Advertisement

ಕೊಚ್ಚಿ ಬಿನಾಲೆಕಲೆಯ ಬಲೆ

04:32 PM May 21, 2017 | |

ಎರಡು ತಿಂಗಳ ಹಿಂದೆ ಮುಕ್ತಾಯಗೊಂಡ ಈ ಮಹಾಕಲೋತ್ಸವದ ನೆನಪು ಎರಡು ವರ್ಷಗಳಿಗೆ ಸಾಕು !  

Advertisement

ಅಮೂರ್ತತೆಯನ್ನು ಮೂರ್ತರೂಪಕ್ಕೆ ತರುವುದು ಹೇಗೆ?  ಮೂರ್ತವಾಗಿರುವುದನ್ನು ವಿವಿಧ ದೃಷ್ಟಿಕೋನಗಳಿಂದ ಗ್ರಹಿಸಿ ಅದಕ್ಕೆ ಮತ್ತಷ್ಟು ಹೊಳಪು ತುಂಬಿ ಇನ್ನೊಂದು ಮಾಧ್ಯಮಕ್ಕೆ ತರುವುದು ಹೇಗೆ? ಇದು ಕಲಾವಿದನ ಸವಾಲು.

ಕಲಾಕೃತಿಯನ್ನು ನೋಡುವ. ಅಸ್ವಾದಿಸುವ ಬಗೆ ಹೇಗೆ? ಕಲಾಕೃತಿಯ ಮುಂದೆ ಕೆಲವು ಜನರು ಯಾಕೆ ಮೌನವಾಗಿ ಗಂಟೆಗಟ್ಟಲೆ ನಿಂತುಕೊಳ್ಳುತ್ತಾರೆ? ಇದು ಕಲಾವಿದೆಯಲ್ಲದ, ಕಲಾವಿಮರ್ಶಕಳೂ ಅಲ್ಲದ ನನ್ನನ್ನು  ಕಾಡುವ ಕೆಲವು ಪ್ರಶ್ನೆಗಳು.

ಹಾಗಿದ್ದರೂ ನಾನಿರುವ ಬೆಂಗಳೂರಿನಿಂದ 528 ಕಿ.ಮೀ. ದೂರದಲ್ಲಿರುವ ಕೇರಳದ ಪೋರ್ಟ್‌ ಕೊಚ್ಚಿಯಲ್ಲಿ ನಡೆಯುತ್ತಿರುವ  ಕೊಚ್ಚಿ ಬಿನಾಲೆ (Kochi-muzirisBiennale)ಗೆ ಹೋಗಿದ್ದೆ. 

ಬಿನಾಲೆ ಎಂಬುದು ಮೂಲತಃ ಇಟಾಲಿಯನ್‌ ಪದ. ಅದರ ಅರ್ಥ ಎರಡು ವರ್ಷಗಳಿಗೊಮ್ಮೆ ನಡೆಯುವ ಉತ್ಸವ, ಈ ಉತ್ಸವದ ಕನಸು ಕಂಡು ಕಾರ್ಯಗತಗೊಳಿಸಿದವರಲ್ಲಿ ಮೂವರ ಹೆಸರು ಪ್ರಮುಖವಾದುದು. ಅವರೇ ಈಗ ಕೊಚ್ಚಿ ಬಿನಾಲೆಯ ಪ್ರಸಿಡೆಂಟ್‌ ಆಗಿರುವ ಬೋಸ್‌ ಕೃಷ್ಣಮಾಚಾರಿ, ಪ್ರೋಗ್ರಾಮ್ಸ… ಡೈರೆಕ್ಟರ್‌ ಆಗಿರುವ ರಿಯಾಸ್‌ ಕೋಮ್‌ ಮತ್ತು ಎಜುಕೇಶನ್‌ ಕನ್ಸಲ್ಟೆಂಟ್‌ ಆಗಿರುವ ಮೀನಾ ವಾರಿ. ಇವರ ಜೊತೆ ಹತ್ತಾರು ಮಂದಿ ಕ್ಯುರೇಟರ್‌ಗಳು, ಪ್ರಾಜೆಕ್ಟ್ ಅಡ್ವೆ„ಸರ್‌ಗಳು ಬಿನಾಲೆಯ ಯಶಸ್ಸಿಗಾಗಿ ಹಗಲಿರುಳು ದುಡಿಯುತ್ತಿರುತ್ತಾರೆ. ಈ ವರ್ಷದ ಬಿನಾಲೆಯ ಕ್ಯುರೇಟರ್‌ ಮೂಲತಃ ಕನ್ನಡಿಗರಾದ ಮುಂಬೈ ನಿವಾಸಿಯಾಗಿರುವ ಆರ್ಟಿಸ್ಟ್‌ ಸುದರ್ಶನ ಶೆಟ್ಟಿ . ಪ್ರಪಂಚದಾದ್ಯಂತದ ಕಲಾವಿದರನ್ನೆಲ್ಲ ಸಂಪರ್ಕಿಸಿ ಕೊಚ್ಚಿಗೆ ಬರಮಾಡಿಕೊಳ್ಳುವುದು ಅವರ ಹೊಣೆಯಾಗಿತ್ತು. ಬಿನಾಲೆಯ ಹಿಂದೆ ಹಲವು ವರ್ಷ ಗಳ ತಯಾರಿಯಿದೆ. ಸಾವಿರಾರು ಜನಗಳ ಪರಿಶ್ರಮವಿದೆ. ಇದೇ ಮಾದರಿಯ ಬಿನಾಲೆ ವೆನಿಸ್‌, ಬರ್ಲಿನ್‌, ಶಾಂಘೈಗಳಲ್ಲಿ ನಡೆಯುತ್ತಿದೆ.

