Advertisement

ಕೋವಿಡ್ 19…ಭಾರತದಲ್ಲಿ ಮತ್ತೆ ನಾಲ್ಕನೇ ಅಲೆ; ಆರೋಗ್ಯ ತಜ್ಞರ ಅಭಿಪ್ರಾಯವೇನು?

10:41 AM Apr 26, 2022 | Team Udayavani |
ಕೊರೊನಾ ಮೂರನೇ ಅಲೆ ವೇಳೆ ಕಾಣಿಸಿಕೊಂಡಿದ್ದ ಒಮಿಕ್ರಾನ್‌ ಸೋಂಕು, ಜನರಲ್ಲಿ ಅಷ್ಟೇನೂ ಬಾಧಿಸಲಿಲ್ಲ. 2021ರ ಮಧ್ಯಭಾಗದಲ್ಲೇ 3ನೇ ಅಲೆ ಹೆಚ್ಚಾಗಿ ಕಾಣಿಸಿಕೊಳ್ಳಬೇಕಾಗಿತ್ತು. ಅಲ್ಲದೆ, ಇದು ಹರಡುವಿಕೆಯಲ್ಲಿ ಮಾತ್ರ ಶಕ್ತಿ ಹೊಂದಿದೆ, ಜನರ ಆರೋಗ್ಯದ ಮೇಲೆ ಅಷ್ಟೇನೂ ಪರಿಣಾಮ ಬೀರುವುದಿಲ್ಲ ಎಂಬ ತಜ್ಞರ ಮಾತು ಜನರಲ್ಲಿ ಧೈರ್ಯ ಮೂಡಿಸಿತ್ತು. ಆದರೂ, ಈ ತಿಂಗಳ ಆರಂಭದಲ್ಲಿ ದಿಲ್ಲಿ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಲ ಮತ್ತು ಉತ್ತರ ಪ್ರದೇಶ ರಾಜ್ಯಗಳು ಕೊರೊನಾ ಕುರಿತ ಎಲ್ಲ ನಿಬಂಧನೆಗಳನ್ನು ತೆಗೆದು ಹಾಕಿದ್ದವು...
Now pay only for what you want!
This is Premium Content
Click to unlock
Pay with

ಕಣ್ಣಿಗೆ ಕಾಣದ ಶತ್ರು ಎಂದೇ ಕುಖ್ಯಾತಿ ಪಡೆದಿರುವ ಕೊರೊನಾ ವೈರಸ್‌ ಮತ್ತೆ ನಾಲ್ಕನೇ ಅಲೆಯ ರೂಪದಲ್ಲಿ ಹರಡುತ್ತಿದೆ. ಅಬ್ಟಾ ಮೂರನೇ ಅಲೆಯ ಆತಂಕ ಕಳೆದುಕೊಂಡು, ನಿಶ್ಚಿಂತರಾದೆವು ಎಂದು ಅಂದುಕೊಳ್ಳುತ್ತಿರುವಾಗಲೇ 4ನೇ ಅಲೆಯ ಭೀತಿಯ ಬಗ್ಗೆ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಮೇ ತಿಂಗಳ ಅಂತ್ಯದಲ್ಲಿ ಈ 4ನೇ ಅಲೆ ಪೀಕ್‌ಗೆ ಹೋಗಬಹುದು ಎಂಬುದು ತಜ್ಞರ ಅಭಿಮತ. ಇದರಿಂದಾಗಿಯೇ ಕರ್ನಾಟಕವೂ ಸೇರಿ ಹಲವಾರು ರಾಜ್ಯಗಳಲ್ಲಿ ಮತ್ತೆ ಕೊರೊನಾ ಕಠಿನ ನಿಯಮಗಳು ಜಾರಿಯಾಗುತ್ತಿವೆ.

