Advertisement

ಕೋವಿಡ್‌ ನಿರ್ವಹಣೆ ವೈಫಲ್ಯ: ಸವದಿ ಗರಂ

04:27 PM Aug 08, 2020 | Suhan S |

ರಾಯಚೂರು: ಕೋವಿಡ್‌ ಆಸ್ಪತ್ರೆ, ಕೇರ್‌ ಸೆಂಟರ್‌ಗಳಲ್ಲಿ ಸೋಂಕಿತರನ್ನು ನಡೆಸಿಕೊಳ್ಳುತ್ತಿರುವ ಜಿಲ್ಲಾಡಳಿತದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ, ವರ್ತನೆ ಸುಧಾರಿಸಿಕೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್ , ನೆರೆ ಹಾಗೂ ಜಿಲ್ಲೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಕೋವಿಡ್‌ ಸಂಬಂಧಿಸಿದಂತೆ ರಿಮ್ಸ್‌ ಹಾಗೂ ಒಪೆಕ್‌ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂಬ ದೂರುಗಳಿವೆ. ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಮೂರು ದಿನದಿಂದ ವಿದ್ಯುತ್‌ ಇಲ್ಲ ಎಂದು ವರದಿಯಾಗಿದೆ. ಯಾಕೆ ನಿರ್ಲಕ್ಷ್ಯ ವಹಿಸಿದ್ದೀರಿ ಎಂದು ಕೇಳಿದರು. ಈ ಬಗ್ಗೆ ಸ್ಪಷ್ಟೀಕರಣ ಕೇಳಿದಾಗ ಜೆಸ್ಕಾಂ ಅಧಿಕಾರಿ ಸಭೆಗೆ ಗೈರಾಗಿದ್ದರು. ಕೂಡಲೇ ಅವರಿಗೆ ನೋಟಿಸ್‌ ನೀಡುವಂತೆ ಸಚಿವ ಸೂಚಿಸಿದರು.

ಇದಕ್ಕೆ ದನಿಗೂಡಿಸಿದ ಮಾನ್ವಿ ಶಾಸಕ ರಾಜಾ ವೆಂಟಕಪ್ಪ ನಾಯಕ, ಸೋಂಕಿತರು ಒಪೆಕ್‌ನಲ್ಲಿ ಊಟಕ್ಕಾಗಿ ಸಾಲು ನಿಲ್ಲಬೇಕಿದೆ. ಸರ್ಕಾರ ಹಣ ಪಾವತಿಸಿದರೂ ಇಂಥ ಕರ್ಮವೇಕೆ ಎಂದು ದೂರಿದರು. ಇದಕ್ಕೆ ಸಿಂಧನೂರು ಶಾಸಕ ನಾಡಗೌಡ ದನಿಗೂಡಿಸಿದರು. ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಬೇರೆ ಜಿಲ್ಲೆಗಳಲ್ಲಿ ಆಯುಷ್‌ ಇಲಾಖೆಯಿಂದ ಔಷಧ ವಿತರಿಸಳಾಗುತ್ತಿದೆ. ಉಷ್ಣಾಂಶ ಹೆಚ್ಚಿಸಲು ಜಾಗೃತಿ ಮೂಡಿಸಲಾಗುತ್ತಿದೆ. ನೀವೇನು ಮಾಡಿದ್ದೀರಾ ಎಂದು ಪ್ರಶ್ನಿಸಿದರು. ಅದಕ್ಕೆ ಡಿಎಚ್‌ಒ ಡಾ.ರಾಮಕೃಷ್ಣ ನಿರುತ್ತರರಾದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ, ಡಿಎಚ್‌ಒ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳಿವೆ.

ಕೋವಿಡ್ ಗೆ ಈವರೆಗೂ ಔಷಧ ಸಿಕ್ಕಿಲ್ಲ. ಜನ ಖಾಸಗಿ ಆಸ್ಪತ್ರೆಗೆ ಹೋದರೆ ಲಕ್ಷಾಂತರ ಹಣ ಪಾವತಿಸಬೇಕು. ಬಡವರು ಎಲ್ಲಿಂದ ತರಬೇಕು. ಆದರೆ, ನೀವು ಸರಿಯಾದ ಉಪಚಾರ ಮಾಡದಿರುವುದಕ್ಕೆ ಜನರಲ್ಲಿ ಅಪನಂಬಿಕೆ ಇದೆ. ಸೋಂಕಿತರು ಸರ್ಕಾರಿ ಆಸ್ಪತ್ರೆಗಳಿಗೆ ಬರಲು ಭಯಪಡುತ್ತಿದ್ದಾರೆ. ಸೋಂಕು ಹರಡದಂತೆ ತಡೆಯಲೆಂದೇ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ. ಆದರೆ, ಅಲ್ಲೀಯೇ ಅವ್ಯವಸ್ಥೆ ಇದ್ದರೆ ಹೇಗೆ? ಸೋಂಕಿತರನ್ನು ನಿತ್ಯ ಭೇಟಿ ಮಾಡಿ ಆರೋಗ್ಯ ವಿಚಾರಿಸುವಂತೆ ವೈದ್ಯರಿಗೆ ಸೂಚನೆ ನೀಡಿ ಎಂದು ತಿಳಿಸಿದರು.

