Advertisement

ಉಗ್ರ ಸಂಘಟನೆಗಳಿಗೆ ಕುಣಿಕೆ: ಮುಂದುವರಿಯಲಿ ಹೋರಾಟ

06:00 AM Jul 24, 2018 | |

ಕಾಶ್ಮೀರಿ ಯುವಕರು ಪೊಲೀಸ್‌ ಇಲಾಖೆಯಲ್ಲಿ ಅಥವಾ ಸೇನೆಯಲ್ಲಿ ಭರ್ತಿಯಾಗಬಾರದು ಎನ್ನುವ ಉದ್ದೇಶ ಉಗ್ರರಿಗಿದೆ. 2 ವಾರಗಳ ಹಿಂದೆ ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆ “ಪೊಲೀಸ್‌ ಇಲಾಖೆಯಲ್ಲಿ(ಸರ್ಕಾರಿ ಕೆಲಸಕ್ಕೆ) ಭರ್ತಿಯಾದ ಯುವಕರು ಕೂಡಲೇ ಕೆಲಸ ಬಿಡಬೇಕು’ ಎಂದು ಪೋಸ್ಟರ್‌ಗಳನ್ನು ಅಂಟಿಸಿತ್ತು. ಅಲ್ಲಿನ ಯುವಕರು ಉಗ್ರ ಸಂಘಟನೆಗಳಿಂದ‌ ರೋಸಿಹೋಗಿದ್ದಾರೆ. 

Advertisement

ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಭಯೋತ್ಪಾದನಾ ಸಂಘಟನೆಗಳ ಸುತ್ತ ಕುಣಿಕೆ ಗಟ್ಟಿಗೊಳಿಸುತ್ತಾ ಸಾಗಿವೆ ಎನ್ನುವುದನ್ನು ಇತ್ತೀಚಿನ ಕೆಲವು ಘಟನೆಗಳು ಸ್ಪಷ್ಟವಾಗಿ ಸಾರುತ್ತಿವೆ. ಅದರಲ್ಲೂ ಆ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಅಸ್ತಿತ್ವಕ್ಕೆ ಬಂದ ನಂತರವಂತೂ ಉಗ್ರ ಸಂಘಟನೆಗಳ ವಿರುದ್ಧ ಪ್ರಬಲ ರಣನೀತಿ ರೂಪುಗೊಂಡಿದೆ. ಈ ರಣತಂತ್ರಗಳು ಇದೇ ವೇಗದ ಲ್ಲಿಯೇ ಅನುಷ್ಠಾನಗೊಳ್ಳುತ್ತಾ ಸಾಗಿದರೆ ಜೋರಾಗಿಯೇ ಉಗ್ರ ಸಂಘಟನೆ ಗಳ ಬೆನ್ನೆಲುಬು ಮುರಿಯಲಿದೆ ಎನ್ನಲಾಗುತ್ತಿದೆ. ಈಗಾಗಲೇ ಕಲ್ಲು ತೂರಾಟದ ಘಟನೆಗಳು ಕಡಿಮೆಯಾಗಿರುವುದು ಈ ಸಕಾರಾತ್ಮಕ ಫ‌ಲಿತಾಂಶಕ್ಕೊಂದು ಉದಾಹರಣೆ. ಇದರ ಪರಿಣಾಮವಾಗಿ ಭಯೋ ತ್ಪಾದನಾ ಸಂಘಟನೆಗಳಲ್ಲಿ ಹತಾಶೆ ಮತ್ತು ಭಯ ಹೆಚ್ಚಾಗಿರುವುದು ಗೋಚರಿಸುತ್ತಿದೆ. ಉಗ್ರರು ದಕ್ಷಿಣ ಕಾಶ್ಮೀರದಲ್ಲಿ  ಒಬ್ಬ ಯುವ ಪೊಲೀಸ ನನ್ನು ಅಪಹರಿಸಿ ಹತ್ಯೆಗೈದಿರುವುದು ಈ ಹತಾಶೆಯ ಪ್ರತಿಬಿಂಬವಷ್ಟೆ.  ಕಳೆದ ಇಪ್ಪತ್ತು ದಿನಗಳಲ್ಲಿ ಇದು ಈ ರೀತಿಯ ಎರಡನೆಯ ಘಟನೆ. 

