Advertisement

ಬಜೆಟ್‌: ಶೇ.50 ಮಾತ್ರ ಅನುಷ್ಠಾನ

04:51 PM Feb 15, 2018 | Team Udayavani |

ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ 2018-19ನೇ ಸಾಲಿನ ಬಜೆಟ್‌ ಮಂಡಿಸಲಿದ್ದು, ಪ್ರತಿ ಬಾರಿ ಬಜೆಟ್‌ ಮಂಡನೆಯ ಪೂರ್ವದಲ್ಲಿ ಜಿಲ್ಲೆಗೇನು ಸಿಕ್ಕೀತು ಎಂಬ ನಿರೀಕ್ಷೆ ಜನರದ್ದಾಗಿದೆ.

Advertisement

ಆದರೆ ಕಳೆದ 5 ಬಜೆಟ್‌ನಲ್ಲಿ ಹಾಸನ ಜಿಲ್ಲೆಯ ಜನರು ಹರ್ಷ ಪಡುವಂತದ್ದೇನನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಲಿಲ್ಲ. ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಬಹುಪಾಲು ಯೋಜನೆಗಳು ಅನುಷ್ಠಾನವಾಗಲೇ ಇಲ್ಲ. ಈ ಸರ್ಕಾರದ ಕೊನೆಯ ಬಜೆಟ್‌ನಲ್ಲಾದರೂ ಜಿಲ್ಲೆಗೆ ಮಹತ್ವದ ಯೋಜನೆಗಳೇನಾದರೂ ಘೋಷಣೆಯಾಗಲಿವೆಯೇ ಎಂಬ ನಿರೀಕ್ಷೆ ಎಂದಿನಂತೆ ಗರಿಗೆದರಿದೆ.

ಕಳೆದ ವರ್ಷದ (2017-18) ಬಜೆಟ್‌ನಲ್ಲಿ ಶ್ರವಣಬೆಳಗೊಳದ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ 175 ಕೋಟಿ ರೂ.
ಅನುದಾನ ಘೋಷಣೆ ಮಾಡಿದ್ದರು. ಅಂತರಾಷ್ಟ್ರೀಯ ಮಟ್ಟದ ಉತ್ಸವದ ಮೂಲ ಸೌಕರ್ಯಗಳಿಗಾಗಿ ಘೋಷಣೆಯಾಗಿದ್ದ ಅನುದಾನ ಬಿಡುಗಡೆಯಾಗಿದ್ದು, ಅದರ ಬಹುಪಾಲು ವೆಚ್ಚವೂ ಆಗಿದೆ. 

ಶ್ರವಣಬೆಳಗೊಳದಲ್ಲಿ ಪ್ರಾಕೃತ ವಿಶ್ವವಿದ್ಯಾಲಯ ಬಜೆಟ್‌ನಲ್ಲಿ ಘೋಷಣೆಯಾಗಿರಲಿಲ್ಲ. ಆದರೆ ಶ್ರವಣಬೆಳಗೊಳದ ಜೈನ ಮಠಾಧ್ಯಕ್ಷ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಒತ್ತಡದಿಂದಾಗಿ ಪ್ರಾಕೃತ ವಿ.ವಿ. ಕಟ್ಟಡ ನಿರ್ಮಾಣ ಆರಂಭವಾಗಿದೆ.
 
ಹಾಸನ ತಾಲೂಕು ಕೋರವಂಗಲದ ಬಳಿ ಪಶುವೈದ್ಯಕೀಯ ಪಾಲಿಟೆಕ್ನಿಕ್‌ ಪ್ರಾರಂಭಿಸುವ ಘೋಷಣೆಯೂ ಆಗಿತ್ತು. ಹಾಸನ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಎ.ಮಂಜು ಪಶುಸಂಗೋಪನಾ ಸಚಿವರೂ ಆಗಿರುವುದರಿಂದ ಪಶುವೈದ್ಯಕೀಯ ಪಾಲಿಟೆಕ್ನಿಕ್‌ ಪ್ರಾರಂಭವಾಗಿದೆ. ರೇಷ್ಮೆ ಕೃಷಿ ತರಬೇತಿ ಸಂಸ್ಥೆ ಸ್ಥಾಪನೆ ಬಜೆಟ್‌ನಲ್ಲಿ ಘೋಷಣೆಯಾಗಿದ್ದು ಒಂದು ತಿಂಗಳ ಹಿಂದೆಯಷ್ಟೇ ರಾಮನಾಥಪುರದಲ್ಲಿ ತರಬೇತಿ ಕೇಂದ್ರದ ಉದ್ಘಾಟನೆ ನೆರವೇರಿದೆ. 

