Advertisement

ಮಾರ್ಚ್ 22 ರವಿವಾರದಂದು ದೇಶಾದ್ಯಂತ ‘ಜನತಾ ಕರ್ಫ್ಯೂ’; ‘ಸಂಕಲ್ಪ’ ಮತ್ತು ‘ಸಂಯಮ’ ನಮ್ಮದಾಗಲಿ

07:52 PM Mar 21, 2020 | Hari Prasad |

ನವದೆಹಲಿ: ದೇಶಾದ್ಯಂತ ಕೋವಿಡ್ 19 ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾತನಾಡಿದರು.

Advertisement

ಪ್ರಧಾನಿ ಅವರ ಭಾಷಣದ ಮುಖ್ಯಾಂಶಗಳು ಇಲ್ಲಿವೆ.

– ಪ್ರಥಮ ಹಾಗೂ ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲೂ ಸಹ ವಿಶ್ವದ ಎಲ್ಲಾ ರಾಷ್ಟ್ರಗಳೂ ಈ ರೀತಿಯ ಆತಂಕಕ್ಕೆ ಒಳಗಾಗಿರಲಿಲ್ಲ.

– ಕೋವಿಡ್ 19 ಮಹಾಮಾರಿಗೆ ಭಾರತದಲ್ಲಿಯೂ ಕಳವಳ ಹೆಚ್ಚಿದೆ.

– ನಾನು ದೇಶವಾಸಿಗಳಲ್ಲಿ ಏನಾದ್ರೂ ಕೇಳಿದಂತಹ ಸಂದರ್ಭದಲ್ಲಿ ನನಗೆ ನೀವು ಇಲ್ಲವೆಂದು ಹೇಳಿಲ್ಲ. ಇಂದೂ ಸಹ ನಾನು ನನ್ನ ದೇಶವಾಸಿಗಳಲ್ಲಿ ಒಂದನ್ನು ಕೇಳಲು ಬಂದಿದ್ದೇನೆ.

Advertisement

– ನನಗೆ ನಿಮ್ಮ ಸಮಯ ಬೇಕು, ಈ ಮಹಾಮಾರಿಯಿಂದ ಬಚಾವಾಗಲು ವಿಜ್ಞಾನದಲ್ಲಿ ಯಾವುದೇ ಪರಿಹಾರ ಸದ್ಯಕ್ಕೆ ಸಿಕ್ಕಿಲ್ಲ, ಈ ಮಹಾಮಾರಿಗೆ ಇದುವರೆಗೆ ನಿಶ್ಚಿತ ಔಷಧವೂ ಲಭ್ಯವಾಗಿಲ್ಲ.

– ಕೋವಿಡ್ 19 ಬೇರೆ ದೇಶಗಳಲ್ಲಿ ಹಬ್ಬಿರುವ ರೀತಿಯನ್ನು ನಾವು ನೋಡಿದಲ್ಲಿ ಅದು ಇದ್ದಕ್ಕಿದ್ದಂತೆ ಸಾಂಕ್ರಾಮಿಕವಾಗಿ ಹಬ್ಬಿದೆ.

– ತನ್ನ ನಾಗರಿಕರನ್ನು ಹೆಚ್ಚು ಪ್ರತ್ಯೇಕವಾಗಿರಿಸಿದ ರಾಷ್ಟ್ರಗಳು ಈ ಮಹಾಮಾರಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆದರೆ ಇದಕ್ಕೆ ಭಾರತದಲ್ಲಿ ನಿಮ್ಮೆಲ್ಲರ ಭಾಗೀದಾರಿಕೆ ಅತ್ಯಗತ್ಯವಾಗಿದೆ.

