Advertisement

ಕೊರೊನಾ ಹಾವಳಿ; ಸ್ವಚ್ಛವಾಯ್ತು ಗಾಳಿ!

12:56 AM Mar 17, 2020 | Lakshmi GovindaRaj |

ಬೆಂಗಳೂರು: ನಗರದ ವಾಯುಗುಣಮಟ್ಟದ ಸೂಚ್ಯಂಕ ಈಗ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕದಂತೆ ಸರ್ರನೇ ಕುಸಿಯುತ್ತಿದೆ. ಯಾವಾಗಲೂ ವಾಹನಗಳ ಹೊಗೆಯಿಂದ ತುಂಬಿರುತ್ತಿದ್ದ ಪ್ರದೇಶಗಳಲ್ಲಿ “ಪೀಕ್‌ ಅವರ್‌’ನಲ್ಲಿ ಕೂಡ ಕಳೆದ ಒಂದು ವಾರದಿಂದ ಉಸಿರಾಡಲು ತೃಪ್ತಿಕರ ಗಾಳಿ ಬೀಸುತ್ತಿದೆ. ಆದರೆ, ಅದನ್ನು ಸೇವಿಸಲು ಜನ ಇಲ್ಲ!

Advertisement

ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಕರ್ನಾಟಕ ಬಹುತೇಕ ಬಂದ್‌ ಆಗಿದೆ. ಅದರಲ್ಲೂ ಪ್ರಕರಣಗಳು ಹೆಚ್ಚಾಗಿ ವರದಿಯಾದ ಬೆಂಗಳೂರಿನಲ್ಲಿ ಈ “ಘೋಷಿತ ಬಂದ್‌’ ತುಸು ಪರಿಣಾಮಕಾರಿಯಾಗಿಯೇ ಇದೆ. ಐಟಿ-ಬಿಟಿ ಕಂಪೆನಿಗಳ ಉದ್ಯೋಗಿಗಳು ಮನೆಗಳಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಮನರಂಜನೆ ತಾಣಗಳಿಗೆ ಬೀಗ ಹಾಕಲಾಗಿದೆ. ಕೆಲ ಭಾಗಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಸಾರಿಗೆಗಳು ರಸ್ತೆಗಿಳಿಯುತ್ತಿಲ್ಲ. ಇದೆಲ್ಲದರಿಂದಾಗಿ ನಗರದ ವಾತಾವರಣದ ಮೇಲಿನ ಹೊರೆ ತಗ್ಗಿದ್ದು, ಒಂದು ವಾರದಿಂದ ತೃಪ್ತಿಕರ ಗಾಳಿ ಬೀಸುತ್ತಿದೆ.

ಐಟಿ ಹಬ್‌ ಮಾರ್ಗ; ಗಣನೀಯ ಇಳಿಕೆ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ಮಾಹಿತಿ ಪ್ರಕಾರ ನಗರದ ಪ್ರಮುಖ ಏಳು ಪ್ರದೇಶಗಳಲ್ಲಿ ವಾಯುಮಾಪನ ಮಾಡಲಾಗಿದ್ದು, ವಾಯುಗುಣಮಟ್ಟ ಸೂಚ್ಯಂಕವು ಸಿಟಿ ರೈಲು ನಿಲ್ದಾಣ ಹೊರತುಪಡಿಸಿದರೆ, ಉಳಿದ ಆರು ಕಡೆಗಳಲ್ಲಿ ನೂರರ ಗಡಿಯೂ ದಾಟಿಲ್ಲ. ವಿಚಿತ್ರವೆಂದರೆ ಸದಾ ಗಿಜಗುಡುವ ಸೆಂಟ್ರಲ್‌ ಸಿಲ್ಕ್ ಬೋರ್ಡ್‌ ಸುತ್ತ ಇದರ ಪ್ರಮಾಣ ಗರಿಷ್ಠ 98ರಿಂದ ಕನಿಷ್ಠ 70ರಷ್ಟಿದೆ. ಸಾಮಾನ್ಯ ದಿನಗಳಲ್ಲಿ ಈ ಭಾಗದಲ್ಲಿ 110ರಷ್ಟು ದಾಖಲಾಗುತ್ತದೆ. ಬೆಳಿಗ್ಗೆ ಮತ್ತು ಸಂಜೆ ವೇಳೆ ಈ ಸೂಚ್ಯಂಕ ಇನ್ನೂ ಅಧಿಕವಾಗಿರುತ್ತಿತ್ತು ಎಂದು ಮಂಡಳಿ ಅಧಿಕಾರಿಗಳು ತಿಳಿಸುತ್ತಾರೆ.

