Advertisement

ಅಟಲ್‌ ಬಿಹಾರಿ ವಾಜಪೇಯಿ –ಬಲ ಪಂಥೀಯ ನೆಹರೂ

06:00 AM Aug 17, 2018 | |

1996ರಲ್ಲಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ವಾಜಪೇಯಿ ಅವರು, ದೇಶದ ಆಡಳಿತ ಚುಕ್ಕಾಣಿ ಹಿಡಿದ ಮೊದಲ ಬಲಪಂಥೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1996ರ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಯ ನೇತೃತ್ವವನ್ನು ವಹಿಸಿಕೊಂಡಿದ್ದ ಅವರು ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಪ್ರಧಾನಿ ಹುದ್ದೆಗೇರಿದರೂ ಅವರ ಸರ್ಕಾರ ಲೋಕಸಭೆಯಲ್ಲಿ ಬಹುಮತಗಳಿಸಲಿಲ್ಲ. ಕೇವಲ 13 ದಿನದಲ್ಲೇ ಪತನಗೊಂಡಿತು. ಆದರೆ, ಇದರಿಂದ ವಾಜಪೇಯಿ ಬೇಸರಿಸಿಕೊಳ್ಳಲಿಲ್ಲ. ಪ್ರತಿಯೊಬ್ಬ ಆರಂಭಿಕರಿಗೆ
ಎದುರಾಗುವ ಆಘಾತವೆಂದೇ ಪರಿಗಣಿಸಿದರಲ್ಲದೆ, ಇದನ್ನು ಪ್ರಾಯೋಗಿಕ ಅಭ್ಯಾಸವೆಂದು ತಿಳಿದರು.

Advertisement

ಮಹಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಇತರ ಪಕ್ಷಗಳಿಂದ “ಅಸ್ಪೃಶ್ಯತೆ’ ಅನುಭವಿಸಿದ ಕಾರಣದಿಂದಲೇ ಬಿಜೆಪಿಗೆ ಒಂದು ಸ್ಥಿರ ಸರ್ಕಾರ ನೀಡಲು ಸಾಧ್ಯವಾಗಲಿಲ್ಲ.ಆದರೆ, ಕೇಂದ್ರ ದಲ್ಲಿ ಸರ್ಕಾರವನ್ನು ಕಳೆದುಕೊಂಡರೂ ಅದರಿಂದ ಕಲಿತ ಪಾಠವನ್ನು ಬಿಜೆಪಿ ಮರೆಯಲಿಲ್ಲ. ಹಾಗಾಗಿ, ಯುನೈಟೆಡ್‌ ಫ್ರಂಟ್‌ ಸರ್ಕಾರ ಪತನಗೊಂಡ ನಂತರ, 1998ರಲ್ಲಿ ನಡೆದ ಮಹಾ ಚುನಾವಣೆಗೆ ಬಿಜೆಪಿ ಸರಿಯಾದ ರೀತಿಯಲ್ಲೇ ಸಜ್ಜಾಗಿ ಅಖಾಡಕ್ಕಿಳಿಯಿತು. 1996ರ ಚುನಾವಣೆಯಲ್ಲಿ ಅನುಭವಿಸಿದ ಯಾತನೆಗಳು ಮತ್ತೆ ಮರುಕಳಿಸದಂತೆ ಎಚ್ಚರಿಕೆ ವಹಿಸಿತು.

