ರಸ್ತುತ ಪಡಿಸುವ ಉದ್ದೇಶವೇನು? ನಾನಾ ಕಾರಣಕ್ಕಾಗಿ ನಾವುಗಳು, ನಮ್ಮ ನಾಡನ್ನು ತೊರೆದು ಪರದೇಶಕ್ಕೆ ಬಂದು ನೆಲೆಸಿರುತ್ತೇವೆ. ಕೆಲವೊಮ್ಮೆ ಅಲ್ಪಕಾಲಕ್ಕೆ ಹೊರಬಂದು ವಾಪಸ್ಸಾಗುವುದು ಉಂಟು.

ಕೆಲವೊಮ್ಮೆ ದೀರ್ಘ‌ಕಾಲ ನೆಲೆಸಿದಾಗ ನಮ್ಮಂತೆಯೇ ನಮ್ಮ ಮಕ್ಕಳೂ ಇಲ್ಲಿ ಹೊರನಾಡಿನಲ್ಲಿ ನೆಲೆಸಿ, ಕಲೆತು, ಬೆಳೆದು ಹಿರಿಯರೂ ಆಗುತ್ತಾರೆ. ನಾವು ಬೆಳೆದ ಬಂದ ರೀತಿಯಲ್ಲೇ ನಮ್ಮ ಮುಂದಿನ ಪೀಳಿಗೆಯವರೂ ನಮ್ಮಂತೆಯೇ ಬೆಳೆಯಬೇಕು ಎಂಬುದನ್ನು ನಿರೀಕ್ಷೆ ಮಾಡುತ್ತೇವೆ. ನಮ್ಮ ಕನ್ನಡ ಭಾಷೆಯನ್ನು ನಾವೆಷ್ಟು ಪ್ರೀತಿಸುತ್ತೇವೆಯೋ ಅಷ್ಟೇ ನಮ್ಮ ಮಕ್ಕಳೂ ಪ್ರೀತಿಸಲಿ ಎಂಬುದೇ ನಮ್ಮೆಲ್ಲರ ಆಸೆ. ನಮ್ಮಂತೆಯೇ ಮಾತನಾಡುವುದು, ಓದುವುದು ಮತ್ತು ಬರೆಯುವುದು ಮಾಡಲೆಂಬುದು ಎಲ್ಲರ ಹಿರಿಯಾಸೆ. ನಮ್ಮ ಮಕ್ಕಳ ಭಾಷಾ ಹೋರಾಟವೇ ಬೇರೆ. ದಿನನಿತ್ಯದಲ್ಲಿ ಅವರುಗಳು ಆಂಗ್ಲ ಭಾಷೆಯಲ್ಲೇ ವ್ಯವಹರಿಸುವ ಸನ್ನಿವೇಶವು ಸಾಮಾನ್ಯ ನೋಟ. ಶಾಲೆಯಲ್ಲಿ ಮತ್ತು ಶಾಲೆಯ ಹೊರಗೆ, ಓದು, ಬರಹ, ಸ್ನೇಹಿತರು, ಅಂಗಡಿ ಮುಂಗಟ್ಟು, ಹೀಗೆ ಯಾವುದೇ ಸಂದರ್ಭವಾಗಲಿ ಎಲ್ಲವೂ ಕನ್ನಡೇತರವೇ ಅಲ್ಲವೇ? ಇಂಥಾ ಮುಸುಕಿನ ಗುದ್ದಾಟದ ರೂಪವೇ ಕಲಿ ನೀ ಕನ್ನಡ ದೃಶ್ಯಗೀತೆ.

