Advertisement

ಸ್ವಚ್ಛ ಮಂಗಳೂರು: ಕೆಪಿಟಿ ಸುತ್ತಮುತ್ತ ಸ್ವಚ್ಛತಾ ಕಾರ್ಯ

06:47 AM Jan 14, 2019 | Team Udayavani |

ಮಹಾನಗರ : ರಾಮಕೃಷ್ಣ ಮಿಷನ್‌ ವತಿಯಿಂತ ಐದನೇ ಹಂತದ ‘ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು’ ಅಭಿಯಾನದ ಪ್ರಯುಕ್ತ 6ನೇ ರವಿವಾರದ ಶ್ರಮದಾನ ಕೆಪಿಟಿ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯಿತು.

Advertisement

ಬೆಳಗ್ಗೆ 7.30ಕ್ಕೆ ಕೆಪಿಟಿ ಜಂಕ್ಷನ್‌ನಲ್ಲಿ ಶ್ರಮದಾನಕ್ಕೆ ಪಾಲಿಕೆಯ ಪರಿಸರ ಎಂಜಿನಿ ಯರ್‌ ಮಧು ಎಸ್‌. ಮನೋಹರ್‌ ಹಾಗೂ ಕರ್ನಾಟಕ ಪಾಲಿಟೆಕ್ನಿಕ್‌ ಎನ್ನೆಸ್ಸೆಸ್‌ ಸಹ ಕಾರ್ಯಕ್ರಮ ಅಧಿಕಾರಿ ಸೂರಜ್‌ ಪಿ. ಎಚ್. ಚಾಲನೆ ನೀಡಿ ಮಾತನಾಡಿದ ಅವರು, ಪಾಲಿಕೆಯಿಂದ ಈಗಾಗಲೇ ತ್ಯಾಜ್ಯವನ್ನು ಮನೆ ಮನೆಯಿಂದ ಸಂಗ್ರಹ ಮಾಡುತ್ತಿದ್ದರೂ ಕೆಲವು ಜನರು ರಸ್ತೆ ಬದಿಯಲ್ಲಿ ಕಸ ಎಸೆಯುವ ದುರಭ್ಯಾಸವನ್ನು ಮುಂದುವರಿಸಿದ್ದರು. ರಾಮಕೃಷ್ಣ ಮಿಷನ್‌ನಿಂದ ನಡೆಯುತ್ತಿರುವ ಈ ಅಭಿಯಾನದ ಫಲವಾಗಿ ಜನರಲ್ಲಿ ಜಾಗೃತಿ ಮೂಡಿದೆ ಹಾಗೂ ತನ್ಮೂಲಕ ತ್ಯಾಜ್ಯವನ್ನು ರಸ್ತೆ ಬದಿ ಹಾಕುವುದು ಕಡಿಮೆಯಾಗಿರುವುದು ಇಂದು ಸ್ಪಷ್ಟವಾಗಿ ಕಾಣುತ್ತಿದೆ. ಪ್ರತಿ ಕಿಲೋ ಗ್ರಾಂ. ತ್ಯಾಜ್ಯ ನಿರ್ವಹಣೆಗೆ ಪಾಲಿಕೆ ನಾಲ್ಕು ರೂ. ನಂತೆ ವರ್ಷಕ್ಕೆ ಮೂವತ್ತರಿಂದ ನಲವತ್ತು ಕೋಟಿ ರೂ. ಗಳಷ್ಟು ಹಣವನ್ನು ವ್ಯಯಿಸುತ್ತಿದೆ. ಆದರೆ ರಾಮಕೃಷ್ಣ ಮಿಷನ್‌ನಿಂದ ಕೊಡಮಾಡುತ್ತಿರುವ ಮಡಕೆಗಳಲ್ಲಿ ಜನರು ಹಸಿ ಕಸವನ್ನು ನಿರ್ವಹಿಸಿ ಗೊಬ್ಬರ ತಯಾರಿಸಿದ್ದೇ ಆದರೆ ಪಾಲಿಕೆಯ ಮೇಲಿನ ಹೊರೆ ಕಡಿಮೆಯಾಗಲಿದೆ ಎಂದು ಹೇಳಿದರು.

