Advertisement

ಬೆಂಗಳೂರಿನ ಸ್ವಾತಂತ್ರ್ಯ ಚಳವಳಿ ಉಳಿದ ನಗರಗಳಿಗಿಂತ ಭಿನ್ನ

11:13 AM Aug 15, 2022 | Team Udayavani |

ಸ್ವಾತಂತ್ರ್ಯ ನಂತರದಲ್ಲಿ ಜಾಗತಿಕ ನಗರವಾಗಿ ಹೊರಹೊಮ್ಮಿರುವ ಬೆಂಗಳೂರು ಸ್ವಾತಂತ್ರ್ಯ ಹೋರಾಟದ ಕಾಲದಲ್ಲೂ ಪ್ರಮುಖ ಸ್ಥಾನ ಪಡೆದುಕೊಂಡು ಗಮನ ಸೆಳೆದಿತ್ತು. ಬೆಂಗಳೂರಿನಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಗೆ ಉಳಿದ ನಗರಗಳಿಗಿಂತ ಬೇರೆ ಸ್ವರೂಪದ್ದು. ಆಗ ಬೆಂಗಳೂರು ನಗರ ಎರಡು ಆಡಳಿತಕ್ಕೆ ಒಳಪಟ್ಟ ಸ್ಥಳವಾಗಿತ್ತು.

Advertisement

ಹಳೆಯ ಬೆಂಗಳೂರು ಮೈಸೂರು ಸಂಸ್ಥಾನದ ಆಡಳಿತದಲ್ಲಿದ್ದರೆ ಹೊಸ ಬೆಂಗಳೂರು( ಕಂಟೋನ್ಮೆಂಟ್‌ ಪ್ರದೇಶ) ಬ್ರಿಟಿಷ್‌ ಸೈನ್ಯದ ಉಸ್ತುವಾರಿ ಇತ್ತು. ರಾಷ್ಟ್ರೀಯ ಚಳ ವಳಿ ಜರು ಗಿದ್ದು ಬಹುತೇಕ ಕೆಂಪೇಗೌಡರು ಕಟ್ಟದ ಹಳೆಯ ಬೆಂಗಳೂರು ಪ್ರದೇಶಗಳಲ್ಲಿ. ಬಳೇಪೇಟೆ, ಅರಳೇಪೇಟೆ, ಕಬ್ಬನ್‌ ಪೇಟೆಗಳೇ ಸ್ವಾತಂತ್ರ್ಯ ಚಳವಳಿ ನಡೆದ ಮುಖ್ಯ ಪ್ರದೇಶಗಳು. ಮೈಸೂರು ಬ್ಯಾಂಕ್‌(ಈಗ ಎಸ್‌ ಬಿಐ) ಚೌಕವೇ ಆಗಲೂ ಸ್ವಾತಂತ್ರ್ಯ ಹೋರಾಟದ ಕೇಂದ್ರ ಸ್ಥಳ. ಈ ಚೌಕಕ್ಕೆ ಸಮೀಪದಲ್ಲಿರುವ ಬನ್ನಪ್ಪ ಪಾರ್ಕ್‌, ಸೆಂಟ್ರಲ್‌ ಕಾಲೇಜಿನ ಮುಂಭಾಗದಲ್ಲಿದ್ದ ಕಲಾ ಹಾಗೂ ವಿಜ್ಞಾನ ಕಾಲೇಜು(ಗ್ಯಾಸ್‌ ಕಾಲೇಜು) ಆವರಣಗಳೇ ಸಾರ್ವಜನಜನಿಕ ಸಭೆ ಸಮಾರಂಭಗಳ ತಾಣಗಳು.

ಮೊದ ಮೊದಲಿಗೆ ಚಿಕ್ಕಲಾಲ್‌ ಬಾಗ್‌(ತುಳಸಿ ತೋಟ) ಸ್ವಾತಂತ್ರ್ಯ ಹೋರಾಟ ಚಟುವಟಿಕೆ ಗಳಿಗೆ ಆಸರೆ ಕೊಟ್ಟ ಜಾಗ. ಅಖಿಲ ಭಾರತ ಪ್ರಜಾ ಸಂಸ್ಥಾನಗಳ ಸಮ್ಮೇಳನ ಅಧ್ಯಕ್ಷ ಡಾ| ಪಟ್ಟಾಭಿ ಸೀತಾರಾಮಯ್ಯ, ನಾಯಕರಾದ ಬಲವಂತ ರಾಯ್‌ ಮೆಹೆತಾ ಮುಂತಾದವರೆಲ್ಲ ಇಲ್ಲಿ ಬಹಿರಂಗ ಸಭೆಗಳನ್ನು ಉದ್ದೇಶಿಸಿ ಮಾತನಾಡಿದವರು. 1942ರಲ್ಲಿ ಕಾವು ಹೆಚ್ಚಿಸಿದ ಭಾರತ ಬಿಟ್ಟು ತೊಲಗಿ ಚಳವಳಿ ಬೆಂಗಳೂರಿನಲ್ಲಿ ಚಿಗುರೊಡೆದಿದ್ದು ಇದೇ ಚಿಕ್ಕ ಲಾಲ್‌ ಬಾಗ್‌ ನಲ್ಲಿ.

