Advertisement

ಪೈವಳಿಕೆ ಗ್ರಾಮ ಪಂಚಾಯತ್‌ನಲ್ಲಿ  ಸುಸಜ್ಜಿತ ಶ್ಮಶಾನ ಮರೀಚಿಕೆ

06:02 PM Mar 15, 2017 | Harsha Rao |

ಪೈವಳಿಕೆ: ಕೇರಳ ಮತ್ತು  ಕರ್ನಾಟಕ ರಾಜ್ಯಗಳ ಗಡಿ ಪ್ರದೇಶದ ಪೈವಳಿಕೆ ಗ್ರಾಮ ಪಂಚಾಯತ್‌ನ ಕೆಲವು ಕಡೆಗಳಲ್ಲಿ  ಸತ್ತರೆ ದೇಹಕ್ಕೂ ಮೋಕ್ಷ  ದಕ್ಕುವುದು ಬಹಳ ಕಷ್ಟವಾಗಿದೆ ಎಂಬ ಆರೋಪ ಇದೀಗ ಸಾಮಾನ್ಯವಾಗಿದೆ. ಅಂದರೆ ಸಮರ್ಪಕವಾದ ಸುಸಜ್ಜಿತ ಸಾರ್ವಜನಿಕ ರುದ್ರಭೂಮಿ (ಶ್ಮಶಾನ) ಈ ಪಂಚಾಯತ್‌ನಲ್ಲಿ  ಇಲ್ಲದಿರುವುದೇ ಈ ರಾದ್ಧಾಂತಕ್ಕೆ ಕಾರಣವಾಗಿದೆ.

Advertisement

ಕೆಲವು ದಿನಗಳ ಹಿಂದೆ ಬಾಯಾರು ಸಮೀಪದ ಬಳ್ಳೂರು ನಿವಾಸಿ ಜನಾರ್ದನ ಆಚಾರಿ ಅವರ ಅಂತ್ಯ ಸಂಸ್ಕಾರ ಭಾಗವಾದ ದೇಹ ದಹನಕ್ಕೆ ಬಹಳ ದೂರ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಅಂತ್ಯ ಸಂಸ್ಕಾರಕ್ಕೆ ಒಂದಿಂಚು ಸ್ಥಳವೂ ಈ ಪರಿಸರದಲ್ಲಿರದೆ, ದೂರದ ಕರ್ನಾಟಕ ರಾಜ್ಯದ ಬಂಟ್ವಾಳ ತಾಲೂಕಿನ ವಿಟ್ಲ  ಸರಕಾರಿ ಆಸ್ಪತ್ರೆಯ ಸಮೀಪದಲ್ಲಿರುವ ಹಿಂದು ರುದ್ರಭೂಮಿಗೆ ಕೊಂಡೊಯ್ಯಬೇಕಾದ ದುಃಸ್ಥಿತಿ ಇವರ ಮನೆ ಮಂದಿಗೆ ಒದಗಿಬಂತು. ಸೂಕ್ತ  ಶ್ಮಶಾನ ಸೌಕರ್ಯವಿಲ್ಲದ ಕಾರಣ ಸಮಸ್ಯೆಗಳಿಂದ ಬಳಲಿ ಬೆಂಡಾಗಿರುವ ಹಲವು ಗಡಿನಾಡ ಮಂದಿ ಹೆಣ ಸುಡಲು ಕರ್ನಾಟಕದತ್ತ  ಮುಖಮಾಡುತ್ತಿದ್ದಾರೆ ಎಂದರೆ ಸಮಸ್ಯೆಯ ಬಗ್ಗೆ  ಯಾರಿಗೂ ಅರಿವಾಗದಿರದು.

