Advertisement

ನಗರದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಿ

05:33 PM Feb 12, 2022 | Team Udayavani |

ಗದಗ: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಮೂಲ ಸೌಕರ್ಯ ಹಾಗೂ ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದಿದ್ದು, ಜನರು ಸಂಕಷ್ಟದ ನಡುವೆಯೇ ಜಿವನ ಸಾಗಿಸುತ್ತಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ತಕ್ಷಣ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ನಗರಸಭೆ ಕಾಂಗ್ರೆಸ್‌ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ನಗರಸಭೆಗೆ ಸಾರ್ವತ್ರಿಕ ಚುನಾವಣೆ ನಡೆದಿದ್ದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆಗೆ ತಾಂತ್ರಿಕ ಲೋಪದಿಂದಾಗಿ ಧಾರವಾಡ ಹೈಕೋರ್ಟ್‌ ಪೀಠ ತಡೆಯಾಜ್ಞೆ ನೀಡಿದೆ. ಹೀಗಾಗಿ, ನಗರಸಭೆ ಆಡಳಿತಾಧಿಕಾರಿಗಳೂ ಆಗಿ ಮುಂದುವರಿದಿರುವ ಜಿಲ್ಲಾಧಿಕಾರಿಗಳು ಕೂಡಲೇ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನ ಹರಿಸಬೇಕೆಂದು ಮನವಿ ಮಾಡಿದರು.

ಅವಳಿ ನಗರದಲ್ಲಿ ಕುಡಿಯುವ ನೀರಿನ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿಂದೆ ಎರಡು ಅಥವಾ ಮೂರು ದಿನಕ್ಕೊಮ್ಮೆ ನೀರು ಬಿಡುವ ವ್ಯವಸ್ಥೆ ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ತಿಂಗಳಿಗೊಮ್ಮೆ ನೀರು ಕೊಡುವ ದುಸ್ಥಿತಿಗೆ ಬಂದು ನಿಂತಿದೆ. 24*7 ಕುಡಿಯುವ ನೀರಿನ ಯೋಜನೆ ಸಫಲಗೊಂಡಿಲ್ಲ. ಕೂಡಲೇ ಅವಳಿ ನಗರದ ಪ್ರತಿ ಮನೆಗೂ ಕುಡಿಯುವ ನೀರು ಒದಗಿಸಲು ಮುಂದಾಗಬೇಕು ಎಂದರು.

ಈಗಾಗಲೇ ಗದಗ-ಬೆಟಗೇರಿ ಅವಳಿ ನಗರದಲ್ಲಿ 152 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಯೋಜನೆ ಜಾರಿಗೆ ಬಂದಿದೆ. ಗುತ್ತಿಗೆದಾರರು ಅಪೂರ್ಣ ಕಾರ್ಯ ನಿರ್ವಹಿಸಿ ಪಲಾಯನಗೊಂಡಿದ್ದಾರೆ. ನಗರದ ಹಲವಾರು ಭಾಗಗಳಲ್ಲಿ ಹೌಸ್‌ ಚೇಂಬರ್‌ ನಿರ್ಮಾಣವಾಗಿಲ್ಲ. ಕೆಲ ಭಾಗಗಳಲ್ಲಿ ಮುಖ್ಯ ಚೇಂಬರ್‌ಗಳನ್ನೂ ಸುಸಜ್ಜಿತವಾಗಿ ನಿರ್ಮಿಸಿಲ್ಲ. ಒಳಚರಂಡಿ ಯೋಜನೆಯ ಗುತ್ತಿಗೆದಾರರು ಹೌಸ್‌ ಚೇಂಬರ್‌ ಹಾಗೂ ಮುಖ್ಯ ಚೇಂಬರ್‌ ಸ್ವತ್ಛಗೊಳಿಸದ ಕಾರಣ ಚೇಂಬರ್‌ಗಳು ಕಟ್ಟಿಕೊಂಡಿವೆ. ಹೀಗಾಗಿ, ರಸ್ತೆ ಮಧ್ಯೆದಲ್ಲೇ ಒಳಚ ರಂಡಿ ನೀರು ಹರುಯುತ್ತಿದ್ದು, ನಗರದೆಲ್ಲೆಡೆ ದುರ್ವಾಸನೆ ಬೀರುತ್ತಿದೆ. ಜನರಲ್ಲಿ ಆನಾರೋಗ್ಯದ ಭಯ ಶುರುವಾಗಿದೆ ಎಂದು ದೂರಿದರು.

