Advertisement

ಒತ್ತುವರಿದಾರರಿಗೇ ನಿವೇಶನ?

06:12 PM Apr 24, 2020 | mahesh |

ಬೆಂಗಳೂರು: ಲಾಕ್‌ಡೌನ್‌ನಿಂದ ಬರಿದಾಗಿರುವ ಬೊಕ್ಕಸ ಭರ್ತಿಗೆ ಸರ್ಕಾರ ಒಂದರ ಹಿಂದೊಂದು ಪ್ರಯೋಗಕ್ಕೆ ಕೈಹಾಕುತ್ತಿದ್ದು, ಈಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ವು ವಿವಿಧ ಕಾರ್ಯಕ್ರಮಗಳಡಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಒತ್ತುವರಿದಾರರಿಗೇ ಕೊಟ್ಟು ಕೈತೊಳೆದುಕೊಳ್ಳಲು ಮುಂದಾಗಿದೆ!

Advertisement

ಕೆಂಪೇಗೌಡ ಬಡಾವಣೆ, ವಿಶ್ವೇಶ್ವರಯ್ಯ, ಅರ್ಕಾವತಿಯಂತಹ ಹತ್ತಾರು ಬಡಾವಣೆಗಳ ನಿರ್ಮಾಣಕ್ಕಾಗಿ ನಗರಾದ್ಯಂತ ಪ್ರತಿಷ್ಠಿತ ಪ್ರದೇಶಗಳಲ್ಲಿ ಬೆಲೆಬಾಳುವ ಸಾವಿರಾರು ಎಕರೆ ಭೂಮಿಯನ್ನು ಬಿಡಿಎ ರೈತರಿಂದ ಸ್ವಾಧೀನಪಡಿಸಿಕೊಂಡಿದೆ. ಆ ಪೈಕಿ ಅಲ್ಲಲ್ಲಿ ಕೆಲವರು ಒತ್ತುವರಿ ಮಾಡಿಕೊಂಡು ಮನೆ, ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ. “ತುರ್ತು ಪರಿಸ್ಥಿತಿ’ ಹಿನ್ನೆಲೆಯಲ್ಲಿ ಆಯಾ ಒತ್ತುವರಿದಾರರಿಗೇ ಮಾರ್ಗಸೂಚಿ ದರ ಅಥವಾ ಸರ್ಕಾರ ನಿಗದಿಪಡಿಸಿದ ದರ (ಮಾರ್ಗಸೂಚಿಗಿಂತ ಕಡಿಮೆ)ದಲ್ಲಿ ಮಾರಾಟ ಮಾಡಲು ಚಿಂತನೆ ನಡೆದಿದೆ. ಈ ಸಂಬಂಧ ಬಿಡಿಎ ಕಾಯ್ದೆ 38 “ಸಿ’ಗೆ ತಿದ್ದುಪಡಿ ತರಲು ಉದ್ದೇಶಿಸಿದ್ದು, ಇದರಿಂದ ಸರಿಸುಮಾರು 20-25 ಸಾವಿರ ಕೋಟಿ ರೂ. ಆದಾಯ ನಿರೀಕ್ಷಿಸ ಲಾಗಿದೆ. ಈಗಾಗಲೇ ಈ ಪ್ರಸ್ತಾವನೆಯನ್ನು ಪ್ರಾಧಿಕಾ ರವು ಸರ್ಕಾರಕ್ಕೆ ಸಲ್ಲಿಸಿದ್ದು, ಬರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಪರಿಹಾರ ಸಿಗದ ರೈತರು: ರೈತರಿಂದ ವಶಪಡಿಸಿಕೊಂಡ ಭೂಮಿಗೆ ಪರ್ಯಾಯ ಭೂಮಿ ನೀಡಲು ಹಲವು ವರ್ಷ ಕಳೆದರೂ ಪ್ರಾಧಿಕಾರಕ್ಕೆ ಸಾಧ್ಯವಾಗಿಲ್ಲ. ಅರ್ಕಾವತಿ ಬಡಾವಣೆಯಲ್ಲೇ ದಶಕ ಕಳೆದರೂ ಶೇ. 10-15ರಷ್ಟು ಫ‌ಲಾನುಭವಿಗಳಿಗೆ ಮಾತ್ರ ಪರಿಹಾರ ಒದಗಿಸಲಾಗಿದೆ. ಭೂಮಿ ಕಳೆದುಕೊಂಡ ಇಂತಹ ನೂರಾರು ರೈತರು ಪರ್ಯಾಯ ಭೂಮಿಯ ಎದುರು
ನೋಡುತ್ತಿದ್ದಾರೆ. ಪೆರಿಫೆರಲ್‌ ರಿಂಗ್‌ರೋಡ್‌ (ಪಿಆರ್‌ಆರ್‌) ವ್ಯಾಪ್ತಿಗೆ ಬರುವ ರೈತರಿಗೆ ಮಾತ್ರ  ಪರಿಹಾರ ಹಣದ ರೂಪದಲ್ಲಿ ನೀಡಲಾಗುತ್ತದೆ.