ಮಂಜೇಶ್ವರ ತಾಲೂಕಿನ ಹಲವು ಹಿಂದುಳಿದ ಪ್ರದೇಶವಾಸಿಗಳು ದಿನಂಪ್ರತಿ ಎಂಬಂತೆ ಈ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಇದು ಎರಡು ವರ್ಷಗಳ ಹಿಂದೆ ಹೊಸದಾಗಿ ಅಭಿ ವೃದ್ಧಿಯ ಗುರಿಯೊಂದಿಗೆ ರಚಿತ ವಾದ ಮಂಜೇಶ್ವರ ತಾಲೂಕಿನ ದುಃಸ್ಥಿತಿ. ತಾಲೂಕಿನಲ್ಲಿರುವ ಮೀಂಜ, ವರ್ಕಾಡಿ ಸಹಿತ ಮಂಗಲ್ಪಾಡಿ ಗ್ರಾಮ ಪಂಚಾಯತ್‌ಗಳಲ್ಲಿ  ಇಂತಹ ಸಮಸ್ಯೆಗಳು ಆಗಾಗ್ಗೆ  ಕೇಳಿ ಬರುತಿವೆೆ. ಇದೀಗ ಪೈವಳಿಕೆ ಗ್ರಾಮ ಪಂಚಾ ಯತ್‌ ಕೂಡ ಈ ಪಟ್ಟಿಗೆ ಸೇರ್ಪಡೆ ಗೊಳ್ಳುವಂತಾಯಿತು.

ಜನಪ್ರತಿನಿಧಿಗಳು ಮತ್ತು  ಅಧಿಕಾರಿ ಗಳು ಇಂತಹ ಸೂಕ್ಷ¾ ವಿಚಾರ ಗಳನ್ನು ಒಂದು ಕಿವಿಯಲ್ಲಿ  ಕೇಳಿ ಮಗದೊಂದು ಕಿವಿಯಲ್ಲಿ  ಬಿಡುವ ಚಾಳಿಯನ್ನು ಬೆಳೆಸಿಕೊಂಡಿದ್ದಾರೆ. ಕೆಲವು ಪಂಚಾ ಯತ್‌ ಪರಿಧಿಯಲ್ಲಿ ಶ್ಮಶಾನಗಳಿದ್ದರೂ ಸಮರ್ಪಕ ಸೌಕರ್ಯಗಳಿಲ್ಲದೆ ಜನರು ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ಎರಡು ಅಥವಾ ಮೂರು ಸೆಂಟ್ಸ್‌  ಸ್ಥಳದಲ್ಲಿ  ಮನೆ ಕಟ್ಟಿ  ಕೂಲಿನಾಲಿ ಮಾಡಿ ಜೀವನ ನಿರ್ವಹಣೆ ನಡೆಸುವ ಪೈವಳಿಕೆ ಪಂಚಾಯತ್‌ನ ಶ್ರಮಿಕ ವರ್ಗದ ಮನೆಯಲ್ಲಿ  ಹಿರಿಯ ವಯೋವೃದ್ಧರೋ, ಅನಾರೋಗ್ಯ ಪೀಡಿತರೋ ನಿಧನರಾದಲ್ಲಿ  ಅವರ ದೇಹವನ್ನು  ಸರಿಯಾಗಿ ಸುಡಲಾಗದೇ ಮತ್ತು  ಹೂಳಲೂ ಜಾಗವಿಲ್ಲದೆ ಸಂಕಷ್ಟ  ಅನುಭವಿಸುವ ಪರಿಸ್ಥಿತಿಗೆ ಯಾರು ಹೊಣೆ ಎಂಬ ಪ್ರಶ್ನೆ ಉದ್ಭವಿಸಿದೆ.

