Advertisement

ಬಜಪೆ: ರಸ್ತೆ ವಿಸ್ತರಣೆಗೊಂಡರೂ ಸಂಕಷ್ಟ ತಪ್ಪಲಿಲ್ಲ!

03:09 PM Dec 19, 2022 | Team Udayavani |

ಬಜಪೆ: ಇಲ್ಲಿನ ಪೊಲೀಸ್‌ ಠಾಣೆಯಿಂದ ಮುರನಗರ ಹಳೆ ವಿಮಾನ ನಿಲ್ದಾಣ ಕಾಂಕ್ರೀಟ್‌ ರಸ್ತೆಯ ಇಕ್ಕೆಲಗಳಲ್ಲಿ ಹುಡಿಮಣ್ಣು ಹಾಕಿದ ಪರಿಣಾಮ ರಸ್ತೆ ಬದಿಯ ಮನೆಗಳು, ಆಸ್ಪತ್ರೆಯೊಳಗೆ ಧೂಳು ತುಂಬಿಕೊಳ್ಳುವಂತಾಗಿರುವುದು ಮಾತ್ರವಲ್ಲದೆ ರಸ್ತೆಯಲ್ಲಿ ಸಾಗುವ ಲಘು ವಾಹನಗಳ ಸಂಚಾರಕ್ಕೂ ತೊಂದರೆಯಾಗಿದೆ.

Advertisement

ಬಜಪೆ ಪೊಲೀಸ್‌ ಠಾಣೆಯಿಂದ ಮುರನಗರ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಒಂದು ವಾಹನ ಸಾಗುವಷ್ಟಕ್ಕೆ ಮಾತ್ರ ಕಾಂಕ್ರೀಟ್‌ ಹಾಕಲಾಗಿತ್ತು. ಇದರಿಂದ ಎದುರು ಬರುವ ವಾಹನಗಳಿಗೆ ದಾರಿ ಕೊಡುವುದು ಲಘು ವಾಹನಗಳಿಗೆ ತೊಂದರೆಯಾಗುತ್ತಿತ್ತು.

ಈ ಬಗ್ಗೆ ಸಾರ್ವಜನಿಕರು ಅನೇಕ ಬಾರಿ ಕಾಂಕ್ರೀಟ್‌ ರಸ್ತೆಯನ್ನು ವಿಸ್ತರಿಸುವಂತೆ ಜನಪ್ರತಿನಿಧಿಗಳನ್ನು ಆಗ್ರಹಿಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಬಜಪೆ ಪೇಟೆ ರಸ್ತೆ ಕಾಮಗಾರಿ ಆರಂಭ ವಾಗಿರುವುದರಿಂದ ಪರ್ಯಾಯ ರಸ್ತೆ ಯಾಗಿ ಇದನ್ನು ಬಳಸಲಾಗುತ್ತಿದೆ. ಬಜಪೆ ಪೊರ್ಕೋಡಿ ದ್ವಾರದಿಂದ ಚರ್ಚ್‌ ವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಇದರ ಬದಲಿ ಮಾರ್ಗದ ವ್ಯವಸ್ಥೆಗಾಗಿ ವಾಹನ ಗಳಿಗೆ ಕಿನ್ನಿಪದವು ಹಳೆ ವಿಮಾನ ನಿಲ್ದಾಣ, ಮುರನಗರ, ಪೊಲೀಸ್‌ ಠಾಣೆ ರಸ್ತೆಯಾಗಿ ಬಜಪೆಗೆ ಬರಲು ಸಿದ್ಧತೆಗಳು ನಡೆಯುತ್ತಿದೆ.

ಅದಕ್ಕಾಗಿ ಮುರನಗರದಿಂದ -ಬಜಪೆ ಪೊಲೀಸ್‌ ಠಾಣೆಯ ತನಕ ಎರಡು ವಾಹನಗಳು ಸುಗುಮವಾಗಿ ಸಂಚರಿಸಲು ಅನುಕೂಲವಾಗುವಂತೆ ಕಾಂಕ್ರೀಟ್‌ ರಸ್ತೆಯ ಎರಡೂ ಬದಿಯಲ್ಲಿ ಮಣ್ಣು ಹಾಕಿ ವಿಸ್ತರಿಸಲಾಗಿದೆ.

