Advertisement

Elections; ಸ್ಥಳೀಯಾಡಳಿತ ಚುನಾವಣೆ ನಡೆಸಿ: ರಾಜ್ಯ ಚು. ಆಯೋಗ

01:44 AM Aug 09, 2024 | Team Udayavani |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಿತ ರಾಜ್ಯದ ಜಿ.ಪಂ., ತಾ.ಪಂ. ಹಾಗೂ ಇತರ ನಗರ ಸ್ಥಳೀಯ ಸಂಸ್ಥೆಗಳಿಗೆ 2025ರ ಮಾರ್ಚ್‌ ಅಂತ್ಯದ ವರೆಗೆ ಚುನಾವಣೆಗಳು ನಡೆಯದಿದ್ದರೆ ಕೇಂದ್ರ ಸರಕಾರದಿಂದ 15ನೇ ಹಣಕಾಸು ಆಯೋಗದಡಿ ರಾಜ್ಯಕ್ಕೆ ಬರಬೇಕಾದ 2,100 ಕೋಟಿ ರೂ. ಅನುದಾನ ಖೋತಾ ಆಗಲಿದೆ ಎಂದು ರಾಜ್ಯ ಚುನಾವಣ ಆಯೋಗ ಕಳವಳ ವ್ಯಕ್ತಪಡಿಸಿದೆ. ಈ ಮೂಲಕ ಈ ಚುನಾವಣೆಗಳನ್ನು ಶೀಘ್ರದಲ್ಲೇ ನಡೆಸಿ ಎಂದು ಸರಕಾರಕ್ಕೆ ಪರೋಕ್ಷ ಸೂಚನೆ ನೀಡಿದೆ.

Advertisement

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಚುನಾವಣ ಆಯುಕ್ತ ಜಿ.ಎಸ್‌. ಸಂಗ್ರೇಶಿ ಈ ವಿಷಯ ತಿಳಿಸಿದರು.

ಬಿಬಿಎಂಪಿ ಹಾಗೂ ಜಿ.ಪಂ.-ತಾ.ಪಂ.ಗಳಿಗೆ4 ವರ್ಷಗಳಿಂದ ಚುನಾ ವಣೆ ನಡೆದಿಲ್ಲ. 15ನೇ ಹಣಕಾಸು ಆಯೋಗ ದಲ್ಲಿ 2020-21ನೇ ಸಾಲಿನಿಂದೀಚೆ ಕೇಂದ್ರ ಸರಕಾರದಿಂದ ರಾಜ್ಯಕ್ಕೆ 2,100 ಕೋ.ರೂ. ಅನುದಾನ ಬರಬೇಕಿತ್ತು. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು, ಅಲ್ಲಿ ಚುನಾಯಿತ ಆಡಳಿತ ವ್ಯವಸ್ಥೆ ಇದ್ದರೆ ಮಾತ್ರ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹಣಕಾಸು ಆಯೋಗದ ಷರತ್ತು ಇದೆ.

2025ರ ಮಾರ್ಚ್‌ ಅಂತ್ಯದ ವರೆಗೂ ಚುನಾವಣೆಗಳು ನಡೆ ಯದಿದ್ದರೆ 2,100 ಕೋಟಿ ರೂ. ಅನುದಾನ ನಮಗೆ ಸಿಗುವುದಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ರಾಜ್ಯ ಸರ ಕಾರಕ್ಕೆ ಶೀಘ್ರದಲ್ಲೇ ಪತ್ರ ಬರೆಯ ಲಾಗುವುದು ಎಂದು ಸಂಗ್ರೇಶಿ ತಿಳಿಸಿದರು.

ಮತ್ತೆ ಕೋರ್ಟ್‌ಗೆ ಮೊರೆ
ಕಾಲಮಿತಿಯೊಳಗೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವಂತೆ 2006ರಲ್ಲಿ ಸುಪ್ರೀಂ ಕೋರ್ಟ್‌ ಸ್ಪಷ್ಟ ನಿರ್ದೇಶನ ನೀಡಿದೆ.
ಅವಧಿ ಮುಗಿಯುವ ಸ್ಥಳೀಯ ಸಂಸ್ಥೆಗಳಿಗೆ ಕಾಲಮಿತಿಯೊಳಗೆ ಚುನಾವಣೆ ನಡೆಸುವುದು ರಾಜ್ಯ ಚುನಾವಣ ಆಯೋಗದ ಸಂವಿಧಾನಬದ್ಧ ಹೊಣೆಗಾರಿ ಕೆಯಾಗಿದೆ. ವಾರ್ಡ್‌ ಕ್ಷೇತ್ರ ಪುನರ್‌ವಿಂಗಡಣೆ, ಮೀಸಲಾತಿ ಮತ್ತಿತರ ವಿಚಾರಗಳಿಂದ ಚುನಾವಣೆಗಳು ವಿಳಂಬವಾಗಿವೆ. ಕಾಲಮಿತಿ ಯೊಳಗೆ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಲು ಸರಕಾರಕ್ಕೆ ನಿರ್ದೇಶನ ನೀಡುವಂತೆ ಸ್ವತಃ ಚುನಾವಣ ಆಯೋಗ ನ್ಯಾಯಾಲಯದ ಮೊರೆ ಹೋಗಿದೆ. ಬಿಬಿಎಂಪಿ ವಿಷಯ ಸುಪ್ರೀಂ ಕೋರ್ಟ್‌ನಲ್ಲಿ ಆ. 20ರಂದು ವಿಚಾರಣೆಗೆ ಬರಲಿದೆ. ತಾ.ಪಂ. ಜಿ.ಪಂ. ಮೀಸಲಾತಿ ನಿಗದಿಪಡಿಸುವ ವಿಚಾರದಲ್ಲಿ ನ್ಯಾಯಾಲಯಕ್ಕೆ ನೀಡಿದ ಭರವಸೆಯಂತೆ ನಡೆದುಕೊಂಡಿಲ್ಲ ಎಂದು ಸರಕಾರದ ವಿರುದ್ಧ ಚುನಾವಣ ಆಯೋಗವು ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿದೆ. ಇದರ ವಿಚಾರಣೆ ಆ. 12ರಂದು ನಡೆಯಲಿದೆ. ನ್ಯಾಯಾಲಯದಲ್ಲಿ ಆಗುವ ಬೆಳವಣಿಗೆಗಳನ್ನು ಆಧರಿಸಿ ಆಯೋಗ ಮುಂದಿನ ಹೆಜ್ಜೆ ಇರಿಸಲಿದೆ. ಈ ವಿಚಾರದಲ್ಲಿ ಸರಕಾರ ಸಹಕಾರ ನೀಡದಿದ್ದರೆ ಆಯೋಗವು ಮತ್ತೆ ನ್ಯಾಯಾಲಯದ ಮೊರೆ ಹೋಗಲಿದೆ ಎಂದು ಎಸ್‌.ಜಿ. ಸಂಗ್ರೇಶಿ ತಿಳಿಸಿದರು.

Advertisement

ಆಯೋಗದ ಕಾರ್ಯದರ್ಶಿ ಎಸ್‌. ಹೊನ್ನಾಂಬ ಮತ್ತಿತರ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next