ಬೇರೆ ಸ್ಥಳಗಳಿಗೆ ಕೊಂಡೊಯ್ದು  ಸುಡೋಣವೆಂದರೆ ಬಾಡಿಗೆ ವಾಹನ ಗಳಲ್ಲಿ ಹೆಣವನ್ನು  ಕೊಂಡು ಹೋಗಲು ನಿರಾಕರಿಸುವ ಸ್ಥಿತಿ ಮನೆಯವರನ್ನು  ಇಕ್ಕಟ್ಟಿಗೆ ಸಿಲುಕಿಸುತ್ತದೆ. ನಿಯಮದಂತೆ ಒಂದು ಪ್ರದೇಶ ಅಥವಾ ಪಂಚಾಯತ್‌ ವ್ಯಾಪ್ತಿಯ ಜನಸಂಖ್ಯೆಯನ್ನು ಆಧರಿಸಿ ಅಲ್ಲಿ  ಸಮರ್ಪಕ ಶವಾಗಾರ ಹಾಗೂ ಶ್ಮಶಾನವನ್ನು  ನಿರ್ಮಿಸುವುದು ಆಯಾ ಪಂಚಾಯತ್‌ ಆಡಳಿತದ ಜವಾಬ್ದಾರಿಯಾಗಿದೆ. ಆದರೆ ಪೈವಳಿಕೆ ಯಂತಹ ದೊಡ್ಡ  ಪಂಚಾಯತ್‌ನಲ್ಲಿ  ಸುಸಜ್ಜಿತವಾದ ಕೇವಲ ಒಂದು ಶ್ಮಶಾನವಿದ್ದು, ಉಳಿದ ಶ್ಮಶಾನಗಳು ಹೆಸರಿಗೆ ಮಾತ್ರವಷ್ಟೇ ಕಡತಗಳಲ್ಲಿ  ನಮೂದಿತವಾಗಿವೆ. ಪರಿಶಿಷ್ಟ  ಜಾತಿ ಹಾಗೂ ವರ್ಗಕ್ಕೆ ಸೇರಿದ ಸಾವಿರದಷ್ಟು  ಮನೆಗಳು ಇರುವ ಈ ಪಂಚಾಯತ್‌ ಪರಿಧಿಯಲ್ಲಿ  ಕನಿಷ್ಠ  5 ಸುಸಜ್ಜಿತ ಶ್ಮಶಾನಗಳ ಆವಶ್ಯಕತೆಯಿದೆ.

Advertisement

ಪಂಚಾಯತ್‌ಗೆ ಸಂಬಂಧಿಸಿದ ಕಡತದಲ್ಲಿ  ಕೆಲವು ಮೀಸಲು ಜಾಗ ಗಳು ಶ್ಮಶಾನಗಳಿಗಾಗಿ ವರ್ಷಗಳ ಹಿಂದೆಯೇ ನಮೂದಿಸಲ್ಪಟ್ಟಿದ್ದರೂ ಅವುಗಳಲ್ಲಿ  ಬೇಕಾದ ವ್ಯವಸ್ಥೆಗಳನ್ನು  ಕಲ್ಪಿಸಲು ಜನಪ್ರತಿನಿಧಿಗಳು ಮುಂದಾಗ ದಿರುವುದು ಇಲ್ಲಿನ ದುರವಸ್ಥೆಗೆ ಹಿಡಿದ ಕನ್ನಡಿಯಂತಾಗಿದೆ. 20 ಸೆಂಟ್ಸ್‌  ಸ್ಥಳದಲ್ಲಿ ಸಮರ್ಪಕ ಗೋಡೆ ಆವರಣವುಳ್ಳ ಶ್ಮಶಾನ ನಿರ್ಮಿಸಿ, ಅಗತ್ಯವಿರುವ ಶವಾಗಾರ ಶೆಡ್‌, ಶವ ಪೆಟ್ಟಿಗೆ, ಸುಡುಯಂತ್ರ, ನೀರು ಸಹಿತ ವಿದ್ಯುತ್‌ ಸಂಪರ್ಕ ನೀಡಬೇಕೆನ್ನುವುದು ನಿಬಂಧನೆಯಾಗಿದೆ. ಆದರೆ ಇಂತಹ ಮೂಲಭೂತ ಸೌಕರ್ಯಗಳನ್ನು  ಪೂರೈಸದಿರುವ ಸ್ಥಳೀಯಾಡಳಿತ ಸಂಸ್ಥೆಯು ಜನರ ಮೊರೆಗೆ ಸ್ಪಂದಿಸದೆ, ದೇಹ ಸುಡಲೂ ಜಾಗ ನೀಡದೆ, ಅಗಲಿದ ಆತ್ಮಕ್ಕೆ  ಮೋಕ್ಷ  ಕೊಡದೆ, ಜನಸಾಮಾನ್ಯರ ನೋವನ್ನು  ಅರಿಯುವ ಗೋಜಿಗೂ ಹೋಗದೇ ನಿರ್ಲಕ್ಷ್ಯ ವಹಿಸುತ್ತಿದೆ.