ಸ್ವಾತಂತ್ರ್ಯ ಸಮರ ಕಾಲದಲ್ಲಿ ಸದಾ ಪ್ರತಿಭಟನೆ ಸಭೆ, ಮೆರವಣಿಗೆಗೆ ಜಾಗ ಮಾಡಿಕೊಟ್ಟಿದ್ದ ಇನ್ನೊಂದು ಸ್ಥಳ ಕೃಷ್ಣರಾಜೇಂದ್ರ ಮಾರುಕಟ್ಟೆ ಮುಂದಿನ ಮೈದಾನ. ಇಲ್ಲಿ ಪೊಲೀಸರು ಆ ಕಾಲ ದಲ್ಲೇ ನಡೆಸಿದ ಲಾಠಿಚಾರ್ಜ್ ಇನ್ನಿತರ ದೌರ್ಜನ್ಯಗಳಿಗೆ ಲೆಕ್ಕವೇ ಇಲ್ಲ. ಚಳವಳಿ ಜೊತೆ ಜೊತೆಗೆ ಹಲವು ರಚನಾತ್ಮಕ ಕಾರ್ಯಕ್ರಮಗಳು ನಡೆದಿದ್ದು ಬೆಂಗಳೂರು ನಗರದ ವಿಶೇಷ.

ಸ್ವದೇಶಿ ಚಳವಳಿ ಆರಂಭಗೊಂಡಾಗ ಅನೇಕ ಖಾದಿ ಭಂಡಾರಗಳು ಇಲ್ಲಿ ತಲೆ ಎತ್ತಿದ್ದವು. ಅಂತಹ ಒಂದು ಖಾದಿ ಭಂಡಾರಕ್ಕೆ ಪ್ರಸಿದ್ಧ ಗಾಯಕಿ ಎಂ.ಎಸ್‌. ಸುಬ್ಬಲಕ್ಷ್ಮೀ ಅವರ ಪತಿ ಸದಾಶಿವಂ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸಿದ್ದರು. ಗಾಂಧಿ ಬಜಾರ್‌ ನಲ್ಲಿ ದೇಶೀಯ ವಿದ್ಯಾಸಂಸ್ಥೆ (ಈಗಿನ ನ್ಯಾಷನಲ್‌ ಕಾಲೇಜು-ಶಾಲೆ-ಪ್ರೌಢ ಶಾಲೆ ಪ್ರಾರಂಭವಾಗಿದ್ದು ಚಳವಳಿಯ ಒಂದು ಭಾಗವಾಗಿಯೇ. ಆಗ ಗಾಂಧಿ ಅವರು ಇಲ್ಲೊಂದು ವ್ಯಾಯಾಮ ಶಾಲೆಗೂ ಚಾಲನೆ ನೀಡಿದ್ದರು.

Advertisement

ಕೆಂಪೇಗೌಡ ರಸ್ತೆಯಲ್ಲಿರುವ ಬನ್ನಪ್ಪ ಪಾರ್ಕ್‌ ಬಹು ಪ್ರಮುಖ ಸ್ವಾತಂತ್ರ್ಯ ಸಮರ ಕ್ಷೇತ್ರ. 1937ರಲ್ಲಿ ಮುಂಬೈನ ಮೇಯರ್‌ ಆಗಿದ್ದ ಕಾಂಗ್ರೆಸ್‌ ನಾಯಕ ನಾರಿಮನ್‌ ಅವರ ಭಾಷಣ ಏರ್ಪಟ್ಟಿದ್ದು ಬನ್ನಪ್ಪ ಪಾರ್ಕ್‌ ನಲ್ಲಿ. ಅಸಂಖ್ಯ ಜನರು ಸೇರಿದ್ದರು. ಪೊಲೀಸರ ಎಚ್ಚರಿಕೆಗೂ ಹೆದರದೇ ಬನ್ನಪ್ಪ ಪಾರ್ಕ್‌ಗೆ ಜನರು ಸೇರ ತೊಡಗಿದಾಗ ಪೊಲೀಸರು ಲಾಠ ಪ್ರಹಾರ ಶುರುವಿಟ್ಟರು. ಆಗ ಜನ ಚೆಲ್ಲಾಪಿಲ್ಲಿಯಾಗಿ ಓಡಾಡುತ್ತಿರುವಾಗ ಪೊಲೀಸ್‌ ಅಧಿಕಾರಿ ಹಾಮಿಲ್ಟನ್‌ ತನ್ನ
ಸಿಬ್ಬಂದಿಯೊಡನೆ ಗೋಲಿಬಾರ್‌ ಮಾಡಲು ಶುರು ಮಾಡಿದರು. ಗುಂಡಪ್ಪ ಎಂಬಾತ ಗುಂಡೇಟಿನಿಂದ ಮೃತಪಟ್ಟ ಘಟನೆ ಇಲ್ಲಿ ನಡೆಯಿತು. ಮುಂದಿನ ಒಂದು ವಾರ ಗ್ಯಾಸ್‌ ಕಾಲೇಜು ವಿದ್ಯಾ ರ್ಥಿಗಳು ಇದನ್ನು ಪ್ರತಿಭಟಿಸಲು ಪ್ರತಿಬಂಧ ಆದೇಶವನ್ನು ಉಲ್ಲಂಘನೆ ಮಾಡಲು ತೊಡಗಿದರು.