ಅರಸೀಕೆರೆ ಸಮೀಪ ಮಹಾತ್ಮಗಾಂಧಿಯವರ ಚಿತಾಭಸ್ಮವಿರುವ ಕಸ್ತೂರಬಾ ಆಶ್ರಮ ಅಭಿವೃದ್ಧಿಗೆ ಘೋಷಣೆಯಾಗಿದ್ದ 2 ಕೋಟಿ ರೂ. ಕಾಮಗಾರಿ ಆರಂಭವಾಗಿದೆ. ಇಷ್ಟು ಬಿಟ್ಟರೆ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಇನ್ನೂ ಕೆಲವು ಯೋಜನೆಗಳು ಅನುಷ್ಠಾನವಾಗಿಲ್ಲ.

Advertisement

ಬಜೆಟ್‌ನಲ್ಲಿ ಹೊಳೆನರಸೀಪುರ ತಾಲೂಕು ರಂಗೇನಹಳ್ಳಿ ಏತ ನೀರಾವರಿ ಯೋಜನೆಯಿಂದ 20 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನವಾಗಿಲ್ಲ. ಈ ಯೋಜನೆ ಕಳೆದ 5 – 6 ವರ್ಷಗಳಿಂದ ಘೋಷಣೆಯಾಗುತ್ತಲೇ ಬಂದಿದೆ. ಆದರೆ ಅನುಷ್ಠಾನ ಮಾತ್ರ ಆಗುತ್ತಿಲ್ಲ. 

ಹೊಳೆನರಸೀಪುರ ತಾಲೂಕು ಶ್ರೀ ರಾಮದೇವರ ಅಣೆಕಟ್ಟೆಯ ಆಧುನೀಕರಣದ 30 ಕೋಟಿ ರೂ. ಯೋಜನೆಗೆ ಶಿಲಾನ್ಯಾಸ ನೆರವೇರಿ 5 ವರ್ಷಗಳಾಗಿವೆ. ಕಳೆದ ವರ್ಷದ ಬಜೆಟ್‌ನಲ್ಲಿ ಘೋಷಣೆಯಾದರೂ ಆ ಯೋಜನೆಗೂ ಚಾಲನೆ ಸಿಕ್ಕಿಲ್ಲ. ಅಂತರ್ಜಲ ವೃದ್ಧಿಗೆ ಚೆಕ್‌ಡ್ಯಾಂಗಳ ನಿರ್ಮಾಣ ಯೋಜನೆ ಘೋಷಣೆ ಯಾಗಿತ್ತಾದರೂ ಅದರ ಅನುಷ್ಠಾನದ ಪಯತ್ನವೂ ಆಗಿಲ್ಲ. ಹೆಚ್ಚುವರಿ ನಿರಾಶ್ರಿತರ ಪರಿಹಾರ ಕೇಂದ್ರ ಘೋಷಣೆಯಾಗಿದ್ದರೂ ಅದರ ಆರಂಭದ ಸೂಚನೆಗಳೂ ಇಲ್ಲ. ಎರೆಡು ವರ್ಷಗಳ ಹಿಂದೆ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಅರಕಲಗೂಡಿನ ಪಶು ಆಹಾರ ಘಟಕ ನಿರ್ಮಾಣದ ಯೋಜನೆ ಇನ್ನೂ ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದೆ.

ಹಾಸನದ ವಿಮಾನ ನಿಲ್ದಾಣ ನಿರ್ಮಾಣ ಗಗನ ಕುಸುಮವಾಗಿದೆ. ಈ ಯೋಜನೆಗೆ ಶಿಲಾನ್ಯಾಸ ಮಾಡಿ ಒಂದು ದಶಕವಾದರೂ ವಿಮಾನ ನಿಲ್ದಾಣ ನಿರ್ಮಾಣ ಆರಂಭವಾಗಿಲ್ಲ. ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ನಿರ್ಮಿಸಬೇಕಾಗಿದ್ದ ವಿಮಾನ ನಿಲ್ದಾಣ ಕಾಮಗಾರಿಯನ್ನು ಎಚ್‌.ಡಿ.ರೇವಣ್ಣ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಲು ಲೋಕೋಪಯೋಗಿ ಇಲಾಖೆಗೆ ವರ್ಗಾಯಿಸಿಕೊಂಡಿದ್ದರು.

ಆದರೆ ಅವರ ಅಧಿಕಾರಾವಧಿ ಮುಗಿದ ನಂತರ ಆ ಯೋಜನೆ ಮತ್ತೆ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಗೆ ವರ್ಗಾವಣೆ ಪ್ರಯತ್ನ ನಡೆಯಿತಾದರೂ ಇದುವರೆಗೂ ನೆನಗುದಿಗೆ ಬಿದ್ದಿದೆ. ವಿಶ್ವವಿದ್ಯಾ ನಿಲಯ ಸ್ಥಾಪನೆಯಾಗಬೇಕೆಂಬ ಜಿಲ್ಲೆಯ ಜನರ ಬೇಡಿಕೆಗೆ ಯಾವ ಸರ್ಕಾರಗಳೂ ಸ್ಪಂದಿಸುತ್ತಿಲ್ಲ.

