Advertisement

ವಿಮಾನಗಳಲ್ಲೂ ಇನ್ನು ಜೈವಿಕ ಇಂಧನ ಮಿಶ್ರಣ

12:52 AM Feb 23, 2019 | |

ಬೆಂಗಳೂರು: ಸರ್ಕಾರಿ ಬಸ್‌ಗಳಂತೆ ವಿಮಾನಗಳಲ್ಲಿಯೂ ಜೈವಿಕ ಇಂಧನ ಬಳಸಲು ಭಾರತೀಯ ವೈಮಾನಿಕ ಕ್ಷೇತ್ರದಲ್ಲಿ ಸದ್ದಿಲ್ಲದೆ ಹೊಸ ಪ್ರಯೋಗವೊಂದು ನಡೆಯುತ್ತಿದ್ದು, ಇದು ಸಾಕಾರಗೊಂಡರೆ ಹೊಂಗೆ, ಜತ್ರೋಪ ಮತ್ತಿತರ ಜೈವಿಕ ಇಂಧನ ಮೂಲದ ಬೆಳೆಗಳನ್ನು ಬೆಳೆಯುವ ರೈತರ ಅದೃಷ್ಟವೇ ಖುಲಾಯಿಸಲಿದೆ.

Advertisement

ಈಗಾಗಲೇ ಭಾರತೀಯ ವಾಯುಸೇನೆಯ ಯುದ್ಧ ವಿಮಾನದಲ್ಲಿ 2019ರ ಜ.26ರಂದು ಶೇ.10ರಷ್ಟು ಬಯೋ ಎಟಿಎಫ್ (ಏವಿಯೇಷನ್‌ ಟರ್ಬೈನ್‌ ಫ್ಯುಯಲ್‌) ಅನ್ನು ಮಿಶ್ರಣ ಮಾಡಿ ಯಶಸ್ವಿ ಹಾರಾಟ ನಡೆಸಲಾಗಿದೆ. ಅಲ್ಲದೆ, 2018ರ ಆಗಸ್ಟ್‌ನಲ್ಲಿ ಸ್ಪೈಸ್‌ ಜೆಟ್‌ನಲ್ಲಿ ಕೂಡ ಶೇ.25ರಷ್ಟು ಈ ಜೈವಿಕ ಇಂಧನವನ್ನು ಯಶಸ್ವಿಯಾಗಿ ಬಳಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಯೋಗವನ್ನು ವಿಸ್ತರಿಸಲು ಉದ್ದೇಶಿಸಲಾಗಿದೆ. ಹಾಗೊಂದು ವೇಳೆ ಇದು ಪೂರ್ಣಪ್ರಮಾಣದಲ್ಲಿ ಸಾಕಾರಗೊಂಡರೆ ಇದಕ್ಕೆ ಅಗತ್ಯವಿರುವ ಕಚ್ಚಾವಸ್ತುಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಬರಲಿದ್ದು, ಇದು ರೈತರ ಬದುಕು ಬದಲಿಸಲಿದೆ.

ಛತ್ತೀಸಗಡದಲ್ಲಿ ಸಂಸ್ಕರಣಾ ಘಟಕ” ಡೆಹರಾಡೂನ್‌ ನ ಸಿಎಸ್‌ಐಆರ್‌-ಭಾರತೀಯ ತೈಲ ಸಂಸ್ಥೆಯು ಈ ಜೈವಿಕ ವೈಮಾನಿಕ ಇಂಧನ ತಯಾರಿಕೆ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದು, ಪ್ರಸ್ತುತ ಜತ್ರೋಪದಿಂದ ಹೊರತೆಗೆದ ತೈಲವನ್ನು ಸಂಸ್ಕರಣೆ ಮಾಡಿ, ಅದನ್ನು ವಿಮಾನಕ್ಕೆ ಬೇಕಾದ ಇಂಧನವನ್ನಾಗಿ ಪರಿವರ್ತಿಸಿ ಪ್ರಯೋಗ ಮಾಡಲಾಗಿದೆ. ಭಾರತೀಯ ವಾಯುಸೇನೆ ಸಹಯೋಗದಲ್ಲಿ ಮುಂದಿನ ಒಂದೂವರೆ ವರ್ಷದಲ್ಲಿ ಛತ್ತೀಸ್‌ಗಡದಲ್ಲಿ ಜೈವಿಕ ಇಂಧನ ಸಂಸ್ಕರಣಾ ಘಟಕ ಸ್ಥಾಪನೆ ಗುರಿ ಇದೆ ಎಂದು ಸಿಎಸ್‌ಐಆರ್‌-ಐಐಪಿ ವಿಜ್ಞಾನಿ ಸಲೀಂ ಅಖ್ತರ್‌ ಫಾರೂಕಿ “ಉದಯವಾಣಿ’ಗೆ ತಿಳಿಸಿದರು.

