Advertisement

ನಗರದಲ್ಲಿ ಘಟಾನುಘಟಿಗಳ ಬಿಗ್‌ ಫೈಟ್‌

12:13 PM Apr 18, 2018 | |

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಮೂರೂ ಪಕ್ಷಗಳು ರಾಜಧಾನಿ ಬೆಂಗಳೂರಿನಿಂದ ಅತಿ ಹೆಚ್ಚು ಸೀಟು ಗೆಲ್ಲುವ ಕಾರ್ಯತಂತ್ರ ರೂಪಿಸಿದ್ದು, ನಾಮಪತ್ರ ಸಲ್ಲಿಕೆಗೂ ಮುನ್ನವೇ ಪ್ರಚಾರ ಕಾರ್ಯ ಆರಂಭವಾಗಿದೆ. ಪ್ರತಿಷ್ಠಿತ ಕ್ಷೇತ್ರಗಳು ಎನಿಸಿಕೊಂಡಿರುವ ರಾಜರಾಜೇಶ್ವರಿನಗರ, ಸಿ.ವಿ.ರಾಮನ್‌ನಗರ, ರಾಜಾಜಿನಗರ, ಬಸವನಗುಡಿ, ಜಯನಗರ, ಶಿವಾಜಿನಗರ ಕ್ಷೇತ್ರಗಳಲ್ಲಿ ಈಗಾಗಲೇ ಘೋಷಣೆಯಾಗಿರುವ ಅಭ್ಯರ್ಥಿಗಳು ಪ್ರಚಾರದ ” ಅಖಾಡ’ಕ್ಕೆ ಇಳಿದಿದ್ದಾರೆ.

Advertisement

ಶಿವಾಜಿನಗರ: ಈ ಕ್ಷೇತ್ರದಲ್ಲಿ ಮಾಜಿ ಸಚಿವ ರೋಷನ್‌ಬೇಗ್‌ ಕಾಂಗ್ರೆಸ್‌ನಿಂದ ಮತ್ತೂಬ್ಬ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಬಿಜೆಪಿಯಿಂದ ಮುಖಾಮುಖೀಯಾಗಲಿದ್ದಾರೆ. ಇಲ್ಲಿ ಇಬ್ಬರಿಗೂ ಟಿಕೆಟ್‌ ಅಧಿಕೃತವಾಗಿ ಘೋಷಿಸಲಾಗಿದೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಿಂದೊಮ್ಮೆ ಶಿವಾಜಿನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆದ್ದಿದ್ದರು. ಆದರೆ, ಆಗ ರೋಷನ್‌ಬೇಗ್‌ ಜಯಮಹಲ್‌ ( ಈಗಿನ ಹೆಬ್ಟಾಳ) ಕ್ಷೇತ್ರಕ್ಕೆ ವಲಸೆ ಹೋಗಿದ್ದರು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಇಬ್ಬರು ಮುಖಾಮುಖೀಯಾಗುತ್ತಿದ್ದಾರೆ. ಈ ಬಾರಿ ಜಿದ್ದಾಜಿದ್ದಿನ ಹೋರಾಟಕ್ಕೆ ಶಿವಾಜಿನಗರ ಸಾಕ್ಷಿಯಾಗಲಿದೆ. ಇಲ್ಲಿ ಜೆಡಿಎಸ್‌ ಅಭ್ಯರ್ಥಿ ಘೋಷಿಸಿಲ್ಲ.

ಸಿ.ವಿ.ರಾಮನ್‌ನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಲೋಕೋಪಯೋಗಿ ಸಚಿವ ಎಚ್‌.ಸಿ.ಮಹದೇವಪ್ಪ ಸ್ಪರ್ಧೆ ಮಾಡ್ತಾರೆ ಎಂದು ಕಳೆದೊಂದು ವರ್ಷದಿಂದ ಹೇಳಲಾಗುತ್ತಿದ್ದ ಕ್ಷೇತ್ರದಲ್ಲಿ ಮೇಯರ್‌ ಸಂಪತ್‌ರಾಜ್‌ಗೆ ಕಾಂಗ್ರೆಸ್‌ ಟಿಕೆಟ್‌ ದೊರೆತಿದೆ. ಇಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ವಾರದ ಹಿಂದೆ ಕಾಂಗ್ರೆಸ್‌ ಬ್ಯಾನರ್‌ ಹಿಡಿದು ಮತಯಾಚನೆ ಮಾಡಿದ್ದ ಸಿದ್ದರಾಮಯ್ಯ ಅವರ ಮತ್ತೂಬ್ಬ ಆಪ್ತ ಪಿ.ರಮೇಶ್‌ ಇದೀಗ ಜೆಡಿಎಸ್‌ ಜಂಡಾ ಹಿಡಿದು ಮತಯಾಚನೆಗೆ ಹೊರಟಿದ್ದಾರೆ. ಬಿಜೆಪಿಯಿಂದ ಹಾಲಿ ಶಾಸಕ ರಘು ಅವರಿಗೆ ಟಿಕೆಟ್‌ ಘೋಷಣೆಯಾಗಿದೆ. ತ್ರಿಕೋನ ಸ್ಪರ್ಧೆಯ ಲಕ್ಷಣಗಳಿದ್ದು ನಾಮಪತ್ರ ಸಲ್ಲಿಕೆಗೂ ಮುನ್ನವೇ ಅಭ್ಯರ್ಥಿಗಳ ಪ್ರಚಾರ ತಾರಕಕ್ಕೇರಿದೆ.