ನಗರಸಭೆ ಕಂದಾಯ ವಿಭಾಗದ ಆಡಳಿತಾಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕಳೆದ ಒಂದು ವರ್ಷದಿಂದ ಫಾರಂ ನಂ. 3ಕ್ಕಾಗಿ ಅನೇಕರು ಸಲ್ಲಿಸಿರುವ ಅರ್ಜಿಗಳು ನನೆಗುದಿಗೆ ಬಿದ್ದಿವೆ. ಅವಳಿ ನಗರದ 31 ಗಾರ್ಡನ್‌ಗಳು ನಿರ್ವಹಣೆ ಇಲ್ಲದೇ ಹಾಳಾಗಿವೆ. ನಗರದ 40 ಸಾಮೂಹಿಕ ಶೌಚಾಲಯಗಳಿದ್ದು, ಅವುಗಳ ನಿರ್ವಹಣೆ ಮತ್ತು ಸ್ವತ್ಛತೆಯನ್ನು ನಗರಸಭೆ ಗಮನ ಹರಿಸುತ್ತಿಲ್ಲ. ಶೌಚಾಲಯಗಳು ದುರ್ವಾಸನೆ ಬೀರುತ್ತವೆ. ನಗರಸಭೆ ಸಿಬ್ಬಂದಿಗೆ ಸಕಾಲಕ್ಕೆ ಸಂಬಳ ಪಾವತಿಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಅವಳಿ ನಗರದಲ್ಲಿ 900 ಪಾವರ್‌ ಪಂಪ್‌ಗ್ಳು ಇವೆ. ಆದರೆ, ಅಧಿಕಾರಿಗಳ ಬೇಜವಾಬ್ದಾರಿತನದಿಂದ 300 ಪಂಪ್‌ ಗಳು ಹಾಳಾಗಿವೆ. ಅವುಗಳ ದುರಸ್ತಿಗಾಗಿ 10 ತಿಂಗಳಿಂದ ಕೋರುತ್ತಿದ್ದರೂ ಟೆಂಡರ್‌ ಕರೆಯುತ್ತಿಲ್ಲ. 4 ಗೌರವ ಘಟಕ ನಿರ್ವಹಣೆ ಹಾಗೂ ಮೇಲುಸ್ತುವಾರಿ ವಹಿಸಿಕೊಂಡಿರುವ ಗುತ್ತಿಗೆದಾರರಿಗೆ 10 ತಿಂಗಳಿಂದ ಸಂಬಳ ನೀಡದಿರುವುದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾ ಧಿಕಾರಿಗಳು ಅವಳಿ ನಗರದ ಸಮಸ್ಯೆ ಮತ್ತು ಅಭಿವೃದ್ಧಿ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಕಾಂಗ್ರೆಸ್‌ ಸದಸ್ಯರಾದ ಎಲ್‌.ಡಿ.ಚಂದಾವರಿ, ಲಕ್ಷ್ಮಿ ಸಿದ್ದಮ್ಮನಹಳ್ಳಿ, ಶಕುಂತಲಾ ಅಕ್ಕಿ, ಲಕ್ಷ್ಮವ್ವ ಭಜಂತ್ರಿ, ಪೂರ್ಣಿಮಾ ಬರದ್ವಾಡ, ಚಂದ್ರಶೇಖರಗೌಡ ಕರಿಸೋಮನಗೌಡ್ರ, ಇಮಿ¤ಯಾಜ್‌ ಶಿರಹಟ್ಟಿ, ಆಸ್ಮಾ ರೇಷ್ಮ, ಜೈನುಲಾದ್ದೀನ್‌ ನಮಾಜಿ, ಪರವೀನಬಾನು ಮುಲ್ಲಾ, ಚುಮ್ಮಿ ನದಾಫ್‌, ರವಿಕುಮಾರ ಕಮತರ, ಬರ್ಕತ್‌ ಅಲಿ ಮುಲ್ಲಾ, ಲಲಿತಾ ಅಸೂಟಿ, ಪದ್ಮಾ ಕಟಗಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next