Advertisement

ಜಾತಕದಲ್ಲಿ ವರ್ಚಸ್ಸು, ವ್ಯಕ್ತಿತ್ವಗಳ ಬಿಂಬಗಳು

10:20 PM May 20, 2016 | |

ಜಾತಕ ಶಾಸ್ತ್ರ ಬಹು ಸಂಕೀರ್ಣವಾದದ್ದು. ಇರುವುದು ಕೇವಲ ಹನ್ನೆರಡು ಮನೆಗಳೇ ಆದರೂ ಜಾತಕ ಕುಂಡಲಿಯಲ್ಲಿ ಅವು ವಿಸ್ತಾರವಾದ ವಿಚಾರಗಳನ್ನು ಒಬ್ಬ ವ್ಯಕ್ತಿಯ ಕುರಿತಾಗಿ ಬಿಚ್ಚಿಡುತ್ತವೆ. ಬರೀ ಈ ಜನ್ಮವೊಂದನ್ನೇ ಅಲ್ಲ ಜಾತಕದಲ್ಲಿರುವ ಐದನೇ ಭಾವವಾದ ಪೂರ್ವಪುಣ್ಯ ಸ್ಥಾನವನ್ನು ವಿಶ್ಲೇಷಿಸುತ್ತಾ ಜಾತಕ ಮೂರು, ಆರು, ಎಂಟು ಹಾಗೂ ಹನ್ನೆರಡನೇ ಭಾವಗಳನ್ನು ಐದನೇ ಭಾವದ ಜೊತೆಗೆ ಪೂರಕವಾಗಿ ವಿಶ್ಲೇಷಣೆ ನಡೆಸಿದ್ದಲ್ಲಿ ಒಬ್ಬ ವ್ಯಕ್ತಿಯ ಹಿಂದಿನ ಹಾಗೂ ಮುಂದಿನ ಜನ್ಮಗಳ ಬಗೆಗೂ ಒಂದು ಪುಟ್ಟ ಚೌಕಟ್ಟನ್ನು ಕಟ್ಟಿಕೊಡಬಹುದು. ಆದರೆ ಹಿಂದಿನ ಜನ್ಮವನ್ನಾಗಲೀ ಮುಂದಿನ ಜನ್ಮವನ್ನಾಗಲೀ ತಿಳಿದು ಪ್ರಯೋಜನವೇನಿದೆ? ಎಂಬುದನ್ನು ಗ್ರಹಿಸಿದರೆ ಈ ವಿಶ್ಲೇಷಣೆಗಳಿಗೆ ಅರ್ಥವಿಲ್ಲ ಎಂದೂ ಅನ್ನಬಹುದು. ಆದರೂ ಹಲವರಿಗೆ ಇದನ್ನು ತಿಳಿಯುವ ಕುತೂಹಲ ಅಧಿಕವಾಗಿರುತ್ತದೆ. 

Advertisement

ಹಿಂದಿನ ವಾರ ವರ್ಚಸ್ಸು ಹಾಗೂ ವ್ಯಕ್ತಿತ್ವದ ವಿಚಾರವನ್ನು ಈ ಅಂಕಣದಲ್ಲಿ ಜನ್ಮಕುಂಡಲಿಯ ಹಿನ್ನೆಲೆಯಲ್ಲಿ ವಿವರಿಸಲಾಗಿತ್ತು. ಬಹಳಷ್ಟು ಜನ ತಮ್ಮ ವರ್ಚಸ್ಸು ಹಾಗೂ ವ್ಯಕ್ತಿತ್ವಗಳ ಕುರಿತು ಅವು ಹಾರ್ದಿಕವಾದ ಸಮತೋಲನ ಹಾಗೂ ವಿಶೇಷ ಸಮತೋಲನ ಒಂದನ್ನು ಪಡೆದಿರಬೇಕು ಎಂಬ ಒಲವನ್ನು ಹೊಂದಿದ್ದರು ಎಂಬುದು ಅವರ ಮಾತಿನಲ್ಲಿ ಸ್ಪಷ್ಟವಾಗಿತ್ತು. ನಿಜ ಒಬ್ಬನ/ಒಬ್ಬಳ ವ್ಯಕ್ತಿತ್ವಕ್ಕೆ ದೊಡ್ಡ ತೂಕ ಯಾವಾಗಲೂ ಇದ್ದೇ ಇದೆ. ಅದನ್ನು ಕಾಪಾಡಿಕೊಳ್ಳು ಸದಾ ಬಹುತೇಕ ಎಲ್ಲರೂ ಅವಿರತವಾದ ಆಸೆಯನ್ನು ಹೊಂದಿರುತ್ತಾರೆ. ಈ ಕುರಿತಾಗಿ ಅಂತಃಕರಣ ಪೂರ್ವಕವಾಗಿ ಪ್ರಯತ್ನಿಸುತ್ತಾರೆ. ಆದರೂ ಅದೃಷ್ಟ ಕೈಕೊಡುತ್ತದೆ. 