ಸಿಟಿ ರೈಲ್ವೆ ನಿಲ್ದಾಣ, ಬಸವೇಶ್ವರನಗರದ ಸಾಣೆಗೊರವನಹಳ್ಳಿ, ಹೆಬ್ಬಾಳದ ಪಶುವೈದ್ಯಕೀಯ ಕಾಲೇಜು, ಜಯನಗರದ ಶಾಲಿನಿ ಮೈದಾನ, ಮೈಸೂರು ರಸ್ತೆಯ ಕವಿಕ, ನಿಮ್ಹಾನ್ಸ್‌ ಬಳಿಯ ರಾಜೀವ್‌ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ, ಸೆಂಟ್ರಲ್‌ ಸಿಲ್ಕ್ ಬೋರ್ಡ್‌ ಬಳಿಯ ಎಚ್‌ಎಸ್‌ಆರ್‌ ಲೇಔಟ್‌ ಸುತ್ತ ವಾಯುಗುಣಮಟ್ಟ ಮಾಪನ ಅಳವಡಿಸಲಾಗಿತ್ತು, ಕೊರೊನಾ ವೈರಸ್‌ ವ್ಯಾಪಕತೆ ತೀವ್ರಗೊಂಡ ನಂತರದಿಂದ ಅಂದರೆ ಮಾರ್ಚ್‌ 9ರಿಂದ 15ರವರೆಗೆ ದಾಖಲಾದ ಅಂಕಿ-ಅಂಶಗಳಲ್ಲಿ ವಾಯುಮಾಲಿನ್ಯ ಪ್ರಮಾಣ ಇಳಿಮುಖವಾಗಿರುವುದು ಕಂಡುಬಂದಿದೆ.

ಈ ಸೂಚ್ಯಂಕವು ಇಂಗಾಲ, ಉಸಿರಾಡುವಾಗ ದೇಹವನ್ನು ಸೇರಲ್ಪಡುವ ದೂಳಿನ ಕಣಗಳು (ಪಿಎಂ 2.5 ಮತ್ತು 10), ಸಾರಜನಕ ಆಕ್ಸೆ„ಡ್‌ ಸೇರಿದೆ. ಸಿಟಿ ರೈಲು ನಿಲ್ದಾಣದಲ್ಲಿ ಮಾತ್ರ ಸಾಧಾರಣ (ಸೂಚ್ಯಂಕ 101-200 ಒಳಗಿನ)ವಾಗಿದೆ. ಉಳಿದೆಡೆ ತೃಪ್ತಿಕರ (51-100) ಆಗಿದೆ ಎಂದು ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದರು. “ಸಾಮಾನ್ಯ ದಿನಗಳಲ್ಲಿ ಜನ ಕೆಲಸಕ್ಕಾಗಿ ರಸ್ತೆಗಿಳಿಯುತ್ತಿದ್ದರು.

Advertisement

ವಾರಾಂತ್ಯದಲ್ಲಿ ಮಾಲ್‌ಗ‌ಳು, ಚಿತ್ರಮಂದಿರಗಳು, ಸೂಪರ್‌ ಮಾರುಕಟ್ಟೆಗಳು ಮತ್ತಿತರ ತಾಣಗಳ ಕಡೆಗೆ ಮುಖಮಾ ಡುತ್ತಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಇವೆರಡಕ್ಕೂ ಕೆಲ ದಿನಗಳಿಂದ ಬ್ರೇಕ್‌ ಬಿದ್ದಿದೆ. ಸಾರ್ವಜನಿಕ ಸಾರಿಗೆಗಳ ಕಾರ್ಯಾಚರಣೆಯೂ ಅಷ್ಟಕ್ಕಷ್ಟೇ ಇದೆ. ಪರಿಣಾಮ ಇಳಿಮುಖವಾಗಿದೆ. ಕೆಲವೆಡೆ ಜನ ಅಗತ್ಯ ಕೆಲಸಗಳಿಗಾಗಿ ಖಾಸಗಿ ವಾಹನಗಳ ಮೊರೆಹೋಗಿರುವುದೂ ಇದೆ’ ಎಂದೂ ಅಧಿಕಾರಿಗಳು ತಿಳಿಸುತ್ತಾರೆ.