1942ರ ಆಗಸ್ಟ್‌ ನಲ್ಲಿ ಕ್ವಿಟ್‌ ಇಂಡಿಯಾ ಚಳವಳಿ ಬೆಂಗಳೂರಿನಲ್ಲಿ ತೀವ್ರವಾಯಿತು. ಆಗಸ್ಟ್‌ 17ರಂದು ಉದ್ರಿಕ್ತ ಜನರು ಅರಳೇಪೇಟೆ ಅಂಚೆ ಕಚೇರಿಯನ್ನು ಸುಟ್ಟರು. ಅಲ್ಲೇ ಇದ್ದ ಪೊಲೀಸ್‌ ಠಾಣೆ ಮೇಲೆಯೂ ದಾಳಿ ಮಾಡಿದಾಗ ಅಶ್ವದಳ ಪೊಲೀಸರು ನಿಯಂತ್ರಣಕ್ಕೆ ಇಳಿದರು. ಹಳೇ ಬೆಂಗಳೂರಿನಲ್ಲಿರುವ ರಸ್ತೆ ರಸ್ತೆಗಳಲ್ಲಿ ಉದ್ರಿಕ್ತ ವಾತಾವರಣ ಉಂಟಾಯಿತು. ಪ್ರತಿಭಟನಾ ನಾಯಕರನ್ನು ಹತೋಟಿಗೆ ತರಲು ಗೋಲಿ ಬಾರ್‌ ಮಾಡಿದಾಗ 6 ಮಂದಿ ಅಸು ನೀಗಿದರು. 50 ಮಂದಿಗೆ ತೀವ್ರ ತರ ಗಾಯಗಳಾಗಿದ್ದವು. ಆಗಿನಿಂದ ಪ್ರತಿಭಟನೆಗೆ ಹೆಚ್ಚು ಹೆಚ್ಚು ಜನ ಸೇರ ತೊಡಗಿದಾಗ ಪ್ರತಿರೋಧಕ್ಕೆ ಹೆದರಿ ಪೊಲೀಸರು ತೆಪ್ಪಗಾದರು. ಸ್ವಾತಂತ್ರ್ಯ ಸಮರದಲ್ಲಿ ಒಂದೆ ರಡು ತೀವ್ರ ಪ್ರತಿಭಟನೆಗಳು ಗೋಲಿಬಾರ್‌ ನಲ್ಲಿ ಕೊನೆಯಾದರೆ, ಶಾಂತ ರೀತಿಯಿಂದ ನಡೆದ ಚಟುವಟಿಕೆಗಳೇ ಹೆಚ್ಚು.

ಬೆಂಗಳೂರಿಗೆ ಬಾಪೂಜಿ ಭೇಟಿ
1915ರಲ್ಲಿ ಮಹಾತ್ಮ ಗಾಂಧೀಜಿ ಅವರು ಬೆಂಗಳೂರಿಗೆ ಪ್ರಥಮ ಭೇಟಿ ನೀಡಿದ ಬಳಿಕ ನಾಲ್ಕಾರು ಬಾರಿ ಬೆಂಗಳೂರಿಗೆ ಬಂದಿದ್ದರು. ಆಗ ಲಾಲ್‌  ಬಾಗ್‌ನ ಗಾಜಿನ ಮನೆಯಲ್ಲಿ ಬೃಹತ್‌ ಸಭೆ ನಡೆಯಿತು. ಸ್ವಾತಂತ್ರ್ಯದ ಪ್ರತಿಪಾದನೆ ಕುರಿತು ಅವರು ಮಾತನಾಡಿದರೂ ರಚನಾತ್ಮಕ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತುಕೊಟ್ಟರು. ಅನಾರೋಗ್ಯದಿಂದ ವಿಶ್ರಾಂತಿಗೆಂದು ನಂದಿಬೆಟ್ಟಕ್ಕೆ ಎರಡು ಬಾರಿ ಬಂದಿದ್ದ ಗಾಂಧೀಜಿ ಒಮ್ಮೆ ಬೆಂಗಳೂರಿನ ಕುಮಾರ ಕೃಪಾದಲ್ಲಿ ತಂಗಿದ್ದರು.