Advertisement

ಮುಝುರಿಸ್‌ ಅಂದರೆ ಕೊಚ್ಚಿಯಲ್ಲಿದ್ದ ಪುರಾತನ ಕೋಟೆ. ಇದು ಕೊಚ್ಚಿಯಲ್ಲಿ ನಡೆಯುತ್ತಿರುವುದರಿಂದ ಕೊಚ್ಚಿ ಮುಝುರೀಸ್‌ ಬಿನಾಲೆ. ಅಂದರೆ ಎರಡು ವರ್ಷಕ್ಕೊಮ್ಮೆ ನಡೆಯುವ ಸ್ಥಳೀಯತೆಯನ್ನು ಒಳಗೊಂಡ ಸಮಕಾಲೀನ ಅಂತರಾಷ್ಟ್ರೀಯ ಮಟ್ಟದ ಕಲಾಉತ್ಸವ. ವಿಶೇಷತೆ ಎಂದರೆ ಅಲ್ಲಿ ಯಾವ್ಯಾವ ಕಲಾಪ್ರಕಾರಗಳ ಪ್ರದರ್ಶನ ನಡೆಯುತ್ತದೆಯೋ ಅದೆಲ್ಲದರ ರೂವಾರಿಗಳಾದ ಕಲಾವಿದರು ಸ್ವತಃ ಉತ್ಸವದಲ್ಲಿ ಭಾಗಿಯಾಗುತ್ತಾರೆ ಮಾತ್ರವಲ್ಲ , ಕಲಾಪ್ರೇಮಿಗಳ ಜೊತೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆರೆಯುತ್ತಾರೆ, ಸಂವಾದದಲ್ಲಿ ಭಾಗಿಯಾಗುತ್ತಾರೆ. ಕೊಚ್ಚಿ ಬಿನಾಲೆಯ ಸ್ಥಾಪಕರಲ್ಲಿ ಒಬ್ಬರಾದ ರಿಯಾಸ್‌ ಕೊಮು [Riyas Komu] ಇದನ್ನು ಜನರ ಬಿನಾಲೆ ಎಂದು ಕರೆಯುತ್ತಾರೆ.

