Advertisement

ಜಾತಿ-ಧರ್ಮದ ಸಂಘರ್ಷ ಹೆಚ್ಚುತ್ತಿದೆ: ರಂಭಾಪುರಿ ಶ್ರೀ ವಿಷಾದ

02:24 PM Aug 18, 2017 | |

ಕಡೂರು: ಧರ್ಮ ಮತ್ತು ಜಾತಿಗಳ ಮಧ್ಯೆ ಇಂದು ಸಂಘರ್ಷ ಹೆಚ್ಚುತ್ತಿದೆ ಎಂದು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ವಿಷಾದ ವ್ಯಕ್ತಪಡಿಸಿದರು. ಪಟ್ಟಣದ ಸಾಣೆಹಳ್ಳಿ ಆರಾಧ್ಯರವರ ಮನೆಯಲ್ಲಿ ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಧರ್ಮ,ಜಾತಿಗಳ ಮಧ್ಯೆ ನಡೆಯುತ್ತಿರುವ ಸಂಘರ್ಷದಿಂದ ಎಲ್ಲರೂ ಹೊರ ಬರಬೇಕು. ಶಾಂತಿ ಭಾವೈಕ್ಯತೆಯಿಂದ ಮುನ್ನೆಡೆದರೆ ಭವಿಷ್ಯವನ್ನು ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಕಡೂರಿನಲ್ಲಿ ನಡೆಯಲಿರುವ ಶರನ್ನವರಾತ್ರಿ ದಸರಾ ಮಹೋತ್ಸವವು ಶಾಂತಿ, ಭಾವೈಕ್ಯತೆ ಸಾರುವ ಸಮಾರಂಭ ಇದಾಗಲಿದೆ ಎಂದರು. 

Advertisement

ಶ್ರೀ ರಂಭಾಪುರಿ ಪೀಠದ ಪರಂಪರೆಯಲ್ಲಿ ಶರನ್ನವರಾತ್ರಿ ದಸರಾ ಮಹೋತ್ಸವ ವಿಶೇಷ ಪ್ರಾಧಾನ್ಯತೆ ಪಡೆದಿದೆ. 9 ದಿನಗಳ ಕಾಲ ಶಕ್ತಿಯ ಆರಾಧನೆ ನೆರವೇರಿಸಿ ಕೊನೆಯ ದಿನ ವಿಜಯದಶಮಿ ಹಬ್ಬದ ಆಚರಣೆ ನಡೆಯಲಿದೆ. 10 ದಿನಗಳ ಕಾಲ ಧಾರ್ಮಿಕ, ಸಾಮಾಜಿಕ, ರಚನಾತ್ಮಕ ಚಿಂತನೆಗಳು ನಡೆಯಲಿದ್ದು, ವಿದ್ವಾಂಸರು, ವಾಗ್ಮಿಗಳು, ಗುರುಗಳು, ಕವಿಗಳು, ರಾಜಕಾರಣಿಗಳು ಪಾಲ್ಗೊಳ್ಳುವರು. ಕೊನೆಯ ದಿನ ಜಗದ್ಗುರುಗಳ ಶುಭಾಶಿರ್ವಾದದ ಸಂದೇಶದೊಂದಿಗೆ ಶರನ್ನವರಾತ್ರಿ ಸಂಪನ್ನವಾಗಲಿದೆ ಎಂದರು. 

1992ರಲಿ ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯ ನಿಡಗುಂದಿಯಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ದೊರಕಿದ್ದು, ಅಂದಿನಿಂದ ಇಲ್ಲಿಯವರೆಗೆ ಪ್ರತಿವರ್ಷ ದಸರಾ ಮಹೋತ್ಸವವನ್ನು ಭಕ್ತರು ನಡೆಸುತ್ತಾ ಬಂದಿದ್ದಾರೆ ಎಂದು ತಿಳಿಸಿದರು. ಕಡೂರು ಪಟ್ಟಣದಲ್ಲಿ ( ಸೆ.21 ರಿಂದ 30ರವರೆವಿಗೆ ) 26 ನೇ ದಸರಾ ಮಹೋತ್ಸವ ನಡೆಯಲಿದೆ. ಮಹೋತ್ಸವವು ಜಾತ್ಯತೀತವಾಗಿ, ಪಕ್ಷಾತೀತವಾಗಿ ನಡೆಯುವಂತೆ ಸಮಾಜದ ಎಲ್ಲ ವರ್ಗದವರು, ಸಮುದಾಯದವರು ಸಕ್ರಿಯವಾಗಿ ಭಾಗವಹಿಸುವ ಅವಕಾಶವಿದೆ. ಲೋಕಕಲ್ಯಾಣಕ್ಕಾಗಿ 10 ದಿನಗಳ ಕಾಲ ಬೆಳಗ್ಗೆ ಗುರುಗಳಿಂದ ಇಷ್ಟಲಿಂಗ ಪೂಜೆ ನಡೆಯಲಿದೆ. ಭಕ್ತರಿಗೆ ಧಾರ್ಮಿಕ ಸಂಸ್ಕಾರ ನೀಡುವ ಕಾರ್ಯಕ್ರಮ ಇದಾಗಿದೆ ಎಂದರು. 

