Advertisement

ಶಿಕ್ಷಕರ ಹೆಚ್ಚುವರಿ ಹೊಣೆಗಾರಿಕೆ ತಪ್ಪಿಸಿ

04:00 PM Dec 11, 2018 | |

ತರೀಕೆರೆ: ಶಿಕ್ಷಕರನ್ನು ಸರಕಾರ ಚುನಾವಣೆ, ಜನಗಣತಿ, ಬಿಸಿಯೂಟ ಇನ್ನೂ ಮುಂತಾದ ಕೆಲಸಗಳಿಗೆ ಬಳಸಿಕೊಳ್ಳುತ್ತಿದೆ. ಇದು ಸರಿಯಲ್ಲ. ಶಿಕ್ಷಕರನ್ನು ಶಿಕ್ಷಣ ನೀಡುವುದಕ್ಕಾಗಿಯೇ ಇರಿಸಬೇಕು ಎಂದು ಸಮ್ಮೇಳನಾಧ್ಯಕ್ಷ ಕನ್ನಡಶ್ರೀ ಬಿ.ಎಸ್‌.ಭಗವಾನ್‌ ಹೇಳಿದರು.

Advertisement

ಅವರು ಪಟ್ಟಣದ ಶೃಂಗೇರಿ ಶಾರದಾ ಸಭಾಭವನದಲ್ಲಿ ಸೋಮವಾರ ನಡೆದ 16ನೇ ತಾಲೂಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಸರಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಸೌಲಭ್ಯಗಳನ್ನು ನೀಡುತ್ತಿರುವುದು ಶ್ಲಾಘನೀಯ. ಆದರೆ ಪಾಠ ಪ್ರವಚನಗಳಿಗೂ ಆದ್ಯತೆ
ನೀಡಬೇಕಾಗಿದೆ. ಶಾಲೆಗಳಲ್ಲಿ ಫಲಿತಾಂಶಗಳನ್ನು ಗಮನಿಸಿದಾಗ ಖಾಸಗಿ ಶಾಲೆಗೂ ಮತ್ತು ಸರಕಾರಿ ಶಾಲೆಗೂ ಅಜಗಜಾಂತರ ವ್ಯತ್ಯಾಸವಿದೆ. ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಪೋಷಕರಲ್ಲಿರುವ ಆಂಗ್ಲ ವ್ಯಾಮೋಹ ಸರಿಯಲ್ಲ. ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು. ಅಧಿಕಾರಿಗಳು ಮತ್ತು ರಾಜಕಾರಣಿಗಳು ಕನ್ನಡದ ಅನ್ನದ ಋಣವನ್ನು ತೀರಿಸಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಮಕ್ಕಳು ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದರಿಂದ ಕನ್ನಡ ಭಾಷೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದರು.

ಪಟ್ಟಣ ಅಭಿವೃದ್ಧಿ ಯಾಗಬೇಕಿದೆ. ಕುಡಿಯುವ ನೀರಿನ ಸೌಕರ್ಯ, ರಸ್ತೆ ಅಗಲಿಕರಣವಾದರೂ ಅಭಿವೃದ್ಧಿ ಯಾಗದಿರುವುದು, ಸ್ವಾತಂತ್ರ್ಯಾ ಪೂರ್ವದಿಂದಲೂ ಇರುವ ರೈಲ್ವೆ ನಿಲ್ದಾಣ ರೈಲ್ವೆ ಇಲಾಖೆಯ ಅವಕೃಪೆಗೆ ಪಾತ್ರವಾಗಿದೆ. ಇಲ್ಲಿ ಮೂಲ ಸೌಕರ್ಯಗಳ ಕೊರತೆ ಕಾಣುತ್ತಿದೆ. ಈ ಬಗ್ಗೆ ಜನಪ್ರತಿನಿಧಿ ಗಳು ತಮ್ಮ ರಾಜಕೀಯ ಇಚ್ಚಾಶಕ್ತಿ ತೋರಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಿ.ಎಸ್‌. ಸುರೇಶ್‌, ಕನ್ನಡನಾಡು, ನುಡಿ, ಭಾಷೆ ಬಗ್ಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕಾಗಿದೆ. ಕಚೇರಿಗಳಲ್ಲಿ ಕನ್ನಡ ಭಾಷೆ ಕಡ್ಡಾಯವಾಗಬೇಕಿದೆ. ಕನ್ನಡ ಸಾಹಿತ್ಯ ಒಂದು ವಿಶಿಷ್ಠವಾದ ಕ್ಷೇತ್ರ. ಬಿ.ಎಸ್‌.ಭಗವಾನ್‌ ಅವರು ಓರ್ವ ವಿಶಿಷ್ಠವಾದ ವ್ಯಕ್ತಿ. ತಮ್ಮ ಕೆಲಸಗಳ ಮೂಲಕ ಕನ್ನಡ ನುಡಿಗೆ ವಿಶೇಷವಾದ ಸೇವೆ ಸಲ್ಲಿಸಿದ್ದಾರೆ. ಅಂತಹವರು ಇಂದಿನ ಸಮ್ಮೇಳನಾಧ್ಯಕ್ಷರಾಗಿರುವುದು ಹೆಮ್ಮೆಯ ಸಂಗತಿ ಎಂದರು.

