Advertisement

ಡೌನ್‌ ಸಿಂಡ್ರೋಮ್‌ ಬಗ್ಗೆ ಜಾಗೃತಿ ಅನಿವಾರ್ಯ

06:35 AM Mar 22, 2019 | |

ಬೆಂಗಳೂರು: ಪ್ರತಿ ವರ್ಷ ದೇಶದ 30 ಸಾವಿರ ಮಕ್ಕಳು ಡೌನ್‌ ಸಿಂಡ್ರೋಮ್‌ನೊಂದಿಗೆ (ಕಡಿಮೆ ಬೆಳವಣಿಗೆ ಹಾಗೂ ಬುದ್ಧಿಮಾಂದ್ಯತೆ) ಜನಿಸುತ್ತಿದ್ದು, ಈ ಕುರಿತು ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ ಎಂದು ಮಣಿಪಾಲ್‌ ಆಸ್ಪತ್ರೆಗಳ ಸಮೂಹದ ಮುಖ್ಯಸ್ಥ ಡಾ.ಸುದರ್ಶನ್‌ ಬಲ್ಲಾಳ್‌ ತಿಳಿಸಿದರು.

Advertisement

ಮಣಿಪಾಲ್‌ ಆಸ್ಪತ್ರೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ “ವಿಶ್ವ ಡೌನ್‌ ಸಿಂಡ್ರೋಮ್‌ ದಿನಾಚರಣೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಕ್ರೋಮೋಸೋಮ್‌ 21 ಏರುಪೇರಿನಿಂದ ಶಿಶುಗಳಲ್ಲಿ ಡೌನ್‌ ಸಿಂಡ್ರೋಮ್‌ ಬರುತ್ತದೆ. ಅದರ ಸಂಪೂರ್ಣವಾದ ಸೂಕ್ಷ್ಮತೆಗಳನ್ನು ಅರಿತ ವೈದ್ಯರು ಆಸ್ಪತ್ರೆಯಲ್ಲಿದ್ದು, ಉತ್ತಮ ಚಿಕಿತ್ಸೆ ನೀಡುವುದರೊಂದಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಅಭಿನಂದಿಸಿದರು. 

ಆಸ್ಪತ್ರೆಯ ವೈದ್ಯಕೀಯ ಅನುವಂಶೀಯತೆ ವಿಭಾಗದ ಮುಖ್ಯಸ್ಥರಾದ ಮಿತೇಶ್‌ ಶೆಟ್ಟಿ ಮಾತನಾಡಿ, ಆಸ್ಪತ್ರೆಯ ವಂಶವಾಹಿ ಅಧ್ಯಯನ ವಿಭಾಗದಲ್ಲಿ 14,000ಕ್ಕೂ ಹೆಚ್ಚಿನ ಮಕ್ಕಳು ಜನಿಸುವ ಮೊದಲು ಹಾಗೂ ನಂತರದ ವಂಶವಾಹಿ ಪರೀಕ್ಷೆಗಳ ವರದಿಗಳಿವೆ.

ಅದರ ಸಹಾಯದಿಂದ ಆಸ್ಪತ್ರೆಯಲ್ಲಿ 500 ಡೌನ್‌ ಸಿಂಡ್ರೋಮ್‌ ಪ್ರಕರಣಗಳನ್ನು ಗುರುತಿಸಿದ್ದು, ಅಂತವರಿಗೆ ಮಾತು ಹಾಗೂ ಭಾಷೆ, ಔದ್ಯೋಗಿಕ ಹಾಗೂ ಭೌತಿಕ ಚಿಕಿತ್ಸೆ ಸೇರಿದಂತೆ ಹಲವು ಸೇವೆಗಳನ್ನು ನೀಡುವ ಮೂಲಕ ಉತ್ತಮ ಜೀವ ಕಟ್ಟಿಕೊಳ್ಳಲು ನೆರವಾಗುತ್ತಿದ್ದೇವೆ ಎಂದು ಹೇಳಿದರು.

ಹಿರಿಯ ಸಲಹಾ ತಜ್ಞರಾದ ಡಾ.ಶ್ರೀದೇವಿ ಹೆಗ್ಡೆ ಮಾತನಾಡಿ, ಮಹಿಳೆಯರು ಗರ್ಭಾವಸ್ಥೆಯ ಮೊದಲ ಮೂರು ತಿಂಗಳಲ್ಲಿ ಡೌನ್‌ ಸಿಂಡ್ರೋಮ್‌ ಮತ್ತು ಇತರೆ ವರ್ಣತಂತು ಸಂಬಂಧಿ ತೊಂದರೆಗಳ ಬಗ್ಗೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಒಂದೊಮ್ಮೆ ಡೌನ್‌ ಸಿಂಡ್ರೋಮ್‌ ಇರುವ ಭ್ರೂಣವಿರುವುದು ಕಂಡು ಬಂದರೆ, ಇತ್ತೀಚಿನ ಸ್ಟ್ರೀನಿಂಗ್‌ನಂತಹ ಅತ್ಯಾಧುನಿಕ ತಂತ್ರಜ್ಞಾನದಿಂದ ಆರೋಗ್ಯಕರ ಭ್ರೂಣ ಹೆರಲು ಸಾಧ್ಯವಿದೆ ಎಂದರು.

Advertisement

ಡೌನ್‌ ಸಿಂಡ್ರೋಮ್‌ನಿಂದ ಬಳಲಿದರೂ ಕ್ರೀಡೆ, ನೃತ್ಯ ಹಾಗೂ ಚಿತ್ರಕಲೆ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿ ಚಿನ್ನದ ಪದಕಗಳನ್ನು ಗೆದ್ದ ಸಾಧಕರು ಕಾರ್ಯಕ್ರಮದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಜತೆಗೆ ಪೋಷಕರು ತಮ್ಮ ಮಕ್ಕಳ ಆರೋಗ್ಯ ಸಮಸ್ಯೆಗಳ ಬಗ್ಗೆ ತಜ್ಞರ ವೈದ್ಯರಿಂದ ಮಾಹಿತಿ ಪಡೆದುಕೊಂಡರು. 