ಕ್ಯಾ| ಗಣೇಶ್‌ ಕಾರ್ಣಿಕ್‌ ಸ್ವಾಗತಿಸಿದರು. ಅಭಿಯಾನದ ಸಂಚಾಲಕರಾದ ಏಕಗಮ್ಯಾ ನಂದ ಸ್ವಾಮೀಜಿ ಅವರು ಕಾರ್ಯಕರ್ತರಿಗೆ ಶ್ರಮದಾನದ ಕುರಿತು ಮಾರ್ಗದರ್ಶನ ನೀಡಿದರು. ಜಯ ಕೃಷ್ಣ ಬೇಕಲ್‌, ಉಷಾ ಅಮೃತ ಕುಮಾರ, ಗುರುದತ್ತ ಶೆಣೈ, ಶ್ರೀಮತಿ ಮಣಿ ರೈ, ಜಗನ್‌ ಕೋಡಿಕಲ್‌, ಸಂತೋಷ್‌ ಸುವರ್ಣ ಮುಂತಾದವರು ಭಾಗವಹಿಸಿದ್ದರು.

ಸ್ವಚ್ಛತೆ
ಕೆಪಿಟಿ ಎನ್ನೆಸ್ಸೆಸ್‌ ವಿದ್ಯಾರ್ಥಿಗಳು ರಾಜೇಂದ್ರ ಸುಬ್ರಹ್ಮಣ್ಯ ನೇತೃತ‌್ವದಲ್ಲಿ ಏರ್‌ ಪೋರ್ಟ್‌ ರಸ್ತೆ, ಕೆಪಿಟಿ ಗೇಟ್ ಮುಂಭಾಗ ಹಾಗೂ ಪಾದಚಾರಿ ಮಾರ್ಗಗಳನ್ನು ಶುಚಿ ಗೊಳಿಸಿದರು. ವಸಂತಿ ನಾಯಕ್‌ ಮತ್ತು ನಿವೇದಿತ ಬಳಗದ ಸದಸ್ಯರು ಕೆಪಿಟಿಯಿಂದ ಪಾದುವಾ ಹೋಗುವ ಎಡಬದಿಯ ಮಾರ್ಗಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌, ಪೇಪರ್‌ಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು. ಸ್ವಚ್ಛ ಮಂಗಳೂರು ಹಿರಿಯ ಕಾರ್ಯಕರ್ತರು ಕೆಪಿಟಿ ವೃತ್ತದ ಸುತ್ತಮುತ್ತ ಶ್ರಮದಾನ ಕೈಗೊಂಡರು.

ಉಪನ್ಯಾಸಕಿ ಸುಭದ್ರಾ ಭಟ್ ಮತ್ತು ಯುವತಿಯರು ಹೆದ್ದಾರಿಯ ಬದಿಗಳಕಸಗುಡಿಸಿ ಹಸನುಗೊಳಿಸಿದರು. ಏರ್‌ಪೋರ್ಟ್‌ ರಸ್ತೆಯಲ್ಲಿರುವ ಎರಡು ಬಸ್‌ ತಂಗುದಾಣಗಳನ್ನು ವಿದ್ಯಾರ್ಥಿಗಳು ತೊಳೆದು ಸ್ವಚ್ಛಗೊಳಿಸಿದರು. ಇದರೊಂದಿಗೆ ಸುಮಾರು ಎರಡು ಟಿಪ್ಪರ್‌ಗಳಷ್ಟು ಪ್ಲಾಸ್ಟಿಕ್‌ ಕಸವನ್ನು ಹೆಕ್ಕಿ ತೆಗೆದು ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ಹಾಗೇ ವೃತ್ತದಲ್ಲಿ ಮುರಿದು ಬಿದ್ದಿದ್ದ ಮಾರ್ಗಸೂಚಕ ಫಲಕವನ್ನು ಉದಯ ಕೆ.ಪಿ. ಸೌರಜ್‌ ಹಾಗೂ ಕಾರ್ಯಕರ್ತರು ನೀರಿನಿಂದ ತೊಳೆದು ಸ್ವಚ್ಛಗೊಳಿಸಿ, ಸೂಕ್ತ ಸ್ಥಳದಲ್ಲಿ ನಿಲ್ಲಿಸಿದರು. ವೃತ್ತದಲ್ಲಿ ಬೆಳೆದಿದ್ದ ಹುಲ್ಲು ಕತ್ತರಿಸಿ, ಮಣ್ಣು ರಾಶಿಗಳನ್ನೂ ತೆಗೆದು ಸ್ವಚ್ಛಗೊಳಿಸಲಾಯಿತು.