ಈ ಸಲದ ಥೀಮ್‌
ಬಿನಾಲೆಗೆ ಹೋಗಲು ಬಲವಾದ ಇನ್ನೊಂದು ಕಾರಣವೂ ಇತ್ತು. ಅದು ಐತಿಹಾಸಿಕ ಹಿನ್ನೆಲೆಯಿರುವ ಪೋರ್ಟ್‌ ಕೊಚ್ಚಿಯೆಂಬ ಪುಟ್ಟ ಬಂದರಿನೆಡೆಗಿರುವ ಸಹಜ ಕುತೂಹಲ. ಪೋರ್ಚುಗೀಸರು, ಡಚ್ಚರು ಮತ್ತು ಬ್ರಿಟಿಷರು ಇಲ್ಲಿ ಕಾಲಾನುಕ್ರಮದಲ್ಲಿ  ವಸಾಹತುಗಳನ್ನು ನಿರ್ಮಿಸಿಕೊಂಡಿದ್ದರು. ಇಲ್ಲಿಂದಲೇ ಸಾಂಬಾರು ಪದಾರ್ಥಗಳು ಸೇರಿದಂತೆ ಭಾರತದ ಇನ್ನಿತರ ವಸ್ತುಗಳು ಮಧ್ಯಪ್ರಾಚ್ಯ ದೇಶಗಳಿಗೆ ರವಾನೆಯಾಗುತ್ತಿತ್ತು. ಹಾಗಾಗಿ ಇಂದಿಗೂ ಇಲ್ಲಿಯ ವಾಸ್ತುಶಿಲ್ಪಗಳಲ್ಲಿ ಆ ದೇಶಗಳ ಪ್ರಭಾವವನ್ನು ಕಾಣಬಹುದು. ಸುಂದರವಾದ ಕಡಲ ಕಿನಾರೆಯನ್ನು ಹೊಂದಿರುವ ಈ ಪುಟ್ಟ ದ್ವೀಪದಲ್ಲಿ ನಮ್ಮ ಗೋಕರ್ಣದ  ಹಾಗೆ ಸದಾ ವಿದೇಶಿಯರೇ ಅಡ್ಡಾಡುತ್ತಿರುತ್ತಾರೆ. 
ಕೊಚ್ಚಿ ಬಿನಾಲೆ ಮೊದಲ ಬಾರಿಗೆ 2012ರಲ್ಲಿ ಆರಂಭವಾಗಿತ್ತು. ಈಗ ನಡೆಯುತ್ತಿರುವುದು ಮೂರನೆಯ ಬಿನಾಲೆ. ಡಿಸೆಂಬರ್‌ 12ರಂದು ಆರಂಭವಾದ ಬಿನಾಲೆ 108 ದಿನಗಳ ಕಾಲ ನಡೆದು ಮಾರ್ಚ್‌ ತಿಂಗಳಲ್ಲಿ ಮುಕ್ತಾಯವಾಗಿದೆ. ಈ ವರ್ಷ 31 ದೇಶಗಳ 97 ಆರ್ಟಿಸ್ಟ್‌ಗಳು ಭಾಗವಹಿಸಿದ್ದರು. ಏಕಕಾಲದಲ್ಲಿ ಹತ್ತು ಜಾಗಗಳಲ್ಲಿ ಕಲಾಪ್ರದರ್ಶನ ನಡೆಯಿತು. ಹವ್ಯಾಸಿ ಮತ್ತು ವೃತ್ತಿಪರ  ಕಲಾವಿದರ ಜೊತೆ ವಿದ್ಯಾರ್ಥಿ ಬಿನಾಲೆಯೂ ಇತ್ತು. ರಾಷ್ಟ್ರಾದಾದ್ಯಂತದ 55 ಕಲಾಶಾಲೆಗಳ ಕಿರಿಯ ಕಲಾವಿದರು ಇದರಲ್ಲಿ ಭಾಗವಹಿಸಿದ್ದರು. ಒಟ್ಟು ಏಳು ಜಾಗಗಳಲ್ಲಿ ವಿದ್ಯಾರ್ಥಿ ಬಿನಾಲೆ ನಡೆದಿದೆ. ಮೊಹಮ್ಮದಾಲಿ ವೇರ್‌ಹೌಸ್‌ ಮತ್ತು ಮಟ್ಟಂಚೇರಿ ಮಂದಿರಗಳಲ್ಲಿ ನಡೆಯುತ್ತಿದ್ದ ಪ್ರದರ್ಶನಗಳು ನಿಜಕ್ಕೂ ವಿದ್ಯಾರ್ಥಿಗಳಲ್ಲಿರುವ ಕಲ್ಪನಾಶಕ್ತಿ ಮತ್ತು ಪ್ರಖರ ಅಲೋಚನೆಗಳ ಕೈಗನ್ನಡಿಯಂತಿದ್ದವು.

ಈ ವರ್ಷದ ಬಿನಾಲೆಯ ಥೀಮ್‌  forming in the pupil of the eye ಇದರ ಯಥಾವತ್‌ ಅನುವಾದ ಮಾಡುವುದಾದರೆ ಕಣ್ಣಿನ ಪಾಪೆಯೊಳಗಿನ ರೂಪ ಎಂದಾಗುತ್ತದೆ. ಇದು ಮಹಾಭಾರತದ “ಸಂಜಯನ ನೋಟ’ದಿಂದ ಸ್ಫೂರ್ತಿಯನ್ನು ಪಡೆದಿದೆ. 

