Advertisement

Bengaluru: ಡಿಜಿಟಲ್‌ ಅರೆಸ್ಟ್ ಮಾಡಿ ವ್ಯಕ್ತಿಗೆ 2.2 ಕೋಟಿ ವಂಚನೆ

10:44 AM Aug 17, 2024 | Team Udayavani |

ಬೆಂಗಳೂರು: ನಿಮ್ಮ ಹೆಸರಿನಲ್ಲಿ ಡ್ರಗ್ಸ್‌ ಪಾರ್ಸೆಲ್‌ ಬಂದಿದೆ ಎಂದು ಪೊಲೀಸ್‌ ಅಧಿಕಾರಿ ಸೋಗಿನಲ್ಲಿ ಕೊಡಗಿನ ನಿವೃತ್ತ ಸಿವಿಲ್‌ ಎಂಜಿನಿಯರ್‌ಗೆ ಬೆದರಿಸಿ ಅವರನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ ಬರೋಬ್ಬರಿ 2.21 ಕೋಟಿ ರೂ. ಲಪಟಾಯಿಸಿದ್ದ ಐವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

Advertisement

ಬೆಂಗಳೂರಿನ ಮಹಮದ್‌ ಶಬೀಬ್‌, ಮಹಮದ್‌ ಅಯಾನ್‌, ಅಹಸಾನ್‌ ಅನ್ಸಾರಿ, ಸಾಲಮನ್‌ ರಾಜ ಹಾಗೂ ದುಬೈನ ಯೂಸುಫ್ ಸೇಠ್ ಬಂಧಿತರು. ‌ಬಂಧಿತರಿಂದ 1.70 ಕೋಟಿ ರೂ., 7,700 ಅಮೆರಿಕನ್‌ ಡಾಲರ್‌ ಹಾಗೂ ವಂಚನೆ ಮಾಡಿ ಬಂದ ದುಡ್ಡಲ್ಲಿ ಖರೀದಿಸಿದ್ದ ಬೆಂಜ್‌ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಕೊಡಗು ಜಿಲ್ಲೆಯ ಸಿದ್ದಾಪುರದ ಡಿ.ಎ.ಮುತ್ತಣ್ಣ (75) ಎಂಬುವವರಿಗೆ ಮೇ 11 ರಂದು ಬೆಳಗ್ಗೆ 10.30ಕ್ಕೆ ಅಪರಿಚಿತ ನಂಬರ್‌ನಿಂದ ಕರೆ ಬಂದಿತ್ತು. ಕರೆ ಸ್ವೀಕರಿಸಿದಾಗ ಫೆಡೆಕ್ಸ್‌ ಕಂಪನಿಯ ಕೆಲಸಗಾರ ಎಂದು ಪರಿಚಯಿಸಿಕೊಂಡ ಆರೋಪಿಯು ನಿಮ್ಮ ಹೆಸರಿನಲ್ಲಿ ಬಂದ ಪಾರ್ಸೆಲ್‌ನಲ್ಲಿ 200 ಗ್ರಾಂ ಎಂಡಿಎಂಎ ಮಾದಕ ವಸ್ತು ಇರುವುದು ಪತ್ತೆಯಾಗಿದೆ. ಹೀಗಾಗಿ ಆ ಪಾರ್ಸೆಲ್‌ ಜಪ್ತಿಯಾಗಿದೆ.

ಈ ಬಗ್ಗೆ ನೀವು ಕ್ರೈಮ್‌ ಪೊಲೀಸ್‌ ಅಧಿಕಾರಿಯವರನ್ನು ಸಂಪರ್ಕಿಸಿ ಎಂದು ಹೇಳಿದ್ದಾನೆ. ಬಳಿಕ ಕ್ರೈಮ್‌ ಪೋಲಿಸರೆಂದು ಯಾರೋ ಅಪರಿಚಿತರಿಗೆ ವಾಟ್ಸಾಪ್‌ ಕರೆಯನ್ನು ಕನೆಕ್ಟ್ ಮಾಡಿದ್ದಾನೆ. ಆ ವೇಳೆ ಕ್ರೈಮ್‌ ಪೊಲೀಸ್‌ ಅಧಿಕಾರಿಗಳ ಸೋಗಿನಲ್ಲಿ ಅಪರಿಚಿತರೊಬ್ಬರು ಮಾತನಾಡಿದ್ದರು.