ಬಾಪು ಆಗ ಹೊಸೂರು ರಸ್ತೆಯಲ್ಲಿರುವ ರಾಷ್ಟ್ರೀಯ ಹೈನುಗಾರಿಕೆ ಕೇಂದ್ರದಲ್ಲಿ ಪಶುಪಾಲನೆ ಕುರಿತು ತರಬೇತಿ ಪಡೆದಿದ್ದು ಉಲ್ಲೇಖನಾರ್ಹ. ಅವರೊಂದಿಗೆ ಇನ್ನೊಬ್ಬ ನಾಯಕ ಮದನ ಮೋಹನ ಮಾಳವೀಯ ಅವರೂ ಇದ್ದರು. ಆಗ ಹೈನುಗಾರಿಕೆ ಕೇಂದ್ರದಲ್ಲಿದ್ದ ಹಸು ಜೊತೆ ಗಾಂಧಿ -ಮಾಳವೀಯ ಛಾಯಾಚಿತ್ರ ತೆಗೆಸಿಕೊಂಡಿದ್ದರು. ಗೋಪಾಲಕೃಷ್ಣ ಗೋಖಲೆ ಅವರ ಭಾವ ಚಿತ್ರ ಅನಾವರಣ ಮಾಡಿದ್ದ ಬಾಪೂಜಿ ಕೆ.ಆರ್‌.ರಸ್ತೆಯಲ್ಲಿರುವ ಮಹಿಳಾ ಸೇವಾ ಸಮಾಜಕ್ಕೂ ಭೇಟಿ ನೀಡಿ ಖಾದಿ ಚಳವಳಿ ಬಗ್ಗೆ ಮಾತನಾಡಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪ್ರಾತ್ರ ಗಳ ಕುರಿತು ಪ್ರಸ್ತಾಪಿಸಿದ್ದರು.

ಕುಮಾರಕೃಪಾದಲ್ಲಿ ಬಾಪು ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಮುಂಜಾನೆ ಸಂಜೆ ಪ್ರಾರ್ಥ ನೆಯನ್ನು ಅವರು ತಪ್ಪಿಸುತ್ತಿರಲಿಲ್ಲ. ಆ ಸ್ಥಳವನ್ನು ಈಗ ಸ್ಮಾರಕ (ಲಲಿತ ಅಶೋಕ್‌ ಈಜು ಕೊ ಳದ ಬಳಿ)ಮಾಡಲಾಗಿದೆ. ಮೈಸೂರು ಬ್ಯಾಂಕ್‌ ಚೌಕದಲ್ಲಿ ಪೊಲೀಸರು ಗುಂಡಿಗೆ ಬಲಿಯಾದ ವರ ಸ್ಮರಣಾರ್ಥ ಹುತಾತ್ಮ ಸ್ಮಾರಕವನ್ನು ನಿರ್ಮಿಸಲಾಗಿದೆ. (ಚೌಕದ ಶನೇಶ್ವರ ಗುಡಿ ಹಿಂದೆ ಇದೆ.)  ಕಾಂಗ್ರೆ ಸ್‌ನ ಹಲವು ಮುಖಂಡರು ಬೆಂಗಳೂರಿಗೆ ಭೇಟಿ ನೀಡಿ ಜನರನ್ನು
ಚಳವಳಿಗಾಗಿ ಹುರಿದುಂಬಿಸುವ ಭಾಷಣ ಮಾಡಲು ಹಲವು ಸ್ಥಳಗಳಿದ್ದವು. ರೈಲ್ವೆ ನಿಲ್ದಾಣದ ಎದುರಿಗಿದ್ದ ಧರ್ಮಂಬುದಿ ಕೆರೆ ಮೈದಾನದಲ್ಲಿ ಕಾಂಗ್ರೆಸ್‌ ಅಧಿವೇಶನ ನಡೆದಾಗ ಅದಕ್ಕೆ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಹೆಸರಿಡಲಾಯಿತು. ಸುಭಾಷ್‌ ನಗರ ಮೈದಾನದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಹಲವು ಬಹಿರಂಗ ಭಾಷಣಗಳು, ಪ್ರತಿ ಭಟನೆಗಳು ನಡೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next