ಕಲ್ಪನೆಯನ್ನು ಮೀರಿ…
ಕ‌ಲಾಪ್ರದರ್ಶನವೆಂದರೆ ನಮಗೆ ಅದರಲ್ಲೂ ಬೆಂಗಳೂರಿಗರಿಗೆ ಸಾಮಾನ್ಯವಾಗಿ ನೆನಪಿಗೆ ಬರುವುದು ವೆಂಕಟಪ್ಪ ಆರ್ಟ್‌ ಗ್ಯಾಲರಿ, ಮಾಡರ್ನ್ ಆರ್ಟ್‌ ಗ್ಯಾಲರಿ ಮತ್ತು ಚಿತ್ರಕಲಾ ಪರಿಷತ್ತಿನಲ್ಲಿ ಪ್ರದರ್ಶನಗೊಳ್ಳುವ ವರ್ಣಚಿತ್ರಗಳು. ಪೋಟೋಗಳು ಇಲ್ಲವೇ ಶಿಲ್ಪಕಲಾಕೃತಿಗಳು ನೆನಪಿಗೆ ಬರುತ್ತವೆ. ನಾನು ಪೋರ್ಟ್‌ ಕೊಚ್ಚಿಗೆ ಹೋಗುವಾಗ ಅದೇ ನನ್ನ ತಲೆಯಲ್ಲಿತ್ತು. ಆದರೆ ಅಲ್ಲಿ ಹೋಗಿ ನೋಡಿದಾಗ ಅದೆಲ್ಲಾ ತಲೆಕೆಳಗಾಯಿತು. ಅಲ್ಲಿನ ಕಲಾಪ್ರದರ್ಶನ ನನ್ನ ಕಲ್ಪನೆಯನ್ನು ಮೀರಿದ ವ್ಯಾಪ್ತಿಯಲ್ಲಿ ಹರಡಿಕೊಂಡಿತ್ತು, ಅಲ್ಲೊಂದು ಕಲಾಪ್ರದರ್ಶನವಿತ್ತು. ಅದರ ವಿವರಣೆಯನ್ನು ನೀಡಿದರೆ ಕೊಚ್ಚಿ ಬಿನಾಲೆಯೆಂಬುದು ಉಳಿದೆಲ್ಲ ಕಲಾಪ್ರದರ್ಶನಗಳಿಗಿಂತ ಹೇಗೆ ಭಿನ್ನ ಎಂಬುದು ನಮಗೆ ಮನದಟ್ಟಾಗುತ್ತದೆ. ಅಲ್ಲದೆ ಇದು ಬಿನಾಲೆಯ ಬಹುಮುಖ್ಯ ಆಕರ್ಷಣೆಯಯೂ ಆಗಿತ್ತು. ಅದರ ಹೆಸರು “ನೋವಿನ ಸಮುದ್ರ’ (The Sea of Pain) ರಹುಲ್‌ ಝರಿಟ್‌ (Raul Zurita)  ಎಂಬ ಚಿಲಿ ದೇಶದ ಕವಿಯ ಆಲೋಚನೆಗಳು (Thoughts) ಇಲ್ಲಿ ಮೂರ್ತ ಸ್ವರೂಪವನ್ನು ಕಂಡಿದ್ದವು. ಆ ಕವನದ ಹುಟ್ಟಿಗೆ ಒಂದು ಹಿನ್ನೆಲೆಯಿತ್ತು.

