Advertisement

ಗಡಿ ತಂಟೆ: ಹಿಂದೆ ಸರಿದ ಚೀನ; ಲಡಾಖ್‌ ಬಿಕ್ಕಟ್ಟಿಗೆ ತೇಪೆ ಹಚ್ಚಲು ಮುಂದಾದ ಚೀನದ ರಕ್ಷಣ ಸಚಿವ

07:05 AM May 28, 2020 | mahesh |

ಹೊಸದಿಲ್ಲಿ: ಭಾರತ ಇಟ್ಟ ಒಂದೇ ಒಂದು ಹೆಜ್ಜೆಗೆ ಚೀನದ ಎದೆಯಲ್ಲಿ ನಡುಕ ಹುಟ್ಟಿದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರು ಲಡಾಖ್‌ನ ಅಖಾಡಕ್ಕೆ ಜಿಗಿದು ರಣತಂತ್ರ ರೂಪಿಸುತ್ತಿದ್ದಂತೆಯೇ, ಅತ್ತ ಚೀನ ಬಾಲ ಮುದುರಿಕೊಂಡು ತೆಪ್ಪಗಾಗಿದೆ. “ಭಾರತದ ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಲು ನಾವು ಬದ್ಧರಿದ್ದೇವೆ’ ಎನ್ನುವ ಮೂಲಕ ಚೀನ ತನ್ನ ನಿಗೂಢ ಪೊರೆಗಳನ್ನೆಲ್ಲ ಕಳಚಿಕೊಂಡು, ಗಡಿಬಿಕ್ಕಟ್ಟಿಗೆ ತೇಪೆಹಚ್ಚಲು ಮುಂದಾಗಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರು, ಮಂಗಳವಾರವಷ್ಟೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌, ರಕ್ಷಣ ಸಚಿವ ರಾಜನಾಥ್‌ ಸಿಂಗ್‌, ಮೂರೂ ಪಡೆಗಳ ಮುಖ್ಯಸ್ಥ ಜ| ಬಿ ಪಿನ್‌ ರಾವ ತ್‌ ಹಾಗೂ ಸೇನಾ ಮುಖ್ಯಸ್ಥರೊಂದಿಗೆ ಲಡಾಖ್‌ ಗಡಿಬಿಕ್ಕಟ್ಟಿನ ಬಗ್ಗೆ ಚರ್ಚಿಸಿದ್ದರು. ಮುಖ್ಯವಾಗಿ ಅಜಿತ್‌ ದೋವಲ್‌ ಪಕ್ಕಾ ರಣನೀತಿಯನ್ನು ಸಭೆಯ ಮುಂದಿಟ್ಟಿದ್ದರು. ಈ ಸುದ್ದಿ ಬೀಜಿಂಗ್‌ ತಲುಪುತ್ತಿದ್ದಂತೆಯೇ ಚೀನದ ವಿದೇಶಾಂಗ ಇಲಾಖೆಯ ವಕ್ತಾರ ಝಾವೋ ಲಿಜಿಯಾನ್‌, “ಭಾರತದ ಗಡಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನಾವು ಸಿದ್ಧ’ ಎಂದು ಪತ್ರಿಕಾಗೋಷ್ಠಿ ನಡೆಸಿ ಚೀನದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಅದೇ ಡೋಕ್ಲಾಂ ಟೀಂ
ಚೀನಕ್ಕೆ ನಿಜಕ್ಕೂ ಹೆದರಿಕೆ ಹುಟ್ಟಿಸಿರೋದು, ಮೋದಿ ರಚಿಸಿದ್ದ “ಡೋಕ್ಲಾಂ ತಂಡ’ದ ಬಗ್ಗೆ. 2017ರಲ್ಲೂ ಸಿಕ್ಕಿಂನ ಡೋಕ್ಲಾಮ್‌ ಗಡಿಯಲ್ಲಿ ಚೀನದ ಪೀಪಲ್‌ ಲಿಬರೇಶನ್‌ ಆರ್ಮಿ (ಪಿಎಲ್‌ಎ) ಸುಖಾಸುಮ್ಮನೆ ಗುಟುರು ಹಾಕಿಕೊಂಡು ಮುನ್ನುಗ್ಗಿತ್ತು. ಇದೇ ರೀತಿ ಬಂಕರ್‌, ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು. 73 ದಿನಗಳ ಕಾಲ ಕಗ್ಗಂಟಾಗಿ ಉಳಿದಿದ್ದ ವಿವಾದ‌ಕ್ಕೆ ಆಗ ರಣ ತಂತ್ರ ರೂಪಿಸಿದ್ದೇ ಇದೇ ದೋವಲ್‌ ನೇತೃತ್ವದ ತಂಡ.

