Advertisement

ಪ್ರತಿಸ್ಪರ್ಧಿಗಳ ಶಕ್ತಿ ಅರಿಯಲು ಕಾಂಗ್ರೆಸ್‌ನಿಂದ ಸಮೀಕ್ಷೆ

11:35 PM Apr 18, 2022 | Team Udayavani |

ಬೆಂಗಳೂರು: ವರ್ಷದ ಮುಂಚೆಯೇ ರಾಜ್ಯವು ಚುನಾವಣ “ಮೂಡ್‌’ನತ್ತ ಹೊರಳಿದ್ದು, ಅಭ್ಯರ್ಥಿಗಳ ಆಯ್ಕೆ ಸಹಿತ ಕೆಲವು ವಿಷಯಗಳಿಗಾಗಿ ಕ್ಷೇತ್ರವಾರು ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಲು ಕಾಂಗ್ರೆಸ್‌ ಮುಂದಾಗಿದೆ.

Advertisement

ಗೆಲುವಿಗೆ ಬಿಜೆಪಿ ಹಾಗೂ ಜೆಡಿಎಸ್‌ನ ಸವಾಲು ಎದುರಿಸುವುದು ಮುಖ್ಯವಾದ್ದರಿಂದ ಆ ಪಕ್ಷಗಳ ಹಾಗೂ ಸಂಭವನೀಯ ಅಭ್ಯರ್ಥಿಗಳ ಸಾಮರ್ಥ್ಯ, ಸ್ವ ವರ್ಚಸ್ಸನ್ನು ಗಮನಿ ಸುತ್ತಿದೆ. ಜತೆಗೆ 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆಯೂ ಸವಾಲಾಗಿದೆ.

ರಾಹುಲ್‌ ಗಾಂಧಿ 150 ಕ್ಷೇತ್ರಗಳ ಟಾರ್ಗೆಟ್‌ ಕೊಟ್ಟು, ಅದನ್ನು ಸಾಧಿಸಲು ಕಾರ್ಯತಂತ್ರ ರೂಪಿಸುವಂತೆ ಸೂಚಿಸಿದ್ದಾರೆ. ಅದಕ್ಕೆ ಪೂರಕವಾಗಿ ಕ್ಷೇತ್ರವಾರು ಅಭಿಪ್ರಾಯ ಸಂಗ್ರಹ ಹಾಗೂ ಪ್ರತ್ಯೇಕ ಸಮೀಕ್ಷೆಯನ್ನೂ ನಡೆಸಲಾಗುತ್ತಿದೆ.

ಚುನಾವಣ ತಂತ್ರಗಾರಿಕೆ ನಿಪುಣ ಪ್ರಶಾಂತ್‌ ಕಿಶೋರ್‌ ತಂಡದ ಸುನೀಲ್‌ ಕುನಗೋಳ್‌ ಎಂಬವರಿಗೆ ಕಾಂಗ್ರೆಸ್‌ ಸಮೀಕ್ಷಾ ಕಾರ್ಯವನ್ನು ವಹಿಸಿದ್ದು, ಅವರ ಎಬಿಎಂ ಸಂಸ್ಥೆ ಕೆಲಸ ಆರಂಭಿಸಿದೆ. ರಾಹುಲ್‌ ಗಾಂಧಿಯೇ 6 ತಿಂಗಳ ಕಾಲ ಸಮಾಲೋಚಿಸಿ ಈ ತಂಡವನ್ನು ನಿಯೋಜಿಸಿದ್ದು, ಇತ್ತೀಚೆಗೆ ದಿಲ್ಲಿಗೆ ಹೋಗಿದ್ದ ರಾಜ್ಯ ನಾಯಕರಿಗೆ ಮಾಹಿತಿ ನೀಡಿದ್ದಾರೆ.

3 ತಿಂಗಳ ಸುತ್ತಾಟ
ಸುನಿಲ್‌ ತಂಡವು ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಎಂ. ಬಿ. ಪಾಟೀಲ್‌, ಡಿ. ಕೆ. ಶಿವಕುಮಾರ್‌, ಹರಿಪ್ರಸಾದ್‌ ಸಹಿತ ರಾಜ್ಯದ ಕಾಂಗ್ರೆಸ್‌ ಮುಖಂಡರ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದೆ. ಜಿಲ್ಲಾ ಮತ್ತು ತಾಲೂಕು ಘಟಕಗಳ ಅಧ್ಯಕ್ಷರ ಜತೆಯೂ ಚರ್ಚಿಸಿದೆ. ಮತದಾರರ ಅಂತರಾಳ ಅರಿಯುವ ಹಾಗೂ ಸಮುದಾಯಗಳ ಬೆಂಬಲ ಸಹಿತ ಸ್ಥಳೀಯ ಮಟ್ಟದ ನಾಯಕರ ಬಗ್ಗೆಯೂ ಮಾಹಿತಿ ಸಂಗ್ರಹಿಸುವ ಸಾಮರ್ಥ್ಯವುಳ್ಳ 200 ಮಂದಿಯ ತಂಡ ಮುಂದಿನ 3 ತಿಂಗಳ ಕಾಲ ರಾಜ್ಯದ 224 ಕ್ಷೇತ್ರಗಳಲ್ಲಿ ಸುತ್ತಾಡಲಿದೆ ಎಂದು ಮೂಲಗಳು ತಿಳಿಸಿವೆ.