ಈ ಬಾರಿ ವಾಜಪೇಯಿ, ಬಿಜೆಪಿ ನೇತೃತ್ವದ ಮಹಾರಂಗವೊಂದನ್ನು ಕಟ್ಟಲು ಸಜ್ಜಾಗಿದ್ದಲ್ಲದೆ, ಇತರ ಪಕ್ಷಗಳಿಗೆ ಬಿಜೆಪಿಯ ಸಂದೇಶಗಳನ್ನು ಸ್ಪಷ್ಟವಾಗಿ ರವಾನಿಸಲು ತಮ್ಮದೇ ಆದ ರಾಯಭಾರಿಗಳನ್ನು ಬಳಸಿಕೊಂಡರು. ಈ ಮೂಲಕ, ಬಿಜೆಪಿಯ ಬಗ್ಗೆ ಇತರ ಪಕ್ಷಗಳಿಗಿದ್ದ ಅಸ್ಪೃಶ್ಯ ಮನೋಭಾವವನ್ನು ದೂರಾಗುವಂತೆ ಮಾಡಿದರು. ಇದರ ಪರಿಣಾಮ, ಅನೇಕ ಪಕ್ಷಗಳ ನಾಯಕರು ವಾಜಪೇಯಿಯವರಲ್ಲಿ ಒಬ್ಬ ಹೊಸ ನಾಯಕನನ್ನು ಕಂಡುಕೊಂಡರಲ್ಲದೆ, ಆ ಬಾರಿಯ ಮಹಾ ಚುನಾವಣೆಯಲ್ಲಿ ವಾಜಪೇಯಿ ಅವರನ್ನು ಬೆಂಬಲಿಸಲು ಮುಂದೆ ಬಂದರು. ಇದು, ಬಲ ಪಂಥೀಯ ಸಿದ್ದಾಂತಗಳುಳ್ಳ ಬಿಜೆಪಿಯೊಂದಿಗೆ ಕೈ ಜೋಡಿಸಿದ್ದಕ್ಕಾಗಿ ಒಳಗೊಳಗೇ ಹೆದರುತ್ತಿದ್ದ ಅನೇಕ ಮಿತ್ರ ಪಕ್ಷಗಳಲ್ಲಿ ಒಂದು ರೀತಿಯ ಧೈರ್ಯ ತುಂಬಿತು. ಈ ಮೂಲಕ, ದಶಕಗಳ ಕಾಲ ಭಾರತೀಯ ರಾಜಕೀಯ ರಂಗದಲ್ಲಿ ಅಸ್ಪೃಶ್ಯತೆಯ ರೋಗವನ್ನು ನಿವಾರಿಸಿದರು.

ಅಂದ ಹಾಗೆ, ವಾಜಪೇಯಿಯವರಿಗೆ ನೆಹರೂ ಅವರೆಂದರೆ ಅಪಾರವಾದ ಗೌರವವಿತ್ತು. ಅತ್ತ, ನೆಹರೂ ಅವರಿಗೂ ವಾಜಪೇಯಿ ಅವರನ್ನು ಕಂಡರೆ ಎಲ್ಲಿಲ್ಲದ ವಿಶ್ವಾಸ. ಆಗಿನ ಕಾಲದಲ್ಲಿ ಭಾರತಕ್ಕೆ ಆಗಮಿಸುತ್ತಿದ್ದ ವಿದೇಶಿ ಗಣ್ಯರಿಗೆ ವಾಜಪೇಯಿಯವರನ್ನು ಪರಿಚಯಿಸುವ ಸಂದರ್ಭ ಬಂದಾಗಲೆಲ್ಲಾ ನೆಹರೂ ಅವರು ಇವರನ್ನು ಭಾರತದ ಭವಿಷ್ಯದ ಪ್ರಧಾನಿಯೆಂದೇ ಪರಿಚಯಿಸುತ್ತಿದ್ದರು. ಇದು ಆರ್‌ಎಸ್‌ಎಸ್‌ ಹಾಗೂ ಜನ ಸಂಘದ ಹಿನ್ನೆಲೆಯಿಂದ ಬಂದವರಾದರೂ ವಾಜಪೇಯಿ ಅವರಲ್ಲಿ ನೆಹರೂ ವಿಚಾರಧಾರೆಗಳ ಪ್ರಭಾವ ಕಾಣಲು ಆರಂಭಿಸಿತ್ತು ಎಂದೂ ಹೇಳಲಾಗುತ್ತದೆ. ಹಾಗಾಗಿಯೇ, ವಾಜಪೇಯಿಯವರನ್ನು “ಬಲ ಪಂಥೀಯ ನೆಹರೂ’ ಎಂದು ಕರೆದವರಿದ್ದಾರೆ. ಇದಕ್ಕೆ ಪೂರಕವಾಗಿ ಮೂಡಿ ಬಂದಿರುವ ವಾಜಪೇಯಿ ಅವರ “ಕದಮ್‌ ಮಿಲ್‌ ಕರ್‌ ಚಲಾ° ಹೋಗಾ’ ಎಂಬ ಪದ್ಯವು ಕೇವಲ ಒಂದು ಹಗಲುಗನಸು ಕಾಣುವ ಒಬ್ಬ ಕವಿ ವಾಣಿಯಾಗಿರದೆ, ಒಬ್ಬ ನೈಜ ಪ್ರಜಾಪ್ರಭುತ್ವವಾದಿಯ ಆಂತರ್ಯದಿಂದ ಹೊರ ಬಂದ ಶಕ್ತಿಶಾಲಿ, ಉದಾರವಾದಿತನದ ಸ್ಪಷ್ಟ ಸಂದೇಶ ಎಂದೆನಿಸುತ್ತದೆ.