ಕಳೆದ ಸೆಪ್ಟಂಬರ್‌ನಲ್ಲಿ ಟರ್ಕಿಯ ಬೋರ್ಡಮ್‌ ಬೀಚಿನಲ್ಲಿ ಸಿರಿಯಾದ ಪುಟ್ಟ ಕಂದ ಅಯಾÉನ್‌ ಕುರ್ದಿಯ ಶವ ಸಿಕ್ಕಿತ್ತು. ನೀಲಿ ಚಡ್ಡಿ ಕೆಂಪು ಟೀಶರ್ಟ್‌ ಧರಿಸಿ ತಲೆಕೆಳಗಾಗಿ ಬಿದ್ದ ಆ ಎಳೆಬಾಲಕನ ಶವ ಪ್ರಪಂಚದಾದ್ಯಂತ ಸುದ್ದಿ ಮಾಡಿತ್ತು; ರೂಪಕವಾಗಿ ಬೆಳೆದಿತ್ತು. ಆದರೆ ಅÇÉೇ ಪಕ್ಕದಲ್ಲಿ ಬಿದ್ದಿದ್ದ ಅವನ ತಾಯಿ ಮತ್ತು ಸಹೋದರ ಗಾಲಿಪ್‌ ಕುರ್ದಿಯ ಶವ ಮಾತ್ರ ಯಾರ ಗಮನವನ್ನೂ ಸೆಳೆದಿರಲಿಲ್ಲ.  ರಹುಲ್‌ ಝುರಿಟ್‌ನ ಮನವನ್ನು ಇದು ಕಲಕಿತ್ತು. ಅದು ಕವನವಾಗಿ ಹೊಮ್ಮಿತು. ಕೊಚ್ಚಿ ಬಿನಾಲೆಯಲ್ಲಿ ಅದು ಕಲಾರೂಪವನ್ನು ತಾಳಿತು. ಅದೇ ಸಿ ಆಫ್ ಪೈನ್‌  ಸುಮಾರು ಎಪ್ಪತ್ತು ಅಡಿ ಉದ್ದ, ಮೂವತ್ತು ಅಡಿ ಅಗಲದ ಮೂರೂ ಕಡೆ ಗೋಡೆಗಳಿಂದಾವೃತವಾದ ಕೊಳವೊಂದನ್ನು ನಿರ್ಮಿಸಲಾಗಿತ್ತು. ಕಲಾಪ್ರೇಮಿಗಳು ಅಲ್ಲಿ ಬಂದು ಚಪ್ಪಲಿ, ಶೂಗಳನ್ನು ಕಳಚಿಟ್ಟು, ತೊಟ್ಟ ಬಟ್ಟೆಯನ್ನು ಮೊಣಕಾಲು ತನಕ ಮಡಚಿ ನೀರಿಗಿಳಿಯುತ್ತಿದ್ದಂತೆಯೇ ಸಿ ಆಫ್ ಪೈನ್‌ ಕವನದ ಸಾಲುಗಳನ್ನೊಳಗೊಂಡ ವಿಷಾದ ಬೆರೆತ ಆಡಿಯೋದ ಅನುರಣನ. ಎರಡೂ ಬದಿಯ ಗೋಡೆಯ ಮೇಲೆಲ್ಲಾ ಕವನದ ಸಾಲುಗಳು. ಮುಂದೆ ಮುಂದೆ ಸಾಗಿದಂತೆಲ್ಲಾ ಎದುರಿನ ಗೋಡೆಯ ಮೇಲೆ ಇಡೀ ಕವನ ಸೊðàಲಿಂಗ್‌ ಆಗುತ್ತಿರುತ್ತದೆ. “ನಾನು ಅವನ ತಂದೆಯಲ್ಲ. ಆದರೆ ಅವನು ನನ್ನ ಮಗ’ ಎಂದು ಅಂತ್ಯವಾಗುವ ಕವನ, ವಿಸ್ತಾರತೆಯನ್ನು ಪಡೆದುಕೊಳ್ಳುತ್ತ ಮತ್ತೂಂದು ಆಯಾಮದತ್ತ ಹೊರಳಿಕೊಳ್ಳುತ್ತದೆ. ಅದನ್ನು ಓದಿ ಹಿಂದಿರುಗಿ ನೀರಿನಲ್ಲಿ ಕಾಲೆಳೆಯುತ್ತ ಬರುವಾಗ ನಮ್ಮೊಳಗೂ ರುದ್ರಮೌನ ಮೆಲ್ಲನೆ ಪಸರಿಸಿಕೊಳ್ಳುತ್ತದೆ. ಕವನವನ್ನು ಅನುಭವಿಸುವುದು ಅಂದರೆ ಇದೇ ಏನು? ಅದು ಕಣ್ಣೀರಿನ ಕೊಳವೆ? ಅದು ಸಮುದ್ರದ ನೋವೆ? ನೋವಿನ ಸಮುದ್ರವೆ? ಅಥವಾ ಮನುಕುಲದ ನೋವೇ? ಇದೇ ಕವಿ ಹೇಳಿದ ಮಾತೊಂದು ನೆನಪಾಗುತ್ತದೆ. If poetry ends, the dremes is dead..

31 ವಿಡಿಯೋ ಕ್ಯಾಮರಾ, 31 ಪ್ರಾಜೆಕ್ಟರ್‌ಗಳನ್ನು ಬಳಸಿ ಗ್ಯಾರಿ ಹಿಲ್‌ ನಿರ್ಮಿಸಿದ ಡ್ರೀಮ್‌ ಸ್ಟಾಪ್‌ ಎಂಬ ವಿಡಿಯೋ ಆರ್ಟ್‌ ಮತ್ತು ಅವರದೇ ತುಂಡಾದ ಒಡೆದ ಗಾಜಿನ ಚೂರುಗಳನ್ನು ಜೋಡಿಸಿ ಮಾಡಿದ ಆಕರ್ಷಕ ಸಂಯೋಜನೆಯೂ ಬಿನಾಲೆಯ ಮತ್ತೂಂದು ಆಕರ್ಷಣೆ.

ಸಮಕಾಲೀನ ಕಲೆಯ ವಿಶೇಷ‌ತೆಯೇ ಅದು. ಕಲಾಕಾರನ ಭಾವನೆ, ವಿಚಾರ ((Thoughts), ಕಾಳಜಿ ಮತ್ತು ಐಡಿಯಾಗಳನ್ನು ಪ್ರಸ್ತುತ ವಿದ್ಯಮಾನದೊಡನೆ ಸಂಯೋಜಿಸಿ ಅದಕ್ಕೊಂದು ಮೂರ್ತರೂಪವನ್ನು ಕೊಟ್ಟು ನೋಡುಗರನ್ನೂ ತನ್ನೊಡನೆ ಅಂತರ್ಗತಮಾಡಿಕೊಳ್ಳುತ್ತದೆ. ಅಲ್ಲೊಂದು ರೂಪಾಂತರದ ಕ್ರಿಯೆ ನಡೆಯುತ್ತಿರುತ್ತದೆ.

