Advertisement

ರಾಜ್ಯಕ್ಕೆ ಪ್ರತ್ಯೇಕ ಬೆಳೆ ವಿಮೆ ಜಾರಿಗೆ ಚಿಂತನೆ

06:05 AM Aug 10, 2018 | Team Udayavani |

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರದ ಫ‌ಸಲ್‌ ಬಿಮಾ ಯೋಜನೆ ಅವೈಜ್ಞಾನಿಕವಾಗಿದೆ. ವಿಮಾ ನೀತಿಯಿಂದ ಕಂಪನಿಗಳಿಗೆ ಮಾತ್ರ ಲಾಭದಾಯಕವಾಗಿ ರೈತರಿಗೆ ಪ್ರತಿ ವರ್ಷ ಆನ್ಯಾಯವಾಗುತ್ತಿದೆ. ಇದರಿಂದ ಇದರಿಂದ ರಾಜ್ಯದಲ್ಲಿ ಪ್ರತ್ಯೇಕ ಬೆಳೆ ವಿಮೆ ನೀತಿ ಜಾರಿಗೊಳಿಸಲು ಗಂಭೀರ ಚಿಂತನೆ ನಡೆಸಲಾಗುತ್ತಿದೆ ಎಂದು ಕೃಷಿ ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ ತಿಳಿಸಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ಅನುಕೂಲವಾಗಬೇಕಿದ್ದ ಬೆಳೆವಿಮೆ ಯೋಜನೆ ವಿಮಾ ಕಂಪನಿಗಳಿಗೆ ಲಾಭ ಆಗುತ್ತಿದೆ. ಕಳೆದ ವರ್ಷ ರಾಜ್ಯದಿಂದ ವಿಮಾ ಕಂಪನಿಗಳಿಗೆ ರೈತರ ವಂತಿಗೆ ಸೇರಿ ಕೇಂದ್ರ ರಾಜ್ಯ ಸರ್ಕಾರಗಳಿಂದ ಒಟ್ಟು 1,200 ಕೋಟಿ ಹಣ ಸಂದಾಯವಾಗಿದೆ. ಆದರೆ ಆ ಪೈಕಿ ರಾಜ್ಯದ ರೈತರಿಗೆ ಬೆಳೆ ನಷ್ಟ ಪರಿಹಾರ ಸಿಕ್ಕಿದ್ದು ಮಾತ್ರ 550 ಕೋಟಿ. ಉಳಿದ 650 ಕೋಟಿ ವಿಮಾ ಕಂಪನಿಗಳಿಗೆ ಲಾಭ ಆಗಿದೆ ಎಂದರು.  ರಾಜ್ಯ ಸರ್ಕಾರ ಎರಡು- ಮೂರು ವರ್ಷಗಳಿಂದ ಬೆಳೆ ವಿಮೆ ಯೋಜನೆಯಿಂದ ರೈತರಿಗೆ ಆಗಿರುವ ಲಾಭದ ಬಗ್ಗೆ ಸಮಗ್ರ ತನಿಖೆ ಆದೇಶಿಸಲಾಗಿದೆ. ಜತೆಗೆ ತೆಲಂಗಾಣ ಮಾದರಿ ಬೆಳೆ ವಿಮೆ ನೀತಿ ರೂಪಿಸುವ ಸಂಬಂಧ ಗಂಭೀರ ಚಿಂತನೆ ನಡೆಸಲಾಗಿದೆ ಎಂದರು.

15 ದಿನಗಳ ಬಳಿಕ ಬರದ ನಿರ್ಧಾರ
ರಾಜ್ಯದಲ್ಲಿ ಮಳೆ ಕ್ಷೀಣಿಸಿರುವುದರಿಂದ ಬಿತ್ತನೆ ಪ್ರಮಾಣ ಕೂಡ ಕಡಿಮೆಯಾಗಿದೆ. ಸದ್ಯ ಹವಾಮಾನ ಇಲಾಖೆ ಪ್ರಕಾರ ಇನ್ನೂ 15 ದಿನಗಳಲ್ಲಿ ಉತ್ತಮ ಮಳೆ ಆಗುವ ನಿರೀಕ್ಷೆ ಇದೆ. ಮತ್ತೆ ಮಳೆ ಕ್ಷೀಣಿಸಿದರೆ ಬರದ ಜಿಲ್ಲೆಗಳ ಘೋಷಣೆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಕೇಂದ್ರ ಸರ್ಕಾರ ಇತ್ತೀಚೆಗೆ ರಾಗಿ, ಭತ್ತ ಮತ್ತಿತರ ರೈತರ ಉತ್ಪನ್ನಗಳಿಗೆ ಘೋಷಿಸಿರುವ ಬೆಂಬಲ ಬೆಲೆ ಕೂಡ ಅವೈಜ್ಞಾನಿಕವಾಗಿದೆ ಎಂದು ಕೃಷಿ ಸಚಿವರು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next