ವರ್ಜೀನಿಯ ರಾಜ್ಯದ ರಿಚ್ಮಂಡ್‌ ನಗರದಲ್ಲಿ ನೆಲೆಸಿರುವ ಸುಧೀಂದ್ರ ಮತ್ತು ಕುಟುಂಬವರ್ಗದವರು, ಸ್ಥಳೀಯ ಅಭಿಮಾನಿ ಕನ್ನಡಿಗರೊಡನೆ ಕಲೆತು, ಹೊರನಾಡಿನಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳ ದ್ವಂದ್ವವನ್ನು ಹೊಂದಿದ ಚಿತ್ರಣವನ್ನು ದೃಶ್ಯಗೀತೆಯ ಮೂಲಕ ಪ್ರಸ್ತುತಪಡಿಸಿದ್ದಾರೆ. ಸುಧೀಂದ್ರ ಅವರು ತಮ್ಮ ಅನುಭವವನ್ನು ಅಕ್ಷರರೂಪಕ್ಕೆ ಇಳಿಸಿ, ಒಂದು ಹಾಡಿನ ಮೂಲಕ ಜನರನ್ನು ತಲುಪುವ ಯತ್ನ ನಡೆಸಿದ್ದಾರೆ.

Advertisement

ಅಕ್ಷರರೂಪದಿಂದ ಹಾಡಿನ ಮೂಲಕ ಹೇಳುವ ವಿಷಯವನ್ನು ಸಾರುವ ಬದಲಿಗೆ ಅದಕ್ಕೆ ದೃಶ್ಯರೂಪವನ್ನು ಕೊಟ್ಟರೆ ಹೆಚ್ಚಿನ ಪ್ರಭಾವ ಬೀರಬಹುದು ಎಂಬ ಉದ್ದೇಶದಿಂದ ದೃಶ್ಯರೂಪಕ್ಕೆ ತಂದರು. ಮೊದಲಲ್ಲಿ ಕೆಲವೇ ಸ್ಥಳೀಯ ಕನ್ನಡ ಸ್ನೇಹಿತರೊಡನೆ ಒಡಗೂಡಿ, ತಮ್ಮ ಯೋಜನೆಗೆ ಚಿತ್ರಕಥೆಯ ರೂಪವನ್ನು ಕೊಟ್ಟು, ಕನ್ನಡ ಸಂಘದ ಹೆಚ್ಚಿನ ಸದಸ್ಯರೊಡನೆ ಸೇರಿ ಕಥಾರೂಪಕ್ಕೆ ತಕ್ಕಂತೆ ಚಿತ್ರೀಕರಣವನ್ನೂ ನಡೆಸಿದ ಯತ್ನವೇ ನಿಮ್ಮ ಮುಂದಿರುವ ಕಲಿ ನೀ ಕನ್ನಡ ದೃಶ್ಯಗೀತೆ.

“ಕಲಿ ನೀ ಕನ್ನಡ’ ಎಂಬುದು ಸುಧೀಂದ್ರರೇ ಹೇಳಿರುವಂತೆ ಒಂದು ಸಾಂ ಕ ಯತ್ನ. ಆದರೂ ಹಲವರನ್ನು ನೆನೆಯದೇ ಹೋದಲ್ಲಿ ಬರಹವು ಪೂರ್ಣವಾಗಲಾರದು. ದೃಶ್ಯ ಗೀತೆಯಲ್ಲಿನ ಪ್ರಮುಖ ದನಿಯು ಪ್ರತಿಭಾ ಕುಲಕರ್ಣಿಯವರ ಇಂಪಾದ ಕಂಠದಲ್ಲಿ ಮೂಡಿಬಂದಿದೆ. ಇವರೊಂದಿಗೆ ಜತೆಗೂಡಿರುವವರು ಸುಧೀಂದ್ರ ಮತ್ತು ಪ್ರತಿಭಾ ಅವರ ಮಕ್ಕಳಾದ ವೈಷ್ಣವಿ ಕುಲಕರ್ಣಿ ಮತ್ತು ಜಾಹ್ನವಿ ಕುಲಕರ್ಣಿ. ಈ ಮೂವರು ಹಿನ್ನೆಲೆಗಾಯನದಲ್ಲಿ ಇದ್ದು, ವೀಡಿಯೋದಲ್ಲಿ ಅಭಿನಯದಲ್ಲಿ ಪಾಲ್ಗೊಂಡು ದೃಶ್ಯಗೀತೆಗೆ ಜೀವ ತುಂಬಿದ್ದಾರೆ. ಇವರೊಂದಿಗೆ ಪೂರ್ಣಪ್ರಮಾಣದಲ್ಲಿ ದುಡಿದ ರಿಚ್ಮಂಡ್‌ ನಗರದವರೇ ಆದ ಡಿ.ಓ.ಪಿ ವಿಭಾಗದ ಪ್ರತಿಭೆ ಸುದೀಪ್‌ ಗೌಡ ಅವರಿಗೆ “ಕಲಿ ನೀ ಕನ್ನಡ’ದ ವತಿಯಿಂದ ಅನಂತ ಧನ್ಯವಾದಗಳು.