ಕೊರೊನಾಗೇ ಸೀಮಿತವಾಗದಿರಲಿ ಜಾಗೃತಿ: “ಜಾಗತಿಕ ಮಟ್ಟದಲ್ಲಿ ಕೊರೊನಾ ಸೃಷ್ಟಿಸಿರುವ ಆತಂಕದಿಂದ ಸಹಜವಾಗಿ ಜನ ರಸ್ತೆಗಿಳಿಯುತ್ತಿಲ್ಲ. ಅದು ವಾಯು ಮತ್ತು ಶಬ್ದಮಾಲಿನ್ಯ ಎರಡರ ಪ್ರಮಾಣವೂ ಕಡಿಮೆ ಆಗಿರುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಈ ಜಾಗೃತಿ ಕೇವಲ ಒಂದೆರಡು ವಾರಗಳಮಟ್ಟಿಗೆ ಸೀಮಿತವಾಗದೆ, ನಗರದ ಭವಿಷ್ಯದ ಹಿತದೃಷ್ಟಿಯಿಂದ ನಂತರದಲ್ಲೂ ಮುಂದುವ ರಿಯಬೇಕು. ಇದರರ್ಥ ಜನ ರಸ್ತೆಗಿಳಿಯಬಾರದು ಎಂದಲ್ಲ; ಸಾಧ್ಯವಾದಷ್ಟು ಸಮೂಹ ಸಾರಿಗೆ ಶಿಫ್ಟ್ ಆಗಲಿ’ ಎಂದು ಕ್ಲೀನ್‌ ಏರ್‌ ಪ್ಲಾಟ್‌ಫಾರಂ ಮುಖ್ಯಸ್ಥ ಯೋಗೇಶ್‌ ರಂಗನಾಥ್‌ ಮನವಿ ಮಾಡುತ್ತಾರೆ.

ಕೊರೊನಾ ವೈರಸ್‌ ತಕ್ಷಣಕ್ಕೆ ಆರೋಗ್ಯಕ್ಕೆ ಅಪಾಯಕಾರಿ ಆಗಿರಬಹುದು. ಆದರೆ, ವಾಯುಮಾಲಿನ್ಯವು ದೀರ್ಘ‌ಕಾಲದ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, ಮನುಷ್ಯನಲ್ಲಿಯ ರೋಗನಿರೋಧಕ ಶಕ್ತಿಯನ್ನೂ ಕಡಿಮೆ ಮಾಡಿ, ಹೃದಯ ಸಂಬಂಧಿ ಕಾಯಿಲೆಗೆ ಕಾರಣವಾಗುತ್ತದೆ. ಇದಕ್ಕೆ ಉದಾಹರಣೆ ಪ್ರಸ್ತುತ ಕೊರೊನಾ ವೈರಸ್‌ಗೆ ತುತ್ತಾದವರಲ್ಲಿ ಬಹುತೇಕರು ಇದೇ ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹದಿಂದ ಬಳಲುತ್ತಿದ್ದವರು ಎಂದೂ ಅವರು ಎಚ್ಚರಿಸಿದರು.

ಪಾಲಿಕೆ ಮಾರ್ಗಸೂಚಿ
ಬೆಂಗಳೂರು: ನಗರದಲ್ಲಿ ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮ ವಹಿಸುವ ಉದ್ದೇಶದಿಂದ ಪಾಲಿಕೆ ಮತ್ತಷ್ಟು ಮುಂಜಾಗ್ರತಾ ಮಾರ್ಗಸೂಚಿ ನೀಡಿದೆ. ಈ ನಿಟ್ಟಿನಲ್ಲಿ ನಗರದ ಪಿಜಿ ಮತ್ತು ಹಾಸ್ಟೆಲ್‌ಗ‌ಳಲ್ಲಿರುವ ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ರಜೆ ನೀಡಿದ್ದರೆ, ಮನೆಗಳಿಗೆ ಕಳುಹಿಸುವಂತೆಯೂ ನಿರ್ದೇಶನ ನೀಡಲಾಗಿದೆ.

ಪಾರ್ಕ್‌ಗಳಿಗೆ ತೆರಳುವವರಿಗೆ: ಪಾರ್ಕ್‌ಗಳಲ್ಲಿನ ಜಿಮ್‌ ಸಾಧನ ಬಳಸದಂತೆ ಸಲಹೆ. ಹೆಚ್ಚು ಜನ ಗುಂಪು ಸೇರುವುದನ್ನು ಸಾಧ್ಯವಾದಷ್ಟು ತಡೆಯುವುದು. ಗುಂಪಿನಿಂದ ಅಂತರ ಕಾಯ್ದುಕೊಳ್ಳುವುದು. – ಯೋಗಾ, ಜಿಮ್‌ ಬಳಸುವುದಕ್ಕೆ ಮೊಬೈಲ್‌ ಮತ್ತು ಆನ್‌ಲೈನ್‌ ಸೇವೆ ಬಳಸಿಕೊಳ್ಳುವಂತೆ ಮನವಿ ಮಾಡಲಾಗಿದೆ.

