Advertisement

ಪೂರ್ಣಗೊಳ್ಳದ ಕಲ್ಲೂಡಿ ಬಳಿಯ ಸೇತುವೆ ಕಾಮಗಾರಿ

08:53 PM Mar 14, 2020 | Team Udayavani |

ಗೌರಿಬಿದನೂರು: ನಗರಕ್ಕೆ ಸಮೀಪವಿರುವ ಕಲ್ಲೂಡಿ ಬಳಿಯ ಮೂಗನಹಳ್ಳಿ ಮೇಲು ಸೇತುವೆಯು ಸಾವಿನ ಸೇತುವೆಯಾಗಿದ್ದು, ಮೇಲಿಂದ ಮೇಲೆ ಅಪಘಾತ, ಸಾವು ನೋವು ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುತ್ತಿಲ್ಲ.  ಕುಡುಮಲಕುಂಟೆಯಿಂದ-ಯಲಹಂಕ ವರೆಗೆ ಕೆಆರ್‌ಡಿಸಿಎಲ್‌ ನೇತೃತ್ವದಲ್ಲಿ ಆರ್‌.ಸಿಸಿ.ಎಲ್‌. ಕಂಪನಿಯು ನಿರ್ಮಾಣ ಮಾಡುತ್ತಿರುವ 74 ಕಿ.ಮೀ.ಉದ್ದದ ರಸ್ತೆ ಕಾಮಗಾರಿ ಇನ್ನೂ ನಿರ್ಮಾಣದ ಹಂತದಲ್ಲಿದ್ದು,

Advertisement

ಗೌರಿಬಿದನೂರು ನಗರ ಸಮೀಪದ ಕಲ್ಲೂಡಿ ಬಳಿಯ ಮೂಗನಹಳ್ಳದ ಬಳಿ ತೀಕ್ಷ್ಣವಾದ ರಸ್ತೆ ತಿರುವಿದ್ದು (ಶಾರ್ಪ್‌ಕರ್ವ್‌) ಈ ತಿರುವಿನಲ್ಲಿ ದೊಡ್ಡ ಲಾರಿ, ಕಾರು, ದ್ವಿಚಕ್ರ ವಾಹನುಗಳು ವೇಗವಾಗಿ ಬಂದು ತಿರುವು ಪೂರ್ಣಗೊಳಿಸಲಾಗದೇ ಮೇಲು ಸೇತುವೆಯಿಂದ ಪ್ರಪಾತಕ್ಕೆ ಬಿದ್ದು ಸಾಕಷ್ಟು ಜನ ಪ್ರಾಣ ಕಳೆದುಕೊಂಡಿದ್ದು, ಇತ್ತೀಚೆಗೆ ನಾಲ್ಕು ಚಕ್ರ ವಾಹನವು ಸೇತುವೆಯಿಂದ ಕೆಳಗೆ ಬಿದ್ದು 9 ಜನ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.

ಭೂ ಮಾಲೀಕರಿಗೆ ಪರಿಹಾರ ನೀಡಬೇಕು: ಅಪಘಾತ ಸಂಭವಿಸುವುದು ಸಾಮಾನ್ಯವಾಗಿದ್ದು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳನ್ನು ಕೇಳಿದರೆ ರಸ್ತೆ ಮತ್ತು ಸೇತುವೆಗಳ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಭೂಮಾಲೀಕರಿಗೆ ನೀಡಬೇಕಾದ ಪರಿಹಾರ ಕಾರ್ಯ ವಿಳಂಬವಾಗಿದ್ದು, ಕಂದಾಯ ಇಲಾಖೆಯು ಈ ಪ್ರಕ್ರಿಯೆ ಪೂರ್ಣಗಳಿಸಿ ನಮಗೆ ವಹಿಸಿದಲ್ಲಿ ನಾವು ಕಾಮಗಾರಿ ಪ್ರಾರಂಭಿಸಬಹುದು.

ಆದರೆ ಈ ಪ್ರಕ್ರಿಯೆ ವಿಳಂಬವಾಗಿದ್ದು, ಕಡತಗಳು ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಅನುಮೋದನೆಗೆ ಕಳುಹಿಸಲಾಗಿದ್ದು, ಅನುಮೋದನೆಗೊಂಡು ಭೂಮಾಲೀಕರಿಗೆ ಪರಿಹಾರ ನೀಡುವವರೆಗೆ ಕಾಮಗಾರಿ ಪೂರ್ಣಗೊಳ್ಳಲು ಸಾಧ್ಯವಿಲ್ಲ ಎಂದು ಕೆ.ಆರ್‌.ಡಿಸಿಎಲ್‌ ಕಿರಿಯ ಅಭಿಯಂತರ ಸ್ವಾಮಿ ತಿಳಿಸಿದ್ದಾರೆ. ಈ ಸೇತುವೆ ಹಳೆಯ ಸೇತುವೆಯಾಗಿದ್ದು, ಮೈಸೂರು ಸರ್ಕಾರವಿದ್ದಾಗ ಅಂದಿನ ಲೋಕೋಪಯೋಗಿ ಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್‌ ಇದನ್ನು ಉದ್ಘಾಟಿಸಿದ್ದಾರೆ. ಇಷ್ಟು ಹಳೆಯದಾಗ ಸೇತುವೆ ಮೇಲೆ ವಾಹನ ಸಂಚಾರ ಹೆಚ್ಚಿದ್ದು, ರಸ್ತೆ ಹಾಗೂ ಸೇತುವೆಯೂ ಕಿರಿದಾಗಿರುವುದರಿಂದ ಅಫ‌ಘಾತ ಪ್ರಮಾಣ ಹೆಚ್ಚಾಗಿದೆ.