ಅಂದು ಅಜಿತ್‌ ಜತೆಯಲ್ಲಿ ಈಗಿನ ಸೇನಾ ಪಡೆಗಳ ಮುಖ್ಯಸ್ಥ ಜ| ಬಿಪಿನ್‌ ರಾವತ್‌, ಆಗಿನ ವಿದೇ ಶಾಂಗ ಕಾರ್ಯ ದರ್ಶಿ, ಈಗಿನ ವಿದೇಶಾಂಗ ಸಚಿವ ಎಸ್‌. ಜಯಶಂಕರ್‌ ಕೂಡ ಇದ್ದರು. ಲಡಾಖ್‌ ಬಿಕ್ಕಟ್ಟಿನ ನಿವಾರಣೆಗೂ ಇದೇ ತಂಡವನ್ನೇ ಮೋದಿ ಮುನ್ನೆಲೆಗೆ ಬಿಟ್ಟಿದ್ದಾರೆ. ಒಂದೆಡೆ ಶಾಂತಿ ಕಾಪಾಡುವಂತೆ ಮೋದಿ ಹೇಳಿದ್ದರೆ, ಇನ್ನೊಂದೆಡೆ ಈ ತಂಡ ಗಡಿಯಲ್ಲಿನ ಕಮಾಂಡರ್‌ಗಳಿಗೆ ಎಲ್ಲ ಸನ್ನಿವೇಶಗಳಿಗೂ ಸಿದ್ಧರಾಗಿ ಎಂದೇ ಖಡಕ್ಕಾಗಿ ಸೂಚಿಸಿದೆ.

ನೇಪಾಲಕ್ಕೂ ಮಂಕು
ಇತ್ತ ಭಾರತ, ಚೀನ ವಿರುದ್ಧವೇ ಸಿಡಿದು ನಿಂತಿರುವ ವೇಳೆಯಲ್ಲೇ ಅತ್ತ ಚೀನದ ಮಾತು ಕೇಳಿ ಗಡಿ ವಿಚಾರದಲ್ಲಿ ಕಾಲು ಕೆದರಿಕೊಂಡು ಬಂದಿದ್ದ ನೇಪಾಲವೂ ಸುಮ್ಮನಾಗಿದೆ. ಪರಿಷ್ಕೃತ ನಕ್ಷೆ ಕುರಿತ ತೀರ್ಮಾನವನ್ನು ಒಂದಷ್ಟು ಕಾಲದವರೆಗೆ ಮುಂದೂಡಲಾಗಿದೆ. ನೇಪಾಲದ ಕಮ್ಯೂನಿಸ್ಟರ ಮನಸ್ಸು ತಣಿಸುವ ಉದ್ದೇಶದಿಂದ ಗಡಿ ತಂಟೆ ಆರಂಭಿಸಿದ್ದ ನೇಪಾಲ ಪ್ರಧಾನಿ ಕೆ.ಪಿ. ಶರ್ಮ ಒಲಿ, ತಮ್ಮದೇ ದೇಶದಲ್ಲಿ ತಮ್ಮದೇ ಪಕ್ಷದಲ್ಲಿ ಬಲ ಸಿಗದಿರುವ ಆತಂಕ ದಿಂದ ಸದ್ಯಕ್ಕೆ ನಕ್ಷೆಯನ್ನು ತಡೆಹಿಡಿದಿದ್ದಾರೆ. ನಕ್ಷೆ ತಿದ್ದುಪಡಿಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಮಂಡನೆ ಮಾಡಲು ಬುಧವಾರ ಅವಕಾಶವಿತ್ತು. ಆದರೆ ಅಂಥ ಯಾವುದೇ ತಿದ್ದುಪಡಿಯನ್ನೂ ನೇಪಾಲ ಕೈಗೊಂಡಿಲ್ಲ.

Advertisement

3 ದಿನಗಳ ಸಭೆ
ಪೂರ್ವ ಲಡಾಖ್‌ನ ಗಡಿಯಲ್ಲಿ ಹೆಚ್ಚಿನ ಭದ್ರತೆ ಒದಗಿಸುವ ಸಂಬಂಧ ಭಾರತೀಯ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ, ಉನ್ನತ ಕಮಾಂಡರ್‌ಗಳ ಜತೆಗೆ ಮೂರು ದಿನಗಳ ಸಭೆ ಆರಂಭಿಸಿದ್ದಾರೆ.

