Advertisement

ವಿಮಾನ ನಿಲ್ದಾಣ ಕನಸು ಶೀಘ್ರ ಸಾಕಾರ

02:35 PM Jun 01, 2022 | Team Udayavani |

ದಾವಣಗೆರೆ: ಜಿಲ್ಲೆಯ ಬಹುವರ್ಷಗಳ ಬೇಡಿಕೆಯಾದ ವಿಮಾನ ನಿಲ್ದಾಣ ಸ್ಥಾಪನೆ ಪ್ರಕ್ರಿಯೆ ಚುರುಕುಗೊಂಡಿದ್ದು ಪರಿಶೀಲನೆಗಾಗಿ ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರದ (ಏರ್‌ಪೋರ್ಟ್‌ ಆಥಾರಿಟಿ ಆಫ್‌ ಇಂಡಿಯಾ) ತಜ್ಞರ ತಂಡ ಜೂ. 3 ರಂದು ಜಿಲ್ಲೆಗೆ ಆಗಮಿಸುತ್ತಿದೆ.

Advertisement

ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳ ತಂಡ ಕಳೆದ ಜನವರಿಯಲ್ಲಿ ಭೇಟಿದ ಬಳಿಕ ಇದೇ ವಿಚಾರವಾಗಿ ಪರಿಶೀಲನೆಗೆ ಈಗ ಭಾರತೀಯ ವಿಮಾನ ಪ್ರಾಧಿಕಾರದ (ಎಎಐ) ಐದು ಹಿರಿಯ ಅಧಿಕಾರಿಗಳ ತಂಡ ಜಿಲ್ಲೆಗೆ ಬರುತ್ತಿದೆ. ಇದರಲ್ಲಿ ಅಭಿಜಿತ್‌ ಬ್ಯಾನರ್ಜಿ, ಶೈಲೇಂದ್ರ ಮಾರ್ಕ್‌ ಇಕ್ಕಾ, ತರುಣಕುಮಾರ್‌ ಗುಪ್ತಾ, ಸಕ್ವಿಬ್‌ ಆಫ್ತಬ್‌ ಆಲಂ, ಎನ್‌. ಮೋಹನ್‌ ಇದ್ದಾರೆ. ತಂಡದ ಈ ಭೇಟಿ ವಿಮಾನ ನಿಲ್ದಾಣ ಸ್ಥಾಪನೆ ಕನಸು ಶೀಘ್ರ ಸಾಕಾರಗೊಳ್ಳುವ ನಿರೀಕ್ಷೆ ಗರಿಗೆದರಿದೆ. ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ವಿಚಾರವಾಗಿ ಈ ಹಿಂದೆ ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿತ್ತು. ಜಿಲ್ಲೆಯಲ್ಲಿ ಏರ್‌ ಬಸ್‌ ಮಾದರಿಯ ವಿಮಾನ ನಿಲ್ದಾಣ ಮಾಡುವುದಾದರೆ 500ಎಕರೆ, ಕಾರ್ಗೋ ಮಾದರಿ ವಿಮಾನ ನಿಲ್ದಾಣ ಮಾಡುವುದಾದರೆ 600 ಎಕರೆ, ಎಟಿಆರ್‌-72 ಮಾದರಿ ವಿಮಾನ ನಿಲ್ದಾಣ ನಿರ್ಮಿಸುವುದಾದರೆ ಕನಿಷ್ಠ 350ಎಕರೆ ಜಮೀನು ಬೇಕಾಗುತ್ತದೆ ಎಂದು ಆಗ ಅಧಿಕಾರಿಗಳು ಮಾಹಿತಿ ನೀಡಿದ್ದರು. ಜತೆಗೆ ಜಿಲ್ಲೆಗೆ ಹತ್ತಿರದಲ್ಲಿ ಶಿವಮೊಗ್ಗ, ಬಳ್ಳಾರಿ, ಹುಬ್ಬಳ್ಳಿಗಳಲ್ಲಿ ವಿಮಾನ ನಿಲ್ದಾಣಗಳು ಇರುವುದರಿಂದ ದಾವಣಗೆರೆಗೆ ಎಟಿಆರ್‌-72 ಸೂಕ್ತ ಎಂದು ಸಹ ನೀಡಿದ್ದರು.