ಹಲವಾರು ಜನ ಸಂಪರ್ಕಿಸಿ ತಮ್ಮ ವ್ಯಕ್ತಿತ್ವದಲ್ಲಿ ಏನೋ ದೋಷವಿದೆ ಇದನ್ನು ಸರಿಪಡಿಸಲು ಸಾಧ್ಯವೇ ಎಂದು ತಮ್ಮ ಬಗೆಗೆ, ತಮ್ಮ ವ್ಯಕ್ತಿತ್ವದ ಬಗೆಗೆ ಅನುಮಾನ ಹೊಂದಿದ್ದು ಅವರು ಮಾತನಾಡಿ ವಿಚಾರಿಸುತ್ತಿದ್ದಾಗ ಸ್ಪಷ್ಟವಾಗಿತ್ತು.  ಒಬ್ಬಳು ಹೆಣ್ಣು ಮಗಳಂತೂ ತಾನು ಐಶ್ವರ್ಯ ರೈ ರೀತಿಯಲ್ಲಿ ಸಿನಿಮಾ ರಂಗದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು ಇದು ನನ್ನ ಜಾತಕದಲ್ಲಿ ಇದ್ದಿರುವ ಸೌಭಾಗ್ಯವಾಗಿರಬಹುದೇ ಎಂಬ ಕಳಕಳಿ ಹಾಗೂ ಅತೀವವಾದ ಮಹತ್ವಾಕಾಂಕ್ಷೆಯ ವಿಚಾರಗಳನ್ನು ಮುಂದಿರಿಸಿ ಕೇಳಿದ್ದಳು. 