– ನಮ್ಮಲ್ಲಿ ಈ ಮಹಾಮಾರಿಯನ್ನು ಎದುರಿಸುವಲ್ಲಿ ಎರಡು ವಿಷಯಗಳು ಪ್ರಮುಖವಾಗಿರುತ್ತದೆ ಒಂದು ‘ಸಂಕಲ್ಪ’ ಮತ್ತು ಇನ್ನೊಂದು ‘ಸಂಯಮ’. ‘ನಾವು ಸ್ವಾಸ್ಥ್ಯವಾಗಿದ್ದರೆ ಜಗತ್ತು ಸ್ವಾಸ್ಥ್ಯವಾಗಿರುತ್ತದೆ’ ಎಂಬುದು ನಮ್ಮ ಮೂಲಮಂತ್ರವಾಗಲಿ.

– ಈ ಕಠಿಣ ಸಂದರ್ಭದಲ್ಲಿ ನಾವು ಈ ಮಹಾಮಾರಿಯ ಸಂಪರ್ಕಕ್ಕೆ ಬರುವುದಿಲ್ಲ ಹಾಗೂ ಇನ್ನೊಬ್ಬರ ಸಂಪರ್ಕಕ್ಕೂ ನಾವು ಬರಗೊಡುವುದಿಲ್ಲ ಎಂಬ ಸಂಕಲ್ಪವನ್ನು ನಾವೆಲ್ಲರೂ ಕೈಗೊಳ್ಳಬೇಕಾಗಿದೆ.

– ಮುಂದಿನ ಕೆಲವು ದಿನಗಳವರೆಗೆ ನಾವು ನಮ್ಮನ್ನು ಪ್ರತ್ಯೇಕವಾಗಿರಿಸಿಕೊಳ್ಳೋಣ. ಮತ್ತು ನಮ್ಮ ಕೆಲಸಗಳನ್ನು ಮನೆಯಿಂದಲೇ ಮಾಡಿಕೊಳ್ಳಲು ಪ್ರಯತ್ನಿಸೋಣ.

– ‘ಜನತಾ ಕರ್ಫ್ಯೂ’ ಹಾಕಿಕೊಳ್ಳಬೇಕಾದ ಅಗತ್ಯವಿದೆ. ಇದೇ ರವಿವಾರ ಮಾರ್ಚ್ 22ರಂದು ದೇಶಾದ್ಯಂತ ‘ಜನತಾ ಕರ್ಫ್ಯೂ’ ಜಾರಿಯಲ್ಲಿರುತ್ತದೆ. ಇದು ಜನರೇ ಜನರಿಗೋಸ್ಕರ ಹಾಕಿಕೊಳ್ಳುವ ಸ್ವಯಂ ನಿರ್ಬಂಧ. ಈ ಜನತಾ ಕರ್ಫ್ಯೂ ಮಾರ್ಚ್ 22ರ ರವಿವಾರದಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 9 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.

– ಇದು ನಮ್ಮ ಸ್ವಯಂ ನಿರ್ಬಂಧದ ಪ್ರತೀಕವಾಗಲಿ. ಇದು ಈ ಮಾರಕ ವೈರಸ್ ವಿರುದ್ಧ ಮುಂಬರುವ ದಿನಗಳಲ್ಲಿ ನಮ್ಮ ಹೋರಾಟಕ್ಕೆ ಮುನ್ನುಡಿಯಾಗಲಿ.

– ಈ ವಿಚಾರದಲ್ಲಿ ದೇಶವಾಸಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯಸರಕಾರಗಳು, ಸಾಮಾಜಿಕ ಸಂಘಟನೆಗಳು, ಸ್ಕೌಟ್ ಮತ್ತು ಗೈಡ್ ಸಂಘಟನೆಗಳು ಮುಂದಿನ ಎರಡು ದಿನಗಳಲ್ಲಿ ಕಾರ್ಯ ತತ್ಪರವಾಗಬೇಕು.