ನಗರದ ಕ್ಷೇಮಾಭಿವೃದ್ಧಿ ಸಂಘ ಮತ್ತು ವಸತಿ ಸಮುಚ್ಛಯ: ಯಾವುದೇ ಕಾರಣಕ್ಕೂ ಹೆಚ್ಚು ಜನ ಸೇರಬಾರದು. ನೆಲ, ಗೋಡೆ, ಕುರ್ಚಿ ಸೇರಿದಂತೆ ಹೆಚ್ಚು ಜನ ಸೇರುವ ಜಾಗಗಳಲ್ಲಿ ಬ್ಲೀಚಿಂಗ್‌ ಪೌಡರ್‌, ಸೋಡಿಯಂ ಸೇರಿದಂತೆ ಲಿಕ್ವಿಡ್‌ ಸಾಧನಗಳಿಂದ ಶುಚಿಗೊಳಿಸುವುದು. ಕಾರ್ಮಿಕರಿಗೆ ಅಗತ್ಯ ಸಾಧನ ನೀಡಬೇಕು. ನಡೆದಾಡುವ ಪ್ರದೇಶ, ಪಾರ್ಕ್‌, ಜಾಗಿಂಗ್‌ ಮಾಡುವ ಜಾಗಗಳಲ್ಲಿ ಕಡ್ಡಾಯವಾಗಿ ಶುಚಿತ್ವ ಕಾಪಾಡಿಕೊಳ್ಳಬೇಕು. ಒಂದು ಮೀ. ಅಂತರ ಕಾಯ್ದುಕೊಳ್ಳಬೇಕು. ಕ್ರೀಡಾ ಸಭಾಂಗಣ, ಜಿಮ್‌, ಈಜುಕೊಳ ಬಳಸುವುದಕ್ಕೆ ನಿಷೇಧ. ಬೇಸಿಗೆ ಶಿಬಿರಕ್ಕೆ ಅವಕಾಶವಿಲ್ಲ. ಲಿಫ್ಟ್ ಭಾಗ ಮತ್ತು ಬಟನ್‌ ಸ್ವಚ್ಛಗೊಳಿಸಬೇಕು. – ಲಿಫ್ಟ್ನ ಬಟನ್‌ ಬಳಸುವವರು ಕಡ್ಡಾಯವಾಗಿ ಸಾಬೂನಿನಿಂದ ಅಥವಾ ಲಿಕ್ವಿಡ್‌ನಿಂದ ಕೈತೊಳೆದುಕೊಳ್ಳಬೇಕು.

ಹಾಸ್ಟೆಲ್‌ ಮತ್ತು ಪೇಯಿಂಗ್‌ ಗೆಸ್ಟ್‌ (ಪಿಜಿ): ಪಿಜಿ, ಹಾಸ್ಟೆಲ್‌ಗ‌ಳಲ್ಲಿ ನಿಯಮಿತವಾಗಿ ತ್ಯಾಜ್ಯ ಹಾಗೂ ಸ್ವಚ್ಛತೆ ನಿರ್ವಹಿಸಬೇಕು. ಈ ಸcಚ್ಛತೆ ಕಾಪಾಡುವುದು ಮಾಲೀಕರ ಜವಾಬ್ದಾರಿ. ಕೋಠಡಿಗಳಲ್ಲಿ ಹೆಚ್ಚು ಮಂದಿ ಇರುವುದು ನಿಷೇಧ. ಪಿಜಿ-ಹಾಸ್ಟೆಲ್‌ ಮಾಲೀಕರು ಅಥವಾ ವ್ಯವಸ್ಥಾಪಕರು ನಿವಾಸಿಗಳನ್ನು ಬಲವಂತಾಗಿ ಹೊರಹಾಕುವಂತಿಲ್ಲ. ಅವರು ಪಯಾರ್ಯ ವ್ಯವಸ್ಥೆ ಮಾಡಿಕೊಳ್ಳಲು ಸಮಯ ನೀಡಬೇಕು.

