Advertisement

ಕಾವೇರಿ ಕುಡಿಯುವ ನೀರು ಸರಬರಾಜು ಸ್ಥಗಿತ, ಪರದಾಟ

09:15 PM May 11, 2019 | Lakshmi GovindaRaj |

ಸಂತೆಮರಹಳ್ಳಿ: ಕಳೆದ ಒಂದು ವಾರದಿಂದ ಕಾವೇರಿ ಕುಡಿಯುವ ನೀರಿನ ಪೂರೈಕೆ ಮಾಡುವ ಘಟಕಕ್ಕೆ ಪೂರೈಕೆಯಾಗುವ ಪೈಪ್‌ ಲೈನ್‌ಗಳು ಕೆಲವು ಕಡೆ ಸೋರಿಕೆಯಾಗುತ್ತಿದೆ. ಈ ಕಾರಣ ಪಟ್ಟಣಕ್ಕೆ ನೀರು ಸ್ಥಗಿತಗೊಂಡಿದ್ದು, ಇದರಿಂದ ಕೆಲವು ಬಡಾವಣೆಯ ನಿವಾಸಿಗಳು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಪಟ್ಟಣಕ್ಕೆ ಕಾವೇರಿ ನದಿಯ ಮೂಲಕ ಕುಡಿವ ನೀರು ಪೂರೈಕೆಯಾಗದೆ ಕೆಲವು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಕಾವೇರಿ ನದಿಯಿಂದ ಪೈಪ್‌ಲೈನ್‌ ಮೂಲಕ ನೀರನ್ನು ತರಲಾಗುತ್ತದೆ. ಇದಕ್ಕೆ ಉತ್ತಂಬಳ್ಳಿ ಗ್ರಾಮದಲ್ಲಿ ಶುದ್ಧ ನೀರನ್ನು ಪೂರೈಸಲು ಉದ್ದೇಶದಿಂದ 2011 ರಲ್ಲಿ ಕರ್ನಾಟಕ ಜಲ ಮಂಡಲಿ ವತಿಯಿಂದ 3.54 ದಶಲಕ್ಷ ಲೀ. ಸಾಮರ್ಥ್ಯದ ನೀರು ಶುದ್ಧೀಕರಣ ಘಟಕವನ್ನು ಆರಂಭಿಸಲಾಗಿದೆ.

ಇಲ್ಲಿಂದಲೇ ಪಟ್ಟಣಕ್ಕೆ ನೀರು ಪೂರೈಕೆಯಾಗುತ್ತಿದೆ. ಆದರೆ ಕಳೆದ ಒಂದು ವಾರದಿಂದ ಕಾವೇರಿ ನದಿಯ ಮೂಲಕ ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆ ಮಾಡುವ ನಿಟ್ಟಿನಲ್ಲಿ ಮುಳ್ಳೂರು ಘಟಕದ ಮೂಲಕ ಉತ್ತಂಬಳ್ಳಿ, ಮಾಂಬಳ್ಳಿ, ಮದ್ದೂರು, ಯರಿಯೂರು ಗ್ರಾಮಗಳಲ್ಲಿ ಹಾದು ಬರುವ ಕುಡಿಯುವ ನೀರಿನ ಪೈಪ್‌ ಲೈನ್‌ ಒಡೆದು ಹೋಗಿದೆ.

ಇದರಿಂದ ಪಟ್ಟಣದಲ್ಲಿ ನೀರಿನ ಸಮಸ್ಯೆ ಅಧಿಕವಾಗಿದೆ. ಇದನ್ನು ರಿಪೇರಿ ಮಾಡಿಸುವ ಗೋಜಿಗೆ ಯಾರೂ ಹೋಗಿಲ್ಲ. ಇದರಿಂದ ಬಡವಾಣೆಗೆ ಪೂರೈಕೆಯಾಗುವ ನೀರು ಮದ್ಯದಲ್ಲಿಯೇ ಪೊಲಾಗುತ್ತಿದೆ. ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂಬುದು ಬಡಾವಣೆ ನಿವಾಸಿಗಳು ಆರೋಪವಾಗಿದೆ.