ಯಾವಾಗಲೂ ಒಬ್ಬರನ್ನು ಅನುಕರಿಸಬೇಡಿ
ಜಾತಕ ಕುಂಡಲಿಯ ವಿಚಾರ ಒಬ್ಬ ವ್ಯಕ್ತಿಯಿಂದ ಒಬ್ಬ ವ್ಯಕ್ತಿಗೆ ಸಂಪೂರ್ಣವಾಗಿ ಬೇರೆಯದೇ ಆಗಿರುತ್ತದೆ. ಹೀಗಾಗಿ ಯಾರನ್ನೂ ಅನುಕರಿಸಬೇಡಿ. ಅನುಕರಣೆಗೆ ಮುಂದಾಗಿ ಹೋದರೆ ವೈಫ‌ಲ್ಯಕ್ಕೆ ತುಂಬಾ ಅವಕಾಶಗಳಿರುತ್ತದೆ. ಅಮಿತಾಬ್‌ ಬಚ್ಚನ್‌ ಮಹಾತ್ಮ ಗಾಂದಿಯಾಗಲು ಸಾಧ್ಯವಿಲ್ಲ. ಸಚಿನ್‌,ದ್ರಾವಿಡ್‌ ಆಗಲು ಸಾಧ್ಯವಿಲ್ಲ. ದ್ರಾವಿಡ್‌ 
ಪ್ರಧಾನರಾಗಬೇಕಾದರೆ ತೆಂಡೂಲ್ಕರ್‌ ಅವರಂತೆ ಶತಕಗಳ ಬೆನ್ನು ಹತ್ತುವ ಆಯಾಸ ಪೂರ್ಣ ಕೆಲಸ ಮಾಡಬೇಕಿತ್ತು. ತೆಂಡೂಲ್ಕರ್‌ ದ್ರಾವಿಡರಂತೆ ಗೋಡೆಯಾಗುವ ಪಾಡು ಪಡಬೇಕಿದ್ದರೆ ಇಷ್ಟೊಂದು ಶತಕಗಳನ್ನು ಸಿಡಿಸಲು ಸಾಧ್ಯವಾಗುತ್ತಿರಲಿಲ್ಲ. ಇಂದಿರಾಗಾಂಧಿ ತುರ್ತು ಪರಿಸ್ಥಿತಿಯನ್ನು ಹೇರಿದಾಗ ಅವರ ಮನಃಸ್ಥಿತಿ ರೂಪರೇಷೆಗಳು ಅಂಥದ್ದೊಂದು ಜೂಜನ್ನು ನಿರ್ವಹಿಸುವ ಸಂಕಲ್ಪ ಬಲಕ್ಕೆ ಮನಸ್ಸು ಬದ್ಧಗೊಂಡಿತ್ತು. ನರಸಿಂಹರಾವ್‌ ಪ್ರಧಾನಿಯಾದಾಗ ಬಾಬ್ರಿ ಮಸೀದಿ ಉರುಳಿದರೂ ಅದು ಕಾಂಗ್ರೆಸ್‌ಗೆ ವಿರೋಧವಾಗುವ ಪರಿಸ್ಥಿತಿಯನ್ನೇ ನಿರ್ಮಿಸುವಂಥಾ ರೀತಿಯಲ್ಲಿತ್ತು. ಅದು ಹೇಗೆ ಎಂಬುದನ್ನು ಈ ಅಂಕಣದಲ್ಲಿ ವಿಶ್ಲೇಷಿಸುವುದು ಸೂಕ್ತವಾಗಲಾರದು. ಒಟ್ಟಿನಲ್ಲಿ ಆಯಾ ವ್ಯಕ್ತಿಗಳು ಇರುವ ಕಾಲ ವರ್ತಮಾನ ಗತಿ, ಸ್ಥಿತಿ ಅನಿವಾರ್ಯವಾಗಿ ತೊಡಗಿಕೊಳ್ಳಬೇಕಾದ ಒತ್ತಡಳು ಕೂಡಾ ಒಬ್ಬನ ವ್ಯಕ್ತಿತ್ವವನ್ನು, ವರ್ಚಸ್ಸನ್ನು ಎತ್ತಿ ಸಂಭ್ರಮಿಸುವ, ಪೂರ್ತಿ ಬುಡಮೇಲು ಮಾಡುವ ಮಾತೃವಾತ್ಸಲ್ಯವನ್ನು ವಿಷದ ಬಟ್ಟಲಲ್ಲಿ ವಿಷ ಕುಡಿಸಿ ನಿರ್ನಾಮ ಮಾಡುವ ರಾಕ್ಷಸತ್ವವನ್ನು ನಿರ್ಮಿಸುತ್ತದೆ. ಹೀಗಾಗಿ ಯಾರೇ ಇರಲಿ ತಾನು ಇನ್ನೊಬ್ಬನಂತ ಇನ್ನೊಬ್ಬಳಂತೆ ಆಗುತ್ತೇನೆ ಎಂದು ಸಂಕಲ್ಪ ಮಾಡುವುದು ಬೇಡ. ನಾನು ವಿಶಿಷ್ಟವಾದ ನೆಲೆಯಲ್ಲಿ ಸಾತ್ವಿಕತೆಯೊಂದಿಗೆ ನಾನೇ ಆಗಿ ರೂಪಾಂತರಗೊಳ್ಳುತ್ತೇನೆ ಎಂಬುದನ್ನೇ ಪ್ರಧಾನವಾಗಿಸಿಕೊಳ್ಳುವುದು ಸೂಕ್ತ. 