ರಾಜರಾಜೇಶ್ವರಿ ನಗರ: ಈ ಕ್ಷೇತ್ರವು ಸಾಕಷ್ಟು ವಿವಾದಗಳಿಂದಲೇ ಖ್ಯಾತಿ ಪಡೆದಿದ್ದು, ಇಲ್ಲಿ ಕಾಂಗ್ರೆಸ್‌ನಿಂದ ಹಾಲಿ ಶಾಸಕ ಹಾಗೂ ನಿರ್ಮಾಪಕ ಮುನಿರತ್ನ, ಬಿಜೆಪಿಯಿಂದ ಯುವ ಮೋರ್ಚಾದ ತುಳಸಿ ಮುನಿರಾಜುಗೌಡ ಹಾಗೂ ಬಿಜೆಪಿಯಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಪಾಲಿಕೆಯ ಮಾಜಿ ಸದಸ್ಯ ನಟಿ ಅಮೂಲ್ಯ ಅವರ ಮಾವ ರಾಮಚಂದ್ರ ಜೆಡಿಎಸ್‌ ಅಭ್ಯರ್ಥಿಯಾಗಿದ್ದಾರೆ. ಮೂರೂ ಪಕ್ಷಗಳಿಂದ ಅಭ್ಯರ್ಥಿಗಳ ಘೋಷಣೆಯಾಗಿದ್ದು ಪ್ರಚಾರ ಕಾರ್ಯ ಬಿರುಸಾಗಿದೆ. ಬಿಜೆಪಿ ಪರ ಸ್ಟಾರ್‌ ಕ್ಯಾಂಪೇನರ್‌ ಆಗಬಹುದು ಎಂದುಕೊಂಡಿದ್ದ ನಟಿ ಆಮೂಲ್ಯ ತೆನೆ ಹೊತ್ತ ಮಹಿಳೆ ಪರವಾಗಿ ಮತಯಾಚನೆ ಮುಂದಾಗಿರುವುದು ವಿಶೇಷ.

ಬಸವನಗುಡಿ: ಬಸವನಗುಡಿಯಲ್ಲಿ ಹ್ಯಾಟ್ರಿಕ್‌ ಕನಸಿನಲ್ಲಿರುವ ಬಿಜೆಪಿಯ ಎಲ್‌.ಎ.ರವಿಸುಬ್ರಹ್ಮಣ್ಯ ಅವರ ವಿರುದ್ಧ ಜೆಡಿಎಸ್‌ನಿಂದ ಕೆ.ಬಾಗೇಗೌಡ, ಕಾಂಗ್ರೆಸ್‌ನಿಂದ ಬೋರೇಗೌಡ ಟಿಕೆಟ್‌ ಪಡೆದಿದ್ದು ತ್ರಿಕೋನ ಸ್ಪರ್ಧೆಗೆ ಕಣ ಸಜ್ಜಾಗಿದೆ. ಐದಾರು ತಿಂಗಳ ಹಿಂದಷ್ಟೇ ಬಿಜೆಪಿಯಿಂದ ಮತ್ತೆ ಮಾತೃಪಕ್ಷಕ್ಕೆ ಹಿಂತಿರುಗಿರುವ ಬೋರೇಗೌಡ ಕಾಂಗ್ರೆಸ್‌ನ ಹುರಿಯಾಗಿದ್ದಾರೆ. ಇವರು ಸಚಿವ ಡಿ.ಕೆ.ಶಿವಕುಮಾರ್‌ ಆಪ್ತರೂ ಹೌದು. ಕ್ಷೇತ್ರದಲ್ಲಿ ಹೆಚ್ಚಾಗಿರುವ ಒಕ್ಕಲಿಗ ಮತದಾರನ್ನು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಅದೇ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