Advertisement

ವ್ಯಾಪಾರಿಗಳಿಗೆ ರಸ್ತೆ ಬದಿಯಲ್ಲಿ ಕಸ ಹಾಕದಂತೆ ಎಚ್ಚರಿಕೆ ನೀಡಿ ಅವರಿಂದಲೇ ಮಳಿಗೆಗಳ ಸುತ್ತ ಸ್ವಚ್ಛ ಮಾಡಿಸಲಾಯಿತು. ಇನ್ನೊಂದೆಡೆ ಸುಧೀರ್‌ ನೊರೋನ್ಹಾ ಮತ್ತು ಪುನೀತ್‌ ಪೂಜಾರಿ ಅವರು ನಗರದ ಕೆಲ ಸ್ಥಳಗಳಲ್ಲಿಟ್ಟ ಹೂಕುಂಡಗಳಲ್ಲಿರುವ ಗಿಡಗಳಿಗೆ ನೀರು ಹಾಕಿ ನಿರ್ವಹಿಸಿದರು. ಹಿಂದೂ ವಾರಿಯರ್ಸ್‌ ತಂಡದ ಶಶಿಕಾಂತ, ಸುಮಿತ್‌ ದೇವಾಡಿಗ, ಲಕ್ಷ್ಮೀಶ್‌ ಶ್ರೀನಿವಾಸ್‌ ಇನ್ನಿತರರು ಭಾಗವ ಹಿಸಿದ್ದರು. ಎಂ.ಆರ್‌.ಪಿ.ಎಲ್‌., ನಿಟ್ಟೆ ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿವೆ.

ಮುಂದುವರಿದ ಕಾರ್ಯ
ಕಳೆದ ರವಿವಾರ ಪಾದುವಾ-ಕೆಪಿಟಿ ಹೆದ್ದಾರಿಯ ಬದಿಗಳಲ್ಲಿ ಅಪಾರ ಪ್ರಮಾಣದಲ್ಲಿ ಬಿದ್ದಿದ್ದ ಕಟ್ಟಡ ತ್ಯಾಜ್ಯ, ಪ್ಲಾಸ್ಟಿಕ್‌ ತ್ಯಾಜ್ಯ ಹಾಗೂ ಇತರ ಕಸವನ್ನು ತೆರವುಗೊಳಿಸಲಾಗಿತ್ತು. ಆದರೆ ಹಿಂದಿನ ವಾರದಲ್ಲಿ ಪೂರ್ಣಪ್ರಮಾಣದಲ್ಲಿ ತ್ಯಾಜ್ಯವನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ಈ ವಾರವೂ ಅದೇ ಜಾಗದಲ್ಲಿ ಶ್ರಮದಾನವನ್ನು ಹಮ್ಮಿಕೊಳ್ಳಲಾಯಿತು. ಅಕ್ಷಿತ್‌ ಅತ್ತಾವರ ಹಾಗೂ ಕಾರ್ಯ ಕರ್ತರು ಎರಡು ಜೆಸಿಬಿ, ನಾಲ್ಕು ಟಿಪ್ಪರ್‌ ಬಳಸಿಕೊಂಡು ಆರು ಟಿಪ್ಪರ್‌ ಕಸವನ್ನು ವಿಲೇವಾರಿ ಮಾಡಿಸಿದರು. ಜತೆಗೆ ಮಣ್ಣಿನ ರಾಶಿಗಳನ್ನು ತೆಗೆಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next