Advertisement

ಅನಂತ್‌ಕುಮಾರ್‌ ಕೇಂದ್ರ ಸಚಿವರಾಗಲು ಅನ್‌ಫಿಟ್‌

09:05 AM Dec 16, 2017 | Team Udayavani |

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಪರಾಕಿ ಸಾಕಾ, ಇನ್ನೂ ಬೇಕಾ ಎಂದು ಹೇಳಿರುವ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ವಿರುದ್ಧ ಕಿಡಿಕಾರಿರುವ ಗೃಹ ಸಚಿವ ರಾಮಲಿಂಗಾರೆಡ್ಡಿ, ಅನಂತಕುಮಾರ್‌ ಹೆಗಡೆ ಅವರು
ಸಚಿವರಾಗಲು ಅನ್‌ಫಿಟ್‌ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ವಿಕಾಸಸೌಧದಲ್ಲಿ ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಗಲಭೆ ಆಧರಿಸಿ ತಾವು ಕೇಂದ್ರ ಸಚಿವ ಎಂಬುದನ್ನೇ ಮರೆತು ಅನಂತಕುಮಾರ್‌ ಹೆಗಡೆ ಹೇಳಿಕೆ ನೀಡಿದ್ದಾರೆ. ಮುಂದಿದೆ ಮಾರಿ ಹಬ್ಬ ಎಂದರೆ ಏನು? ಅವರು ಕೇಂದ್ರದಲ್ಲಿ ಮಂತ್ರಿ ಆಗಿದ್ದು ಗಲಭೆ ಮಾಡಿಸಲೆಂದೇ? ಗಲಾಟೆ ಮಾಡಿಸಿದರೆ ಪೊಲೀಸರು ಸುಮ್ಮನಿರುತ್ತಾರೆಯೇ ಎಂದು ಪ್ರಶ್ನಿಸಿದರು.

ಅನಂತಕುಮಾರ್‌ ಹೆಗಡೆ ಮಂತ್ರಿಯಾಗಲೂ ಅನ್‌ ಫಿಟ್‌. ಅಂಥವರನ್ನು ಕೇಂದ್ರದಲ್ಲಿ ಮಂತ್ರಿ ಮಾಡಿದ್ದಾರೆ. ಗಲಭೆಗೆ ಪ್ರಚೋದನೆ ನೀಡುತ್ತಿರುವ ಅವರಿಗೆ ಈಗ ನೀಡಿರುವ ಖಾತೆಯನ್ನು ತೆಗೆದು ವಿಷ ಗಾಳಿ ಬಿತ್ತುವ ಸಚಿವ ಎಂದೋ, ಸಾಮರಸ್ಯ ಕೆಡಿಸುವ ಮಂತ್ರಿ ಎಂದೋ ಹುದ್ದೆ ಕೊಡಲಿ ಎಂದು ವ್ಯಂಗ್ಯವಾಡಿದರು. ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮತ್ತು ಶಿರಸಿಯಲ್ಲಿ ಗಲಭೆ ನಡೆದ ಬಳಿಕ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅವರು ಫೇಸ್‌ಬುಕ್‌ನಲ್ಲಿ, “ಸಾಕ ಬೇಕಾ ತಪರಾಕಿ ಸಿದ್ಧರಾಮಯ್ಯನವರೇ!! ನಿಂಬಾಳ್ಕರ್‌, ರಾಮಲಿಂಗಾರೆಡ್ಡಿ ಹಾಗೂ ಕೆಂಪಯ್ಯನಂಥ ಜನರಿದ್ದರೆ ಮುಂದಿದೆ ನೋಡಿ ಇನ್ನು ಶಿರಸಿಯ ದೊಡ್ಡ ಮಾರಿಕಾಂಬ ಹಬ್ಬ!’ ಎಂಬ ಹೇಳಿಕೆ ನೀಡಿದ್ದಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದರು.

ಬಿಜೆಪಿಯವರು ರಣಹದ್ದುಗಳು: ರಣಹದ್ದುಗಳು ಯಾವುದಾದರೂ ಹೆಣ ಬಿದ್ದರೆ ಕಾಯುತ್ತಿರುತ್ತವೆ. ಅದೇ ರೀತಿ ಬಿಜೆಪಿಯವರು ರಣಹದ್ದುಗಳಿದ್ದಂತೆ. ಗಲಭೆ ಸೃಷ್ಟಿಸಲು ಕಾಯುತ್ತಿದ್ದಾರೆ. ಹಾಗೆಂದು ಎಲ್ಲಾ ಬಿಜೆಪಿಯವರು ಹೀಗೆ ಎಂದು ಹೇಳುವುದಿಲ್ಲ. ಗಲಾಟೆ
ಮಾಡಿಸುವವರು ಕೆಲವರು ಮಾತ್ರ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next