Advertisement

ಭಾರತದಲ್ಲಿ ನಾಲ್ಕನೇ ಅಲೆ…
ಎಪ್ರಿಲ್‌ ಮೊದಲ ವಾರ ಕೆಲವು ರಾಜ್ಯಗಳು ಕೊರೊನಾ ಪ್ರತಿಬಂಧಕ ಕ್ರಮ ವಾಪಸ್‌ ಪಡೆದ ಮೇಲೆ, ಕಾಕತಾಳೀಯವಾಗಿ ದೇಶದಲ್ಲಿ ಕೊರೊನಾ ಕೇಸುಗಳ ಸಂಖ್ಯೆ ಹೆಚ್ಚಾಗತೊಡಗಿದೆ. ಇಡೀ ದೇಶದಲ್ಲಿ ದಿನಕ್ಕೆ 400ರಿಂದ 500 ಪ್ರಕರಣಗಳು ದಾಖಲಾಗುತ್ತಿದ್ದವು. ಸಾವಿನ ಪ್ರಕರಣಗಳೂ ಕೆಲವು ದಿನ ಶೂನ್ಯಕ್ಕೆ ಬಂದಿತ್ತು. ಆದರೆ, ಈಗ ದಿಲ್ಲಿಯಲ್ಲಿ ಕೊರೊನಾ ಆರ್ಭಟ ಜೋರಾಗಿದೆ. ಇಲ್ಲಿ ದಿನಕ್ಕೆ ಸಾವಿರಕ್ಕೂ ಹೆಚ್ಚು ಪ್ರಕರಣ ಕಾಣಿಸಿಕೊಳ್ಳುತ್ತಿವೆ. ಹಾಗೆಯೇ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ.  ಸದ್ಯ ದೇಶದಲ್ಲಿ ಸೋಮವಾರ ಬೆಳಗ್ಗೆ 8 ಗಂಟೆ ವರೆಗೆ 2,541 ಪ್ರಕರಣ ಮತ್ತು 30 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 16,522ಕ್ಕೆ ಏರಿಕೆಯಾಗಿದೆ. ಅದರಲ್ಲೂ ದಿಲ್ಲಿಯಲ್ಲಿಯೇ ಹೆಚ್ಚು ಪ್ರಕರಣ ಕಾಣಿಸಿಕೊಳ್ಳುತ್ತಿದ್ದು, ಈಗ ಹೋಮ್‌ ಐಸೋಲೇಶನ್‌ ಆದವರ ಸಂಖ್ಯೆ 2,812ಕ್ಕೆ ಏರಿಕೆಯಾಗಿದೆ. ಎಪ್ರಿಲ್‌ 11ರಂದು ಈ ಪ್ರಕರಣಗಳ ಸಂಖ್ಯೆ ಕೇವಲ 447 ಆಗಿತ್ತು. ಅಲ್ಲದೆ, ಸದ್ಯ ದಿಲ್ಲಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೂ 3,975ಕ್ಕೆ ಏರಿಕೆಯಾಗಿದೆ. ಇದು ಕೂಡ ಎ.11ರಂದು 601 ಮಾತ್ರ ಇತ್ತು.