ವಾಜಪೇಯಿಯವರು ಭಾರತವನ್ನು ಅಣ್ವಸ್ತ್ರ ರಾಷ್ಟ್ರವನ್ನಾಗಿಸುವ ಅದಮ್ಯ ಕನಸು ಕಂಡವರು. ಹಾಗಾಗಿಯೇ, 1996ರಲ್ಲಿ ಅಂದಿನ ಭಾರತೀಯ ವಿಜ್ಞಾನಿಗಳ ಜತೆ ಮಾತನಾಡಿ, ಲೋಕಸಭೆಯಲ್ಲಿ ತಮ್ಮ ಸರ್ಕಾರದ ವಿಶ್ವಾಸ ಮತ ಯಾಚನೆಗೂ ಮುನ್ನವೇ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆ ನಡೆಸಲು ಸಾಧ್ಯವಾಗುತ್ತದೆಯೇ ಎಂಬುದರ ಬಗ್ಗೆ ಚರ್ಚಿಸಿದ್ದರು. ಆದರೆ, ಆಗ ಸಮಯದ ಅಭಾವವಿದ್ದಿದ್ದರಿಂದ ಅದು ಸಾಧ್ಯವಾಗಿರಲಿಲ್ಲ.  ವಾಜಪೇಯಿಯವರಿಗೆ ಈ ಬಗ್ಗೆ ಆಸಕ್ತಿ ಹುಟ್ಟಲು ಕಾರಣ, ಅವರ ಹಿಂದಿನ ಪ್ರಧಾನಿ ಪಿ.ವಿ. ನರಸಿಂಹ ರಾವ್‌. ತಮ್ಮ ಆಡಳಿತಾವಧಿಯಲ್ಲಿ ವಿಫ‌ಲಗೊಂಡಿದ್ದ ಪರಮಾಣು ಶಸ್ತ್ರಾಸ್ತ್ರ  ಪರೀಕ್ಷಾ ಯೋಜನೆಯ ಬಗ್ಗೆ ರಾವ್‌ ಅವರು ಸಂಕ್ಷಿಪ್ತವಾಗಿ ವಾಜಪೇಯಿಯವರಿಗೆ ಮಾಹಿತಿ ನೀಡಿದ್ದೇ ಪೋಖ್ರಾನ್‌-2 ಸಾಹಸಕ್ಕೆ ನಾಂದಿಯಾಯಿತು. ನಿಜ ಹೇಳಬೇಕೆಂದರೆ, ನರಸಿಂಹ ರಾವ್‌ ಅವರಿಗೆ ಭಾರತವನ್ನು ಪರಮಾಣು ಶಸ್ತ್ರಾಸ್ತ್ರಗಳುಳ್ಳ  ರಾಷ್ಟ್ರಗಳ ಪಟ್ಟಿಗೆ ಸೇರಿಸಬೇಕೆಂಬ ಅದಮ್ಯ ಬಯಕೆಯಿತ್ತು. ಹಾಗಾಗಿಯೇ 1991-96ರ ನಡುವಿನ ಅವರ ಆಡಳಿತಾವಧಿಯಲ್ಲೇ ಈ ಬಗ್ಗೆ ಅವರು ಪ್ರಯತ್ನಿಸಿದ್ದರು. ಆದರೆ, ಇದರ ಗಾಳಿ ದೂರದ ಅಮೆರಿಕದ ಮೂಗಿಗೆ ಬಡಿದಿದ್ದರಿಂದ ಯೋಜನೆಯ ಉದ್ದೇಶ ಬುಡಮೇಲಾಯಿತು. 

