Advertisement

ಸಮ್ಮಿಶ್ರ ಸರಕಾರ ಅಸ್ಥಿರಗೊಳಿಸುವ  ಬಿಜೆಪಿ ಕುತಂತ್ರ ಫ‌ಲಿಸದು

06:50 AM Sep 29, 2018 | Team Udayavani |

ಹುಬ್ಬಳ್ಳಿ: ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಸುಭದ್ರವಾಗಿದ್ದು, ಯಾವುದೇ ಗೊಂದಲವಿಲ್ಲ. ಬಿಜೆಪಿಯ ಆಮಿಷಕ್ಕೆ ನಮ್ಮ ಪಕ್ಷದ ಯಾವ ಶಾಸಕರೂ ಸಿಲುಕಲಾರರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

Advertisement

ಶುಕ್ರವಾರ ನಗರದ ವಿಮಾನ ನಿಲ್ದಾಣದಲ್ಲಿ “ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಹಲವು ಆಮಿಷಗಳನ್ನು ತೋರಿ, ನಮ್ಮ ಶಾಸಕರನ್ನು ತನ್ನತ್ತ ಸೆಳೆಯಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆದರೆ, ಯಾವ ಶಾಸಕರೂ ಅದಕ್ಕೆ ಸೊಪ್ಪು ಹಾಕುತ್ತಿಲ್ಲ. ಹೀಗಾಗಿ, ಅದರ ಕುತಂತ್ರ ಫ‌ಲ ನೀಡುತ್ತಿಲ್ಲ. ಹಿಂದಿನ ಕಾಂಗ್ರೆಸ್‌ ಸರಕಾರ ಕೈಗೊಂಡ ಎಲ್ಲಾ ಯೋಜನೆಗಳನ್ನು ಸಮ್ಮಿಶ್ರ ಸರಕಾರ ಮುಂದುವರಿಸಿದ್ದು, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮುಂದುವರಿಯಲಿದೆ ಎಂದರು.

ಬಿಬಿಎಂಪಿಗೆ ಮಹಾಪೌರರ ಆಯ್ಕೆ ವಿಷಯವಾಗಿ ಪಕ್ಷದ ಸದಸ್ಯರನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋಗಿದ್ದರಲ್ಲಿ ತಪ್ಪೇನಿಲ್ಲ. ಯಾರನ್ನು ಆಯ್ಕೆ ಮಾಡಬೇಕೆಂಬುದರ ಕುರಿತು ಚರ್ಚಿಸಲು ಎಲ್ಲರನ್ನು ಒಂದೆಡೆ ಸೇರಿಸಲಾಗಿತ್ತೇ ವಿನಃ ಬಿಜೆಪಿಯ ಆಪರೇಷನ್‌ ಕಮಲಕ್ಕೆ ಹೆದರಿ ರೆಸಾರ್ಟ್‌ ರಾಜಕೀಯ ಮಾಡಿಲ್ಲ. ಅದರ ಪ್ರಶ್ನೆಯೇ ಉದ್ಭವಿಸಲ್ಲ. ಬಿಜೆಪಿ ರೀತಿ ನಾವು ಹೈದರಾಬಾದ್‌ ಸೇರಿ ಇನ್ನಿತರ ರೆಸಾರ್ಟ್‌ಗಳಿಗೆ ತೆರಳಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next