ಗ್ಯಾರಿಹಿಲ್‌, ಶರ್ಮಿಷ್ಟ ಮೊಹಾಂತಿ ಮುಂತಾದವರ ವಿಡಿಯೋ ಆರ್ಟ್‌ಗಳನ್ನು ನೋಡುವಾಗ ನಮ್ಮ ಯೋಚನೆಗಳನ್ನು ಹೀಗೂ ದಾಟಿಸಬಹುದಲ್ಲ ಎಂದು ಅಚ್ಚರಿಯಾಗುತ್ತದೆ. ಯಾವ ಪ್ರದರ್ಶನವನ್ನೇ ನೋಡಲಿ ಅಲ್ಲೊಂದು ಹೊಸತನದ ಸಂವಹನ ಸಾಧ್ಯತೆಯಿತ್ತು.

ಬಿನಾಲೆಯಲ್ಲಿ ಸಂಗೀತ ಕಛೇರಿಯೂ ಸೇರಿದಂತೆ ವಿವಿಧ ಪ್ರಕಾರದ ಪ್ರದರ್ಶನ ಕಲೆಗಳಿರುತ್ತವೆ. ಪ್ರಾತ್ಯಕ್ಷಿಕೆಯಿರುತ್ತದೆ. ಸಿನೆಮಾ, ಡಾಕ್ಯುಮೆಂಟರಿ ಶೋಗಳ ಪ್ರದರ್ಶನವಿರುತ್ತದೆ. ಆಸಕ್ತರಿಗೆ ಫಿಲ್ಮ್ ಮೇಕಿಂಗ್‌. ನೃತ್ಯ ಸೇರಿದಂತೆ ಲಲಿತಕಲೆಗಳಿಗೆ ಸಂಬಂಧಿಸಿದಂತೆ ಎರಡು-ಮೂರು ದಿವಸಗಳ ಕಾರ್ಯಾಗಾರವಿರುತ್ತಿತ್ತು. ಈ ಕಾರ್ಯಾಗಾರಗಳ ವಿಶೇಷತೆ ಏನೆಂದರೆ, ದೇಶ-ವಿದೇಶಗಳ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಬೆರೆಯುವ, ಸಂವಾದಿಸುವ ಅಪೂರ್ವ ಅವಕಾಶ ಸಿಗುತ್ತಿತ್ತು. ನಾಟಕ, ಸ್ಟೋರಿ ಟೆಲ್ಲಿಂಗ್‌, ಜಾನಪದ ನೃತ್ಯ, ಕವ್ವಾಲಿ, ಕರಕುಶಲ ವಸ್ತುಗಳ ಪ್ರದರ್ಶನವಿತ್ತು. ವಿದೇಶಿಯರಿಗೆ ಸ್ಥಳೀಯ ಕಲೆ, ಸಂಸ್ಕೃತಿಯನ್ನು ತಿಳಿದುಕೊಳ್ಳುವ ವಿಪುಲ ಅವಕಾಶಗಳನ್ನು ಬಿನಾಲೆ ಆಯೋಜಿಸಿದೆ.

ಸಮಕಾಲೀನ ವಿಷಯಗಳ ಬಗ್ಗೆ ಚರ್ಚೆ ಮತ್ತು ಸೆಮಿನಾರುಗಳಿದ್ದವು. ಜನವರಿ 20ರಂದು ಕಮ್ಯೂನಲಿಸಂ, ಕ್ಯಾಸ್ಟ್‌ ಸೆಕ್ಯೂಲರಿಸಂನ ಚರ್ಚೆಯಲ್ಲಿ ಸಿದ್ದಾರ್ಥ ವರದರಾಜನ್‌, ಜಿಗ್ನೇಶ್‌ ಮವಾನಿ ಮತ್ತು ರಾಕೇಶ್‌ ಶರ್ಮ ಭಾಗವಹಿಸಿದ್ದರು. ಅಂದೇ ಡೈಲಾಗ್‌ ಅನ್‌ ಪೀಸ್‌; ಅಂಡಸ್ಟಾಂಡಿಂಗ್‌ ವಾಯ್ಲೆನ್ಸ್‌ ಸಿನೆಮಾ ಪ್ರದರ್ಶನವೂ ಇತ್ತು. ಸೆಲ್ಫ್ ಇಮೇಜಸ್‌ ಆಫ್ ಕೇರಳ ಮಾಡರ್ನಿಟಿ ಚರ್ಚೆಯಲ್ಲಿ ಕೇರಳದ ಚಿಂತಕರು, ಬರಹಗಾರರು ಭಾಗವಹಿಸಿದ್ದರು. ಸಿನೆಮಾ ನಿರ್ದೇಶಕರಾದ ರಾಕೇಶ್‌ ಶರ್ಮ, ಅಡೂರು ಗೋಪಾಲಕೃಷ್ಣನ್‌, ಪ್ರಿಯದರ್ಶನ್‌, ರಾಜಕೀಯ ವಿಶ್ಲೇಷಕರಾದ  ಮಾಧವಪ್ರಸಾದ್‌, ಬರಹಗಾರರಾದ ರಾಮಚಂದ್ರ ಗುಹಾ, ಮಲ್ಟಿ ಮಿಡಿಯಾ ತಜ್ಞರಾದ ಖಲೀದ್‌ ಸಬಾÕಬಿ, ಸುಧೀರ್‌ ಕಕ್ಕರ್‌ ಸೇರಿದಂತೆ ದೇಶವಿದೇಶಗಳ ಚಿತ್ರನಿರ್ದೇಶಕರು, ಸಾಹಿತಿಗಳು, ಕಲಾವಿದರು, ಸಂಗೀತಗಾರರು ವಿಡಿಯೋ ಆರ್ಟಿಸ್ಟ್‌ಗಳು ಇಲ್ಲಿ ಚರ್ಚೆ-ಸಂವಾದಗಳಲ್ಲಿ ಭಾಗವಹಿಸಿದ್ದಾರೆ.