ವ್ಯಾಪಾರ ಮಳಿಗೆ: ಮಾಲ್‌ಗ‌ಳಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿ ವರ್ಗಕ್ಕೆ ಸ್ಯಾನಿಟೈಜರ್‌ ಬಳಕೆ ಮತ್ತು ಕೈಗಳ ಶುದ್ಧೀಕರಣ ತರಬೇತಿ ನೀಡಬೇಕು. ಸಿಬ್ಬಂದಿಗೆ ಶೀತ, ಜ್ವರ ಕಾಯಿಲೆ ಕಂಡು ಬಂದಲ್ಲಿ ತಕ್ಷಣದಿಂದ ರಜೆ ನೀಡಬೇಕು. – ಗ್ರಾಹಕರು ಮಳಿಗೆಯಲ್ಲಿನ ಎಲ್ಲ ಪದಾರ್ಥಗಳನ್ನು ಸ್ಪರ್ಶ ಮಾಡುವುದನ್ನು ನಿಯಂತ್ರಿಸಬೇಕು.

– ಬಿಲ್ಲಿಂಗ್‌ ಕೌಂಟರ್‌ಗಳಲ್ಲಿ ಏಕ ಕಾಲಕ್ಕೆ ಹೆಚ್ಚು ಸಂಖ್ಯೆಯ ಗ್ರಾಹಕರಿಗೆ ಸಾಲುಗಟ್ಟಿ ನಿಲ್ಲದಂತೆ ನೋಡಿಕೊಳ್ಳಬೇಕು. ಹೆಚ್ಚು ಸಂಖ್ಯೆಯ ಸಿಬ್ಬಂದಿ ನಿಯೋಜಿಸಿಕೊಳ್ಳಬೇಕು. ಆಕರ್ಷಕ ಕೊಡುಗೆ ಘೋಷಣೆ ಮಾಡಿ ಸೀಮಿತ ಅವಧಿಯಲ್ಲಿ ಹೆಚ್ಚು ಗ್ರಾಹಕರನ್ನು ಆಕರ್ಷಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.

– ಶಾಪಿಂಗ್‌ ಮಾಲ್‌ಗ‌ಳಲ್ಲಿ ಆಲ್ಕೋಹಾಲ್‌ ಆಧಾರಿತ ಕೈಯನ್ನು ಶುದ್ಧೀಕರಿಸುವ (ಸ್ಯಾನಿಟೈಜರ್‌) ದ್ರಾವಣದ ವ್ಯವಸ್ಥೆ ಮಾಡಬೇಕು. ಶಾಪಿಂಗ್‌ ಮಾಲ್‌ಗ‌ಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಬಳಕೆ ಮಾಡುವ ಮೆಟಲ್‌ ಉಪಕರಣಗಳು, ಕೈ ಹಿಡಿಕೆ(ಹ್ಯಾಂಡಲ್‌), ಮೆಟಲ್‌ ಡಿಟೆಕ್ಟರ್‌, ಎಕ್ಸೆಲೆಟರ್‌ ಸೇರಿದಂತೆ ವಿವಿಧ ಉಪಕರಣಗಳನ್ನು ಕಾಲ ಕಾಲಕ್ಕೆ ಬ್ಲೀಚಿಂಗ್‌ ಪೌಡರ್‌ಗಳಿಂದ ಶುಚಿಗೊಳಿಸಬೇಕು.

ಕೊರೊನಾಗೆ ಲಸಿಕೆ ಇರುವುದಿಲ್ಲ. ನಕಲಿ ವೈದ್ಯರಿಂದ ದೂರವಿರಿ: ವಯೋವೃದ್ಧರು, ಹಸುಗೂಸುಗಳು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು, ತೀವ್ರ ಮಧುಮೇಹ ರೋಗದಿಂದ ಬಳಲುತ್ತಿರುವವರು, ಕ್ಯಾನ್ಸರ್‌ ಪೀಡಿತರು ಕೊರೊನಾ ಸೋಂಕಿನಿಂದ ಗುಣಮುಖರಾಗುವುದು ವಿಳಂಬವಾಗಲಿದೆ. ಆದರೆ, ಸಾಮಾನ್ಯರು ಬೇಗ ಗುಣಮುಖರಾಗುವ ಸಾಧ್ಯತೆ ಇದೆ. – ಅಂಗನವಾಡಿ ಮಕ್ಕಳಿಗೆ ಮಧ್ಯಾಹ್ನದ ಪೌಷ್ಟಿಕ ಆಹಾರವನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿಕೊಂಡಿದೆ. ಸಾರ್ವಜನಿಕ ಸ್ಥಳದಲ್ಲಿ ಉಗುಳುವುದರಿಂದ ಸೋಂಕು ಹರಡುವ ಸಾಧ್ಯತೆ ಇರಲಿದೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next