ಗಾಳಿಯಡ್ಕ ಸಮೀಪದ ಕ್ವಾರ್ಟರ್ಸ್‌ ವೊಂದರಲ್ಲಿ  ವಾಸವಾಗಿದ್ದ ವ್ಯಕ್ತಿ  ಅಗಲಿದಾಗ, ಮೂರು ಸೆಂಟ್ಸ್‌  ಜಾಗವಿರುವ ಇಲ್ಲಿನ ಅಂಗಳದಲ್ಲಿ ಸುಡಲಾಗಲಿಲ್ಲ. ಕಾರಣ ಸಮೀಪ ದಲ್ಲಿಯೇ ಇರುವ ಮತ್ತೂಂದು ಮನೆಯ ಹಿತ್ತಿಲು ಹಾಗೂ ಚಾವಣಿ ಅಂಗಳಕ್ಕೆ ತಾಗಿಕೊಂಡಿತ್ತು. ಹೀಗೆ ಜನಸಾಮಾನ್ಯರು ಸತ್ತರೂ ತೊಂದರೆ ಅದರಲ್ಲೂ  ಪರಿಶಿಷ್ಟ  ಜಾತಿ ವರ್ಗಕ್ಕೆ ಸೇರಿದ ವ್ಯಕ್ತಿಗಳು ಸತ್ತರಂತೂ ದೇಹ ಸುಡಲೂ ಅಥವಾ ಹೂಳಲು ಒಂದಿಂಚೂ ಜಾಗ ಸಿಗದ ದುಃಸ್ಥಿತಿ ಮಂಜೇಶ್ವರ ತಾಲೂಕಿನ ವಿವಿಧ ಪಂಚಾಯತ್‌ಗಳಲ್ಲಿದೆ.

ವ್ಯವಸ್ಥೆಗಳಿಲ್ಲದ ಶ್ಮಶಾನಗಳು
ಪೈವಳಿಕೆ ಗ್ರಾಮ ಪಂಚಾಯತ್‌ನ ಅಟ್ಟೆಗೋಳಿ, ಕೊಮ್ಮಂಗಳ, ಸರ್ಕುತ್ತಿ, ಕುಡಾಲುಮೇರ್ಕಳ, ಚೇವಾರು, ಪೆರ್ವೋಡಿಕಟ್ಟೆ, ಬೋಳಂಗಳ, ಕನಿಯಾಲತ್ತಡ್ಕ, ಗಾಳಿಯಡ್ಕ, ಬಾಯಾರು ಕ್ಯಾಂಪ್ಕೋ ಸಮೀಪ ಹೀಗೆ ಹಲವು ಸ್ಥಳಗಳನ್ನು  ಶ್ಮಶಾನದ ಮೀಸಲು ಸ್ಥಳಗಳೆಂದು ಪಂಚಾಯತ್‌ನ ಅಸೆಟ್‌ ಪುಸ್ತಕದಲ್ಲಿ  ನಮೂದಿಸಲಾಗಿದೆ. ಆದರೆ ಇಂತಹ ಸ್ಥಳಗಳಲ್ಲಿ  ಸೂಕ್ತ  ವ್ಯವಸ್ಥೆಗಳಿಲ್ಲದೇ ಮತ್ತು  ಕೆಲವು ಪ್ರದೇಶಗಳಲ್ಲಿ  ನಿರ್ದಿಷ್ಟ  ಶ್ಮಶಾನದ ಪರಿ ಯಾವುದೆಂದು ಅರಿಯದೆ  ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಮಾತ್ರವಲ್ಲದೆ ಪೈವಳಿಕೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೆಲವು ಪ್ರದೇಶಗಳ ಮನೆಗಳಲ್ಲಿ  ಯಾರಾದರೂ ಸತ್ತರೆ ಇದು ತಮಗೆ ತಗಲಿದ ಶಾಪವೆಂದೇ ಭ್ರಮಿಸುವ ಮಟ್ಟಿಗೆ ಜನರು ಯೋಚಿಸುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next