ಮಾರ್ಚ್‌ 2ರಂದು ರಾಷ್ಟ್ರಪತಿಗಳಾದ ಪ್ರಣವ ಮುಖರ್ಜಿಯವರು ಇಲ್ಲಿಗೆ ಆಗಮಿಸಿ ವಿ ನೀಡ್‌ ದಿ ಆರ್ಟ್ಸ್ ಎಂಬ ಸೆಮಿನಾರನ್ನು ಉದ್ಘಾಟಿಸಿ ಇಂಪಾರ್ಟೆನ್ಸ್‌  ಆಫ್ ಸಸ್ಟೈನೇಬಲ್‌ ಕಲ್ಚರ್‌-ಬ್ಯುಲ್ಡಿಂಗ್‌  ಬಗ್ಗೆ ಉಪನ್ಯಾಸ ನೀಡಿ, ಕೊಚ್ಚಿ ಬಿನಾಲೆ ಎಂಬುದು ನಮ್ಮ ದೇಶದ ಕಲ್ಚರಲ್‌ ಕ್ಯಾಲೆಂಡರನ ಭಾಗವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.
 
ನೂರು ದಿನಗಳಂಥ ಮೂರು ದಿನ
ಮೂರು ದಿನಗಳ ಕಾಲ ಪೋರ್ಟ್‌ ಕೊಚ್ಚಿಯಲ್ಲೆಲ್ಲ ಅಡ್ಡಾಡಿದೆ. ಅಡ್ಡಾಡಿದೆ ಎಂದರೆ ಕಾಲ್ನಡಿಗೆಯಲ್ಲಿ ಇದನ್ನೆಲ್ಲ ಸುತ್ತಾಡಲು ಸಾಧ್ಯವಿಲ್ಲ. ಯಾಕೆಂದರೆ, ಇಡೀ ಪೋರ್ಟ್‌ ಕೊಚ್ಚಿಯೇ ಬಿನಾಲೆಯಾಗಿತ್ತು. ನಾಲ್ಕು ಚದರ ಕಿ.ಮೀ. ವಿಸ್ತಾರದಲ್ಲಿ ಹರಡಿಕೊಂಡಿರುವ ಕಲಾಪ್ರದರ್ಶನದಲ್ಲಿ ಹೆಚ್ಚಿನ ಕಲಾಪ್ರದರ್ಶನವಿದ್ದದ್ದು ಆಸ್ಪಿಯನ್‌ ಹಾಲ್‌ ಮತ್ತು ಪೆಪ್ಪರ್‌ ಹೌಸ್‌ನಲ್ಲಿ. ಆಸ್ಪಿಯನ್‌ ಹಾಲ್‌ನಿಂದ ಹತ್ತು ಹೆಜ್ಜೆ ಎಡಕ್ಕೆ ನಡೆದರೆ ಪೆಪ್ಪರ್‌ ಹೌಸ್‌ ಸಿಗುತ್ತಿತ್ತು. ಅಲ್ಲಿ ಕ್ಯಾಂಟೀನ್‌ ಕೂಡ ಇದೆ. ಮುಖ್ಯವಾಗಿ ವಿದೇಶಿಯರನ್ನು ಗಮನದಲ್ಲಿರಿಸಿಕೊಂಡ ಆಹಾರ ಮತ್ತು ಪಾನೀಯಗಳು ಅಲ್ಲಿ ದೊರೆಯುತ್ತಿದ್ದವು. ಆಸ್ಪಿಯನ್‌ ಹಾಲ್‌ನಿಂದ ಬಲಕ್ಕೆ ನೇರವಾಗಿ ನಡೆದು ಸ್ವಲ್ಪ ದೂರ ನಡೆದರೆ ಗೆಬ್ರಲ್‌ ಯಾರ್ಡ್‌, ಇಲ್ಲೊಂದು ಥಿಯೇಟರ್‌ ಇದೆ. ನಾಟಕ, ಸಂಗೀತ ಕಛೇರಿಗಳು ಸೇರಿದಂತೆ ಕೆಲವು ಪ್ರದರ್ಶನ ಕಲೆಗಳು ಇಲ್ಲಿ ನಡೆಯುತ್ತವೆ. ಅಲ್ಲಿಂದ ಬಲಕ್ಕೆ ಹೊರಳಿದರೆ ಕಾಶಿ ಆರ್ಟ್‌ ಗ್ಯಾಲರಿ ಸಿಗುತ್ತದೆ. ಅದೊಂದು ರೆಸ್ಟೋರೆಂಟ್‌. ಆದರೆ ಕಲಾಕೃತಿಯಂತೆ ಭಾಸವಾಗುವ ಒಂದು ಕಲಾಪರಿಸರ ಅಲ್ಲಿದೆ. ಬೇಕಾದ ಆಹಾರ – ಪಾನೀಯಗಳನ್ನು ಆರ್ಡರ್‌ ಮಾಡಿ ಅಲ್ಲಿಯ ಮೆಲುಸಂಗೀತಕ್ಕೆ ಮೈಮನಸ್ಸುಗಳು ಹಗುರವಾಗುವ ಅನುಭವ ಪಡೆಯಬಹುದು. ಉಳಿದ ಜಾಗಗಳನ್ನು ನೋಡಲು ಆಟೋ, ಬಸ್ಸು ಟ್ಯಾಕ್ಸಿಗಳನ್ನು ಅವಲಂಬಿಸಲೇಬೇಕಾಗುತ್ತದೆ. 