ಜತ್ರೋಪ ಮಾತ್ರವಲ್ಲ; ಹೊಂಗೆ, ಬಳಕೆಯಾದ ಅಡಿಗೆ ಎಣ್ಣೆ, ಪಾಮ್‌ ಆಯಿಲ್‌, ಪಾಚಿ ಸೇರಿ ಸುಮಾರು 30ಕ್ಕೂ ಅಧಿಕ ಮರಗಳಿಂದ ಜೈವಿಕ ಇಂಧನ ತಯಾರಿಸಬಹುದು. ಆದರೆ, ವಿಮಾನಗಳಿಗೆ ಸಾಕಷ್ಟು ಪ್ರಮಾಣದ ಇಂಧನ ಬೇಕಾಗುತ್ತದೆ. ಉದಾಹರಣೆಗೆ ಒಂದು ಚಿಕ್ಕ ಗಾತ್ರದ ವಾಣಿಜ್ಯ ಉದ್ದೇಶಿ ವಿಮಾನದಲ್ಲಿ ಶೇ.50ರಷ್ಟು ಜೈವಿಕ ಇಂಧನ ಮಿಶ್ರಣ ಮಾಡಿ 300 ಕಿ.ಮೀ. ಸಂಚರಿಸಲು ಕನಿಷ್ಠ 600 ಲೀ. ಜೈವಿಕ ಇಂಧನದ ಅವಶ್ಯಕತೆ ಇದೆ. ಒಂದು ಲೀ. ಜತ್ರೋಪ ತೈಲ ಉತ್ಪಾದನೆಗೆ 3 ಕೆ.ಜಿ. ಬೀಜಗಳು ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಆದರೆ, ಸದ್ಯದ ಸ್ಥಿತಿಯಲ್ಲಿ ಈ ಬೇಡಿಕೆಯನ್ನು ಪೂರೈಸುವಷ್ಟು ಜತ್ರೋಪ, ಹೊಂಗೆ ಮತ್ತಿತರ ಮರಗಳು ನಮ್ಮಲ್ಲಿ ಇಲ್ಲ. ಹಾಗಾಗಿ, ಹಂತ-ಹಂತವಾಗಿ ಇದನ್ನು ಅಭಿವೃದಿಟಛಿಪಡಿಸಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಒಂದು ಎಕರೆ ಜತ್ರೋಪದಿಂದ 1,600 ಲೀ. ತೈಲ ಉತ್ಪಾದನೆ ಮಾಡಬಹುದು. ಇದನ್ನು ಹೆಚ್ಚಾಗಿ ರಾಜಸ್ಥಾನ, ರಾಜ್ಯದ ಕೆಲವು ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಇನ್ನು ಹೊಂಗೆಯನ್ನು ಕರ್ನಾಟಕದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ.

Advertisement

17 ಕೋಟಿ ಉಳಿತಾಯ
ಜಾಗತಿಕ ಮಟ್ಟದಲ್ಲಿ ವೈಮಾನಿಕ ಕ್ಷೇತ್ರ ಸಾಕಷ್ಟುಅಭಿವೃದಿಟಛಿ ಹೊಂದುತ್ತಿದ್ದು, ಈ ವಿಮಾನಗಳ ಟರ್ಬೈನ್‌ಗಳಿಂದ ಹೊರಸೂಸುವ ಕಾರ್ಬನ್‌ ನಿಂದ ವಾಯುಮಾಲಿನ್ಯ ಕೂಡ ಹೆಚ್ಚುತ್ತಿದೆ. ಇದನ್ನು ತಗ್ಗಿಸುವ ನಿಟ್ಟಿನಲ್ಲಿ ಹಾಗೂ ವಿಮಾನಗಳಿಗೆ ಬಳಸುವ ಇಂಧನಕ್ಕಾಗಿ ಬೇರೆ ದೇಶಗಳ ಮೇಲಿನ ಅವಲಂಬನೆ ತಪ್ಪಿಸುವಲ್ಲಿ ಈ ಜೈವಿಕ ಇಂಧನ ಪ್ರಮುಖ ಪಾತ್ರ ವಹಿಸಲಿದೆ. ಆರ್ಥಿಕವಾಗಿಯೂ ಕೇವಲ ಶೇ. 10ರಷ್ಟು ಈ ಇಂಧನವನ್ನು ಮಿಶ್ರಣ ಮಾಡಿದರೂ ವಾರ್ಷಿಕ ಸರಿಸುಮಾರು 17 ಕೋಟಿ ರೂ. ಉಳಿತಾಯ ಆಗಲಿದೆ ಎಂದು ಸಲೀಂ ಅಖ್ತರ್‌ ತಿಳಿಸಿದರು.

ವಿಜಯ ಕುಮಾರ ಚಂದರಗಿ 

Advertisement

Udayavani is now on Telegram. Click here to join our channel and stay updated with the latest news.

Next