– ಜನತಾ ಕರ್ಫ್ಯೂ ದಿನವಾದ ರವಿವಾರ ಸಾಯಂಕಾಲ 5 ಗಂಟೆಗೆ ನಾವೆಲ್ಲರೂ ನಮ್ಮ ನಮ್ಮ ಮನೆಯ ಬಾಗಿಲ ಮುಂದೆ ನಿಂತು ಅಥವಾ ಬಾಲ್ಕನಿಯಲ್ಲಿ ನಿಂತು ಈ ಕೋವಿಡ್ 19 ವಿರುದ್ಧ ಹೋರಾಡುವಲ್ಲಿ ತಮ್ಮ ಜೀವವನ್ನೇ ಮುಡಿಪಾಗಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ಆರೋಗ್ಯ ಪಾಲನಾ ಕಾರ್ಯಕರ್ತರು, ಪತ್ರಕರ್ತರು ಹಾಗೂ ಸಮಾಜದ ಇತರೇ ಸೇವಾವರ್ಗದ ವ್ಯಕ್ತಿಗಳಿಗೆ ಕೃತಜ್ಞತೆ ಸಲ್ಲಿಸಬೇಕೆಂದು ಪ್ರಧಾನಿ ಮೋದಿ ದೇಶದ ಜನರಲ್ಲಿ ವಿನಂತಿಸಿಕೊಂಡಿದ್ದಾರೆ.

– ಈ ಸಂದರ್ಭದಲ್ಲಿ ದೇಶದಲ್ಲಿರುವ ಆಸ್ಪತ್ರೆಗಳಲ್ಲಿ ಯಾವುದೇ ಒತ್ತಡ ಉಂಟಾಗದಂತೆ ನೋಡಿಕೊಳ್ಳಬೇಕು. ವೈದ್ಯಕೀಯ ನೆರವು ಅಗತ್ಯವಿರುವವರು ತಮ್ಮ ಕುಟುಂಬ ವೈದ್ಯರಲ್ಲಿ ದೂರವಾಣಿ ಮೂಲಕವೇ ಆರೋಗ್ಯ ಸಲಹೆಯನ್ನು ಪಡೆದುಕೊಳ್ಳಿ.

– ಕೇಂದ್ರ ಹಣಕಾಸು ಮಂತ್ರಿಗಳ ಮುಂದಾಳತ್ವದಲ್ಲಿ ‘ವಿಶೇಷ ಕಾರ್ಯಪಡೆ’ಯನ್ನು ರಚಿಸಲಾಗಿದ್ದು. ಈ ಕಾರ್ಯಪಡೆ ದೇಶದ ಆರ್ಥಿಕ ಸ್ಥಿತಿಯ ಅವಲೋಕನವನ್ನು ಕ್ಷಣ ಕ್ಷಣಕ್ಕೂ ಮಾಡುತ್ತಿರುತ್ತದೆ.

– ಈ ಸಂದರ್ಭದಲ್ಲಿ ವ್ಯಾಪಾರಿ ವರ್ಗ ಮತ್ತು ಕಾರ್ಮಿಕ ವರ್ಗದವರ ಜೊತೆಯಲ್ಲಿ ಮಾನವೀಯ ರೀತಿಯಲ್ಲಿ ವ್ಯವಹರಿಸುವುದು ಅಗತ್ಯವಿರುತ್ತದೆ.

– ದೇಶದಲ್ಲಿ ಅಗತ್ಯ ವಸ್ತುಗಳ ಪೂರೈಕೆಯನ್ನು ಯಾವುದೇ ರೀತಿಯಲ್ಲಿ ಕಡಿಮೆಗೊಳಿಸುವುದಿಲ್ಲ. ಈ ವಿಚಾರದಲ್ಲಿ ಜನರು ಗಾಬರಿಗೊಳ್ಳುವ ಅಗತ್ಯವಿಲ್ಲ.

– ದೇಶ ದೇಶಗಳು ಪರಸ್ಪರ ಸಹಾಯ ಮಾಡಿಕೊಳ್ಳಲಾಗದ ಸ್ಥಿತಿ ಉಂಟಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ನಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ನಿಭಾಯಿಸಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ.

– ಈ ಮಹಾಮಾರಿಯ ವಿರುದ್ಧ ಮಾನವ ಜಾತಿ ವಿಜಯವಾಗಲಿ ; ಭಾರತ ವಿಜಯಿಯಾಗಲಿ – ಧನ್ಯವಾದಗಳು.

Advertisement

Udayavani is now on Telegram. Click here to join our channel and stay updated with the latest news.

Next