Advertisement

Udupi: 51ನೇ ಅ.ಭಾ. ಪ್ರಾಚ್ಯವಿದ್ಯಾ ಸಮ್ಮೇಳನ ಭಾರತೀಯ ಜ್ಞಾನಪರಂಪರೆ ಕುರಿತು ಚಿಂತನ ಮಂಥನ

11:08 PM Oct 22, 2024 | Team Udayavani |

ಉಡುಪಿ: ಭಾರತೀಯ ಜ್ಞಾನ ಪರಂಪರೆ ಕುರಿತು ಹಿರಿಯ ವಿದ್ವಾಂಸರು ಚಿಂತನಮಂಥನ ನಡೆಸುವ ಅಖಿಲ ಭಾರತೀಯ ಪ್ರಾಚ್ಯವಿದ್ಯಾ ಸಮ್ಮೇಳನ (ಆಲ್‌ ಇಂಡಿಯಾ ಒರಿಯಂಟಲ್‌ ಕಾನ್ಫರೆನ್ಸ್‌-ಎಐಒಸಿ) ಅ. 24ರಿಂದ 26ರ ವರೆಗೆ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.

Advertisement

ಶ್ರೀಕೃಷ್ಣಮಠದ ಪರ್ಯಾಯ ಶ್ರೀಪುತ್ತಿಗೆ ಮಠದ ಆಶ್ರಯದಲ್ಲಿ ಬೆಂಗಳೂರಿನ ಭಾರತೀಯ ವಿದ್ವತ್‌ ಪರಿಷತ್‌, ದಿಲ್ಲಿಯ ಕೇಂದ್ರೀಯ ಸಂಸ್ಕೃತ ವಿ. ವಿ. ಆಯೋಜನೆಯಲ್ಲಿ ಇತ್ತೀಚೆಗೆ ದಕ್ಷಿಣ ಭಾರತದಲ್ಲಿ ನಡೆಯುತ್ತಿರುವ ಎಐಒಸಿ ಮೊದಲ ಸಮ್ಮೇಳನವಾಗಿದೆ.

ಸುಮಾರು 35 ವರ್ಷಗಳ ಹಿಂದೆ ಮೈಸೂರಿನಲ್ಲಿ ನಡೆದ ಬಳಿಕ ಇದೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ನಡೆಯುತ್ತಿದೆ.

ಭಾರತೀಯ ಸಾಹಿತ್ಯ, ಸಂಸ್ಕೃತಿ, ಪರಂಪರೆ ಮತ್ತು ಭಾಷೆಗಳ ಬೆಳವಣಿಗೆ ಮತ್ತು ರಕ್ಷಣೆಯಲ್ಲಿ ಮಹತ್ವದ ಕೊಡುಗೆ ನೀಡಿರುವ ಎಐಒಸಿ ಸುದೀರ್ಘ‌ ಇತಿಹಾಸ ಹೊಂದಿದೆ. 1873ರಲ್ಲಿ ಪ್ಯಾರಿಸ್‌ನಲ್ಲಿ ಇಂಟರ್‌ನೆಶನಲ್‌ ಓರಿಯಂಟಲ್‌ ಕಾಂಗ್ರೆಸ್‌ ಹೆಸರಿನಲ್ಲಿ ಮೊದಲ ಸಮ್ಮೇಳನ ನಡೆಯಿತು. ಬಳಿಕ ವಿಶ್ವ ಸಂಸ್ಕೃತ ಸಮ್ಮೇಳನ ನಡೆಯುತ್ತಿತ್ತು. 1919ರಲ್ಲಿ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಆರ್‌.ಎನ್‌.ದಾಂಡೇಕರ್‌ ಅವರಂತಹ ಹಿರಿಯ ವಿದ್ವಾಂಸರು ಭಾರತೀಯ ಪ್ರಾಚ್ಯವಿದ್ಯೆಯನ್ನು ಗಮನದಲ್ಲಿರಿಸಿಕೊಂಡು ಎಐಒಸಿ ಆರಂಭ ಮಾಡಿದರು. ಪುಣೆಯ ಪ್ರಸಿದ್ಧ ಭಂಡಾರ್ಕಾರ್‌ ಓರಿಯಂಟಲ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನ ಆರ್‌.ಜಿ.ಭಂಡಾರ್ಕಾರ್‌ ಅವರು ಬಹುವರ್ಷ ಎಐಒಸಿ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದರು. ಭಂಡಾರ್ಕಾರ್‌ ಪರಿಶ್ರಮದ ವಿಸ್ತರಿತ ರೂಪವಾಗಿ ಐಐಒಸಿ ಕಾರ್ಯವನ್ನು ವಿಸ್ತರಿಸಿಕೊಂಡಿತು. ಈಗಲೂ ಪುಣೆಯ ಭಂಡಾರ್ಕಾರ್‌ ಸಂಸ್ಥೆಯಲ್ಲಿಯೇ ಎಐಒಸಿ ಕಚೇರಿಯನ್ನು ಹೊಂದಿದ್ದು ಪುಣೆ ವಿ.ವಿ. ಸಂಸ್ಕೃತ ಪ್ರಾಧ್ಯಾಪಕಿ ಡಾ| ಸರೋಜಾ ಭಾಟೆಯವರು ಎಐಒಸಿ ಅಧ್ಯಕ್ಷರಾಗಿ ಈ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಭಾರತೀಯ ಚಿಂತನಕ್ರಮವಾದ ವ್ಯಕ್ತಿನಿಷ್ಠ ಅಧ್ಯಯನದೊಂದಿಗೆ ಪಾಶ್ಚಾತ್ಯದೃಷ್ಟಿಯ ವಸ್ತುನಿಷ್ಠ ಅಧ್ಯಯನಕ್ರಮವನ್ನು ಸಮನ್ವಯಗೊಳಿಸಿ ಎಐಒಸಿ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಭಾರತೀಯ ಜ್ಞಾನಪರಂಪರೆಯಲ್ಲಿ ಹುದುಗಿರುವ ಅಮೂಲ್ಯ ಚಿಂತನಕ್ರಮದ ಬಗ್ಗೆ ವಿಶೇಷ ಅಧ್ಯಯನ, ಸಂಶೋಧನೆ ನಡೆಸಿ ಅದರಲ್ಲಿ ಯುವ ವರ್ಗವನ್ನು ಸಂಯೋಜಿಸಿಕೊಂಡು ಜ್ಞಾನಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದು ಎಐಒಸಿಯ ಮುಖ್ಯಗುರಿಯಾಗಿದೆ.

