Advertisement

ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕ್ರಮ: ಕಾರ್ಯಂಗ ಸುಧಾರಣೆಯಾಗಬೇಕು

09:33 AM Aug 07, 2017 | |

ಸರಕಾರಿ ಅಧಿಕಾರಿಗಳನ್ನು ಕೈಗೊಂಬೆ ಮಾಡಿಕೊಂಡು ಭ್ರಷ್ಟರಾಗಲು ಅವಕಾಶ ಮಾಡಿಕೊಡುವ ಸಚಿವರ ವಿರುದ್ಧವೂ ಇದೇ ರೀತಿಯ ಕ್ರಮ ಕೈಗೊಂಡಾಗ ವ್ಯವಸ್ಥೆ ಸುಧಾರಿಸೀತು.

Advertisement

ಛತ್ತೀಸ್‌ಗಢದ ಇಬ್ಬರು ಐಪಿಎಸ್‌ ಅಧಿಕಾರಿಗಳನ್ನು ನಿಷ್ಕ್ರಿಯತೆಯ ಕಾರಣಕ್ಕೆ ವಜಾಗೊಳಿಸಲಾಗಿದೆ. ಇಬ್ಬರು ಡಿಐಜಿ ದರ್ಜೆಯ ಹುದ್ದೆಗಳನ್ನು ಹೊಂದಿದ್ದರು. ಅವರನ್ನು ವಜಾಗೊಳಿಸುವ ಮೂಲಕ ಕೇಂದ್ರ ಸರಕಾರಿ ಬಾಬುಗಳ ನಿಷ್ಕ್ರಿಯತೆಯನ್ನು ಮತ್ತು ಕರ್ತವ್ಯಲೋಪವನ್ನು ಸಹಿಸುವುದಿಲ್ಲ ಎಂಬ ಖಡಕ್‌ ಸಂದೇಶವನ್ನು ಅಧಿಕಾರಿಗಳಿಗೆ ರವಾನಿಸಿದೆ. ಹಿಂದೆಯೂ ಐಪಿಎಸ್‌ ಅಥವ ಐಎಎಸ್‌ ದರ್ಜೆಯ ಅಧಿಕಾರಿಗಳು ಅಪರೂಪಕ್ಕೊಮ್ಮೆ ಕಾನೂನು ಕ್ರಮ ಎದುರಿಸುವ ಅಥವಾ ಅಮಾನತುಗೊಳ್ಳವುದು ಇತ್ತು. ಹೆಚ್ಚಾಗಿ ಭ್ರಷ್ಟಾಚಾರ ಮಾಡಿದ ಅಧಿಕಾರಿಗಳು ಈ ಶಿಕ್ಷೆಗೆ ಗುರಿಯಾಗುತ್ತಿದ್ದರು. ಆದರೆ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೇರಿದ ಬಳಿಕ ಸರಕಾರಿ ಅಧಿಕಾರಿಗಳ ಅದರಲ್ಲೂ ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳ ಕಾರ್ಯದಕ್ಷತೆಯನ್ನು  ಸುಧಾರಿಸಲು ಗಂಭೀರ ಪ್ರಯತ್ನ ಮಾಡುತ್ತಿದೆ. 2014ರಲ್ಲಿ ಅಧಿಕಾರಕ್ಕೇರಿದ ಕೂಡಲೇ ಮೋದಿ ಅಧಿಕಾರಿಗಳ ಸಮಯಪಾಲನೆಯನ್ನು ಕಟ್ಟುನಿಟ್ಟುಗೊಳಿಸಿದ್ದರು. ಇದರಿಂದಾಗಿ 11 ಗಂಟೆಯ ನಂತರವೇ ಕಚೇರಿಯತ್ತ ದಯಪಾಲಿಸುತ್ತಿದ್ದ ಅಧಿಕಾರಿಗಳು ಬೆಳಗ್ಗೆ 9ಕ್ಕೆ ಬರಲಾರಂಭಿಸಿದ್ದಾರೆ. ಅಂತೆಯೇ ಹಾಜರಿ ಹಾಕಿ ಕಾಫಿ, ಟೀ ಅಥವ ಖಾಸಗಿ ಕೆಲಸಕ್ಕಾಗಿ ಹೊರಗೆ ಹೋಗುವ ಚಾಳಿಗೂ ಬಹುತೇಕ ಕಡಿವಾಣ ಬಿದ್ದಿದೆ. ಸಂಜೆ ಕೆಲಸ ಮುಗಿಸಿದ ಮೇಲೆಯೇ ಅಧಿಕಾರಿಗಳು ಮನೆಗೆ ಹೋಗುತ್ತಿದ್ದಾರೆ. ಆಡಳಿತದಲ್ಲಿ ಕಾರ್ಯಾಂಗ ಅತ್ಯಂತ ಮಹತ್ವದ ಅಂಗ. ಇದು ನಿಷ್ಕ್ರಿಯಗೊಂಡರೆ ಇಡೀ ಆಡಳಿತಯಂತ್ರವೇ ನಿಧಾನವಾಗುತ್ತದೆ. ಕಾರ್ಯಾಂಗ ಸರಿಯಾಗಬೇಕಾದರೆ ಮೇಲಿನಿಂದಲೇ ದುರಸ್ತಿ ಮಾಡುತ್ತಾ ಬರಬೇಕಾಗುತ್ತದೆ. 