ಪ್ರವಾಹ ಎದುರಿಸಲು ಸಿದ್ಧರಾಗಿ: ಪ್ರವಾಹ ಸ್ಥಿತಿ ಬಗ್ಗೆ ಅವಲೋಕಿಸಿದ ಸಚಿವ ಸವದಿ, ನದಿಪಾತ್ರಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಪ್ರವಾಹ ಹೆಚ್ಚಿದ್ದಾಗ ಸಣ್ಣ ಬೋಟ್‌ಗಳಿಂದ ಉಪಯೋಗವಿಲ್ಲ. ಗುಣಮಟ್ಟದ ಬೋಟ್‌ ಖರೀದಿಸಬೇಕು. ನದಿಗೆ ಎಷ್ಟು ಪ್ರಮಾಣದಲ್ಲಿ ನೀರು ಬರುತ್ತವೆ ಎಂಬ ಮಾಹಿತಿ ಆಧರಿಸಿ ಕ್ರಮ ಕೈಗೊಳ್ಳಬೇಕು. ಇತರೆ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಎಂದರು.

Advertisement

ಸಹಾಯಕ ಆಯುಕ್ತ ಸಂತೋಷ ಕಾಮಗೌಡರ್‌ ಮಾತನಾಡಿ, ಕೃಷ್ಣಾನದಿ ತೀರದ ಜನರನ್ನು ಸುರಕ್ಷಿತ ಸ್ಥಳಗಳ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಕೃಷ್ಣಾ ಹಾಗೂ ತುಂಗಭದ್ರಾ ನದಿ ಪ್ರವಾಹ ಪೀಡಿತ 105 ಗ್ರಾಮಗಳಿಗೆ ಸಂಬಂಧಿಸಿ 32 ಗ್ರಾಪಂಗಳಲ್ಲಿ ವಿಪತ್ತು ನಿರ್ವಹಣ ಸಮಿತಿ ರಚಿಸಲಾಗಿದೆ. ನಾರಾಯಣಪುರ ಜಲಾಶಯದಿಂದ ಸುಮಾರು ಮೂರು ಲಕ್ಷ ಕ್ಯೂಸೆಕ್‌ ನೀರು ಹರಿಸಿದರೂ ಸಮಸ್ಯೆ ಇಲ್ಲ ಎಂದು ವಿವರಿಸಿದರು.

ಜಂಟಿ ನಿರ್ದೇಶಕ ತರಾಟೆಗೆ: ಸಿಂಧನೂರು ಶಾಸಕ ವೆಂಕಟರಾವ್‌ ನಾಡಗೌಡ ಮಾತನಾಡಿ, ಕಷ್ಟಪಟ್ಟು ನಮ್ಮ ತಾಲೂಕಿಗೆ ಅಲೊಕೇಶನ್‌ ಮಾಡಿಸಿದ್ದ ಯೂರಿಯಾ ಗೊಬ್ಬರವನ್ನು ಬೇರೆಯವರಿಗೆ ಹಂಚಿಕೆ ಮಾಡಲಾಗಿದೆ. ಗೊಬ್ಬರಕ್ಕಾಗಿ ನಾವು ರೌಡಿಸಂ ಮಾಡಬೇಕೆ ಎಂದು ಪ್ರಶ್ನಿಸಿದರು. ಇದಕ್ಕೆ ಮಾನ್ವಿ ಶಾಸಕ, ಕಾಡಾ ಅಧ್ಯಕ್ಷ ಬಸನಗೌಡ ತುರ್ವಿಹಾಳ, ಕೊಪ್ಪಳ ಸಂಸದ ಸಂಗಣ್ಣ ಕರಡಿ ದನಿಗೂಡಿಸಿದರು. ಈ ಕುರಿತು ಕೃಷಿ ಇಲಾಖೆ ಜಂಟಿ ನಿರ್ದೇಶಕ ಹಬೀದ್‌ ಮಾತನಾಡಿ, ಬೇಡಿಕೆಯಷ್ಟು ಪೂರೈಕೆಯಾಗಿಲ್ಲ ಎಂದರು.

ಇದರಿಂದ ಬೇಸರಗೊಂಡ ಸಚಿವ, ರಸಗೊಬ್ಬರ ಕೊರತೆ ಇರುವ ನನ್ನ ಗಮನಕ್ಕೆ ಯಾಕೆ ತರಲಿಲ್ಲ. ರೈತರಿಗೆ ಯಾವುದೇ ಕಾರಣಕ್ಕೂ ರಸಗೊಬ್ಬರ ಸಮಸ್ಯೆಯಾಗಬಾರದು ಎಂಬುವುದನ್ನು ಆದೇಶಗಳ ಮೂಲಕ ಮಾಹಿತಿ ನೀಡಲಾಗಿದೆ. ಆದರೂ ಈ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ ಎಂದರು. ಸಂಸದ ಅಶೋಕಗಸ್ತಿ, ಜಿಲ್ಲಾ ಕಾರಿ ಆರ್‌.ವೆಂಕಟೇಶ ಕುಮಾರ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಸಿಇಒ ಲಕ್ಷ್ಮೀಕಾಂತರೆಡ್ಡಿ ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next