“ಕಡ್ಡಾಯ’ ತೆಗೆದಿದ್ದ ರಾಜ್ಯಗಳು
ಕೊರೊನಾ ಮೂರನೇ ಅಲೆ ವೇಳೆ ಕಾಣಿಸಿಕೊಂಡಿದ್ದ ಒಮಿಕ್ರಾನ್‌ ಸೋಂಕು, ಜನರಲ್ಲಿ ಅಷ್ಟೇನೂ ಬಾಧಿಸಲಿಲ್ಲ. 2021ರ ಮಧ್ಯಭಾಗದಲ್ಲೇ 3ನೇ ಅಲೆ ಹೆಚ್ಚಾಗಿ ಕಾಣಿಸಿಕೊಳ್ಳಬೇಕಾಗಿತ್ತು. ಅಲ್ಲದೆ, ಇದು ಹರಡುವಿಕೆಯಲ್ಲಿ ಮಾತ್ರ ಶಕ್ತಿ ಹೊಂದಿದೆ, ಜನರ ಆರೋಗ್ಯದ ಮೇಲೆ ಅಷ್ಟೇನೂ ಪರಿಣಾಮ ಬೀರುವುದಿಲ್ಲ ಎಂಬ ತಜ್ಞರ ಮಾತು ಜನರಲ್ಲಿ ಧೈರ್ಯ ಮೂಡಿಸಿತ್ತು. ಆದರೂ, ಈ ತಿಂಗಳ ಆರಂಭದಲ್ಲಿ ದಿಲ್ಲಿ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಲ ಮತ್ತು ಉತ್ತರ ಪ್ರದೇಶ ರಾಜ್ಯಗಳು ಕೊರೊನಾ ಕುರಿತ ಎಲ್ಲ ನಿಬಂಧನೆಗಳನ್ನು ತೆಗೆದು ಹಾಕಿದ್ದವು.

ಈ ರಾಜ್ಯಗಳದ್ದು ಸರಿಯಾದ ನಿರ್ಧಾರವಾಗಿತ್ತೇ?
ಆರೋಗ್ಯ ಇಲಾಖೆ ತಜ್ಞರ ಪ್ರಕಾರ, ಈ ರಾಜ್ಯಗಳ ನಿರ್ಧಾರ ಸರಿಯಾದ ಕ್ರಮವಾಗಿರಲಿಲ್ಲ. ಈ ಬಗ್ಗೆ ಆಗಲೇ ಎಚ್ಚರಿಕೆ ನೀಡಿದ್ದರು. ಇದಕ್ಕೆ ಕಾರಣವೂ ಇದೆ. ಎಪ್ರಿಲ್‌ ಆರಂಭದಲ್ಲಿ ನೆರೆಯ ಚೀನ ಸೇರಿದಂತೆ ವಿವಿಧ ದೇಶಗಳಲ್ಲಿ ಒಮಿಕ್ರಾನ್‌ನ ಹೊಸ ರೂಪಾಂತರಿ ಬಿಎ 2 ಕಾಣಿಸಿಕೊಂಡಿತ್ತು. ಇದು ಭಾರತಕ್ಕೂ ಹರಡುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿತ್ತು. ಆದರೂ, ದೇಶದಲ್ಲಿ ಕೊರೊನಾ ನಿಯಂತ್ರಣ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಕಾರಣದಿಂದ ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಕೊರೊನಾ ಕಠಿನ ನಿಯಮಗಳನ್ನು ತೆಗೆದುಹಾಕಲಾಗಿತ್ತು.

ಮತ್ತೆ ಪ್ರತಿಬಂಧಕ ಕ್ರಮಗಳತ್ತ…
ಕೊರೊನಾ ಕೇಸ್‌ ಜಾಸ್ತಿಯಾದಂತೆ ಮತ್ತೆ ರಾಜ್ಯಗಳು ಕೊರೊನಾ ಪ್ರತಿಬಂಧಕ ಕ್ರಮಗಳನ್ನು ಜಾರಿ ಮಾಡುತ್ತಿವೆ. ಈ ಸಾಲಿಗೆ ಕರ್ನಾಟಕವೂ ಸೇರಿದೆ.

Advertisement

ಸೋಮವಾರವಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೋವಿಡ್‌ ಸಲಹಾ ಸಮಿತಿ ಸಭೆ ನಡೆದಿದ್ದು, ಇದರಲ್ಲಿ ಮಾಸ್ಕ್ ಕಡ್ಡಾಯ ಮತ್ತು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಬಗ್ಗೆ ನಿರ್ಧರಿಸಲಾಗಿದೆ. ಕರ್ನಾಟಕ ಸೇರಿ ಉಳಿದ ರಾಜ್ಯಗಳ ವಿವರ ಇಲ್ಲಿದೆ.