Advertisement

ಅಮೆರಿಕವನ್ನು ಎದುರು ಹಾಕಿ ಕೊಂಡು ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆ ನಡೆಸಲು ನರಸಿಂಹರಾವ್‌ ಕೂಡ ಹಿಂದೇಟು ಹಾಕಿದರು. ಇದಕ್ಕೆ ಕಾರಣ, ಜಾಗತೀಕರಣ. ಭಾರತದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ತಾವು ಕೈಗೊಂಡಿದ್ದ ಜಾಗತೀಕರಣದ ನಿರ್ಧಾರಕ್ಕೆ ನರಸಿಂಹ ರಾವ್‌ ಅಮೆರಿಕದ ಬೆಂಬಲವನ್ನೇ ಪಡೆದಿದ್ದರಿಂದ ಅವರು ಅಮೆರಿಕವನ್ನು ಎದುರು ಹಾಕಿಕೊಳ್ಳಲಾಗಲಿಲ್ಲ. ನರಸಿಂಹ ರಾವ್‌ ಅವರು ವಾಜಪೇಯಿಯವರನ್ನು ಯಾವಾಗಲೂ ನನ್ನ ಗುರು ಎಂದೇ ಸಂಬೋಧಿಸುತ್ತಿದ್ದರು. ಅದೇ ಭರವಸೆಯಿಂದಲೇ, ವಾಜಪೇಯಿಯವರಿಗೆ ರಾವ್‌ ಅವರು ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆಯ ಬಗ್ಗೆ ಪೂರಕ ಮಾಹಿತಿಗಳನ್ನು ನೀಡಿದ್ದರು. 

ಮತ್ತೂಮ್ಮೆ ಪರೀಕ್ಷೆ ನಡೆಸಲು ಭಾರತದ ಪರಮಾಣು ವಿಜ್ಞಾನಿಗಳು ಸಿದ್ಧವಾಗಿರುವುದಾಗಿಯೂ ತಿಳಿಸಿದ್ದರು. ಇದೆಲ್ಲವನ್ನು ಅರಿತ ವಾಜಪೇಯಿ, ಪುನಃ ಅಧಿಕಾರಕ್ಕೆ ಬಂದರೆ ಈ ಕನಸನ್ನು ನನಸು ಮಾಡಿಕೊಳ್ಳಲು ಕಾತುರರಾಗಿದ್ದರು. ಹಾಗಾಗಿಯೇ, 1998ರ ಮೇ ತಿಂಗಳಲ್ಲಿ ವಾಜಪೇಯಿ, ಪೂರ್ವ ಸಿದ್ಧತೆಯೊಂದಿಗೆ ಪರಮಾಣು ಶಸ್ತ್ರಾಸ್ತ್ರ ನಡೆಸಲು ಅವರು ಮುಂದಾದರು. ಭಾರತದ ವಿರುದ್ಧ ಕಿಡಿಕಾರಿದ್ದ ಅಂದಿನ ಅಮೆರಿಕ ಅಧ್ಯಕ್ಷ ಬಿಲ್‌ ಕ್ಲಿಂಟನ್‌, ಭಾರತ ಏಷ್ಯಾ ಉಪಖಂಡದಲ್ಲಿ ಪರಮಾಣು ಶಸ್ತ್ರಾಸ್ತ್ರ ಹೊಂದುವ ಸ್ಪರ್ಧೆಗೆ ಬಿದ್ದಿದೆ ಎಂದು ಆರೋಪಿಸಿದರು. ಆದರೆ, ವಾಜಪೇಯಿ ಮಾತ್ರ ತಮ್ಮ ನಿಲುವಿಗೆ ಬದ್ಧರಾಗಿದ್ದರು.

