Advertisement

2023 ಸಿರಿಧಾನ್ಯಗಳ ವರ್ಷವೆಂದು ಘೋಷಣೆ

06:00 PM Apr 11, 2022 | Team Udayavani |

ಹುಬ್ಬಳ್ಳಿ: ನಮ್ಮ ಹಳೆಯ ಆಹಾರ ಪದ್ಧತಿ ಕಡಿಮೆ ಮಾಡಿದ್ದರಿಂದ ಹಾಗೂ ಜೀವನಶೈಲಿ ಬದಲಾಗಿದ್ದರಿಂದ ಮಧುಮೇಹ, ಬೊಜ್ಜು ಸೇರಿದಂತೆ ಇನ್ನಿತರೆ ಕಾಯಿಲೆಗಳು ನಮ್ಮನ್ನು ಆವರಿಸುತ್ತಿವೆ. ಮಕ್ಕಳಲ್ಲಿ ಪೌಷ್ಟಿಕತೆ ಕೊರತೆ ಆಗುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ಗಾಮನಗಟ್ಟಿಯ ಮಹಿಳಾ ಕೈಗಾರಿಕಾ ಪಾರ್ಕ್‌ ನಲ್ಲಿ ನೂತನವಾಗಿ ಆರಂಭಿಸಲಾದ ಗಾಯತ್ರಿ ಇಂಡಸ್ಟ್ರೀಸ್‌ನ ಉತ್ಪನ್ನಗಳು ಹಾಗೂ ಲಾಂಛನ ಬಿಡುಗಡೆ ಮಾಡಿ ಅವರು ಮಾತನಾಡಿದರು. ವಿಶ್ವಾದ್ಯಂತ 2023ನ್ನು ಸಿರಿಧಾನ್ಯಗಳ ವರ್ಷವೆಂದು ಘೋಷಿಸಲಾಗಿದೆ. ಸಿರಿಧಾನ್ಯಗಳ ಬಳಕೆಯಿಂದ ಬೊಜ್ಜು, ಮಧುಮೇಹ ಸೇರಿದಂತೆ ಇತರೆ ಕಾಯಿಲೆಗಳು ದೂರವಾಗುತ್ತವೆ. ಅಕ್ಕಿ, ಗೋಧಿ ಬಳಸುವುದರಿಂದ ತೀವ್ರತರದ ಬೊಜ್ಜು ಬೆಳೆಯುವ ಸಾಧ್ಯತೆಯಿದೆ. ಇಂದಿನ ಅವಸರದ
ಮತ್ತು ಬದಲಾದ ಜೀವನಶೈಲಿ, ಅನಗತ್ಯ ಮಾನಸಿಕ ಒತ್ತಡ ಕಾರಣದಿಂದ ವಂಶ ಪಾರಂಪರ್ಯವಾಗಿ ಇರದಿದ್ದರೂ ಮಧುಮೇಹ ಸಮಸ್ಯೆ ಕಾಡುತ್ತಿದೆ.

ಹಳೆಯ ಆಹಾರ ಪದ್ಧತಿಯಲ್ಲಿ ಬಳಸಲಾಗುವ ಜೋಳ, ಸಜ್ಜೆ, ಸಾವಿ, ನವಣೆ ಕೂಡ ಕ್ರಮೇಣ ಕಡಿಮೆಯಾಗುತ್ತಿದೆ. ಇದರಿಂದಾಗಿ ಸಾಮಾನ್ಯ ಬಡ ಮಕ್ಕಳಿಗೆ ಪೌಷ್ಟಿಕಾಂಶ ಕೊರತೆ ಆಗುತ್ತಿದೆ. ಹೀಗಾಗಿ ಪುನಃ ಹಳೆಯ ಪದ್ಧತಿ ಆಹಾರ ಬಳಕೆಗೆ ಬರುತ್ತಿದೆ. ಗಾಯತ್ರಿ ಇಂಡಸ್ಟ್ರೀಸ್‌ನವರು ಸಿರಿಧಾನ್ಯಗಳ ರೆಡಿ ಟು ಕುಕ್‌ (ಅಡುಗೆಗೆ ಸಿದ್ಧ) ಉತ್ಪನ್ನಗಳ ಉದ್ಯಮ ಆರಂಭಿಸಿದ್ದು ಶ್ಲಾಘನೀಯ ಎಂದರು.