Advertisement

104ನೆಯ ವರ್ಷದಲ್ಲಿರುವ ಎಐಒಸಿ ಈಗ 51ನೆಯ ಸಮ್ಮೇಳನವನ್ನು ಆಯೋಜಿಸುತ್ತಿದ್ದು, 100ನೆಯ ವರ್ಷದಲ್ಲಿ 50ನೆಯ ಸಮ್ಮೇಳನವನ್ನು ನಾಗಪುರದ ಕಾಳಿದಾಸ ಸಂಸ್ಕೃತ ವಿ.ವಿ.ಯ ಆಶ್ರಯದಲ್ಲಿ ನಡೆಸಿತ್ತು. ಈಗ 51ನೆಯ ಸಮ್ಮೇಳನ ಉಡುಪಿಯಲ್ಲಿ ನಡೆಯುತ್ತಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಸಮ್ಮೇಳನ ಇದಾಗಿದೆ.

ಸಂಸ್ಕೃತ ಮತ್ತು ಇದರಂಗವಾದ ಪ್ರಾಚೀನ ವಿದ್ಯಾ ವಿಚಾರಗಳ ಮೇಲೆ ಬೆಳಕು ಚೆಲ್ಲಲಾಗುತ್ತದೆ. ಸಂಸ್ಕೃತದ ಜತೆ ವೇದಗಳು, ಪಾಲಿ ಮತ್ತು ಬೌದ್ಧಧರ್ಮ, ಇರಾನಿಯನ್‌, ಉರ್ದು, ಪ್ರಾಕೃತ ಮತ್ತು ಜೈನ ಧರ್ಮ, ಶಾಸ್ತ್ರೀಯ ಸಂಸ್ಕೃತ, ಇತಿಹಾಸ, ಪುರಾತಣ್ತೀ, ಲಿಪಿಶಾಸ್ತ್ರ, ತಣ್ತೀಶಾಸ್ತ್ರ ಮತ್ತು ದರ್ಶನ, ತಾಂತ್ರಿಕ ವಿಜ್ಞಾನ, ಲಲಿತ ಕಲೆ ಮತ್ತು ಸಂಸ್ಕೃತ ಮತ್ತು ಕಂಪ್ಯೂಟರ್‌, ಯೋಗ ಮತ್ತು ಆಯುರ್ವೇದ, ವೈಷ್ಣವ ಭಕ್ತಿ ಪರಂಪರೆ, ಕನ್ನಡ ಸಾಹಿತ್ಯ, ಶಿಕ್ಷಣ, ಬಾಲಸಾಹಿತ್ಯ, ಜನಪದ, ಬುಡಕಟ್ಟು ಅಧ್ಯಯನ ಹೀಗೆ 20ಕ್ಕೂ ಹೆಚ್ಚು ವಿಷಯಗಳ ಮೇಲೆ ಸಮ್ಮೇಳನ ಬೆಳಕು ಚೆಲ್ಲುತ್ತಿದೆ. ಪುತ್ತಿಗೆ ಮಠಾಧೀಶರು ವಿಶ್ವ ಗೀತಾ ಪರ್ಯಾಯವನ್ನು ನಡೆಸುತ್ತಿರುವುದರಿಂದ ಭಗವದ್ಗೀತೆಯ ಕುರಿತೂ ಗೋಷ್ಠಿಗಳು ನಡೆಯಲಿವೆ. ಸಾಹಿತ್ಯ, ವಿಜ್ಞಾನ, ತಣ್ತೀಜ್ಞಾನ, ಕಲೆ ಹೀಗೆ ಜ್ಞಾನದ ವಿವಿಧ ಮಜಲುಗಳನ್ನು ಅಧ್ಯಯನ, ಸಂಶೋಧನೆಗೆ ಒಳಪಡಿಸಲಾಗುತ್ತಿರುವುದು ವಿಶೇಷವಾಗಿದೆ. ಈ ಎಲ್ಲ ವಿಚಾರಗಳ ಕುರಿತು ವಿದ್ವಾಂಸರು ಪ್ರಬಂಧ ಮಂಡನೆ ನಡೆಸಲಿದ್ದಾರೆ.