ಅಣ್ವಸ್ತ್ರ ಹೊಂದುವ ಭಾರತದ ಪ್ರಯತ್ನದ ಹಿಂದಿನ ಸದುದ್ದೇಶವನ್ನು ಅಮೆರಿಕ ಮುಂದೊಂದು ದಿನ ಖಂಡಿತವಾಗಿಯೂ ಅರ್ಥ ಮಾಡಿಕೊಳ್ಳುತ್ತದೆ ಎಂಬ ವಿಶ್ವಾಸ ಅವರಲ್ಲಿತ್ತು. ಆದರೆ, ಈ ಅರಿವು ಅದರ ಪಾಡಿಗೆ ಬರಲಿ ಎಂದು ಕೈ ಕಟ್ಟಿ ಕೂರಲಿಲ್ಲ. ತಮ್ಮ ಕೈಲಾದ ಪ್ರಯತ್ನ ಮಾಡಿದರು. ಅಮೆರಿಕಕ್ಕೆ ಅಂದಿನ ವಿದೇಶಾಂಗ ಸಚಿವ ಜಸ್ವಂತ್‌ ಸಿಂಗ್‌ ಅವರನ್ನು ಕಳುಹಿಸಿ ಮಾತುಕತೆಗಳ ಮೂಲಕ ಭಾರತದ ಉದ್ದೇಶವನ್ನು ವಿಶ್ವದ ದೊಡ್ಡಣ್ಣನಿಗೆ ಮನವರಿಕೆ ಮಾಡಿ ಕೊಡಲು ಪ್ರಯತ್ನಿಸಿದರು. ಜಸ್ವಂತ್‌ ಸಿಂಗ್‌ ಈ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿಕೊಂಡು ಬಂದರು. ಪೋಖ್ರಾನ್‌-2 ಪರೀಕ್ಷೆಯು ವಾಜಪೇಯಿಯವರ ನೈಜ ವ್ಯಕ್ತಿತ್ವವನ್ನು ಬಿಂಬಿಸಿತು. ಒಬ್ಬಬಿರು ಸಾದ, ಬಲಶಾಲಿಯಾದ ನಾಯಕನೊಬ್ಬ ತೃತೀಯ ವಿಶ್ವದಲ್ಲಿ ಭಾರತವನ್ನು ಬಲಾಡ್ಯ ರಾಷ್ಟ್ರಗಳಲ್ಲೊಂದಾಗಿ ನಿಲ್ಲುವಂತೆ ಮಾಡಿದ್ದು ಐತಿಹಾಸಿಕ ಎನಿಸಿತು. ಅಲ್ಲದೆ, ಭಾರತ ಗಳಿಸಿದ ಹೊಸ ಸ್ಥಾನಮಾನವನ್ನು ಪಾಶ್ಚಿಮಾತ್ಯ ದೇಶಗಳು ಒಪ್ಪಿಕೊಳ್ಳುತ್ತವೆಂಬ ಭರಪೂರ ನಿರೀಕ್ಷೆಯನ್ನು ವಾಜಪೇಯಿ ಹೊಂದಿದ್ದರು.

ದೂರದೃಷ್ಟಿಯ ನಾಯಕ
ಉತ್ತಮ ತಂತ್ರಗಾರಿಕೆಯಿಂದ, ಕರಾರುವಾಕ್‌ ಆಗಿ ನಿಭಾಯಿಸಿದ ಹೆಗ್ಗಳಿಕೆ ವಾಜಪೇಯಿ ಅವರದ್ದು. ಇದೇ ಕಾರಣದಿಂದಲೇ ಭಾರತಕ್ಕೆ, ಕಾರ್ಗಿಲ್‌ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಲು ಸಾಧ್ಯವಾಗಿದ್ದು. ಇದಲ್ಲದೆ, ಅವರಲ್ಲಿನ ದೂರ ದೃಷ್ಟಿತ್ವವೂ ವಿಶೇಷವಾದದ್ದು. ಈ ಕಾರಣ ದಿಂದಲೇ ಭಾರತದ ಮೂಲ ಸೌಕರ್ಯ ಕ್ಷೇತ್ರ, ವಿದೇಶಿ ನೇರ ಬಂಡವಾಳ ಕ್ಷೇತ್ರಗಳು ಹಿಂದೆಂದಿಗಿಂತಲೂ ಅಭಿವೃದ್ಧಿ ಹೊಂದಿದವು. ಚತುಷ್ಪಥ ಹೆದ್ದಾರಿಯಿಂದ ಸಾರಿಗೆ ವ್ಯವಸ್ಥೆಗಳಲ್ಲಿ ಗಣನೀಯ ಸುಧಾರಣೆಯಾಯಿತು. ದೂರ ಸಂಪರ್ಕ ಕ್ಷೇತ್ರವೂ ಬೆಳವಣಿಗೆ ಕಂಡಿತು. ಈಶಾನ್ಯ ರಾಜ್ಯಗಳ ಅಭಿವೃದ್ಧಿಗೂ ಅವರು ಕೆಲ ಕ್ರಮಗಳನ್ನು ಕೈಗೊಂಡರು.

ಲೇಖಕರು ಪ್ರಸಾರ ಭಾರತಿ ಅಧ್ಯಕ್ಷರು.

Advertisement

Udayavani is now on Telegram. Click here to join our channel and stay updated with the latest news.

Next