1.ದಿಲ್ಲಿ
ದಿಲ್ಲಿಯಲ್ಲಿ ಕೊರೊನಾ ಕೇಸುಗಳ ಸಂಖ್ಯೆ ಜಾಸ್ತಿಯಾದಂತೆ, ಮೊದಲಿಗೆ ಶಾಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳು ಪರಸ್ಪರ ಊಟ ಹಂಚಿಕೊಳ್ಳುವಂತಿಲ್ಲ ಎಂದೂ ಸೂಚಿಸಲಾಗಿದೆ. ಜತೆಗೆ ಕಳೆದ ಬುಧವಾರದಿಂದಲೇ ಮಾಸ್ಕ್ ಅನ್ನು ಕಡ್ಡಾಯ ಮಾಡಲಾಗಿದೆ. ತಪ್ಪಿದರೆ 500 ರೂ. ದಂಡ ಪಾವತಿ ಮಾಡಬೇಕಾಗುತ್ತದೆ ಎಂದು ಸ್ಥಳೀಯಾಡಳಿತ ಸೂಚನೆ ನೀಡಿದೆ.

2.ಉತ್ತರ ಪ್ರದೇಶ
ಅತ್ತ ದಿಲ್ಲಿಯಲ್ಲಿ ಪ್ರಕರಣ ಹೆಚ್ಚಾದಂತೆ, ನೆರೆಯ ರಾಜ್ಯ ಉತ್ತರ ಪ್ರದೇಶವೂ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ. ಈ ರಾಜ್ಯದ ಎನ್‌ಸಿಆರ್‌(ರಾಜಧಾನಿ ದಿಲ್ಲಿಯ ಹತ್ತಿರದ ಜಿಲ್ಲೆಗಳು) ಪ್ರದೇಶದಲ್ಲಿ ಮಾಸ್ಕ್ ಅನ್ನು ಕಡ್ಡಾಯ ಮಾಡಲಾಗಿದೆ. ಅಂದರೆ, ಇಲ್ಲಿನ ಗೌತಮ ಬುದ್ಧನಗರ, ಗಾಜಿಯಾಬಾದ್‌, ಹಾಪೂರ್‌, ಮೀರತ್‌, ಬುಲಂದ್‌ಶಹರ್‌, ಬಾಗ³ತ್‌ ಮತ್ತು ಲಕ್ನೋದಲ್ಲೂ ಮಾಸ್ಕ್ ಕಡ್ಡಾಯ.

3.ಹರಿಯಾಣ
ಉತ್ತರ ಪ್ರದೇಶದಂತೆ ಹರಿಯಾಣ ರಾಜ್ಯವೂ ದಿಲ್ಲಿ ಬಗ್ಗೆ ಜಾಗ್ರತೆ ವಹಿಸಿದೆ. ಈ ರಾಜ್ಯವೂ ದಿಲ್ಲಿಗೆ ಹೊಂದಿಕೊಂಡಿರುವ ಜಿಲ್ಲೆಗಳಾದ ಗುರುಗ್ರಾಮ, ಫ‌ರೀದಾಬಾದ್‌, ಸೋನಿಪತ್‌ ಮತ್ತು ಝಾಜ್ಜರ್‌ನಲ್ಲಿ ಮಾಸ್ಕ್ ಅನ್ನು ಕಡ್ಡಾಯ ಮಾಡಿದೆ. ಆದರೆ, ದಂಡದ ಬಗ್ಗೆ ಉಲ್ಲೇಖ ಮಾಡಿಲ್ಲ.

4.ಪಂಜಾಬ್‌
ಕೊರೊನಾ ಪ್ರತಿಬಂಧಕ ನಿಯಮಗಳನ್ನು ಸಡಿಲಗೊಳಿಸಿ, ಒಂದು ತಿಂಗಳಾದ ಮೇಲೆ ಮತ್ತೆ ಪಂಜಾಬ್‌ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚಿಸಿದೆ. ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಹಾಕಲೇಬೇಕು ಎಂದಿದೆ.