ಬೇಲೂರು ಶ್ರೀ ಚನ್ನಕೇಶವ ದೇವಾಲಯ ನಿರ್ಮಾಣವಾಗಿ 900 ವರ್ಷಗಳ ಪೂರ್ಣಗೊಂಡಿದ್ದು, ಪ್ರವಾಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ 9ನೇ ಶತಮಾನೋತ್ಸವ ಆಚರಣೆಯ ಅಭಿಲಾಷೆ ಇದುವರೆಗೂ ಈಡೇರಿಲ್ಲ. ಗೊರೂರಿನ ಹೇಮಾವತಿ ಜಲಾಶಯದ ಮುಂಭಾಗ ಇರುವ ನೂರಾರು ಎಕರೆ ಪ್ರದೇಶದಲ್ಲಿ ಕೆಆರ್‌ಎಸ್‌ ಮಾದರಿಯ ಉದ್ಯಾನವನ ನಿರ್ಮಾಣದ ಘೋಷಣೆ ಮೂರು ವರ್ಷಗಳ ಹಿಂದೆಯೇ ಆಗಿತ್ತು. ಆದರೆ ಕಾವೇರಿ ನೀರಾವರಿ ನಿಗಮದ ಮೂಲಕ ಯೋಜನೆ ಅನುಷ್ಠಾನದ ಪ್ರಯತ್ನ ನಡೆದರೂ ಇನ್ನೂ ಅನುಷ್ಠಾನದ ಸೂಚನೆಗಳಲ್ಲಿ.

ಆಗಿದ್ದೇನು ?: ಮಹಾಮಸ್ತಕಾಭಿಷೇಕಕ್ಕೆ 175 ಕೋಟಿ ರೂ. ಬಿಡುಗಡೆ, ಪಶುವೈದ್ಯಕೀಯ ಪಾಲಿಟೆಕ್ನಿಕ್‌ ಆರಂಭ, ರೇಷ್ಮೆ ಕೃಷಿ ತರಬೇತಿ ಸಂಸ್ಥೆ ಸ್ಥಾಪನೆ, ಮಹಾತ್ಮಗಾಂಧಿಯವರ ಚಿತಾಭಸ್ಮವಿರುವ ಕಸ್ತೂರಬಾ ಆಶ್ರಮದ ಅಭಿವೃದ್ಧಿ ಕಾಮಗಾರಿ ಆರಂಭ. 

ಆಗದಿದ್ದೇನು?: ರಂಗೇನಹಳ್ಳಿ ಏತನೀರಾವರಿ ಯೋಜನೆ, ಶ್ರೀ ರಾಮದೇವರ ಅಣೆಕಟ್ಟು ಅಧುನೀಕರಣ. ಅಂತರ್ಜಲ ವೃದ್ಧಿಗೆ ಚೆಕ್‌ಡ್ಯಾಂಗಳ ನಿರ್ಮಾಣ. ಗೊರೂರಿನ ಹೇಮಾವತಿ ಜಲಾಶಯದ ಮುಂಭಾಗ ಉದ್ಯಾನವನ ನಿರ್ಮಾಣ.

ಈ ಬಾರಿಯ ಬಜೆಟ್‌ ನಿರೀಕ್ಷೇಗಳೇನು?
ವಿಮಾನ ನಿಲ್ದಾಣ ನಿರ್ಮಾಣ, ಹಾಸನದ ಹೊರ ವಲಯದ ಹಳ್ಳಿಗಳಿಗೆ ಕುಡಿಯುವ ನೀರು ಹಾಗೂ ಸತ್ಯಮಂಗಲ ಕೆರೆ
ತುಂಬಿಸುವ ಬಹುಗ್ರಾಮ ಕುಡಿಯುವ ನೀರು ಯೋಜನೆ, ಹಾಸನ ತಾಲೂಕು ದುದ್ದ ಮತ್ತು ಶಾಂತಿಗ್ರಾಮ ಹೋಬಳಿಗಳ 120 ಕೋ ಟಿ ರೂ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು. ಗೊರೂರಿನ ಹೇಮಾವತಿ ಜಲಾಶಯದ ಬಳಿ ಉದ್ಯಾನವನ ನಿರ್ಮಾಣ, ಹಾಸನದ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಅನುದಾನ ಘೋಷಣೆ. ಬೇಲೂರಿನ ಚನ್ನಕೇಶವ ದೇವಾಲಯದ 9 ಶತಮಾನೋತ್ಸವ ಆಚರಣೆಯ ಘೋಷಣೆ. ಶ್ರವಣಬೆಳಗೊಳದ ಪ್ರಾಕೃತ ವಿ.ವಿ. ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ. 

ಎನ್‌. ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next