ಚೀನ ಅಧ್ಯಕ್ಷ ಎಚ್ಚರಿಸಿದ್ದು ಭಾರತಕ್ಕಲ್ಲ !
ಚೀನವು ಸುತ್ತಲಿನ ಎಲ್ಲ ರಾಷ್ಟ್ರಗಳ ಜತೆಗೂ  ಕಾಲು ಕೆರೆದು ಜಗಳಕ್ಕೆ ನಿಂತಿದೆ. ಈ ಮಧ್ಯೆ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, “ಸೇನೆಯನ್ನು ಸುಸಜ್ಜಿತ ಗೊಳಿಸಿ, ಯುದ್ಧಕ್ಕೆ ಸಿದ್ಧರಾಗುವ ಅನಿವಾರ್ಯ ಎದುರಾಗಿದೆ. ದೇಶದ ಸಾರ್ವಭೌಮತ್ವವನ್ನು ರಕ್ಷಿಸಲು ನಾವು ಎಂಥ ಸಂದರ್ಭದಲ್ಲೂ ಸಿದ್ಧರಿರಬೇಕು. ಮಿಲಿಟರಿ ಪಡೆ ಹೆಚ್ಚು ತರಬೇತಿಗೊಳ್ಳಬೇಕು’ ಎಂದು ರಕ್ಷಣ ಪಡೆಗಳಿಗೆ ಆದೇಶಿಸಿದ್ದಾರೆ. ಅನಂತರದಲ್ಲಿ ವಿದೇ ಶಾಂಗ ಇಲಾ ಖೆ, ಭಾರತದ ವಿಚಾರದ ಬಗ್ಗೆ ಶಾಂತಿಯ ಮಾತುಕತೆಗಳನ್ನು ಆಡಿದ್ದರಿಂದ ಚೀನದ ಯುದ್ಧಬಾಣ ಬೇರೆ ದೇಶಗಳತ್ತ ತಿರುಗಿದೆ ಎನ್ನುವುದಂತೂ ಸ್ಪಷ್ಟವಾಗಿದೆ. ತನ್ನದೇ ಸುಪರ್ದಿಯಲ್ಲಿರು ವ ಹಾಂಕಾಂಗ್‌, ತೈವಾನ್‌ ಮತ್ತು ಅಮೆರಿಕ ವಿರುದ್ಧ ಎಂಬುದೂ ವ್ಯಕ್ತವಾಗಿದೆ.

ಅಮೆರಿಕ ಮಧ್ಯಪ್ರವೇಶ
ಭಾರತ-ಚೀನ ಬಿಕ್ಕಟ್ಟನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ. ನಾವು ಈಗಾಗಲೇ ಭಾರತ ಮತ್ತು ಚೀನ ಎರಡಕ್ಕೂ ಮಾಹಿತಿ ನೀಡಿದ್ದೇವೆ. ಗಡಿವಿವಾದದ ಬಿಕ್ಕಟ್ಟನ್ನು ಬಗೆಹರಿಸಲು ಅಮೆರಿಕ ಮಧ್ಯಸ್ಥಿಕೆ ವಹಿಸಲು ಸಿದ್ಧವಿದೆ ಎಂದಿದ್ದಾರೆ.

ಅಜಿತ್‌ ಕಂಡರೆ ಚೀನಕ್ಕೇಕೆ ಭಯ?
ಡೋಕ್ಲಾಂ ಕಬಳಿಸಲು ಬಂದಿದ್ದ ಚೀನಕ್ಕೆ, ಅಂದು ಅಜಿತ್‌ ದೋವಲ್‌ ತಕ್ಕ ಶಾಸ್ತಿ ಮಾಡಿ ಕಳಿಸಿದ್ದರು. ಯುದ್ದೋನ್ಮಾದದಿಂದ ಮಾತನಾಡುತ್ತಿದ್ದ ಚೀನ, ವಿವಾದಿತ ಜಾಗ ಅದು ಹೇಗೆ ನಿಮ್ಮದಾಗುತ್ತದೆ? ಎಂದು ಪ್ರಶ್ನಿಸಿತ್ತು. ಅದಕ್ಕೆ ಅಜಿತ್‌, ಎಲ್ಲ ಪ್ರದೇಶಗಳೂ ಪೂರ್ವ ನಿಯೋಜಿತವಾಗಿ ಚೀನದ್ದು ಆಗಿಬಿಡುತ್ತಾ? ಅಂತ ಖಡಕ್‌ ಆಗಿ ಕೇಳಿದ್ದರು. ಅಲ್ಲದೆ ಭಾರತ, ಭೂತಾನ್‌, ಚೀನ- ಈ ಮೂರೂ ರಾಷ್ಟ್ರಗಳಿಗೆ ಸೇರಿದ್ದ ಜಾಗದಲ್ಲಿ ಚೀನ ರಸ್ತೆ ನಿರ್ಮಿಸಿದ್ದನ್ನೂ ಅಜಿತ್‌ ಖಂಡಿಸಿದ್ದರು. ಡೋಕ್ಲಾಂ ಬದಲಾಗಿ 500 ಚ.ಕಿ.ಮೀ. ಜಾಗ ಕೊಡ್ತೀವಿ ಎಂದು ಚೀನ ಆಫ‌ರ್‌ ಕೊಟ್ಟಾಗ, ಅಜಿತ್‌ ಮಿಲಿಟರಿ ಭಾಷೆಯಲ್ಲಿ ಮಂಗಳಾರತಿ ಮಾಡಿ ಬಿಸಿ ಮುಟ್ಟಿಸಿದ್ದರು. ಅದರ ಅನಂತರವಷ್ಟೇ ಚೀನ ಸೇನೆ ಅನಿವಾರ್ಯವಾಗಿ ಹಿಂದೆ ಹೆಜ್ಜೆ ಇಟ್ಟಿತ್ತು. ಚೀನಕ್ಕೆ ಈಗ ಅದೇ ಭಯ ಶುರುವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next