5.ತೆಲಂಗಾಣ
ಎ.1ರಂದು ಈ ರಾಜ್ಯವೂ ಕೊರೊನಾ ಪ್ರತಿಬಂಧಕ ನಿಯಮಗಳನ್ನು ತೆಗೆದುಹಾಕಿತ್ತು. ಆದರೆ, ದಿನದಿಂದ ದಿನಕ್ಕೆ ಮತ್ತೆ ಕೇಸುಗಳು ಹೆಚ್ಚಾಗತೊಡಗಿದ ಹಿನ್ನೆಲೆಯಲ್ಲಿ ಮಾಸ್ಕ್ ಕಡ್ಡಾಯ ನಿಯಮ ಮರುಜಾರಿಯಾಗಿದೆ. ಅಷ್ಟೇ ಅಲ್ಲ, ಒಂದು ವೇಳೆ ಮಾಸ್ಕ್ ಧರಿಸದಿದ್ದರೆ 1,000 ರೂ. ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.

6.ತಮಿಳುನಾಡು

ಈ ರಾಜ್ಯವೂ ಎಪ್ರಿಲ್‌ ಆರಂಭದಲ್ಲಿ ಎಲ್ಲ ನಿಯಮಗಳನ್ನು ತೆಗೆದಿತ್ತು. ಆದರೆ ಇಲ್ಲೂ ಮಾಸ್ಕ್ ಸೇರಿದಂತೆ ಕೊರೊನಾ ನಿಯಮಗಳು ಕಡ್ಡಾಯವಾಗಿದ್ದು, ಮಾಸ್ಕ್ ಧರಿಸದಿದ್ದರೆ 500 ರೂ. ದಂಡ ವಿಧಿಸಲಾಗುತ್ತದೆ.

7.ಆಂಧ್ರ ಪ್ರದೇಶ

ಆಂಧ್ರ ಪ್ರದೇಶದಲ್ಲೂ ಮಾಸ್ಕ್ ಧರಿಸದಿದ್ದರೆ 100 ರೂ. ದಂಡ ವಿಧಿಸುವುದಾಗಿ ಅಲ್ಲಿನ ರಾಜ್ಯ ಸರಕಾರ ಹೇಳಿದೆ. ಇಲ್ಲಿ ಕೇಸುಗಳ ಸಂಖ್ಯೆ ಹೆಚ್ಚಾಗದಿದ್ದರೂ, ನೆರೆ ಹೊರೆಯ ರಾಜ್ಯಗಳಲ್ಲಿ ಪ್ರಕರಣ ಹೆಚ್ಚುತ್ತಿರುವುದರಿಂದ ಈ ನಿಯಮ ತೆಗೆದುಕೊಂಡಿದೆ.

8.ಕರ್ನಾಟಕ
ಕರ್ನಾಟಕದಲ್ಲಿ ಇದುವರೆಗೆ ಮಾಸ್ಕ್ ನಿಯಮವನ್ನು ವಾಪಸ್‌ ಪಡೆದಿರಲಿಲ್ಲ. ಆದರೂ, ಜನರ ಇಷ್ಟಕ್ಕೇ ಬಿಟ್ಟಿತ್ತು. ಅಂದರೆ, ಮಾಸ್ಕ್ ಹಾಕಬಹುದು ಅಥವಾ ಬಿಡಬಹುದು ಎಂಬ ಭಾವನೆ ಜನರಲ್ಲೂ ಇತ್ತು, ಸರಕಾರದಲ್ಲೂ ಇತ್ತು. ಈಗ ಕೊರೊನಾ ಹೆಚ್ಚಳದಿಂದಾಗಿ ಮತ್ತೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಆದರೆ, ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ನಿರ್ಧಾರ ತೆಗೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ನಿರ್ಧರಿಸುವುದಾಗಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.