ಸ್ಥಳ ಪರಿಶೀಲನೆ

ಈ ಹಿಂದೆ ಬಂದಿದ್ದ ಅಧಿಕಾರಿಗಳ ತಂಡವು ವಿಮಾನ ನಿಲ್ದಾಣ ಸ್ಥಾಪನೆಗೆ ಬೇಕಾದ ಅಗತ್ಯ ಜಮೀನು ಗುರುತಿಸಬೇಕು. ಅಲ್ಲಿನ ಮಣ್ಣಿನ ರಚನೆ, ಸೂಕ್ತ ವಾತಾವರಣದ ಪರೀಕ್ಷೆ ಸೇರಿದಂತೆ ಇನ್ನಿತರ ಅಂಶಗಳ ಕುರಿತು ಅಧ್ಯಯನ ನಡೆಸಬೇಕು ಎಂದು ತಿಳಿಸಿತ್ತು. ಅದೇ ರೀತಿ ಜಿಲ್ಲಾಧಿಕಾರಿಯರವರು ಸಹ ವಿಮಾನ ನಿಲ್ದಾಣಕ್ಕಾಗಿ ಜಮೀನು ಗುರುತಿಸಲಾಗಿದೆ ಎಂದು ತಿಳಿಸಿದ್ದರು. ಈಗ ಭಾರತೀಯ ವಿಮಾನ ಪ್ರಾಧಿಕಾರದ ಅಧಿಕಾರಿಗಳು ಬರುತ್ತಿರುವುದರಿಂದ ವಿಮಾನ ನಿಲ್ದಾಣ ಸ್ಥಾಪನೆ ವಿಚಾರ ಎರಡನೇ ಹಂತಕ್ಕೆ ತಲುಪಿದಂತಾಗಿದೆ. ಈ ತಂಡ ವಿಮಾನ ನಿಲ್ದಾಣಕ್ಕೆ ಗುರುತಿಸಿದ ಭೂಮಿ ಯೋಗ್ಯ ಭೂಮಿ ಎಂದು ತಂಡ ಪರಿಗಣಿಸಿದರೆ, ಜಿಲ್ಲೆಗೆ ಯಾವ ಮಾದರಿಯ ನಿಲ್ದಾಣ ಸೂಕ್ತ ಎಂಬ ನಿರ್ಣಯ ಕೈಗೊಂಡು ವಿಮಾನ ನಿಲ್ದಾಣ ಸ್ಥಾಪನೆ ಶೀಘ್ರ ಕಾಮಗಾರಿಗೆ ಚಾಲನೆ ದೊರೆಯಬಹುದು ಎಂದು ಆಶಿಸಲಾಗಿದೆ.

ಜಾಗದ ಮಾಹಿತಿ ಇನ್ನೂ ಗೌಪ್ಯ

Advertisement

ಒಂದು ಕಡೆ ವಿಮಾನ ನಿಲ್ದಾಣ ಸ್ಥಾಪನೆಗೆ ಅಧಿಕಾರದಲ್ಲಿರುವವರು ಹೆಚ್ಚಿನ ಆಸಕ್ತಿ ತೋರಿದರೆ, ಮತ್ತೂಂದೆಡೆ ವಿಮಾನ ನಿಲ್ದಾಣ ಸ್ಥಾಪನೆಗೆ ಸರ್ಕಾರಿ ಜಾಗ ಇಲ್ಲವೇ ಬಂಜರು ಭೂಮಿಯನ್ನೇ ಹುಡುಕಿಕೊಳ್ಳಿ, ವಿಮಾನ ನಿಲ್ದಾಣಕ್ಕಾಗಿ ಫಲವತ್ತಾದ ಕೃಷಿ ಭೂಮಿಗೆ ಕೈ ಹಾಕಿ, ರೈತರಿಗೆ ತೊಂದರೆ ಕೊಡಬೇಡಿ ಎಂಬ ಕೂಗು ಸಹ ಎದ್ದಿತ್ತು. ಈ ನಡುವೆ ಜಿಲ್ಲಾಡಳಿತ ವಿಮಾನ ನಿಲ್ದಾಣಕ್ಕಾಗಿ ಯಾವ ಭೂಮಿ ಗುರುತಿಸಿದೆ ಎಂಬುದು ಇನ್ನೂ ಗೌಪ್ಯವಾಗಿಯೇ ಇದ್ದು ಈ ತಂಡದ ಭೇಟಿಯಿಂದ ವಿಮಾನ ನಿಲ್ದಾಣಕ್ಕೆ ಗುರುತಿಸಿದ ಜಾಗೆ ಬಹಿರಂಗಗೊಳ್ಳುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next