ಶಿವನಿಲ್ಲದ ಶಕ್ತಿಯಾಗಲು, ಶಕ್ತಿಇಲ್ಲದ ಶಿವನಾಗಲು ಯಾರು ಬಯಸುವುದಿಲ್ಲ “ಶಿವಶಕ್ತಿ’ ಯಿಂದ ಜಗತ್ತು ನಿರ್ಮಾಣಗೊಂಡಿದೆ. ಆಧುನಿಕ, ವೈಚಾರಿಕತೆಯ ಯುಗದಲ್ಲಿ ಸಂಪ್ರದಾಯ ಪರಂಪರೆ ಉಳಿಸಿಬೆಳೆಸುವ ಜವಾಬ್ದಾರಿ ಪೀಠಕ್ಕೆ ಸೇರಿದೆ. ಆದ್ದರಿಂದ ಶಾಂತಿ ನೆಮ್ಮದಿಯ
ಬದುಕಿಗೆ ಆಧ್ಯಾತ್ಮದ ಹಸಿವು ಇಲ್ಲದೆ ಹೋದರೆ ಜೀವನ ನಿರರ್ಥಕ. ಜೀವನ ವಿಕಾಸಕ್ಕೆ ಧರ್ಮ ದಿಕ್ಸೂಚಿಯಾಗಿದ್ದು ಸನ್ಮಾರ್ಗದಲ್ಲಿ ಕರೆದೊಯ್ಯುವ ಪಥವಾಗಿದೆ. ವೀರಶೈವ ಧರ್ಮ ಆಚಾರ ವಿಚಾರ ಪ್ರಧಾನ ಧರ್ಮವಾಗಿದ್ದು ಸಾಮಾಜಿಕ ಸಂವಿಧಾನಶೀಲ ವ್ಯಕ್ತಿತ್ವವನ್ನು ಒಳಗೊಂಡಿರುತ್ತದೆ.

ಶ್ರೀ ಜಗದ್ಗುರು ರೇಣುಕಚಾರ್ಯರು ಭೋದಿಸಿದ ತತ್ವಸಿದ್ದಾಂತಗಳನ್ನು ಇಂದಿಗೆ ಅಷ್ಟೆ ಅಲ್ಲ ಮುಂದಿನ ಭವಿಷ್ಯತ್ತಿಗೂ ಕೂಡ ದಾರಿ ದೀಪವಾಗಿದೆ. ಸಕಲ ಜೀವಾತ್ಮದ ಒಳಿತನ್ನು ಮಾಡುವುದು ವೀರಶೈವ ಧರ್ಮದ ಗುರಿಯಾಗಿದೆ ಎಂದರು. ಕಡೂರು ಪಟ್ಟಣದಲ್ಲಿ ನಡೆಯಲಿರುವ 26 ನೇ ದಸರಾ ಮಹೋತ್ಸವವು ಈ ಹಿಂದಿನ ಎಲ್ಲ ದಾಖಲೆಗಳನ್ನು ಮೀರಿ ಯಶಸ್ವಿಯಾಗಲಿ ಎಂಬ ಆತ್ಮವಿಶ್ವಾಸದಿಂದ ದಸರಾ ಮಹೋತ್ಸವ ಸಮಿತಿಯ ಎಲ್ಲ ಪದಾಧಿಕಾರಿಗಳು ಕಾರ್ಯಪ್ರವೃತ್ತರಾಗಿ ಎಂದು ಆಶಿಸಿದರು. ದಸರಾ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಚ್‌.ಎಂ.ಲೋಕೇಶ್‌, ಸಾಣೆಹಳ್ಳಿ ಆರಾಧ್ಯರು, ಕುಪ್ಪಾಳು ರೇಣುಕರಾಧ್ಯ, ನಂಜುಂಡರಾಧ್ಯ, ಶಿಕ್ಷಕ ಯತೀಶ್‌, ಪೊಲೀಸ್‌ ವೇದಮೂರ್ತಿ, ಕುಬೇರಣ್ಣ, ಹೂವಿನ ಗೋವಿಂದಪ್ಪ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next