Advertisement

ಕೃಷಿ ಭೂಮಿ ಖರೀದಿ ನಿರ್ಬಂಧ ಸಡಿಲ

02:26 AM Jun 12, 2020 | Sriram |

ಬೆಂಗಳೂರು: ಕೃಷಿ ಜಮೀನು ಖರೀದಿಗೆ ಇದ್ದ ಎಲ್ಲ ನಿರ್ಬಂಧಗಳನ್ನು ತೆಗೆದು ಹಾಕಲು ರಾಜ್ಯ ಸರಕಾರ ತೀರ್ಮಾನಿಸಿದ್ದು, ಕೃಷಿಕರಲ್ಲದವರೂ ಕೃಷಿ ಭೂಮಿ ಖರೀದಿಸಬಹು ದಾಗಿದೆ. ಹಾಗೆಯೇ ಐವರು ಸದಸ್ಯರ ಕುಟುಂಬ 108 ಎಕರೆಯ ವರೆಗಿನ ಮಿತಿಯಲ್ಲಿ ಜಮೀನು ಹೊಂದಬಹುದಾಗಿದೆ. ಜತೆಗೆ ಕೃಷಿ ಭೂಮಿ ಖರೀದಿಗೆ ಕೃಷಿಯೇತರ ಆದಾಯದ ಮಿತಿಯನ್ನೂ ರದ್ದುಗೊಳಿಸಲಾಗಿದೆ.ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು 79 ಎ,ಬಿ,ಸಿ ಮತ್ತು 63 ಕಲಂಗಳನ್ನು ರದ್ದುಪಡಿ ಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

Advertisement

ಈ ನಿರ್ಧಾರದಿಂದ ಇನ್ನು ಮುಂದೆ ಕೃಷಿ ಜಮೀನು ಖರೀದಿಗೆ ಯಾವುದೇ ನಿರ್ಬಂಧ ಇರುವುದಿಲ್ಲ.ಯಾರು, ಎಲ್ಲಿ ಬೇಕಾದರೂ ಕೃಷಿ ಜಮೀನು ಖರೀದಿಸ ಬಹುದು.

ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ,ಬದಲಾದ ಪರಿಸ್ಥಿತಿಯಲ್ಲಿ ಕೃಷಿಯ ಬಗ್ಗೆ ಐಟಿ- ಬಿಟಿ ವಲಯದವರ ಸಹಿತ ನಗರವಾಸಿಗಳು ಹೆಚ್ಚು ಒಲವು ತೋರಿಸು ತ್ತಿದ್ದಾರೆ. ಹೀಗಾಗಿ ಅವರು ಕೃಷಿ ಜಮೀನು ಖರೀದಿಸುವುದಕ್ಕೆ ಅನುಕೂಲ ಕಲ್ಪಿಸಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ನಿಯಮಾವಳಿ ರೂಪಿಸಿ ಅಧಿವೇಶನದಲ್ಲಿ ಮಸೂದೆ ಮಂಡಿಸ ಲಾಗುವುದು ಎಂದರು.
ಉಪವಿಭಾಗಾಧಿಕಾರಿ ಮತ್ತು ಡಿಸಿಗಳ ನ್ಯಾಯಾಲಯಗಳಲ್ಲಿ ಪ್ರಸ್ತುತ 79ಎ ಮತ್ತು ಬಿಗೆ ಸಂಬಂಧಿಸಿ ಇತ್ಯರ್ಥವಾಗದ ಪ್ರಕರಣಗಳು ರದ್ದಾಗಲಿವೆ. ಆದರೆ ಈ ಹಿಂದೆ ಇತ್ಯರ್ಥವಾಗಿ ರುವ, ಸರಕಾರ ವಶಕ್ಕೆ ಪಡೆದು, ಜಮೀನು ವಾಪಸ್‌ ಪಡೆದ ಪ್ರಕರಣಗಳಲ್ಲಿ ಮೇಲ್ಮನವಿಗೆ ಅವಕಾಶವಿಲ್ಲ ಎಂದರು.