ಉದ್ಯಮದಲ್ಲಿ ಹೊಸ ರೀತಿಯ ಯೋಚನೆ, ಚಿಂತನೆ ಹಾಗೂ ಸಾಹಸ, ಧೈರ್ಯದಿಂದ ಮುನ್ನುಗ್ಗುವವರಿಗೆ ಸಾಕಷ್ಟು ಅವಕಾಶ ಸಿಗುತ್ತದೆ. ಕೇಂದ್ರ ಸರಕಾರ ಹೊಸ ಉದ್ಯಮಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಉದ್ಯಮಶೀಲತೆ ಕುರಿತ ಭಾವನೆ ಬದಲಾಗಿದೆ. ರಫ್ತಿಗೆ ಇನ್ನಷ್ಟು ಉತ್ತೇಜನ ನೀಡಲಾಗುತ್ತಿದೆ. ರಾಸಾಯನಿಕ ಬಳಕೆ ನಿಗದಿತ ಪ್ರಮಾಣದಲ್ಲಿ ಇರಿಸಿಕೊಂಡು ಗುಣಮಟ್ಟದ ಉತ್ಪಾದನೆ ಮಾಡಿದರೆ ಭಾರತದ ಆಹಾರ ಉತ್ಪನ್ನಗಳಿಗೆ ಜಗತ್ತಿನಲ್ಲಿ ಹೆಚ್ಚು ಬೇಡಿಕೆ ಇದೆ ಎಂದು ಹೇಳಿದರು.

ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಅರವಿಂದ ಬೆಲ್ಲದ, ಸಂಸ್ಕರಿತ ಆಹಾರಗಳ ಕೇಂದ್ರದ ನಿರ್ದೇಶಕ ಚೇತನ ಹಂಚಾಟೆ, ಯುನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕ ಸಂತೋಷ ಪ್ರಭು, ಡಾ| ಜಿ.ಎಚ್‌. ನರೇಗಲ್‌, ಶ್ರೀಧರ ನಾಡಿಗೇರ, ನಾಗೇಶ ಕಲಬುರ್ಗಿ, ಬಸವರಾಜ ಕುಂದಗೋಳಮಠ, ಚಂದ್ರಶೇಖರ ಗೋಕಾಕ ಮೊದಲಾದವರಿದ್ದರು. ಜಯತೀರ್ಥ ಕಟ್ಟಿ ಸ್ವಾಗತಿಸಿದರು. ಪ್ರಸನ್ನ ಕಟ್ಟಿ ವಂದಿಸಿದರು.

Advertisement

ಧರ್ಮ, ಸಂಸ್ಕೃತಿ, ಆರೋಗ್ಯ, ಆಹಾರ ಸಂಪತ್ತಿನ ದೇಶ ನಮ್ಮದು. ಪೂರ್ವಿಕರು ನಮಗೆ ಕೊಟ್ಟ ಆಹಾರ ಪದ್ಧತಿ ಆರೋಗ್ಯಕರ ಮತ್ತು ಶ್ರೇಷ್ಠವಾಗಿತ್ತು. ಆದರೆ ಜೀವನಶೈಲಿ ಬದಲಾದಂತೆ ಆರೋಗ್ಯದ ಕ್ರಮ ವ್ಯತ್ಯಾಸವಾಗಿದೆ. ಅರಿಷಡ್ವರ್ಗಗಳನ್ನು ಹತೋಟಿಯಲ್ಲಿಟ್ಟುಕೊಂಡಾಗ ಸಮಾಜದ ಆರೋಗ್ಯ ಮತ್ತು ನಮ್ಮ ಶರೀರ ಉತ್ತಮವಾಗಿರುತ್ತದೆ.

ಅಭಿನವ ರೇವಣಸಿದ್ಧೇಶ್ವರ ಸ್ವಾಮೀಜಿ, ರಾಯನಾಳ ವಿರಕ್ತಮಠ

ಯುವಕರು ನೌಕರಿಯೇ ಬೇಕೆಂಬ ಮನಸ್ಥಿತಿ ಬದಲಿಸಿ ಸ್ವಯಂ ಉದ್ಯೋಗದತ್ತ ಒಲವು ಹೊಂದಬೇಕು. ಅಂದಾಗಲೇ ಇನ್ನೊಬ್ಬರಿಗೆ ಉದ್ಯೋಗ ಒದಗಿಸುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಿಸಲು ಸಾಧ್ಯ.
ಅರವಿಂದರಾವ ದೇಶಪಾಂಡೆ, ಆರೆಸ್ಸೆಸ್‌
ಕರ್ನಾಟಕ ಉತ್ತರದ ಸಹ ಸಂಘಚಾಲಕ

Advertisement

Udayavani is now on Telegram. Click here to join our channel and stay updated with the latest news.

Next