Advertisement

ಗರಿಗಳ ರವಿವಾರ ಆಚರಣೆ, ಕ್ರೈಸ್ತರ ಪವಿತ್ರ ಸಪ್ತಾಹ ಆರಂಭ

03:06 PM Apr 10, 2017 | Team Udayavani |

ಮಂಗಳೂರು/ಉಡುಪಿ: ಎರಡು ಸಾವಿರ ವರ್ಷಗಳ ಹಿಂದೆ ಯೇಸು ಕ್ರಿಸ್ತರು ಜೆರುಸಲೆಮಿಗೆ ಪ್ರವೇಶ ಮಾಡುವಾಗ ಅಲ್ಲಿನ ಜನರು ಸಂಭ್ರಮದಿಂದ ಸ್ವಾಗತಿಸಿದ ಘಟನೆಯನ್ನು ಸ್ಮರಿಸಿ ಕ್ರೈಸ್ತರು ಎ. 9ರಂದು ಗರಿಗಳ ರವಿವಾರ ಆಚರಿಸಿದರು.

Advertisement

ಮಂಗಳೂರಿನಲ್ಲಿ ಬಿಷಪ್‌ ರೈ| ರೆ| ಡಾ| ಅಲೋಶಿಯಸ್‌ ಪಾವ್‌É ಡಿ’ಸೋಜಾ ರೊಜಾರಿಯೋ ಕೆಥೆಡ್ರಲ್‌ನಲ್ಲಿ ಮತ್ತು ಉಡುಪಿ ಬಿಷಪ್‌ ರೈ| ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೋ ತೊಟ್ಟಂ ಸಂತ ಅನ್ನಮ್ಮ ಮಾತೆ ಚರ್ಚ್‌ನಲ್ಲಿ ನಡೆದ ವಿಶೇಷ ಪ್ರಾರ್ಥನೆ ಮತ್ತು ಬಲಿ ಪೂಜೆಯಲ್ಲಿ ಪಾಲ್ಗೊಂಡು ಸಂದೇಶ ನೀಡಿದರು.

ಮಂಗಳೂರಿನಲ್ಲಿ ಕೆಥೆಡ್ರಲ್‌ನ ಧರ್ಮಗುರು ಫಾ| ಜೆ.ಬಿ. ಕ್ರಾಸ್ತಾ, ತೊಟ್ಟಂನಲ್ಲಿ ಧರ್ಮಗುರು ಫಾ| ಫ್ರಾನ್ಸಿಸ್‌ ಕರ್ನೆಲಿಯೊ, ಇತರ ಗುರುಗಳು ಉಪಸ್ಥಿತರಿದ್ದರು. ಎಲ್ಲ ಚರ್ಚ್‌ಗಳಲ್ಲಿ ಸ್ಥಳೀಯ ಧರ್ಮಗುರುಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.

ಆಚರಣೆ ಹೀಗೆ ನಡೆಯಿತು
ಬಲಿ ಪೂಜೆಗೆ ಮೊದಲು ತೆಂಗಿನ ಗರಿಗಳನ್ನು ಚರ್ಚ್‌ ಆವರಣದಲ್ಲಿ ಧರ್ಮಗುರುಗಳು ಆಶೀರ್ವಚಿಸಿದರು. ಬಳಿಕ ಅವುಗಳನ್ನು ಭಾಗವಹಿಸಿದ್ದ ಎಲ್ಲ ಕ್ರೈಸ್ತರಿಗೆ ವಿತರಿಸಲಾಯಿತು. ಅವುಗಳನ್ನು ಹಿಡಿದು ಕ್ರೈಸ್ತರು ಯೇಸು ಕ್ರಿಸ್ತರಿಗೆ ಜೈಕಾರ ಹಾಕುತ್ತಾ ಮೆರವಣಿಗೆಯಲ್ಲಿ ಚರ್ಚ್‌ ಒಳಗೆ ಪ್ರವೇಶಿಸಿದರು. ಅಲ್ಲಿ ಬಲಿ ಪೂಜೆ ನಡೆಯಿತು.

ಯೇಸು ಕ್ರಿಸ್ತರಿಗೆ ಶಿಲುಬೆಯ ಶಿಕ್ಷೆ ವಿಧಿಸುವಲ್ಲಿಂದ ಹಿಡಿದು ಅವರು ಶಿಲುಬೆಗೇರಿ ಮರಣ ಹೊಂದಿ, ದೇಹವನ್ನು ಸಮಾಧಿ ಮಾಡುವ ವರೆಗಿನ ಕಥಾನಕವನ್ನು ಬೈಬಲ್‌ನಿಂದ ವಾಚಿಸಲಾಯಿತು. ಧರ್ಮಗುರು ಪ್ರವಚನ ನೀಡಿದರು.

Advertisement

ಹಿನ್ನೆಲೆ: ಯೇಸು ಕ್ರಿಸ್ತರು ಬೆಥಾನಿಯಾದಿಂದ ದೇವನಗರಿ ಎಂದೇ ಹೇಳಲಾದ ಜೆರುಸಲೆಮಿಗೆ ಪ್ರವೇಶ ಮಾಡುವಾಗ ಅಲ್ಲಿನ ಜನರು “ಒಲಿವ್‌’ ಮರದ ಗರಿಗಳನ್ನು ಹಿಡಿದು ವೈಭವದಿಂದ ಸ್ವಾಗತಿಸಿ ಬರಮಾಡಿಕೊಂಡಿದ್ದರು ಎಂಬ ಉಲ್ಲೇಖ ಬೈಬಲ್‌ನಲ್ಲಿದೆ. ಈ ಹಿನ್ನೆಲೆಯಲ್ಲಿ ಗರಿಗಳ ರವಿವಾರ ಆಚರಿಸಲಾಗುತ್ತದೆ. ಪ್ರಸ್ತುತ ಇಲ್ಲಿ ಒಲಿವ್‌ ಮರದ ಗರಿಗಳ ಬದಲು ತೆಂಗಿನ ಗರಿಗಳನ್ನು ಸಾಂಕೇತಿಕವಾಗಿ ಹಿಡಿದು ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಗರಿಗಳ ರವಿವಾರ ಆಚರಣೆಯೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹ ಆರಂಭಗೊಳ್ಳುತ್ತದೆ.

ಕಾಸರಗೋಡು: ಮಂಗಳೂರು ಧರ್ಮಪ್ರಾಂತಕ್ಕೆ ಒಳಪಟ್ಟ ಕಾಸರಗೋಡು ವಲಯದ ಎಲ್ಲ ಚರ್ಚ್‌ ಹಾಗೂ ಜಿಲ್ಲೆಯ ಇತರ ಚರ್ಚ್‌ಗಳಲ್ಲಿ ಗರಿಗಳ ರವಿವಾರ ವಿಶೇಷ ಪ್ರಾರ್ಥನೆ, ಬಲಿಪೂಜೆಯೊಂದಿಗೆ ನಡೆಯಿತು. ತೆಂಗಿನ ಗರಿಗಳನ್ನು ಹಿಡಿದು ಕ್ರೈಸ್ತರು ಬಲಿ ಪೂಜೆಯಲ್ಲಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next