ವಿದೇಶಿ ಪ್ರವಾಸಿಗರ ದಟ್ಟಣೆ ಹೆಚ್ಚಿರುವ ಕಾರಣದಿಂದಲೇ ಇರಬಹುದು ಇಲ್ಲಿ ಬಾಡಿಗೆ ದ್ವಿಚಕ್ರವಾಹನಗಳು ದೊರೆಯುತ್ತವೆ. ದಿನಕ್ಕೆ ಇನ್ನೂ°ರೈವತ್ತು ರೂಪಾಯಿ, ಆದರೂ ಎಲ್ಲವನ್ನೂ ನೋಡಲು ಕನಿಷ್ಟ ಎರಡು ದಿನಗಳಾದರೂ ಬೇಕು. ಊಟ ವಸತಿಯ ವಿಚಾರಕ್ಕೆ ಬಂದರೆ ಪಕ್ಕದ ಎರ್ನಾಕುಲಂಗಿಂತ ಈ ದ್ವೀಪದಲ್ಲಿ ದುಪ್ಪಟ್ಟು ದುಬಾರಿ.

ಇಡೀ ಪೋರ್ಟ್‌ ಕೊಚ್ಚಿಯೇ ಒಂದು ಕಲಾಗ್ಯಾಲರಿಯಾದಾಗ ಅದರೊಳಗಿರುವ ಇಂಡೋ-ಡಚ್‌ ಮ್ಯೂಸಿಯಂ, ವಾಸ್ಕೋಡಗಾಮನ ಸಮಾಧಿಯಿರುವ ಹಳೆಯ ಯುರೋಪಿಯನ್‌ ಚರ್ಚ್‌ “ಸೈಂಟ್‌ ಫ್ರಾನ್ಸಿಸ್‌’ ಚರ್ಚ್‌ನನ್ನಾಗಲಿ ನೋಡದೇ ಮರಳುವುದುಂಟೇ? ಸಂಜೆಯ ಕಡಲ ಕಿನಾರೆ ಮತ್ತು ಚೈನೀಸ್‌ ಪಿಶ್ಶಿಂಗ್‌ ನೆಟ್‌ ಆಕರ್ಷಣೆಯನ್ನು ಯಾವ ಪ್ರವಾಸಿಯೂ ತಪ್ಪಿಸಿಕೊಳ್ಳಲಾರ.

ಮುಂದಿನ ಕೊಚ್ಚಿ ಬಿನಾಲೆ 2018ರಲ್ಲಿ ನಡೆಯುತ್ತದೆ. ಅದು ನಾಲ್ಕನೆಯ ಬಿನಾಲೆ. ಅದರ ಕ್ಯುರೇಟರ್‌ ಕಲಾವಿದೆ ದೆಹಲಿ ನಿವಾಸಿಯಾಗಿರುವ ಅನಿಟಾ ದುಬೆ.

ಕಲೆಯೊಂದೇ ಹೃದಯ-ಹೃದಯಗಳನ್ನು ಬೆಸೆಯಬಲ್ಲುದು. ದೇಶಗಳ ಗಡಿರೇಖೆಗಳನ್ನು ಅಳಿಸಬಲ್ಲುದು.

– ಉಷಾ ಕಟ್ಟೇಮನೆ

Advertisement

Udayavani is now on Telegram. Click here to join our channel and stay updated with the latest news.

Next