ರಮ್ಜಾನ್‌ ಸಮಯದಲ್ಲಿ ಉಗ್ರರು ಒಬ್ಬ ಸೈನಿಕನನ್ನೂ ಇದೇ ರೀತಿಯಲ್ಲಿ ಅಪಹರಿಸಿ ಕೊಲೆಗೈಯ್ದಿದ್ದರು. ಆ ಸೈನಿಕನ ಕೊನೆಯ ಕ್ಷಣಗಳನ್ನು ವಿಡಿಯೋದಲ್ಲಿ ಸೆರೆಹಿಡಿದು ಎಚ್ಚರಿಕೆ ರವಾನಿಸಿದ್ದರು. ಆಗಲೇ ಉಗ್ರರ ರಣತಂತ್ರ ಬದಲಾಗಿದೆ ಎನ್ನು ವುದು ಗೋಚರಿಸಿತ್ತು. ಇಲ್ಲಿಯ ವರೆಗೂ ಸೈನಿಕರ ಮೇಲೆ ಬಚ್ಚಿಟ್ಟುಕೊಂಡು ಹಲ್ಲೆ ನಡೆಸು ತ್ತಿದ್ದ ಉಗ್ರರು ಈಗ ಅಪಹರಣ ಮಾಡಲಾರಂಭಿಸಿದ್ದಾರೆ. ಇತ್ತೀ ಚಿನ ಘಟನೆಯಲ್ಲಿ ರಜೆಯ ಮೇಲೆ ಮನೆಗೆ ಬಂದಿದ್ದ ಪೊಲೀಸ್‌ನನ್ನು ಉಗ್ರರು ಅವರ ಪರಿವಾರದವರೆದುರೇ ಅಪಹರಿ ಸಿ ದ್ದಾರೆ, ಮರುದಿನವೇ ಆ ವ್ಯಕ್ತಿಯ ಶವ ದೊರೆತಿದೆ. ಆದಾಗ್ಯೂ ಈ ಘಟನೆ ಬೆಳಕಿಗೆ ಬಂದ ಕೆಲವೇ ತಾಸುಗಳಲ್ಲಿ ಪೊಲೀಸರು ಮತ್ತು ಸೇನೆ ತ್ವರಿತವಾಗಿ ಸಕ್ರಿಯಗೊಂಡು ಮೂವರು ಉಗ್ರರನ್ನು ಹುಡುಕಿ ಹೊಡೆದುರುಳಿಸಿದ್ದಾರೆ. ಇದರ ಹೊರತಾಗಿಯೂ ಈ ರೀತಿಯ ಘಟನೆಗಳು ಭದ್ರತಾ ಪಡೆಗಳಿಗೆ ಹೊಸ ಸವಾಲು ಎನ್ನಬಹುದು. 

ಕಾಶ್ಮೀರ ಕಣಿವೆಯ ಯುವ ಕರು ಪೊಲೀಸ್‌ ಇಲಾಖೆಯಲ್ಲಿ ಅಥವಾ ಸೇನೆಯಲ್ಲಿ ಭರ್ತಿಯಾಗಬಾರದು ಎನ್ನುವ ಉದ್ದೇಶ ಉಗ್ರರಿಗಿದೆ. 2 ವಾರಗಳ ಹಿಂದೆ ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆ “ಪೊಲೀಸ್‌ ಇಲಾಖೆಯಲ್ಲಿ ಭರ್ತಿಯಾದ ಯುವಕರು ಕೂಡಲೇ ಕೆಲಸ ಬಿಡಬೇಕು’ ಎಂದು ತ್ರಾಲ್‌ ಪ್ರದೇಶದಲ್ಲಿ ಪೋಸ್ಟರ್‌ಗಳನ್ನು ಅಂಟಿಸಿತ್ತು. ಸತ್ಯವೇನೆಂದರೆ, ಕಾಶ್ಮೀರದಲ್ಲಿ ಅನೇಕ ಯುವಕರು ಈ ಉಗ್ರಸಂಘಟನೆಗಳ ಉಪಟಳದಿಂದ ರೋಸಿಹೋಗಿದ್ದಾರೆ. ಮೊದಲೇ ಕಾಶ್ಮೀರ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ. ಉಗ್ರರಿಂದಾಗಿ ಅಲ್ಲಿನ ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳುತ್ತಿದ್ದು, ಅದರ ದುಷ್ಪರಿಣಾಮವನ್ನು ಸ್ಥಳೀಯರು ಎದುರಿಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಯುವಕರು ಹೊಸ ಬದುಕು ಕಟ್ಟಿಕೊಳ್ಳಲು ಸೇನೆ ಅಥವಾ ಪೊಲೀಸ್‌ ಪಡೆಗೆ ಸೇರುತ್ತಿದ್ದಾರೆ.  ಒಂದು ವೇಳೆ ಯುವಕರು ಯಾವುದೇ ರೀತಿಯ ಉದ್ಯೋಗಕ್ಕೆ ಸೇರಿಬಿಟ್ಟರೆಂದರೆ, ಕಾಶ್ಮೀರವನ್ನು ಸದಾ  ಕುದಿಯಲ್ಲೇ ಇಡುವ ತಮ್ಮ ಪ್ರಯತ್ನಕ್ಕೆ ತಣ್ಣೀರು ಬೀಳುತ್ತದೆ ಎನ್ನುವುದು ಭಯೋತ್ಪಾದನಾ ಸಂಘಟನೆಗಳಿಗೆ ತಿಳಿದಿದೆ. 