ಉತ್ಪನ್ನ ಹೆಚ್ಚಳಕ್ಕಾಗಿ ಈ ಕ್ರಮ
ನಿರ್ಬಂಧ ಸಡಿಲಿಕೆಯಿಂದ ರೈತರ ಜಮೀನು ಅನ್ಯರ ಪಾಲಾಗುವುದಿಲ್ಲವೇ? ಇದಕ್ಕೆ ಸಾಕಷ್ಟು ವಿರೋಧವೂ ಇದೆಯಲ್ಲವೇ ಎಂಬ ಪ್ರಶ್ನೆಗೆ, ಪರಿಸ್ಥಿತಿಗೆ ತಕ್ಕಂತೆ ಕೆಲವು ಮಾರ್ಪಾಡು ಅಗತ್ಯ. ಕೃಷಿ ಬಗ್ಗೆ ಆಸಕ್ತಿಯುಳ್ಳವರು ಕೃಷಿ ಜಮೀನು ಖರೀದಿಸಿ ಆಹಾರ ಧಾನ್ಯ, ಹಣ್ಣು – ತರಕಾರಿ ಬೆಳೆಸುವ, ಕೃಷಿ ಉತ್ಪನ್ನದ ಪ್ರಮಾಣ ಹೆಚ್ಚಳವಾಗುವ ಆಶಯದೊಂದಿಗೆ ಸರಕಾರ ಈ ನಿರ್ಧಾರಕ್ಕೆ ಬಂದಿದೆ ಎಂದರು.
ಐದು ಸದಸ್ಯರ ಕುಟುಂಬ 108 ಎಕರೆಯ ವರೆಗೂ ಕೃಷಿ ಜಮೀನು ಹೊಂದಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ಗ್ರಾ.ಪಂ. ಆಡಳಿತಾಧಿಕಾರಿಗಳ ನೇಮಕಕ್ಕೆ ಸಂಪುಟ ಅಸ್ತು
ರಾಜ್ಯದ ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿ  ಗಳನ್ನು ನೇಮಿಸಲು ಸಚಿವ ಸಂಪುಟ ಸಭೆ ಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಆರು ತಿಂಗಳಲ್ಲಿ ಚುನಾವಣೆ ನಡೆಸಲು ಪ್ರಕ್ರಿಯೆ ಆರಂಭಿಸಿ ಅಲ್ಲಿಯವರೆಗೆ ಆಡಳಿತಾಧಿಕಾರಿ ನೇಮಿಸಲು ಡಿಸಿಗಳಿಗೆ ನಿರ್ದೇಶನ ನೀಡಲು ನಿರ್ಧರಿಸಲಾಗಿದೆ. ಸಹಕಾರ ಸಂಘಗಳ ಚುನಾವಣೆ ನಡೆಸಲು ಕೂಡ ಸಂಪುಟ ತೀರ್ಮಾನಿಸಿದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

Advertisement

ಮುಂಗಡ ವಾಪಸ್‌
ಕೋವಿಡ್ -19 ಸಂದರ್ಭದಲ್ಲಿ ಮದುವೆ ಮತ್ತು ಇತರ ಕಾರ್ಯಕ್ರಮಗಳಿಗೆ ಕಲ್ಯಾಣ ಮಂಟಪ ಗೊತ್ತುಪಡಿಸಿ, ಕಾರ್ಯಕ್ರಮ ನಡೆಸದೆ ಇದ್ದರೆ ಪಾವತಿ ಸಿದ್ದ ಮುಂಗಡ ಹಣಕ್ಕೆ ತೆರಿಗೆ ಕಡಿತ ಮಾಡಿಕೊಂಡು ವಾಪಸ್‌ ನೀಡಬೇಕು ಎಂದು ಸರಕಾರ ನಿರ್ದೇಶನ ನೀಡಿದೆ. ಈ ಸಂಬಂಧ ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಲಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next