Advertisement

ಜಯನಗರ: ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯರೆಡ್ಡಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವುದರಿಂದ ರಾಜಧಾನಿಯ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಜಯನಗರವೂ ಒಂದಾಗಿದೆ. ಇಲ್ಲಿ ಹಾಲಿ ಶಾಸಕ ಬಿಜೆಪಿಯ ವಿಜಯಕುಮಾರ್‌ ಹಾಗೂ ಸೌಮ್ಯರೆಡ್ಡಿ ನಡುವೆ ತೀವ್ರ ಹಣಾಹಣಿ ನಡೆಯಲಿದೆ. ಸಾಕಷ್ಟು ಪೈಪೋಟಿ ನಡುವೆಯೂ ಟಿಕೆಟ್‌ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಸೌಮ್ಯಾರೆಡ್ಡಿ ನಾಮಪತ್ರ ಸಲ್ಲಿಕೆಗೂ ಮುನ್ನವೇ ಬಿರುಸಿನ ಪ್ರಚಾರ ಆರಂಭಿಸಿದ್ದು, ಬಿಜೆಪಿಯ ವಿಜಯಕುಮಾರ್‌ ಸಹ ಪ್ರಚಾರ ಪ್ರಾರಂಭಿಸಿದ್ದಾರೆ. ಪುತ್ರಿಯ ಗೆಲುವಿಗೆ ಸಚಿವ ರಾಮಲಿಂಗಾರೆಡ್ಡಿ ತಮ್ಮ ಹಳೆಯ ಕ್ಷೇತ್ರದಲ್ಲಿ ಸುತ್ತಾಟ ನಡೆಸಬೇಕಿದೆ. ಕ್ಷೇತ್ರ ಪುನರ್‌ವಿಂಗಡಣೆಗೆ ಮುಂಚೆ ರಾಮಲಿಂಗಾರೆಡ್ಡಿ ಇದೇ ಕ್ಷೇತ್ರ ಪ್ರತಿನಿಧಿಸುತ್ತಿದ್ದರು. ನಂತರ ಬಿಟಿಎಂ ಲೇ ಔಟ್‌ಗೆ ಶಿಫ್ಟ್ ಆಗಿದ್ದರು. ಇದೇ ಕ್ಷೇತ್ರದಲ್ಲಿ ಪಕ್ಷೇತರರಾಗಿ ರವಿಕೃಷ್ಣಾರೆಡ್ಡಿ ಸ್ಪರ್ಧೆ ಮಾಡಿ ಮತದಾರರ ಗಮನ ಸೆಳೆಯುತ್ತಿದ್ದಾರೆ. ಇಲ್ಲಿ ಜೆಡಿಎಸ್‌ ಇನ್ನೂ ಅಭ್ಯರ್ಥಿ ಘೋಷಿಸಿಲ್ಲ. 

ರಾಜಾಜಿನಗರ: ಪಾಲಿಕೆ ಸದಸ್ಯರಾಗಿ ವಿಧಾನಸೌಧ ಪ್ರವೇಶಿಸಿರುವ ಬಿಜೆಪಿಯ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸುರೇಶ್‌ ಕುಮಾರ್‌ಗೆ ಇಲ್ಲಿ ಈ ಬಾರಿ ಬಿಬಿಎಂಪಿಯಿಂದ ವಿಧಾನಸೌಧ ಪ್ರವೇಶದ ಕನಸು ಹೊಂದಿರುವ ಮಾಜಿ ಮೇಯರ್‌ ಜಿ.ಪದ್ಮಾವತಿ ಕಾಂಗ್ರೆಸ್‌ನಿಂದ ಮುಖಾಮುಖೀಯಾಗಲಿದ್ದಾರೆ.
ಪಾಲಿಕೆ ಸದಸ್ಯರಾಗಿ ರಾಜಕಾರಣ ಪ್ರಾರಂಭಿಸಿ ರಾಜ್ಯ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಸುರೇಶ್‌ ಕುಮಾರ್‌ ನಾಲ್ಕು ಬಾರಿ ಇದೇ ಕ್ಷೇತ್ರದಿಂದ ಗೆದ್ದಿದ್ದು ಮತ್ತೂಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇವರಿಗೆ ಪಾಲಿಕೆಯಿಂದಲೇ ರಾಜಕಾರಣ ಆರಂಭಿಸಿದ ಪದ್ಮಾವತಿ ಪ್ರತಿಸ್ಪರ್ಧಿಯಾಗಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಜಿಪಿಯಿಂದ ಶೋಭಾ ಕರಂದ್ಲಾಜೆ ಈ ಕ್ಷೇತ್ರದಲ್ಲಿ ಸ್ಪರ್ಧಿಸಿ ಸುರೇಶ್‌ಕುಮಾರ್‌ ಅವರಿಗೆ ಪೈಪೋಟಿ ನೀಡಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಶೋಭಾ ಕರಂದ್ಲಾಜೆ, ಸುರೇಶ್‌ಕುಮಾರ್‌ ಇದೀಗ ಒಂದೇ ಪಕ್ಷದಲ್ಲಿದ್ದಾರೆ. ಇಲ್ಲಿ ಜೆಡಿಎಸ್‌ ಇನ್ನೂ ಅಭ್ಯರ್ಥಿ ಘೋಷಿಸಿಲ್ಲ.