ಹಿಂದಿನ ಅನೇಕ ಸಂದರ್ಭಗಳಲ್ಲಿ ಈ ಸಂಗತಿ ಸಾಬೀತಾಗಿದೆ. ಯಾವಾಗೆಲ್ಲ ಸ್ಥಳೀಯ ಯುವಕರು ಉದ್ಯೋಗದತ್ತ ಚಿತ್ತ ಹರಿಸಿದ್ದಾರೋ ಆಗೆಲ್ಲ ಅವರು ಆತಂಕವಾದಿಗಳಿಗೆ, ಪ್ರತ್ಯೇಕತಾವಾದಿಗಳಿಗೆ ಕಿವಿಗೊಡು ವುದನ್ನು ಬಿಟ್ಟಿದ್ದಾರೆ. ಆ ಸಮಯದಲ್ಲಿ ಕಣಿವೆ ಶಾಂತವಾಗಿರುವುದನ್ನು ನೋಡಿದ್ದೇವೆ. ಒಂದೆಡೆ ಸರ್ಕಾರಿ ನೌಕರಿ ಸುಭದ್ರ ಜೀವನದ ಕನಸು ಕಟ್ಟಿಕೊಡುತ್ತಿದೆ. ಆ ಜೀವನದ ರುಚಿ ಹತ್ತಿದರೆ ಯುವಕರು ಮತ್ತೆ ಹೊರಳಿ ಮೌಡ್ಯತೆಯ ಹಾದಿಗೆ ಬರುವುದು ಅಸಾಧ್ಯವೇ ಸರಿ. ಈ ಕಾರಣಕ್ಕಾಗಿಯೇ ಪೋಸ್ಟರ್‌ಗಳನ್ನು ಹಚ್ಚಿ “ಸರ್ಕಾರಿ ನೌಕರಿ ಬಿಟ್ಟು ಧರ್ಮ ಯುದ್ಧದಲ್ಲಿ ಭಾಗಿಯಾಗಿ’ ಎಂಬ ಹತಾಶೆಯ ಪೋಸ್ಟರ್‌ಗಳಿಗೆ, ಪೊಲೀಸರನ್ನು ಅಪಹರಿಸಿ ಹತ್ಯೆಗೈಯ್ಯುವ ಹೀನ ತಂತ್ರಕ್ಕೆ ಉಗ್ರರು ಮೊರೆಹೋಗಿರುವುದು. ಒಟ್ಟಾರೆಯಾಗಿ ಉಗ್ರರ ವಿರುದ್ಧದ ಹೋರಾಟದಲ್ಲಿ ಮದ್ದು ಗುಂಡುಗಳಷ್ಟೇ ಅಲ್ಲ, ಯುವಶಕ್ತಿಯ ಸಬಲೀಕರಣವೂ ಪ್ರಮುಖ ಅಸ್ತ್ರವಾಗಬಲ್ಲದು ಎನ್ನುವುದು ಸಾಬೀತಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next