Advertisement

ಅಮರ್‌ ಪ್ರೇಮ: ಅಭಿ ಪಿಕ್ಚರ್‌ ಬಾಕಿ ಹೇ.

07:54 PM Jun 01, 2018 | |

ಖುಷಿಯಿಂದ ಹೇಳಿಕೊಂಡರು ನಾಗಶೇಖರ್‌. ಅವರು ಅದೃಷ್ಟ ಅಂತ ಹೇಳುವುದಕ್ಕೂ ಕಾರಣವಿದೆ. ಪ್ರಮುಖವಾಗಿ ಅಂಬರೀಶ್‌ ಮಗ ಅಭಿಷೇಕ್‌ ಅಭಿನಯದ “ಅಮರ್‌’ ಚಿತ್ರವನ್ನು ನಿರ್ದೇಶಿಸುವ ಅವಕಾಶ ಅವರಿಗೆ ಬಂದಿತ್ತಂತೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುವಷ್ಟರಲ್ಲಿ, ಆ ಅವಕಾಶ ಬೇರೆಯವರ ಪಾಲಾಗಿದೆ. ಇನ್ನು ಅವಕಾಶ ಸಿಗುತ್ತದೋ ಇಲ್ಲವೋ ಎನ್ನುವ ಸಂದರ್ಭದಲ್ಲಿ ಮತ್ತೆ ಆ ಅವಕಾಶ ಅವರನ್ನೇ ಹುಡುಕಿಕೊಂಡು ಬಂದಿದೆ. ಅಭಿಷೇಕ್‌ ಅಭಿನಯದ ಮೊದಲ ಚಿತ್ರವನ್ನು ನಿರ್ದೇಶಿಸುವ ಅವಕಾಶ ಅವರಿಗೇ ಮತ್ತೆ ಸಿಕ್ಕಿದೆ. ಇತ್ತೀಚೆಗೆ ಆ ಚಿತ್ರದ ಮುಹೂರ್ತ ಸಹ ಸರಳವಾಗಿ ಆಗಿದೆ.

Advertisement

ಅಂದು ಜೆ.ಪಿ. ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಚಿತ್ರಕ್ಕೆ ಚಾಲನೆ ಕೊಟ್ಟು, ಚಿತ್ರತಂಡದವರೆಲ್ಲರೂ ಹೊರಗೆ ಬಂದರು. ಅಂಬರೀಶ್‌ ಅವರಂತೂ ಬೆವರಿನಲ್ಲಿ ತೊಯ್ದು ಹೋಗಿದ್ದರು. ಬೆವರೊರೆಸಿಕೊಳ್ಳುತ್ತಲೇ, “ಬೇಗ ಶುರು ಮಾಡ್ರಯ್ಯ’ ಅಂತ ಪತ್ರಿಕಾಗೋಷ್ಠಿ ಶುರು ಮಾಡಿಸಿದರು. ಅವರ ಪಕ್ಕ ಸುಮಲತಾ ಅಂಬರೀಶ್‌ ಇದ್ದರೆ, ಇನ್ನೊಂದು ಪಕ್ಕದಲ್ಲಿ ನಿರ್ಮಾಪಕ ಸಂದೇಶ್‌ ನಾಗರಾಜ್‌ ಇದ್ದರು. ಮಿಕ್ಕಂತೆ ಅಭಿಷೇಕ್‌, ಸಂದೇಶ್‌, ನಾಗಶೇಖರ್‌, ನಾಯಕಿ ತಾನ್ಯ ಹೋಪ್‌ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.

ಮೊದಲು ಮಾತನಾಡಿದ್ದು ನಾಗಶೇಖರ್‌, “ಅಮರ್‌’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. “ಇದೊಂದು ಸುಂದರ ಲವ್‌ಸ್ಟೋರಿ. ಇದುವರೆಗೆ ನಾನು ಮಾಡಿದ ಚಿತ್ರಗಳಿಗಿಂತಲೂ ವಿಭಿನ್ನವಾಗಿರುವ ಕಥೆ ಇದು. 90ರ ದಶಕದಲ್ಲಿ ಹೀರೋಯಿನ್‌ ಒಬ್ಬರ ಜೀವನದಲ್ಲಿ ನಡೆದ ಘಟನೆಯನ್ನಿಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. ಇಲ್ಲಿ ನಾಯಕ-ನಾಯಕಿ ಇಬ್ಬರೂ ಬೈಕ್‌ ರೇಸರ್‌ಗಳಾಗಿದ್ದು, ಚಿತ್ರದಲ್ಲಿ ಬೈಕ್‌ ರೇಸ್‌ ಸಹ ಇರಲಿದೆ. ಹಾಗಂತ ಇದು ಆ್ಯಕ್ಷನ್‌ ಚಿತ್ರವಲ್ಲ. ಇದೊಂದು ಲವ್‌ ಸ್ಟೋರಿ. ಕಥೆಗೆ ಸೂಕ್ತವಾಗಿ ಒಂದಿಷ್ಟು ಆ್ಯಕ್ಷನ್‌ ದೃಶ್ಯಗಳಿವೆ. ಕಥೆಗೆ ತಕ್ಕಂತಹ ಸೂಪರ್‌ ಸ್ಟಾರ್‌ ಹೀರೋ ಕೂಡ ಸಿಕ್ಕಾಗಿದೆ. ಅಭಿಷೇಕ್‌ ಪಕ್ಕಾ ತಯಾರಿಯೊಂದಿಗೇ ಬಂದಿದ್ದಾರೆ. ನಟನೆ ಕಲಿತಿದ್ದಾರೆ. ಡ್ಯಾನ್ಸ್‌ ಗೊತ್ತು, ವಿದ್ಯಾವಂತ ಹುಡುಗ ಕೂಡ, ಆ್ಯಕ್ಷನ್‌ನಲ್ಲೂ ಪಕ್ವಗೊಂಡಿದ್ದಾರೆ. ಇವತ್ತು ದಿನ ಚೆನ್ನಾಗಿತ್ತು ಅಂತ ಮುಹೂರ್ತ ಮಾಡಿದ್ದೇವೆ. ಮುಂದಿನ ತಿಂಗಳು ಚಿತ್ರೀಕರಣ ಪ್ರಾರಂಭವಾಗಲಿವೆ. ಅದಕ್ಕೂ ಮುನ್ನ ಒಂದು ದೊಡ್ಡ ಕಾರ್ಯಕ್ರಮ ಮಾಡಿ, ಅಭಿಷೇಕ್‌ ಅವರನ್ನು ಪರಿಚಯಿಸಲಾಗುತ್ತದೆ. ಆ ಕಾರ್ಯಕ್ರಮಕ್ಕೆ ಭಾರತೀಯ ಚಿತ್ರರಂಗದ ದಿಗ್ಗಜರೆಲ್ಲಾ ಬರುವ ಸಾಧ್ಯತೆ ಇದೆ. ಇನ್ನು ಒಂದು ಹಾಡಿನಲ್ಲಿ ಭಾರತೀಯ ಚಿತ್ರರಂಗದ ಜನಪ್ರಿಯ ಕಲಾವಿದರ ಜೊತೆಗೆ ಕನ್ನಡ ಚಿತ್ರರಂಗದ ಟಾಪ್‌ ಸ್ಟಾರ್‌ಗಳೂ ಸಹ ಕಾಣಿಸಿಕೊಳ್ಳುವ ಸಾಧ್ಯತೆ ಇದೆ’ ಎಂದರು.