ಹೆಬ್ಟಾಳ: ಬಿಜೆಪಿಯಿಂದ ವೈ.ಎ.ಎ.ನಾರಾಯಣಸ್ವಾಮಿ, ಜೆಡಿಎಸ್‌ನಿಂದ ಹನುಮಂತೇಗೌಡ, ಕಾಂಗ್ರೆಸ್‌ನಿಂದ ಭೈರತಿ ಸುರೇಶ್‌ ಹೆಬ್ಟಾಳದಲ್ಲಿ ಪೈಪೋಟಿ ನಡೆಸಲಿದ್ದು, ರಾಜಕೀಯವಾಗಿ ಮೂವರು ಸರಿಬಲ ಹೊಂದಿದವರೇ ಆಗಿದ್ದಾರೆ. ನಾರಾಯಣಸ್ವಾಮಿ ಹಾಲಿ ಶಾಸಕರು. ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಬೇಕೆಂದೇ ವಿಧಾನಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬೈರತಿ ಸುರೇಶ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್‌ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಘೋಷಿಸುವ ಮೊದಲೇ ಹನುಮಂತೇಗೌಡರ ಹೆಸರು ಪ್ರಕಟಿಸಿತ್ತು. ಮೂರು ಪಕ್ಷದ ಹುರಿಯಾಳುಗಳು ಮತಬೇಟೆ ಆರಂಭಿಸಿದ್ದು ಉಪ ಚುನಾವಣೆ ಮೂಲಕ ರಾಜ್ಯಾದ್ಯಂತ ಸುದ್ದಿಯಾಗಿದ್ದ ಹೆಬ್ಟಾಳ ಈ ಚುನಾವಣೆಯಲ್ಲಿಯೂ ಅಷ್ಟೇ ಸುದ್ದಿಯಾಗುವ ಲಕ್ಷಣಗಳೂ ಇವೆ.

ಕ್ಷೇತ್ರ    ಕಾಂಗ್ರೆಸ್‌    ಬಿಜೆಪಿ    ಜೆಡಿಎಸ್‌
ಶಿವಾಜಿನಗರ    ರೋಷನ್‌ಬೇಗ್‌ ಕಟ್ಟಾ ಸುಬ್ರಹ್ಮಣ್ಯ ನಾಯ್ಡು
ಸಿ.ವಿ.ರಾಮನ್‌ನಗರ    ಸಂಪತ್‌ರಾಜ್‌    ರಘು    ಪಿ.ರಮೇಶ್‌
ರಾಜರಾಜೇಶ್ವರಿ ನಗರ    ಮುನಿರತ್ನ    ತುಳಸಿ ಮುನಿರಾಜುಗೌಡ     ರಾಮಚಂದ್ರ(ನಟಿ ಅಮೂಲ್ಯ ಮಾವ)
ಬಸವನಗುಡಿ    ಬೋರೇಗೌಡ    ಎಲ್‌.ಎ.ರವಿಸುಬ್ರಹ್ಮಣ್ಯ    ಕೆ.ಬಾಗೇಗೌಡ
ಜಯನಗರ    ಸೌಮ್ಯರೆಡ್ಡಿ (ರಾಮಲಿಂಗಾರೆಡ್ಡಿ ಪುತ್ರಿ )    ವಿಜಯಕುಮಾರ್‌
ರಾಜಾಜಿನಗರ    ಜಿ.ಪದ್ಮಾವತಿ    ಸುರೇಶ್‌ ಕುಮಾರ್‌
ಹೆಬ್ಟಾಳ    ಭೈರತಿ ಸುರೇಶ್‌    ವೈ.ಎ.ಎ.ನಾರಾಯಣಸ್ವಾಮಿ    ಹನುಮಂತೇಗೌಡ

Advertisement

Udayavani is now on Telegram. Click here to join our channel and stay updated with the latest news.

Next