ಜಾತಕ ಕುಂಡಲಿಯ ಎರಡನೇ ಭಾವವೂ ಪ್ರಧಾನವಾಗಿದೆ 
ಮನಸ್ಸನ್ನು ನಿಗ್ರಹಿಸಲು ತೂಕವನ್ನಾಗಲೀ, ತುಕ್ಕನ್ನಾಗಲೀ ಮನಸ್ಸಿನ ಮೇಲೆ ಉಂಟು ಮಾಡಲು ಚಂದ್ರನೇ ಮುಖ್ಯ ಕಾರಣನಾಗಿರುತ್ತಾನೆ. ಚಂದ್ರನ ಮೂಲಕವಾದ ಮನೋವೇದಿಕೆಯ ಮೇಲಿನ ಏರುಪೇರುಗಳನ್ನು, ಸಂಪನ್ನತೆಗಳನ್ನು ಕುಜ ಬುಧ ಹಾಗೂ ರವಿ ಗ್ರಹಗಳು ನಿಯಂತ್ರಿಸುವ ಶಕ್ತಿಯನ್ನು ಹೆಚ್ಚಾಗಿ ಮಾಡುತ್ತವೆ. ಆದರೆ ವಿವೇಚನೆ ಎಂಬುದನ್ನು ಸರಿಯಾದ ಕ್ರಮದಲ್ಲಿ ಬಳಸಿಕೊಳ್ಳಬೇಕಾದರೆ ಮಾತನ್ನು ಯುಕ್ತವಾಗಿ ಆಡುವ, ಬೇಕಾಬಿಟ್ಟಿ ಮಾತನಾಡುವುದನ್ನು ತಡೆಯುವ ವಿಚಾರದಲ್ಲಿ ತರ್ಕವನ್ನು ಉಪಯೋಗಿಸಲೇ ಬೇಕು. ಹೀಗಾಗಿ ಮಾತಿನ ಸ್ಥಾನ  ಇದು ಒಬ್ಬರ ಜಾತಕದಲ್ಲಿ ಎರಡನೇ ಮನೆಯಾಗಿರುತ್ತದೆ. ಹಾಗಾಗಿ ಜಾತಕ ಕುಂಡಲಿಯಲ್ಲಿ ಪ್ರಾಧಾನ್ಯತೆ ಪಡೆದಿರುತ್ತದೆ. ಹಾಗೆಂದು ಕೇವಲ ಮೂಕನಾಗಿ ಆಡಬೇಕಾದ ಮಾತನ್ನು ಆಡದಿರುವುದಲ್ಲ. ಒಂದು ಮಾತಿದೆ. ನಮ್ಮ ವ್ಯವಹಾರ ಹಾಗೂ ಬದುಕಿನ ಓಟದಲ್ಲಿ ಮಾತುಬೆಳ್ಳಿ ಹಾಗೂ ಮೌನ ಬಂಗಾರ. ಆದರೆ ಎಲ್ಲಾ ಕಾಲಕ್ಕೂ ಇದು ಸೂಕ್ತವಲ್ಲ. ಮಾತು ಬಂಗಾರವಾಗುವ ವಿಚಾರವೇ ಯಶಸ್ಸು ಪಡೆದು ಜೀವನವನ್ನು ಸಾರ್ಥಕ ಪಡಿಸಿಕೊಂಡವರ ಶೇ.90 ಮಿಕ್ಕು ಉದಾಹರಣೆಗಳನ್ನು ಹೇಳಬಹುದು.