“ನಿಮ್ಮ ಪಾರ್ಸೆಲ್‌ನಲ್ಲಿ ಎಂಡಿಎಂಎ ಮಾದಕ ವಸ್ತು ಇರುವ ಬಗ್ಗೆ ಪ್ರಕರಣ ದಾಖಲಾಗಿದೆ. ಇದನ್ನು ಇತ್ಯರ್ಥಪಡಿಸಿಕೊಳ್ಳಲು ನೀವು ಹಣ ನೀಡಬೇಕು. ಇಲ್ಲದಿದ್ದರೆ ನಿಮ್ಮನ್ನು ಬಂಧಿಸಬೇಕಾಗುತ್ತದೆ ಎಂದು ಹೇಳಿ ಡಿಜಿಟಲ್‌ ಅರೆಸ್ಟ್‌ ಮಾಡಿದ್ದರು. ಇದರಿಂದ ಆತಂಕಗೊಂಡ ಮುತ್ತಣ್ಣ ಹೆದರಿಕೆಯಿಂದ ಯಾವುದೇ ಯೋಚನೆ ಮಾಡದೆ ಬ್ಯಾಂಕ್‌ ಖಾತೆಯಿಂದ ಅಪರಿಚಿತ ವ್ಯಕ್ತಿಗಳು ನೀಡಿದ ಬ್ಯಾಂಕ್‌ ಖಾತೆಗಳಿಗೆ ಒಟ್ಟು 2.21 ಕೋಟಿ ರೂ.ಗಳನ್ನು ಆರ್‌.ಟಿ.ಜಿ.ಎಸ್‌. ಮೂಲಕ ವರ್ಗಾವಣೆ ಮಾಡಿದ್ದರು. ಕೆಲ ದಿನಗಳ ಬಳಿಕ ಸೈಬರ್‌ ವಂಚಕರು ಮತ್ತೆ ಕರೆ ಮಾಡಿ ಇನ್ನಿತರೆ ಬ್ಯಾಂಕ್‌ ಖಾತೆಗಳಿಗೆ ಮತ್ತೆ ಹಣ ಜಮಾ ಮಾಡುವಂತೆ ಬೇಡಿಕೆ ಇಟ್ಟಿದ್ದರು. ಇದರಿಂದ ಸಂಶಯಗೊಂಡ ಮುತ್ತಣ್ಣ ಮೇ 28ರಂದು ಕೊಡಗು ಸಿ.ಇ.ಎನ್‌ ಅಪರಾಧ ಪೊಲೀಸ್‌ ಠಾಣೆಗೆ ಈ ಬಗ್ಗೆ ದೂರು ನೀಡಿದ್ದರು.

Advertisement

ವಿಚಾರಣೆ ವೇಳೆ ಇನ್ನೂ 5 ಕೇಸ್‌ ಪತ್ತೆ: ಆರೋಪಿಗಳು ಮುತ್ತಣ್ಣ ಅವರಿಗೆ ವಂಚಿಸಿದ ಮಾದರಿಯಲ್ಲೇ ಉತ್ತರ ಪ್ರದೇಶ, ಕೋಲ್ಕತಾ, ಒಡಿಶಾ ಹಾಗೂ ಬೆಂಗಳೂರಿನಲ್ಲಿ ಐವರಿಗೆ ಇದೇ ಮಾದರಿಯಲ್ಲಿ ವಂಚಿಸಿರುವುದು ಪತ್ತೆಯಾಗಿದೆ. ಪ್ರಕರಣದಲ್ಲಿ ಶಾಮೀಲಾದ ದುಬೈನಲ್ಲಿ ಇನ್ನೂ ಮೂವರನ್ನು ತಲೆ ಮರೆಸಿಕೊಂಡಿದ್ದಾರೆ.