ಉಳ್ಳವರಿಗೆ ರಹದಾರಿ?
ಸುಮಾರು 6-7 ಸಾವಿರ ಎಕರೆ ಭೂಮಿಯನ್ನು ನಗರದ ವಿವಿಧೆಡೆ ಪ್ರಾಧಿಕಾರವು ಸ್ವಾಧೀನಪಡಿಸಿಕೊಂಡಿದೆ. ಇದೆಲ್ಲವೂ ತುಂಬಾ ಬೆಲೆಬಾಳುತ್ತದೆ. ಮಾರ್ಗಸೂಚಿ ದರ ಅಥವಾ ಸರ್ಕಾರ ಸೂಚಿಸಿದ ದರದಲ್ಲಿ ಉದ್ದೇಶಿತ ಜಾಗಗಳನ್ನು ಒತ್ತುವರಿದಾರರಿಗೆ ಮಾರಾಟ ಮಾಡುವುದರಿಂದ ಸರ್ಕಾರಕ್ಕೆ ವಾಸ್ತವವಾಗಿ ಭಾರಿ ಪ್ರಮಾಣದಲ್ಲಿ ನಷ್ಟವಾಗಲಿದೆ. ಉದಾಹರಣೆಗೆ ಯಾವೊಂದು ಪ್ರದೇಶದ ಮಾರ್ಗಸೂಚಿ ದರ ಚದರಡಿಗೆ ಎರಡು ಸಾವಿರ ರೂ. ಇದೆ ಎಂದುಕೊಳ್ಳೋಣ.  ಒತ್ತುವರಿದಾರನ ಆರ್ಥಿಕ ಪರಿಸ್ಥಿತಿ ತುಂಬಾ ಕಷ್ಟದಲ್ಲಿ ಎಂದುಸರ್ಕಾರ ಅದಕ್ಕಿಂತ ಕಡಿಮೆಗೆ ಅಂದರೆ ಚದರಡಿಗೆ 1,500 ರೂ. ನಿಗದಿಪಡಿಸಬಹುದು. ಆದರೆ, ಮಾರುಕಟ್ಟೆ ದರ ದುಪ್ಪಟ್ಟು  ಇರುತ್ತದೆ. ಹಾಗಾಗಿ, ನೋಂದಣಿಯಾದ ಮರುದಿನವೇ ಆ ನಿವೇಶನ ಮಾರಾಟ ಮಾಡಿ ದರೂ, ಚದರಡಿಗೆ 3,500-4,000 ರೂ.ಗೆ ಮಾರಾಟ ಆಗುತ್ತದೆ. ನಂತರ ದಿನಗಳಲ್ಲಿ ಅನಾಯಾಸವಾಗಿ ಈ ಭೂಮಿ ಉಳ್ಳವರ ಪಾಲಾಗಲಿದೆ ಎಂದು ಹೆಸರು ಹೇಳಲಿಚ್ಛಿಸದ
ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಅವಧಿ ನಿಗದಿ ಇಲ್ಲ
ಕನಿಷ್ಠ ಹತ್ತು ವರ್ಷ ಅಥವಾ ಕೊನೆಪಕ್ಷ ಮೂರು ವರ್ಷಗಳ ಹಿಂದೆ ಒತ್ತುವರಿ ಮಾಡಿರುವ ಎಂದು ಸೂಚಿಸಬೇಕಿತ್ತು.  ಆದರೆ, ಪ್ರಸ್ತಾವನೆಯಲ್ಲಿ ಎಲ್ಲಿಯೂಯಾವುದೇ ನಿರ್ದಿಷ್ಟ ಅವಧಿವರೆಗೆ
ಸೀಮಿತಗೊಳಿಸಿಲ್ಲ. ಕಾಯ್ದೆ ತಿದ್ದುಪಡಿ ಯಾದ ದಿನದವರೆಗೆ ಎಲ್ಲ ಒತ್ತುವರಿದಾರರೂ ಸೂಕ್ತ ಮಾಹಿತಿ ಒದಗಿಸಿದರೆ ಸಾಕು, ಅತ್ಯಂತ ಅಗ್ಗದ ದರದಲ್ಲಿ ಪ್ರತಿಷ್ಠಿತ ಜಾಗ ತಮ್ಮದಾಗಲಿದೆ.
ಇದು ಒತ್ತುವರಿದಾರರಿಗೆ ಮತ್ತಷ್ಟು ಇಂಬು ಮಾಡಿ ಕೊಟ್ಟಂತಾಗಿದೆ. ಹಾಗಾಗಿ, ತಿದ್ದುಪಡಿ ತರಲಾಗುತ್ತಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ರಾತ್ರೋರಾತ್ರಿ ಈ ಬಡಾವಣೆಗಳಲ್ಲಿ ಶೆಡ್‌ ಗಳು  ತಲೆಯೆತ್ತಿದರೂ ಅಚ್ಚರಿ ಇಲ್ಲ

Advertisement

ವಿವಿಧ ಕಾರ್ಯಕ್ರಮಗಳಡಿ ನಗರದಾದ್ಯಂತ ಸುಮಾರು ಆರು ಸಾವಿರ ಎಕರೆಗೂ ಅಧಿಕ ಭೂಮಿಯನ್ನು ಸ್ವಾಧೀನಪಡಿಸಿ ಕೊಳ್ಳಲಾಗಿದ್ದು, ಅದು ಅಲ್ಲಲ್ಲಿ ಒತ್ತುವರಿಯಾಗಿದೆ. ತುರ್ತು ಪರಿಸ್ಥಿತಿ
ಹಿನ್ನೆಲೆಯಲ್ಲಿ ಬಿಡಿಎ ಕಾಯ್ದೆಗೆ ತಿದ್ದುಪಡಿ ತಂದು, ಒತ್ತುವರಿದಾರರಿಗೆ ಮಾರಾಟ ಮಾಡಲು ಉದ್ದೇಶಿಸಲಾಗಿದೆ. ಈ  ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ಸಚಿವ
ಸಂಪುಟ ಸಭೆಯಲ್ಲಿ ಇದು ತೀರ್ಮಾನ ಆಗಲಿದೆ.
ಡಾ.ಜಿ.ಸಿ. ಪ್ರಕಾಶ್‌, ಆಯುಕ್ತರು, ಬಿಡಿಎ

●ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next