ಮೂಲಭೂತ ಸೌಲಭ್ಯ ಕಲ್ಪಿಸಿ: ಘಟಕದ ಸುತ್ತಲೂ ಕಾಂಪೌಂಡ್‌ ವ್ಯವಸ್ಥೆಯಿಲ್ಲ. ಈ ಸ್ಥಳವು ಹಾವು ಚೇಳು, ಕ್ರಿಮಿಕೀಟಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ನೀರು ಸರಬರಾಜಾಗುವ ಸ್ಥಳಗಳಲ್ಲಿ ಪಾಚಿ ಕಟ್ಟಿಕೊಂಡಿದೆ. ಗಿಡಗಂಟಿಗಳು ಬೆಳೆದಿದೆ. ಶುದ್ಧವಾದ ಕುಡಿವ ನೀರಿನ ಘಟಕದಿಂದ ಕೆಲವು ವೇಳೆ ಹುಳ, ಕಸಕಡ್ಡಿ ಸೇರಿದಂತೆ ಇನ್ನಿತರ ಕಲುಷಿತ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳಿವೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಬೇಕಾಗಿದೆ ಎಂದು ಸಾರ್ವಜನಿಕರ ಒತ್ತಾಯವಾಗಿದೆ.

Advertisement

ಕುಡಿಯುವ ನೀರಿಗೆ ಕ್ರಮ: ಪಟ್ಟಣಕ್ಕೆ ಪೂರೈಕೆಯಾಗುವ ಕುಡಿಯುವ ನೀರಿನ ಘಟಕದಿಂದ ಹಾದು ಹೋಗಿರುವ ಉತ್ತಂಬಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಕೆಲಸ ನಡೆಯುವ ಸ್ಥಳದಲ್ಲಿ ಕಾವೇರಿ ನೀರಿನ ಪೈಪ್‌ ಲೈನ್‌ ಒಡೆದು ಹೋಗಿದೆ. ಇದರಿಂದ ನೀರಿನ ಪೂರೈಕೆಯಲ್ಲಿ ವಿಳಂಬವಾಗಿದೆ. ಮತ್ತೆ ಮಾಂಬಳ್ಳಿ, ಯರಿಯೂರು, ಮದ್ದೂರು ಗ್ರಾಮಗಳಲ್ಲಿ ಹೊಸದಾಗಿ ಪೈಪ್‌ ಲೈನ್‌ ಜೋಡಿಸಲಾಗುತ್ತಿದೆ. ಈ ಕಾಮಗಾರಿಯು 2 ದಿನಗಳಲ್ಲಿ ಮುಗಿಸಿ ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಪ.ಪಂ.ಆರೋಗ್ಯಾಧಿಕಾರಿ ಮಹೇಶ್‌ಕುಮಾರ್‌ ಹೇಳಿದರು.

ಕುಡಿವ ನೀರನ ಸಮಸ್ಯೆ ಉಲ್ಬಣಗೊಳ್ಳಲು ಅಧಿಕಾರಿಗಳು ಬೇಸಿಗೆ ಸಮಯದಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳದಿರುವುದೇ ಮುಖ್ಯ ಕಾರಣ. ಈ ಸಂಬಂಧಪಟ್ಟ ಮೇಲಧಿಕಾರಿಗಳು ಕೂಡಲೇ ಕ್ರಮ ವಹಿಸಿ ಕುಡಿಯುವ ನೀರಿನ ಪೂರೈಕೆಯಾಗುವ ನಿಟ್ಟಿನಲ್ಲಿ ಮುಂದಾಗಬೇಕು
-ನಂಜುಂಡ ಬಡಾವಣೆ ನಿವಾಸಿ

* ಫೈರೋಜ್‌ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next