ಡೌನ್‌ ಸಿಂಡ್ರೋನ್‌ ಇರುವ ಕರಿಷ್ಮಾ ಕನ್ನನ್‌ ವರ್ಣಚಿತ್ರ ಕಲಾವಿದರಾಗಿದ್ದು, 2014ರ ವಿಶ್ವ ಡೌನ್‌ ಸಿಂಡ್ರೋಮ್‌ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇನ್ನು ಕುಶಾಲ್‌ ಅವರು 2008,2009ರಲ್ಲಿ ಹರ್ಯಾಣ, ಮುಂಬೈ ಹಾಗೂ ಚೆನ್ನೈನಲ್ಲಿ ನಡೆದ ಪ್ಯಾರಾಲಿಂಪಿಕ್‌ ಈಜು ಚಾಂಪಿಯನ್‌ಷಿಪ್‌ಗ್ಳಲ್ಲಿ 2 ಚಿನ್ನ ಹಾಗೂ 3 ಬೆಳ್ಳಿ ಪದಕಗಳನ್ನು ಗೆದ್ದಿದ್ದು, ಅಮೆರಿಕದಲ್ಲಿ ನಡೆದ ವಲ್ಡ್‌ವೈಡ್‌ ನ್ಪೋರ್ಟ್ಸ್ ಚಾಂಪಿಯನ್‌ಷಿಪ್‌ನ 50 ಮೀಟರ್‌ ಪ್ರೀಸ್ಟೈಲ್‌ ಮತ್ತು ಬಟರ್‌ಫ್ಲೈ ಈಜು ಸ್ಪರ್ಧೆಗಳಲ್ಲಿ ಬೆಳ್ಳಿ ಹಾಗೂ ಕಂಚಿಕ ಪದಕ ಗೆದ್ದಿದ್ದಾರೆ. 

ಆಡಿಕೊಂಡವರ ಬಾಯಿ ಮುಚ್ಚಿಸಿದ್ದಾಳೆ!: “ಈಜು ಸ್ಪರ್ಧೆಯಲ್ಲಿ ನಾನು ಉತ್ತಮವಾದ ಸಾಧನೆ ಮಾಡಲು ನನ್ನ ತಾಯಿಯೇ ನನಗೆ ಸ್ಫೂರ್ತಿಯಾಗಿದ್ದು, ಆಕೆಯ ಆರೈಕೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ’ ಎಂದು 2013ರ ಏಷ್ಯಾ ಪೆಸಿಫಿಕ್‌ ಪ್ಯಾರಾಲಿಂಪಿಕ್‌ನ ಚಿನ್ನದ ಪದಕ ವಿಜೇತೆ ಲಿಜಾಬ ಐ ದೀಪರ್‌ ಹೇಳಿದರು.

ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಲಿಜಾಬ “ಉದಯವಾಣಿ’ಯೊಂದಿಗೆ ಮಾತನಾಡಿ, ನೀರು ಎಂದರೆ ನನಗೆ ತುಂಬಾ ಇಷ್ಟ. ಅದನ್ನು ತಿಳಿದ ತಾಯಿ, ಈಜು ಕಲಿಯಲು ಸೇರಿಸಿದರು. ಜತೆಗೆ ಈಜಿ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದರು. ಅವರ ಪ್ರೋತ್ಸಾಹದಿಂದ ಹಲವಾರು ಪದಕಗಳನ್ನು ಗೆಲ್ಲಲು ಸಾಧ್ಯವಾಗಿದೆ ಎಂದು ಹೇಳಿದರು.

ಲಿಜಾಬ ತಾಯಿ ಐರಾನ್‌, ಮಕ್ಕಳು ಉತ್ತಮವಾಗಿ ಬೆಳವಣಿಗೆಯಾಗದಿದ್ದರೆ ಅಥವಾ ಬುದ್ಧಿಮಾಂದ್ಯರಾಗಿದ್ದ ಮಾತ್ರಕ್ಕೆ ಅವರ ಬಗ್ಗೆ ನಿರ್ಲಕ್ಷ್ಯ ತೋರಬಾರದು. ಅವರಿಗೆ ಯಾವುದರಲ್ಲಿ ಆಸಕ್ತಿಯಿದೆ ಎಂದು ತಿಳಿದು ಪ್ರೋತ್ಸಾಹಿಸಬೇಕು. ಲಿಜಾಬ ಮಗುವಾಗಿದ್ದಾಗ ನೆರೆಹೊರೆಯವರು ಆಡಿಕೊಳ್ಳುತ್ತಿದ್ದರು. ಆದರೆ, ನಾನು ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ.

ಅವಳಿಗೆ ಪ್ರೀತಿ-ವಿಶ್ವಾಸ ನೀಡಿದೆ. ಅದರ ಪರಿಣಾಮ ಆಕೆ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾಳೆ. ಅಂದು ಆಡಿಕೊಂಡವರು ಇಂದು ಬಾಯಿ ಮುಚ್ಚಿಕೊಂಡಿದ್ದಾರೆ. ಲಿಜಾಬ ಇಂದು ಫೌಂಡೇಷನ್‌ ಒಂದರಲ್ಲಿ ಸಹಾಯಕ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ತನ್ನ ಬದುಕು ತಾನು ಕಟ್ಟಿಕೊಳ್ಳುತ್ತಿದ್ದಾಳೆ ಎಂದು ಹರ್ಷ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next