Advertisement

 ಒಟ್ಟಾರೆಯಾಗಿ ಸೂರ್ಯನಿರಲಿ ಅಥವಾ ಇನ್ನಿತರ ಗ್ರಹಗಳಿರಲಿ ಅವು ಎಲ್ಲಾ ಸಂದರ್ಭಗಳಲ್ಲೂ ಒಳ್ಳೆಯವರೇ ಆಗಿರುವುದಿಲ್ಲ. ಹಾಗೆಯೇ ಕೆಟ್ಟದ್ದನ್ನು ಮಾಡಲು ಹೋಗುವುದೇ ಈ ಗ್ರಹಗಳ ಎಲ್ಲಾ ಕಾಲದ ಕೆಲಸವೂ ಅಲ್ಲ. ನಾವು ಹುಟ್ಟಿದ ವೇಳೆಯಲ್ಲಿನ ಜಾತಕ ಕುಂಡಲಿ ನಮ್ಮ ಹಿಂದಿನ ಜನ್ಮದಲ್ಲಿ ನಾವು ಶೇಖರಿಸಿಟ್ಟ ಬ್ಯಾಂಕ್‌ ಬ್ಯಾಲೆನ್ಸ್‌ನಂತೆ ಎಂದೆನ್ನಬಹುದು. ಅದು ಹೇಗಿದೆ? ಎಷ್ಟಿದೆ? ಅದು ಸಾತ್ವಿಕ ಬ್ಯಾಲೆನ್ಸೋ? ಕಪ್ಪುಹಣದ ಹಾಗೆ ಸಾತ್ವಿಕವಲ್ಲಧ್ದೋ? ನಮ್ಮ ಕರ್ಮಫ‌ಲದ ಮೇಲೆ ಅವಲಂಬಿತ. ನಮ್ಮ ಇಚ್ಚಾಶಕ್ತಿಯನ್ನು ಪ್ರದರ್ಶಿಸಲು ಸಾಧ್ಯವಾಗುವ ಹಾಗೆ ಜಾತಕದಲ್ಲಿನ ಲಗ್ನಾಧಿಪತಿ ಹಾಗೂ ನಮ್ಮ ಮಾತಿನ ಭಾವದ ಅಧಿಪತಿಗಳು ಮಾತಿನ ಭಾವದಲ್ಲಿರುವ ಗ್ರಹಗಳು ನಮಗೆ ಜೀವನದ ಪ್ರತಿಕ್ಷಣದಲ್ಲೂ ವಿಭಿನ್ನವಾದ ಅವಕಾಶಗಳನ್ನು ಒದಗಿಸುತ್ತವೆ. ಆಗ ಕರಿಯನೆಂಬ ಕಾರಣಕ್ಕಾಗಿ ವಾಹನದಿಂದ ಹೊರದೂಡಿಸಲ್ಪಟ್ಟ ಮೋಹನದಾಸ ಕರಮಚಂದ್‌ ಗಾಂಧಿ ಮಹಾತ್ಮರಾಗುತ್ತಾರೆ.

ಬಿದಿರ ಕೋಲಿನಂತೆ ಪೇಲವವಾಗಿದ್ದೀಯ ಎಂದೆನಿಸಿಕೊಂಡ ಅಮಿತಾಬ್‌ ಬಚ್ಚನ್‌ ಸೂಪರ್‌ ಸ್ಟಾರ್‌ ಆಗುತ್ತಾರೆ. ತರಗೆಲೆಗಳಂತೆ ವಿಕೆಟ್‌ ಉರುಳಿದರೂ ದ್ರಾವಿಡ್‌ ರಂಥವರು ಕಾಪಾಡುವ ಗೋಡೆಗಳಾಗುತ್ತಾರೆ. ಬೆಸ್ತರ ಮನೆಯಲ್ಲಿ ಹುಟ್ಟಿದ ಅಬ್ದುಲ್‌ ಕಲಾಂ ಪ್ರತಿ ಭಾರತೀಯನ ಕೃತಜ್ಞತೆಗೆ ಪಾತ್ರರಾಗುತ್ತಾರೆ. 

ಅನಂತ ಶಾಸ್ತ್ರೀ 

Advertisement

Udayavani is now on Telegram. Click here to join our channel and stay updated with the latest news.

Next