Advertisement

ಪಟ್ಟಣದ ನೀರಿನ ಸಮಸ್ಯೆ ಬಗೆಹರಿಸಲು 75 ಕೋಟಿ ವೆಚ್ಚದ 4ನೇ ಹಂತದ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಇದರ ವಿಸ್ತೃತ ವರದಿ ಸಿದ್ದಪಡಿಸಲಾಗಿದೆ. ಸರಕಾರ ಶೀಘ್ರಅನುಮೋದನೆ ನೀಡಲಿದೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ ಮಾತನಾಡಿ, ರಾಜಕೀಯವಾಗಿ ಕನ್ನಡದ ಏಕೀಕರಣವಾಗಿದೆ ಆದರೆ ಇನ್ನೂ ಕೂಡ ಭಾವನಾತ್ಮಕವಾಗಿ ಏಕೀಕರಣವಾಗಿಲ್ಲ. ಅಲ್ಲಲ್ಲಿ ಅಗ್ಗಾಗ್ಗೆ ಪ್ರತ್ಯೇಕತೆ ಕೂಗು ಏಳುತ್ತಿವೆ. ಇದು ಸಲ್ಲದು. ಎಲ್ಲರೂ ಇಲ್ಲಿನ ಜಲ,ನೆಲ, ಭಾಷೆ ನಮ್ಮದು ಎಂದು ಭಾವಿಸಬೇಕು ಎಂದು ಅಭಿಪ್ರಾಯಟ್ಟರು.

 ಸಾಹಿತ್ಯ ಪರಿಷತ್‌ ವಿವಿಧ ಸ್ತರಗಳಲ್ಲಿ ಸೇವೆ ಸಲ್ಲಿಸಿದ ಎಲ್ಲರನ್ನೂ ಗೌರವಿಸುತ್ತದೆ. ಸಾಹಿತ್ಯ, ಸಂಗೀತ ಮತ್ತು ಭಾಷೆ ಹೃದಯ ತಟ್ಟುವ ಕೆಲಸ ಮಾಡುತ್ತದೆ ಎಂದರು. ಎಪಿಎಂಸಿ ಅಧ್ಯಕ್ಷ ಮಾತನಾಡಿ, ಸಾಮಾಜಿಕ ಜಾಲತಾಣ ಮತ್ತು ಟಿವಿ ಮಾಧ್ಯಮ ಓದುಗರನ್ನು ಕಡಿಮೆ ಮಾಡುತ್ತಿದೆ. ಹಿಂದಿನ
ದಿನಗಳಲ್ಲಿ ಪುಸ್ತಕಗಳನ್ನು ಓದುತ್ತಿದ್ದೇವು. ಅವು ಇಂದು ಮರೆಯಾಗಿದೆ ಎಂದರು. ತಾಲೂಕು ಜನತಾ ದಳದ ಅಧ್ಯಕ್ಷ ಎಂ.ನರೇಂದ್ರ, ಕನ್ನಡ ಸಂಘಟನೆಯ ಬಿ.ಪಿ.ವಿಕಾಸ್‌, ವಕೀಲ ಜಿ.ಸುಬ್ರಹ್ಮಣ್ಯ, ತಾ.ಪಂ ಅಧ್ಯಕ್ಷೆ ಪದ್ಮಾವತಿ ಮಾತನಾಡಿದರು. ಮಾಜಿ ಜಿಲ್ಲಾ ಕಸಾಪ ಅಧ್ಯಕ್ಷ ಶಿವಸ್ವಾಮಿ, ಎಚ್‌.ಚಂದ್ರಪ್ಪ, ಆಕಾಶವಾಣಿ ನಿರ್ದೇಶಕ ಶಂಕರನಾರಾಯಣ, ಜಿ.ಟಿ.ರಮೇಶ್‌, ಸೋಮಶೇಖರ್‌, ಶ್ಯಾಮಲಾ ಮಂಜುನಾಥ್‌, ಕಸಾಪ ಅಧ್ಯಕ್ಷ ನಾಗೇನಹಳ್ಳಿ ತಿಮ್ಮಯ್ಯ ಇದ್ದರು.

ಶ್ರೀ ಸಾಲುಮರದಮ್ಮ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆಯನ್ನು ಕೆಪಿಸಿಸಿ ಸದಸ್ಯ ಟಿ.ವಿ.ಶಿವಶಂಕರಪ್ಪ ಮತ್ತು ಮಾಜಿ ಪುರಸಭಾಧ್ಯಕ್ಷ ಉಮರ್‌ ಫಾರೂಕ್‌ ಉದ್ಘಾಟಿಸಿದರು. ಶೃಂಗರಿಸಿದ ರಥದಲ್ಲಿ ಲಕ್ಷ್ಮೀ ಭಗವಾನ್‌ ಮತ್ತು ಭಗವಾನ್‌ ಅವರನ್ನು ಅದ್ದೂರಿ ಮೆರವಣಿಗೆಯಲ್ಲಿ ವೇದಿಕೆ ಕರೆ ತರಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next