ಎದುರಾಯ್ತು ಮತ್ತೊಂದು ಸಮಸ್ಯೆ
ರಸ್ತೆ ಕಿರಿದಾಗಿದೆ ಎಂಬ ಸಮಸ್ಯೆ ದೂರವಾದರೂ ಈಗ ರಸ್ತೆ ವಿಸ್ತರಣೆಯಾಗಿದ್ದೇ ತಪ್ಪಾಯಿತು ಎನ್ನುವಂತೆ ಇಲ್ಲಿನ ರಸ್ತೆ ಏನೋ  ವಿಸ್ತರಿಸಲಾಯಿತು. ಆದರೆ ಸುತ್ತಮುತ್ತಿಲಿನವರು ನಿತ್ಯವೂ ಧೂಳು ತಿನ್ನಬೇಕಾದ ಪ್ರಸಂಗ ಎದುರಾಗಿದೆ. ವಾಹನ ಸಂಚಾರ ಸುಗುಮವಾಗಲು ರಸ್ತೆ ಬದಿಯಲ್ಲಿ ಮಣ್ಣು ಹಾಕಲಾಗಿದೆ. ಘನ ವಾಹನಗಳು ಈ ರಸ್ತೆಯಲ್ಲಿ ಸಾಗುವ ಸಾಕಷ್ಟು ಧೂಳು ಎಳುತ್ತದೆ. ಇದರಿಂದ ಲಘು ವಾಹನ ಹಾಗೂ ದ್ವಿಚಕ್ರವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ. ಹಾಕಿದ ಮಣ್ಣಿಗೆ ನೀರು ಹಾಕಿದರೂ ಒದ್ದೆಯಾದ ಮಣ್ಣು ಕ್ಷಣದಲ್ಲೇ ಒಣಗಿ ಮತ್ತೆ ಧೂಳು ಎಳುತ್ತದೆ.

Advertisement

ಮಳೆ ಬಂದರೆ ಕೆಸರು
ಮಳೆ ಬಂದರೆ ಕಾಂಕ್ರೀಟ್‌ ರಸ್ತೆ ಕೆಸರುಮಯವಾಗಲಿದೆ. ಇದರಿಂದ ವಾಹನ ಸಂಚಾರವೇ ಕಷ್ಟಕರವಾಗಲಿದೆ. ಬಜಪೆ ಪೇಟೆ ಕಾಮಗಾರಿ ಆರಂಭದ ಬಳಿಕ ಈ ರಸ್ತೆಯ ಬದಲಿಗೆ ಪರ್ಯಾಯ ರಸ್ತೆಯಾಗಿ ಉಪಯೋಗಿಸುವುದರಿಂದ ಆಗ ವಾಹನ ಸಂಚಾರವೇ ದುರ್ಗಮವಾಗುವ ಸಾಧ್ಯತೆ ಇದೆ. ಹೀಗಾಗಿ ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಕೂಡಲೇ ಗಮನಹರಿಸಬೇಕಿದೆ. ಹುಡಿಮಣ್ಣಿನ ಬದಲು ಇಲ್ಲಿ ಕೋರೆ ಕೆಂಪು ಮಣ್ಣು ಹಾಕಬಹುದಿತ್ತು. ಇದರಿಂದ ಧೂಳು, ಕೆಸರು
ಕಡಿಮೆಯಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

ಪೊಲೀಸ್‌ ಠಾಣೆ – ಮುರನಗರ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಪೋಪ್‌ ಜಾನ್‌ ದ್ವಿತೀಯ ಅವರ ಪುಣ್ಯ ಕ್ಷೇತ್ರ, ಖಾಸಗಿ ಆಸ್ಪತ್ರೆ, ಹಲವು ಮನೆಗಳಿದ್ದು ರಸ್ತೆಯ ಧೂಳು ಆ ಪರಿಸರವನ್ನೇ ಬಹುತೇಕ ಆವರಿಸಿದೆ. ಈಗಲೇ ಇಲ್ಲಿಗೆ ಬೇರೆ ಗಟ್ಟಿ ಮಣ್ಣು ಹಾಕಿದರೆ ಉತ್ತಮ ಎನ್ನುತ್ತಾರೆ ಅಲ್ಲಿನ ನಿವಾಸಿಗಳು. ಬದಲಿ ರಸ್ತೆಯಾಗಿ ಇದು ಸುಮಾರು ಒಂದು ವರ್ಷ ಬಳಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಇಲ್ಲಿ ಬೇರೆ ಮಣ್ಣು ಹಾಕುವ ಕಾರ್ಯ ಈಗಲೇ ಮಾಡಬೇಕು. ಗುತ್ತಿಗೆದಾರರು, ಇಲಾಖೆ ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳಬೇಕಿದೆ.

ಚರಂಡಿಯೇ ಇಲ್ಲದ ರಸ್ತೆ ಬಜಪೆ ಪೊಲೀಸ್‌ ಠಾಣೆಯಿಂದ ಮುರನಗರ ಹಳೆವಿಮಾನ ನಿಲ್ದಾಣ ಕಾಂಕ್ರೀಟಿ ರಸ್ತೆಯ ಬದಿಗಳಲ್ಲಿ ಚರಂಡಿ ನಿರ್ಮಾಣವಾಗಿಲ್ಲ. ಮಳೆ ನೀರು ಹರಿದು ಹೋಗಲು ಚರಂಡಿ ಇಲ್ಲದ ಕಾರಣ ರಸ್ತೆಯಲ್ಲಿ ನಿಲ್ಲುವ ಸಾಧ್ಯತೆಗಳಿವೆ. ಚರಂಡಿ ನಿರ್ಮಾಣಕ್ಕೂ ಕ್ರಮ ತೆಗೆದುಕೊಳ್ಳಬೇಕು.

ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next