ಮೆಕಾಲೆ ಅನಂತರ ಭಾರತೀಯ ವಿಜ್ಞಾನ ಮತ್ತು ಪರಂಪರೆಯ ಬಗ್ಗೆ ಗಮನವಿಲ್ಲದೆ ಹೋದ ಕೊರತೆಯನ್ನು ನೀಗಿಸಲು ಭಾರತದ ಜ್ಞಾನ ಪರಂಪರೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಂತಹ ವಿಷಯಗಳನ್ನೂ ಸೇರಿಸಿಕೊಂಡು ಈಗ ಚಿಂತನೆ ನಡೆಸಲಾಗುತ್ತಿದೆ.

ಶ್ರೀಕೃಷ್ಣಮಠದಲ್ಲಿ ಪ್ರಸ್ತುತ ಪುತ್ತಿಗೆ ಮಠದ ಪರ್ಯಾಯ ನಡೆಯುತ್ತಿದ್ದು, ಕೋಟಿ ಗೀತಾ ಲೇಖನ ಯಜ್ಞ ಸಹಿತ ಭಗವದ್ಗೀತೆಯ ವಿಶೇಷ ಗಮನವನ್ನು ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಹರಿಸುತ್ತಿದ್ದಾರೆ. ಆಯೋಜನ ಸಂಸ್ಥೆಯಾದ ಬೆಂಗಳೂರಿನ ಭಾರತೀಯ ವಿದ್ವತ್‌ ಪರಿಷತ್‌ 2009ರಲ್ಲಿ ಆರಂಭವಾಯಿತು. 2019ರಲ್ಲಿ ಇದರ ದಶಮಾನೋತ್ಸವವನ್ನು ಉಡುಪಿಯಲ್ಲಿ ಆಯೋಜಿಸಲಾಗಿತ್ತು. ಸುಮಾರು 2,500 ಸದಸ್ಯರು ಸಂಸ್ಥೆಯಲ್ಲಿದ್ದಾರೆ. ಹೊಸದಿಲ್ಲಿಯ ಕೇಂದ್ರೀಯ ಸಂಸ್ಕೃತ ವಿ.ವಿ. ಸಮ್ಮೇಳನದ ಪ್ರಮುಖ ಆಯೋಜಕ ಸಂಸ್ಥೆಯಾಗಿದೆ. ಸುಮಾರು 2,000 ವಿದ್ವಾಂಸರು ಭಾಗವಹಿಸುತ್ತಿದ್ದು ಸಂಶೋಧನಾಸಕ್ತರು, ಅಧ್ಯಾಪಕರು, ವಿದ್ಯಾರ್ಥಿಗಳಿಗೆ ಅಪರೂಪದ ವಿದ್ವಾಂಸರೊಂದಿಗೆ ಚರ್ಚಿಸುವ ಅವಕಾಶ ಇದಾಗಿದೆ.