ಟೋಲ್‌ ಸಂಗ್ರಹ: 2018ರ ಸೆಪ್ಟೆಂಬರ್‌ 22ರಿಂದ ತಾಲೂಕಿನ ಗಡಿಭಾಗದ ತಿಪ್ಪಗಾನಹಳ್ಳಿ ಬಳಿ ಟೋಲ್‌ ಸಂಗ್ರಹ ಮಾಡುತ್ತಿರುವ ಆರ್‌ಸಿಸಿಎಲ್‌ ವಾಹನ ಸವಾರರಿಂದ ಕೋಟ್ಯಂತರ ರೂ. ಸಂಗ್ರಹಿಸುತ್ತಿದ್ದರೂ ರಸ್ತೆಗಳನ್ನು ಮಾತ್ರ ಪೂರ್ಣಗೊಳಿಸಿಲ್ಲ. ಇದಕ್ಕೆ ಇವರು ಕೊಡುವ ಕಾರಣ ಭೂಸ್ವಾಧೀನ ವಿಳಂಬವಾಗಿರುವುದು ಎಂದು ಅಧಿಕಾರಿಗಳು ಕಾರಣ ಹೇಳುತ್ತಿದ್ದಾರೆ.

Advertisement

ರಸ್ತೆ ಕಾಮಗಾರಿ ಅಪೂರ್ಣ: ಇತ್ತೀಚಿಗೆ ಈ ರಸ್ತೆಯ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಟೋಲ್‌ ವಸೂಲಿ ಮಾಡಲಾಗುತ್ತಿದೆ ಎಂದು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದು ಸ್ಥಗಿತಗೊಳಿಸಲಾಗಿತ್ತು. ಆ ನಂತರ ಶೇ.75ರಷ್ಟು ಕಾಮಗಾರಿ ಪೂರ್ಣಗೊಂಡಿರುವುದಾಗಿ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿ ಮತ್ತೆ ಟೋಲ್‌ ವಸೂಲಿ ಪ್ರಾರಂಭಿಸಲಾಗಿದೆ. ಆದರೆ ರಸ್ತೆ ಕಾಮಗಾರಿ ಮಾತ್ರ ಪೂರ್ಣಗೊಳಿಸಲಾಗಿಲ್ಲ.

ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬ: ಕಲ್ಲೂಡಿ ಬಳಿಯ ಸೇತುವೆ ಕಾಮಗಾರಿ ಪ್ರಾರಂಭ ಮಾಡಲು ಕಂದಾಯ ಇಲಾಖೆಯು ಭೂಸ್ವಾಧೀನ ನಡೆಸಿ ಜಮೀನು ಮಾಲೀಕರಿಗೆ ಸೂಕ್ತ ಪರಿಹಾರ ನೀಡಿ ಭೂಮಿಯನ್ನು ಬಿಡಿಸಿಕೊಡುವ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ ಎಂದು ಕಾಮಗಾರಿ ಉಸ್ತುವಾರಿ ಕೆಆರ್‌ಡಿಸಿಎಲ್‌ ಕಿರಿಯ ಅಭಿಯಂತರ ಸ್ವಾಮಿ ತಿಳಿಸಿದ್ದಾರೆ. ಕಡತವು ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಅನುಮೋದನೆಗೆ ಹೋಗಿದ್ದು, ಮುಗಿದ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು. ಅಪಘಾತಗಳು ಹೆಚ್ಚುತ್ತಿರುವುದರಿಂದ ಸೇತುವೆ ಬಳಿ ಸೂಕ್ತ ಹಂಪ್‌ ಹಾಗೂ ವೇಗಮಿತಿ ಕಡಿಮೆ ಮಾಡಲು ಬ್ಯಾರಿಕೇಡ್‌ ಅಳವಡಿಸುತ್ತೇವೆ. ಅದೇ ರೀತಿ ಗುಡಿಬಂಡೆ ರಸ್ತೆಯ ವೃತ್ತದಲ್ಲಿಯೂ ಸಹ ವೇಗಮಿತಿ ಅಳವಡಿಸುತ್ತೇವೆ ಎಂದು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಗಡಿಯಿಂದ ಯಲಹಂಕ ವರೆಗೆ ರಾಜ್ಯ ಹೆದ್ದಾರಿ ಕಾಮಗಾರಿ 2018ರಲ್ಲಿಯೇ ಪೂರ್ಣಗೊಳ್ಳಬೇಕಿದ್ದರೂ ಇಂದಿಗೂ ಪೂರ್ಣಗೊಂಡಿಲ್ಲ. ಆದರೆ ಟೋಲ್‌ ಸಂಗ್ರಹ ನಡೆಯುತ್ತಿದೆ. ಗೌರಿಬಿದನೂರು ನಗರ ವ್ಯಾಪ್ತಿಯ ಕಲ್ಲೂಡಿ ಬಳಿಯ ಸೇತುವೆ ಕಾಮಗಾರಿ ಪ್ರಾರಂಭಕ್ಕೆ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದೆ ಎಂದು ಕಾರಣ ಹೇಳುತ್ತಿರುವುದು ಸರಿಯಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು
-ಜಿ.ಆರ್‌.ಮೋಹನ ಕುಮಾರ್‌ ಕಾದಲವೇಣಿ, ಸಮಾಜ ಸೇವಕ

* ವಿ.ಡಿ.ಗಣೇಶ್‌, ಗೌರಿಬಿದನೂರು

Advertisement

Udayavani is now on Telegram. Click here to join our channel and stay updated with the latest news.

Next