ಈ ಪ್ರಮುಖ ಆರೋಪಿಗಳು ದುಬೈನಿಂದ ಅಪರಾಧ ವೆಸಗಿ ಭಾರತೀಯ ಬ್ಯಾಂಕ್‌ ಅಕೌಂಟ್‌ಗಳ ಮೂಲಕ ವಂಚಿಸುತ್ತಿದ್ದರು. ಆರೋಪಿ ಸಾಲಮನ್‌ ರಾಜ ಹಾಗೂ ಮಹಮದ್‌ ಶಬೀಬ್‌ ವಂಚಿಸಿದ ದುಡ್ಡನ್ನು ಬ್ಯಾಂಕ್‌ ಖಾತೆಗಳಿಂದ ಡ್ರಾ ಮಾಡಿಕೊಂಡು ಬೇರೆಯ ವರಿಗೆ ಕೊಡುವ ಕೆಲಸ ಮಾಡುತ್ತಿದ್ದರು.

ಆರೋಪಿ ಯೂಸುಫ್ ಇದನ್ನು ಅಕ್ರಮವಾಗಿ ದುಬೈಗೆ ರವಾನಿಸಿ ಅಲ್ಲಿರುವ ಪ್ರಕರಣದ ರೂವಾರಿಗಳಿಗೆ ಕೊಡುತ್ತಿದ್ದ. ಯೂಸುಫ್ ಹೊರತುಪಡಿಸಿ ಉಳಿದ ಬಂಧಿತ ಆರೋಪಿಗಳಿಗೆ ಕಮೀಷನ್‌ ಆಧಾರದಲ್ಲಿ ದುಡ್ಡು ನೀಡಲಾಗುತ್ತಿತ್ತು. ಸಾಲಮನ್‌ ರಾಜ ಹಾಗೂ ದುಬೈನ ಯೂಸುಫ್ ಸೇಠ್ ಹವಾಲ ದಂಧೆ ನಡೆಸುತ್ತಿರುವುದು ಪತ್ತೆಯಾಗಿದೆ. ತನಿಖೆ ಮುಕ್ತಾಯಗೊಂಡ ಬಳಿಕ ಈ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಮಾಹಿತಿ ನೀಡುವ ಸಾಧ್ಯತೆಗಳಿವೆ. ಬ್ಯಾಂಕ್‌ ಖಾತೆ ಸುಳಿವು ಆಧರಿಸಿ ಸಿಐಡಿ ಬೇಟೆ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವರ್ಗಾ ವಣೆ ಮಾಡಲಾಗಿತ್ತು. ಸಿಐಡಿ ಸೈಬರ್‌ ಕ್ರೈಂ ವಿಭಾಗದ ಎಸ್‌.ಪಿ. ಡಾ.ಅನೂಪ್‌ ಎ.ಶೆಟ್ಟಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ಆರೋಪಿಗಳಿಗಾಗಿ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು.‌

ಮೊದಲಿಗೆ ಸಿಐಡಿ ಪೊಲೀಸರು ಮುತ್ತಣ್ಣ ಅವರು ದುಡ್ಡು ವರ್ಗಾವಣೆ ಮಾಡಿದ್ದ ಆರೋಪಿಗಳ ಬ್ಯಾಂಕ್‌ ಖಾತೆ ಮಾಹಿತಿ ಪಡೆದಿದ್ದರು. ಆ ಬ್ಯಾಂಕ್‌ ಖಾತೆಗಳಿಂದ ವಂಚನೆಯ ಹಣವು ಸುಮಾರು 26 ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆಯಾಗಿರುವುದು ಕಂಡು ಬಂದಿತ್ತು. ಬ್ಯಾಂಕ್‌ ಖಾತೆ ಯಾರ ಹೆಸರಿಗಿತ್ತು, ಖಾತೆ ತೆರೆದ ಏಜೆಂಟ್‌ಗಳು ಯಾರು ಎಂಬುದನ್ನು ಪತ್ತೆ ಹಚ್ಚಿದ್ದರು. ಆ ವೇಳೆ ಬೆಂಗಳೂರಿನ ಹೆಣ್ಣೂರು ಬಳಿಯ ಬ್ಯಾಂಕ್‌ನಿಂದ ಆರೋಪಿಗಳು ಹಣ ಡ್ರಾ ಮಾಡಿಕೊಂಡಿರುವ ಸುಳಿವು ಸಿಕ್ಕಿತ್ತು. ಇದರ ಬೆನ್ನು ಬಿದ್ದು ಇನ್ನಷ್ಟು ಆಳಕ್ಕೆ ಹೋಗಿ ಗುಪ್ತಚರ ಇಲಾಖೆ ಸಹಾಯದ ಮೂಲಕ ತನಿಖೆ ನಡೆಸಿದಾಗ ಆರೋಪಿ ಮಹಮದ್‌ ಶಬೀಬ್‌ ಬೆಂಗಳೂರಿನ ಡಿಜೆಹಳ್ಳಿಯಲ್ಲಿರುವುದು ಪತ್ತೆಯಾಗಿತ್ತು. ಈ ಸುಳಿವಿನ ಆಧಾರದಲ್ಲಿ ಆತನನ್ನು ಬಂಧಿಸಲಾಗಿತ್ತು.