ಪ್ರಾಚೀನ ಕೇಂದ್ರದಲ್ಲಿ ಜ್ಞಾನಉತ್ಖನನ
ಕಾಶೀ, ಉಜ್ಜಯಿನಿಯಂತೆ ಭಾರತದ ಬೆರಳೆಣಿಕೆಯ ಪ್ರಾಚೀನ ಜ್ಞಾನ ಕೇಂದ್ರಗಳಲ್ಲಿ ಉಡುಪಿಯೂ ಒಂದು. ಉಡುಪಿ ಶ್ರೀಕೃಷ್ಣನ ನಾಡು ಭಕ್ತಿಯಂತೆ ಜ್ಞಾನದ ಕೇಂದ್ರವೂ ಹೌದು. ಇದೇ ಮೊದಲ ಬಾರಿಗೆ ಹತ್ತು ಹಲವು ಸಂಸ್ಕೃತ ವಿ.ವಿ.ಗಳ ಕುಲಪತಿಗಳು, ಮಾಜಿ ಕುಲಪತಿಗಳು ಭಾಗವಹಿಸುತ್ತಿರುವುದು ಮತ್ತೊಮ್ಮೆ ಭಾರತದ ಪ್ರಾಚೀನ ಜ್ಞಾನ ಪರಂಪರೆಯ ಅಧ್ಯಯನ ಮತ್ತು ಅವುಗಳ ಮೇಲೆ ಹೊಸ ಬೆಳಕು ಚೆಲ್ಲಲು ಸಮ್ಮೇಳನ ಸಹಕಾರಿಯಾಗಲಿದೆ.
– ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರು, ಶ್ರೀಕೃಷ್ಣಮಠ, ಉಡುಪಿ.

ಪ್ರಾಚ್ಯವಲ್ಲ, ವರ್ತಮಾನ, ಭವಿಷ್ಯ…
104 ವರ್ಷಗಳ ಹಿಂದೆ ಇದನ್ನು ಪ್ರಾಚ್ಯ ವಿದ್ಯಾ ಸಮ್ಮೇಳನ ಎಂದು ಕರೆದಿದ್ದರು. ಆಗ ಇದು ಓರಿಯಂಟಲ್‌. ಈಗ ಚಿಂತನ ಕ್ರಮವೇ ಬದಲಾಗಿದೆ. ಈಗ ಈ ಜ್ಞಾನ ಪರಂಪರೆ ಪ್ರಾಚೀನದ ಬದಲು ವರ್ತಮಾನ ಮತ್ತು ಭವಿಷ್ಯದ ಜಗತ್ತಿಗೆ ಅತಿ ಅಗತ್ಯವಾಗಿದೆ. ಇಂದಿನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಭಾರತ ವಿಶ್ವಗುರುವಾಗಿ ರೂಪಿಸುವ ಗುರಿಯನ್ನು ಹೊಂದಲಾಗಿದೆ. ಹೊಸ ಶತಮಾನದ ಸಮ್ಮೇಳನ ಇದಾಗಿದೆ. ಅದು ಕರ್ನಾಟಕದಲ್ಲಿ ಅದರಲ್ಲಿಯೂ ಉಡುಪಿ ಶ್ರೀಕೃಷ್ಣಮಠದ ಪರಿಸರದಲ್ಲಿ ಸಮ್ಮೇಳನ ನಡೆಯುತ್ತಿರುವುದಕ್ಕೆ ಬಹಳ ಮಹತ್ವವಿದೆ.
– ಡಾ| ಶ್ರೀನಿವಾಸ ವರಖೇಡಿ,
ಕುಲಪತಿಗಳು, ಕೇಂದ್ರೀಯ ಸಂಸ್ಕೃತ ವಿ.ವಿ., ಹೊಸದಿಲ್ಲಿ.

ವಿಜ್ಞಾನ, ತಂತ್ರಜ್ಞಾನದ ಮೇಲೂ ಬೆಳಕು
ರಾಷ್ಟ್ರೀಯ ಶಿಕ್ಷಣ ನೀತಿಯನುಸಾರ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಸಮ್ಮೇಳನದಲ್ಲಿ ವಿಶೇಷ ಚಿಂತನಮಂಥನ ನಡೆಸಲಾಗುತ್ತಿದೆ. ವೆಬ್‌ಸೈಟ್‌, ಕ್ಯೂಆರ್‌ ಕೋಡ್‌ ಇತ್ಯಾದಿಗಳ ಮೂಲಕವಾಗಿ ಪೇಪರ್‌ಲೆಸ್‌ ಆಗಿ ಸಮ್ಮೇಲನವನ್ನು ನಡೆಸಲಾಗುತ್ತಿದೆ. ಸಾಧ್ಯವಾದಷ್ಟು ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡಲಿದ್ದೇವೆ. ಯುವ ಗೋಷ್ಠಿ, ಮಹಿಳಾ ಗೋಷ್ಠಿಗಳನ್ನು ಆಯೋಜಿಸಲಾಗುತ್ತಿದೆ.
-ಡಾ|ವೀರನಾರಾಯಣ ಪಾಂಡುರಂಗಿ,
ಅಧ್ಯಕ್ಷರು, ಭಾರತೀಯ ವಿದ್ವತ್‌ ಪರಿಷತ್‌, ಬೆಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next