ಅಂಬರೀಶ್‌ ಅಭಿನಯದ “ಮಣ್ಣಿನ ದೋಣಿ’ ಚಿತ್ರದ ಮೂಲಕ ನಿರ್ಮಾಪಕರಾದ ಸಂದೇಶ್‌ ನಾಗರಾಜ್‌, ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ಮಾಪಕರೆಂದೇ ಹೆಸರಾದವರು. ಅಂಬರೀಷ್‌ ನಟನೆಯ ಸಾಕಷ್ಟು ಚಿತ್ರಗಳನ್ನು ನಿರ್ಮಿಸಿರುವ ಸಂದೇಶ್‌ ನಾಗರಾಜ್‌, ಈಗ ಅಂಬರೀಷ್‌ ಅವರ ಪುತ್ರ ಅಭಿಷೇಕ್‌ ಅವರನ್ನೂ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.  ಈ ಕುರಿತು ಮಾತನಾಡಿದ ಅವರು, “ಮಗನನ್ನು ಲಾಂಚ್‌ ಮಾಡುತ್ತೀನಿ ಎಂದೆ. ಅದಕ್ಕೆ ಅಂಬರೀಶ್‌ ಮತ್ತು ಸುಮಲತಾ ಇಬ್ಬರೂ ಒಪ್ಪಿದರು. 

ಅಭಿಷೇಕ್‌ ಒಳ್ಳೆಯ ಹುಡುಗ. ಅವನನ್ನು ನನ್ನ ಬ್ಯಾನರ್‌ ಮೂಲಕ ಪರಿಚಯಿಸುತ್ತಿರುವುದು ಖುಷಿಯ ವಿಷಯ’ ಎಂದರು ಸಂದೇಶ್‌ ನಾಗರಾಜ್‌.
ಅಂಬರೀಶ್‌ ಅವರು ತಮ್ಮ ಮಗನಿಗೆ ಏನು ಕಿವಿಮಾತು ಹೇಳಿದ್ದಾರೆ ಎಂಬ ಪ್ರಶ್ನೆಯನ್ನು ಅಂಬರೀಶ್‌ ಅವರ ಮುಂದಿಡಲಾಯಿತು. “ಸೆಟ್‌ಗೆ ಹೋದರೆ ನೀನೊಬ್ಬ ನಟ ಮಾತ್ರ. ಹೋಗಿ ಶ್ರದ್ಧೆಯಿಂದ ನಿನ್ನ ಕೆಲಸವನ್ನು ಮಾಡಿಕೊಂಡು ಬಾ ಅಂತ ಹೇಳುತ್ತೇನೆ. ನಾನು ಅಂಬರೀಶ್‌ ಅವರ ಮಗ, ನಿರ್ಮಾಪಕ ಸಂದೇಶ್‌ ನನ್ನ ಫ್ರೆಂಡ್‌ ಅಂತೆಲ್ಲಾ ಮನಸ್ಸಿನಲ್ಲಿಟ್ಟುಕೊಳ್ಳದೆ, ಒಬ್ಬ ನಟನಾಗಿ ನಿರ್ದೇಶಕರು ಏನು ಹೇಳುತ್ತಾರೋ ಅದನ್ನು ಮಾಡು ಅಂತ ಹೇಳಿದ್ದೇನೆ’ ಎಂದು ಅಂಬರೀಶ್‌ ಹೇಳಿದರು.

Advertisement

ಇನ್ನು ಅಭಿಷೇಕ್‌ ಹೆಚ್ಚು ಮಾತನಾಡಲಿಲ್ಲ. ಎಲ್ಲರ ಸಹಕಾರ, ಪ್ರೋತ್ಸಾಹಗಳಿರಲಿ ಎಂದು ಹೇಳಿ ಮಾತು ಮುಗಿಸಿದರು.

ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next