ಆತ ಕೊಟ್ಟ ಮಾಹಿತಿ ಆಧರಿಸಿ ಮಹಮದ್‌ ಅಯಾನ್‌, ಅಹಸಾನ್‌ ಅನ್ಸಾರಿ ಸಿಕ್ಕಿ ಬಿದ್ದಿದ್ದರು. ಯೂಸುಫ್ ಸೇs… ದುಬೈನಿಂದ ಬಂದು ಬೆಂಗಳೂರಿನ ಪಂಚತಾರ ಹೋಟೆಲ್‌ವೊಂದರಲ್ಲಿ ತಂಗಿದ್ದಾಗ ಸಿಐಡಿ ಬಲೆಗೆ ಬಿದ್ದಿದ್ದ. ಈತ ಕೊಟ್ಟ ಮಾಹಿತಿ ಆಧರಿಸಿ ಸಾಲಮನ್‌ ರಾಜನನ್ನು ಖೆಡ್ಡಾಕ್ಕೆ ಬೀಳಿಸಲಾಗಿತ್ತು.

ಆಗಿದ್ದೇನು?

 ಕೊಡಗಿನ ನಿವೃತ್ತ ಸಿವಿಲ್‌ ಎಂಜಿನಿಯರ್‌ಗೆ ಅಪರಿಚಿತ ಕರೆ

 ಫೆಡೆಕ್ಸ್‌ ಕಂಪನಿಯ ನೌಕರ ಎಂದು ಪರಿಚಯಿಸಿಕೊಂಡ ವಂಚಕ

 ನಿಮ್ಮ ಹೆಸರಿನಲ್ಲಿ ಡ್ರಗ್ಸ್‌ ಪಾರ್ಸಲ್‌ ಬಂದಿದೆ ಎಂದು ಬೆದರಿಕೆ

 ಕ್ರೈಮ್‌ ಪೊಲೀಸ್‌ ಅಧಿಕಾರಿ ಸೋಗಿನಲ್ಲಿ ವಾಟ್ಸ್‌ಆ್ಯಪ್‌ ಕರೆ

 ಪ್ರಕರಣ ದಾಖಲಿಸುತ್ತೇವೆ ಎಂದು ಎಂಜಿನಿಯರ್‌ಗೆ ಬ್ಲ್ಯಾಕ್‌ಮೇಲ್‌

 ಬೆದರಿಸಿ 2.21 ಕೋಟಿ ರೂ. ಹಾಕಿಸಿಕೊಂಡ ಸೈಬರ್‌ ವಂಚಕರು

 ಮತ್ತೆ ಹಣಕ್ಕೆ ಬೇಡಿಕೆಯೊಡ್ಡಿದಾಗ ಪೊಲೀಸರಿಗೆ ತಿಳಿಸಿದ ಸಂತ್ರಸ್ತ

 ಬಳಿಕ ಕಾರ್ಯಾಚರಣೆ ನಡೆಸಿ ಪ್ರಕರಣ ಭೇದಿಸಿದ ಸಿಐಡಿ ಪೊಲೀಸ್‌

Advertisement

Udayavani is now on Telegram. Click here to join our channel and stay updated with the latest news.

Next