Advertisement

ಕೊಯ್ನಾದಿಂದ 52 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ

03:59 PM Aug 17, 2018 | |

ಚಿಕ್ಕೋಡಿ: ಕೆಲ ದಿನಗಳಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದ ರಾಜ್ಯದ ಗಡಿ ಭಾಗದಲ್ಲಿರುವ ಕೊಯ್ನಾ ಜಲಾಶಯ ಭರ್ತಿಯಾಗಿದ್ದು, ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಗುರುವಾರ ಸಂಜೆ 52 ಸಾವಿರ ಕ್ಯುಸೆಕ್‌ ನೀರನ್ನು ಹೊರಬಿಟ್ಟಿದ್ದರಿಂದ ನದಿಗಳಿಗೆ ಅಪಾರ ಪ್ರಮಾಣದ ನೀರು ರಾಜ್ಯಕ್ಕೆ ಹರಿದು ಬರುತ್ತಿದೆ. ಗಡಿ ಭಾಗದಲ್ಲಿ ಕೃಷ್ಣಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ.

Advertisement

ಕೊಯ್ನಾ ಜಲಾಶಯವು 105 ಟಿಎಂಸಿ ಅಡಿ ನೀರಿನ ಸಂಗ್ರಹ ಹೊಂದಿದ್ದು, ಈಗಾಗಲೇ 103 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಜಲಾಶಯವು 659 ಅಡಿ ಗರಿಷ್ಟ ನೀರಿನ ಮಟ್ಟ ಹೊಂದಿದ್ದು, ಗುರುವಾರ 558 ಅಡಿ ನೀರಿನ ಮಟ್ಟ ತಲುಪಿರುವುದರಿಂದ ಕೃಷ್ಣಾ ನದಿಗೆ ಜಲಾಶಯದಿಂದ ಗುರುವಾರ ಸಂಜೆ ಸುಮಾರು 52 ಸಾವಿರ ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಮಳೆ ನೀರು ಮತ್ತು ಜಲಾಶಯದ ನೀರು ಸೇರಿ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ ಸುಮಾರು 1 ಲಕ್ಷ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಮತ್ತೆ ಕೊಯ್ನಾದಿಂದ ಹೆಚ್ಚಿನ ನೀರು ಹರಿ ಬಿಟ್ಟರೆ ಕೃಷ್ಣಾ ನದಿ ನೀರಿನಮಟ್ಟ ಹೆಚ್ಚಳವಾಗುವ ಸಾಧ್ಯತೆ ಇದೆ. ಕೃಷ್ಣಾ, ದೂಧಗಂಗಾ ನದಿಗಳ ನೀರಿನ ಮಟ್ಟ ಗುರುವಾರ ಮತ್ತೆ ಎರಡು ಅಡಿಯಷ್ಟು ಹೆಚ್ಚಳವಾಗಿದೆ. ಇದರಿಂದ ಚಿಕ್ಕೋಡಿ ತಾಲೂಕಿನಲ್ಲಿ ನಾಲ್ಕು ಸೇತುವೆಗಳು ಮುಳುಗಡೆಗೊಂಡು ಸಂಚಾರ ಕಡಿತಗೊಂಡಿದೆ. ಕಲ್ಲೋಳ- ಯಡೂರ, ಮಲಿಕವಾಡ- ದತ್ತವಾಡ, ಕಾರದಗಾ- ಭೋಜ, ಭೋಜವಾಡಿ- ಕುನ್ನೂರ ಸೇತುವೆಗಳು ಮುಳುಗಡೆಯಾಗಿವೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ ಮೂಲಕ ಕೃಷ್ಣಾ ನದಿಗೆ 79,730 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ದೂಧಗಂಗಾ ನದಿ ಮೂಲಕ 21,120 ಕ್ಯುಸೆಕ್‌ ನೀರು ಹರಿದು ಕೃಷ್ಣಾ ನದಿಗೆ ಸೇರುತ್ತಿದೆ. ಇದರಿಂದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ 10,350 ಕ್ಯುಸೆಕ್‌ ನೀರು ಹರಿದು ಬರಲಾರಂಭಿಸಿದೆ. ಹಿಪ್ಪರಗಿ ಬ್ಯಾರೇಜ್‌ ಮೂಲಕ 93 ಸಾವಿರ ಕ್ಯುಸೆಕ್‌ ನೀರು ಹರಿದು ಆಲಮಟ್ಟಿ ಜಲಾಶಯಕ್ಕೆ ಹೋಗುತ್ತಿದೆ ಎಂದು ತಹಶೀಲ್ದಾರ ಸಿ.ಎಸ್‌.ಕುಲಕರ್ಣಿ ತಿಳಿಸಿದರು. ಮಹಾರಾಷ್ಟ್ರದ ಮಳೆ ವಿವರ: ಕೊಯ್ನಾ-109 ಮಿಮೀ, ನವಜಾ-98 ಮಿಮೀ, ಮಹಾಬಳೇಶ್ವರ-106 ಮಿಮೀ, ವಾರಣಾ-27 ಮಿಮೀ, ಸಾಂಗಲಿ-04 ಮಿಮೀ, ಕೊಲ್ಲಾಪೂರ- 08ಮಿಮೀ, ಕಾಳಮ್ಮವಾಡಿ- 34ಮಿಮೀ, ರಾಧಾನಗರಿ-63 ಮಿಮೀ, ಪಾಟಗಾಂವ-154ಮಿಮೀ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next