ಈ ದೃಶ್ಯಗೀತೆಯಲ್ಲಿ ಪಾಲ್ಗೊಂಡಿರುವ ಹಲವು ಉಲ್ಲೇಖನೀಯ ನುರಿತ ಕಲಾಕಾರರು ಎಂದರೆ, ಸಂಗೀತ ಕ್ಷೇತ್ರದ ಹೇಮಂತ್‌ ಜೋಯಿಸ್‌, ಸಾಹಿತ್ಯ ಕ್ಷೇತ್ರದ ಪ್ರಮೋದ್‌ ಮರವಂತೆ ಜತೆಯಲ್ಲಿ ಮಿಕ್ಸಿಂಗ್‌ ಮತ್ತು ಮಾಸ್ಟರಿಂಗ್‌ ವಿಭಾಗದಲ್ಲಿ ಹೃದಯ ಗೋಸ್ವಾಮಿಯವರು ಸೇರಿದ್ದಾರೆ. ದೃಶ್ಯಗೀತೆಯ ಮತ್ತೂಂದು ವಿಭಾಗವಾದ ಕಥೆ ಮತ್ತು ಚಿತ್ರಕಥೆಗೆ ಕೈ ಜೋಡಿಸಿರುವವರು ರಕ್ಷಿತ್‌ ತೀರ್ಥಹಳ್ಳಿ, ಮತ್ತು ಎಡಿಟಿಂಗ್‌ ವಿಭಾಗದಲ್ಲಿ ಜೆ.ಸುಧೀರ್‌. ಇವರೆಲ್ಲರೊಂದಿಗೆ ಗೀತೆಯ ಸನ್ನಿವೇಶಗಳ ಚಿತ್ರಣದಲ್ಲಿ ಸದಾ ಕಾಲ ಇದ್ದು ರಿಚ್ಮಂಡ್‌ ನಗರದ ಸ್ನೇಹವರ್ಗ. ಪ್ರತಿಯೊಬ್ಬರಿಗೂ “ಕಲಿ ನೀ ಕನ್ನಡ’ದ ವತಿಯಿಂದ ಅನಂತ ಧನ್ಯವಾದಗಳು.

ಕನ್ನಡ ಭಾಷೆಯ ಮಹತ್ವವನ್ನು ಹಂತ ಹಂತವಾಗಿ ತಿಳಿ ಹೇಳುವ ಯತ್ನದ ರೂಪವನ್ನು ವೀಕ್ಷಿಸಿ. ಅಷ್ಟೇ ಅಲ್ಲದೆ, ನಿಮ್ಮ ಬಂಧುಬಳಗ ಮತ್ತು ಸ್ನೇಹಿತರೊಡನೆ ಹಂಚಿಕೊಳ್ಳಿ. ವೀಡಿಯೋವನ್ನು ಇಲ್ಲಿ ನೋಡಬಹುದು: https://www.youtube.com/watch?v=fgO28ugi&i8

ವರದಿ: ಶ್ರೀನಾಥ್‌ ಭಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next