 ಹಾಗೆಂದು ಐಎಎಸ್‌ ಅಥವಾ ಐಪಿಎಸ್‌ ಅಧಿಕಾರಿಗಳು ವಜಾಗೊಳ್ಳುವುದು ಇಲ್ಲವೇ ಕಡ್ಡಾಯ ನಿವೃತ್ತಿಯಾಗುತ್ತಿರುವುದು ಇದೇ ಮೊದಲೇನಲ್ಲ. ಸರಕಾರವೇ ಹೇಳಿರುವಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಮೂರು ವರ್ಷದಲ್ಲಿ 129 ನಿಷ್ಕ್ರಿಯ ಅಧಿಕಾರಿಗಳನ್ನು ಕಡ್ಡಾಯ ನಿವೃತ್ತಿಗೊಳಿಸಲಾಗಿದೆ. ಭಾರತೀಯ ಸೇವಾ ನಿಯಮಗಳಡಿಯಲ್ಲಿ ಐಎಎಸ್‌ ಐಎಫ್ಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳ ಸೇವಾ ದಕ್ಷತೆಯನ್ನು ಅವರು ಸೇವೆಗೆ ಸೇರಿದ 15 ವರ್ಷ ಮತ್ತು 25 ವರ್ಷಗಳಾದ ಬಳಿಕ ಪರಿಶೀಲನೆಗೊಳಪಡಿಸುವ ಪದ್ಧತಿಯನ್ನು ಸರಕಾರ ಪಾಲಿಸುತ್ತಿದೆ. ಅಧಿಕಾರಿ ಕಾರ್ಯಕ್ಷಮತೆ ಕಳೆದುಕೊಂಡಿದ್ದಾರೆ ಎನ್ನುವುದು ಸಾಬೀತಾದರೆ ಕಡ್ಡಾಯವಾಗಿ ನಿವೃತ್ತಿಗೊಳಿಸುವ ಅಥವಾ ವಜಾಗೊಳಿಸುವ ಕ್ರಮ ಕೈಗೊಳ್ಳಲಾಗುತ್ತದೆ. ಮೂರು ವರ್ಷಗಳಲ್ಲಿ ಕೇಂದ್ರ 24,000 ಎ ದರ್ಜೆ ಮತ್ತು 42,251 ಬಿ ದರ್ಜೆ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿದೆ. ಇದಲ್ಲದೆ 34,451 ಎ ದರ್ಜೆ ಮತ್ತು ಸುಮಾರು 42,000 ಬಿ ದರ್ಜೆ ಅಧಿಕಾರಿಗಳು ಪ್ರಸ್ತುತ ಪರಿಶೀಲನೆಯಲ್ಲಿದ್ದಾರೆ. ಹೀಗಾಗಿ ಇನ್ನೂ ಕೆಲವು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ನಿರೀಕ್ಷಿಸಬಹುದು.   ಇದೇನೇ ಇದ್ದರೂ ಪ್ರಸ್ತುತ ಪದ್ಧತಿಯಲ್ಲಿ ಸೇವೆಗೆ ಸೇರಿದ ಅಧಿಕಾರಿಗೆ 30 ವರ್ಷ ಅಥವಾ 50 ವರ್ಷವಾದರೆ ಮಾತ್ರ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಸಾಧ್ಯವಿದೆ. ಅಂದರೆ ಇಷ್ಟು ವರ್ಷ ಅವರು ಭ್ರಷ್ಟಾಚಾರ ಮಾಡಿದರೂ ಸಹಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಈ ಪ್ರಾಯಮಿತಿಯನ್ನು ಇನ್ನಷ್ಟು ಕಡಿಮೆಗೊಳಿಸುವುದು ಒಳ್ಳೆಯದು. ಭ್ರಷ್ಟಾಚಾರದ ಆರೋಪಕ್ಕೊಳಗಾಗಿರುವ ಅಧಿಕಾರಿಗಳಿಗೆ ಸ್ವಯಂ ನಿವೃತ್ತಿಯ ಆಯ್ಕೆಯನ್ನೂ ಕೊಡಬಹುದು. ಭ್ರಷ್ಟ ಮತ್ತು ನಿಷ್ಕ್ರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರದಲ್ಲಿ ಅಧಿಕಾರಶಾಹಿಯ ನೈತಿಕ ಸ್ಥೈರ್ಯ ಕುಸಿಯದಂತೆ ನೋಡಿಕೊಳ್ಳುವ ಅಗತ್ಯವೂ ಇದೆ. ಇದಕ್ಕೂ ಮಿಗಿಲಾಗಿ ಸರಕಾರಿ ಅಧಿಕಾರಿಗಳನ್ನು ಕೈಗೊಂಬೆ ಮಾಡಿಕೊಂಡು ಭ್ರಷ್ಟರಾಗಲು ಅವಕಾಶ ಮಾಡುವ ಸಚಿವರ ವಿರುದ್ಧವೂ ಇದೇ ಮಾದರಿಯ ಕ್ರಮ ಕೈಗೊಂಡಾಗ ವ್ಯವಸ್ಥೆ ಸುಧಾರಿಸೀತು.

Advertisement

Udayavani is now on Telegram. Click here to join our channel and stay updated with the latest news.

Next