Advertisement

ಬಸ್‌ ನಿಲ್ದಾಣಗಳು ಶೀಘ್ರದಲ್ಲಿ ಮೇಲ್ದರ್ಜೆಗೆ

01:42 AM Oct 09, 2020 | mahesh |

ಉಡುಪಿ: ಡೆಲ್ಟ್ ಯೋಜನೆ ಮೂಲಕ ನಿರ್ಮಿಸಲು ಉದ್ದೇಶಿಸಿದ ಸುಸಜ್ಜಿತ ಮಾದರಿ ಬಸ್‌ಸ್ಟಾಂಡ್‌ ನಿರ್ಮಿಸುವ ಕಾಮಗಾರಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಇದೀಗ ಮತ್ತೆ ಮರುಜೀವ ಪಡೆದಿದೆ. ವಾರದ ಹಿಂದೆ ಅಧಿಕಾರಿಗಳು ಮತ್ತೂಮ್ಮೆ ಸರ್ವೇ ನಡೆಸುವ ಮೂಲಕ ಕಾಮಗಾರಿ ಆರಂಭಕ್ಕೆ ಹಸುರು ನಿಶಾನೆ ತೋರಿದ್ದಾರೆ. ಮಲ್ಪೆ, ಉಡುಪಿ, ಮಣಿಪಾಲದ ಬಸ್‌ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಯೋಜನೆ ಇದಾಗಿದೆ. ಇದರಿಂದ ನಗರದ ಪ್ರಮುಖ ಸ್ಥಳಗಳಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಾಣವಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಯೋಜನೆಯಲ್ಲಿ ಪ್ರಥಮ ಹಂತವಾಗಿ ಮಣಿಪಾಲದ ಬಸ್‌ ನಿಲ್ದಾಣವನ್ನು ಅಭಿವೃದ್ಧಿ ಮಾಡಲಾಗುತ್ತದೆ. ಪ್ರಸ್ತುತ ಇಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರ ಸುಸಜ್ಜಿತ ಬಸ್‌ ನಿಲ್ದಾಣ ಹಾಗೂ ಪಾರ್ಕಿಂಗ್‌ಗೆ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ.

Advertisement

ಮಲ್ಪೆಯಲ್ಲಿ ತುಸು ಗೊಂದಲ
ಮಲ್ಪೆಯಲ್ಲಿ ಪ್ರಸ್ತುತ ಇರುವ ಬಸ್‌ ನಿಲ್ದಾಣದ ಹಿಂಭಾಗದಲ್ಲಿ ಸುಮಾರು 70ರಿಂದ 80ರಷ್ಟು ಮೀನುಗಾರ ಮಹಿಳೆಯರು ಮೀನು ಒಣಗಿಸುತ್ತಿದ್ದಾರೆ. ಒಂದು ವೇಳೆ ಬಸ್‌ ನಿಲ್ದಾಣ ಯೋಜನೆ ರೂಪುಗೊಂಡದ್ದೇ ಆದಲ್ಲಿ ಆ ಜಾಗಕ್ಕೆ ಮುಳುವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕಾರಣಕ್ಕಾಗಿ ಮಲ್ಪೆ ಬೀಚ್‌ಗೆ ಬಸ್‌ ನಿಲ್ದಾಣ ಸ್ಥಳಾಂತರಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಆದರೆ ಅದರ ಅನುಕೂಲ, ನಿರ್ಮಾಣ ಕುರಿತ ರೂಪುರೇಖೆ ಇತ್ಯಾದಿಗಳ ಬಗ್ಗೆ ಅಂತಿಮ ನಿರ್ಣಯ ಇನ್ನಷ್ಟೇ ಆಗಬೇಕಿದೆ ಎಂದು ಮೂಲಗಳು ಹೇಳಿವೆ.

ತಾಂತ್ರಿಕ ಸಮಸ್ಯೆ ನಿವಾರಣೆ
ಈ ಯೋಜನೆಯ ಪ್ರಾರಂಭದಲ್ಲಿ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಆದರೆ ಈ ಎಲ್ಲ ತಾಂತ್ರಿಕ ಅಡಚಣೆಗಳನ್ನು ನಿವಾರಿಸಿ ಮರುಪ್ರಸ್ತಾವನೆ ಕಳುಹಿಸಲಾಗಿದೆ. ಈಗಾಗಲೇ ಸಿಟಿ ಬಸ್‌ ನಿಲ್ದಾಣದ ಬಳಿಯೇ ನರ್ಮ್ ಬಸ್‌ ನಿಲ್ದಾಣವೂ ನಿರ್ಮಾಣವಾಗುತ್ತಿದ್ದು, ಎರಡೂ ಬಸ್‌ ನಿಲ್ದಾಣಗಳನ್ನು ಕೇಂದ್ರೀಕರಿಸಿ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಅದರಂತೆ ಬಸ್‌ ನಿಲ್ದಾಣದ ಮೇಲ್ಭಾಗದಲ್ಲಿ ಸ್ಲಾéಬ್‌ಗಳನ್ನು ನಿರ್ಮಿಸಿ ಅದರ ಮೇಲ್ಭಾಗದಲ್ಲಿ ಪಾರ್ಕಿಂಗ್‌ ಮಾಡುವ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗಿದೆ. ಇದು ಅಂತಿಮಗೊಂಡರೆ ಪೇಯ್ಡ ಪಾರ್ಕಿಂಗ್‌ ಮೂಲಕ ಸಾರ್ವಜನಿಕರು ವಾಹನವನ್ನು ಇದರಲ್ಲಿ ನಿಲುಗಡೆ ಮಾಡಬಹುದಾಗಿದೆ.

8.95 ಕೋ.ರೂ.ಯೋಜನೆ
ಮಣಿಪಾಲ ಬಸ್‌ ನಿಲ್ದಾಣವನ್ನು 3.50 ಕೋ.ರೂ. ಹಾಗೂ ಉಡುಪಿ ಬಸ್‌ ನಿಲ್ದಾಣವನ್ನು 5.45 ಕೋ.ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಗುರಿ ಇದೆ. ಡೆಲ್ಟ್ ಯೋಜನೆ ಮೂಲಕ ಇದಕ್ಕಾಗಿ 8.95 ಕೋ.ರೂ.ಗಳನ್ನು ಮೀಸಲಿರಿಸಲಾಗಿದೆ.

ಸರ್ವೇ ಕಾರ್ಯ ಪೂರ್ಣ
ಬಸ್‌ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಬಗೆಗಿನ ಸರ್ವೇ ಕಾರ್ಯ ಕೆಲವೆಡೆ ಪೂರ್ಣಗೊಂಡಿದೆ. ಇನ್ನು ಕೆಲವೆಡೆ ನಡೆಯುತ್ತಿದೆ. ಅತ್ಯಾಧುನಿಕ ರೀತಿಯಲ್ಲಿ ಎಲ್ಲ ಸೌಲಭ್ಯಗಳು ಈ ನಿಲ್ದಾಣದಲ್ಲಿರಲಿವೆ. ಇದರಿಂದ ಪಾರ್ಕಿಂಗ್‌ ಸಮಸ್ಯೆಯೂ ತಕ್ಕ ಮಟ್ಟಿಗೆ ನಿವಾರಣೆಯಾಗಲಿದೆ.
-ರಘುಪತಿ ಭಟ್‌, ಶಾಸಕರು

Advertisement
Advertisement

Udayavani is now on Telegram. Click here to join our channel and stay updated with the latest news.

Next