Advertisement

ಬಿಜೆಪಿ ಮತ್ತು ಜೆಡಿಎಸ್‌ ವಿರುದ್ಧ ಯಾವ ರೀತಿ ಹೋರಾಡಬೇಕು, ಯಾವ ವಿಷಯ ಮುಂದಿಟ್ಟರೆ ಮತದಾರನ ಮನಸ್ಸನ್ನು ಗೆಲ್ಲಬಹುದು, ಯಾರನ್ನು ಕಣಕ್ಕಿಳಿಸಿದರೆ ಗೆಲುವು ಸಾಧ್ಯ ಮುಂತಾದವುಗಳ ಬಗ್ಗೆ ಎಲ್ಲ ಕೋನ
ಗಳಿಂದಲೂ ಪರಿಶೀಲಿಸಿ ಕೆಪಿಸಿಸಿ ಹಾಗೂ ಎಐಸಿಸಿಗೆ ಸುನಿಲ್‌ ತಂಡ ಕೆಲವು ಸಲಹೆ
ಗಳನ್ನು ನೀಡಲಿದೆ ಎನ್ನಲಾಗಿದೆ.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮುಂದಿನ ಲೋಕಸಭಾ ಚುನಾವಣ ಹೋರಾಟಕ್ಕೆ ಹುಮ್ಮಸ್ಸು ಬರುತ್ತದೆ ಹಾಗೂ ದೇಶದ ಇತರ ಭಾಗದಲ್ಲೂ ಪಕ್ಷ ಸಂಘಟನೆಗೆ ಅನುಕೂಲವಾಗಲಿದೆ ಎಂದು ಎಐಸಿಸಿ ಹಂತದಲ್ಲೇ ಸಮೀಕ್ಷೆಗೆ ನಿರ್ಧರಿಸಲಾಗಿದೆ.ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಪ್ರತ್ಯೇಕ ಸಮೀಕ್ಷೆಗಳನ್ನು ಮಾಡಿಸಿದ್ದರಾದರೂ ಈಗಿನ ಸಮೀಕ್ಷೆ ಆಧಾರದಲ್ಲೇ ಟಿಕೆಟ್‌ ಹಂಚಿಕೆ ಹಾಗೂ ಕಾರ್ಯತಂತ್ರ ರೂಪಿತವಾಗಲಿದೆ ಎನ್ನಲಾಗಿದೆ.

ನಿರ್ಧಾರ ಮರುಪರಿಶೀಲನೆಯಲ್ಲಿ ನಾಯಕರು
ವಿಧಾನಪರಿಷತ್‌ ಚುನಾವಣೆ, ನಗರ ಸ್ಥಳೀಯ ಸಂಸ್ಥೆಗಳ ಚುನಾ ವಣೆ ಬಳಿಕ ಕಾಂಗ್ರೆಸ್‌ನತ್ತ ದೃಷ್ಟಿ ನೆಟ್ಟಿದ್ದ ಬಿಜೆಪಿ, ಜೆಡಿಎಸ್‌ ನಾಯ ಕರು ಪಂಚರಾಜ್ಯ ಚುನಾವಣೆ ಬಳಿಕ ಹಿಂದೇಟು ಹಾಕುತ್ತಿದ್ದಾರೆ. ಜಿ.ಟಿ.ದೇವೇಗೌಡ ಸಹಿತ ಕೆಲವರು ಇರುವಲ್ಲೇ ಇರುವುದು ಅಥವಾ ಬಿಜೆಪಿಗೆ ಹೋಗುವುದೋ ಎಂಬ ಚಿಂತನೆಯಲ್ಲಿದ್ದರೆ, ಕೆಲವರು ಆಪ್‌ನತ್ತ ಮುಖ ಮಾಡಿದ್ದಾರೆ. ಗುಬ್ಬಿ ವಾಸು ಸಹಿತ ಕಾಂಗ್ರೆಸ್‌ ಜತೆ ಗುರುತಿಸಿಕೊಂಡ ಕೆಲವರು ಏನು ಮಾಡಬೇಕೆಂದು ಅರಿಯದೆ ಒದ್ದಾಡುತ್ತಿದ್ದಾರೆ ಎನ್ನಲಾಗಿದೆ.

– ಎಸ್‌.ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next