Advertisement

ಒಂದೇ ಕಾಮಗಾರಿಗೆ 2 ಬಿಲ್‌ ಮಂಜೂರು!

06:38 PM Mar 05, 2021 | Team Udayavani |

ಸಾಗರ: ಗ್ರಾಪಂ ಯೋಜನೆಯಡಿ ಅಭಿವೃದ್ಧಿಗೊಂಡ ರಸ್ತೆ ಕಾಮಗಾರಿಯನ್ನೇ ಇನ್ನೊಂದು ಯೋಜನೆಯಡಿ ತಾನು ಮಾಡಿದ್ದು ಎಂದು ತೋರಿಸಿ ಜಿಪಂನ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗ ಮಾಡಿದ ಸುಮಾರು ಐದು ಲಕ್ಷ ರೂ.ಗಳ ಗುಳುಂ ಪ್ರಕರಣವನ್ನು ಮಾಹಿತಿ ಹಕ್ಕು ಬಳಸಿ ಬಯಲಿಗೆಳೆದ ಮಾಹಿತಿ ಹಕ್ಕು ಕಾರ್ಯಕರ್ತ, ಉದ್ದೇಶಿತ ರಸ್ತೆ ಅಭಿವೃದ್ಧಿಗೇ ಒತ್ತಾಯಿಸಿ ಯಶಸ್ವಿಯಾದ ಘಟನೆ ಸಾಗರ ತಾಲೂಕಿನಲ್ಲಿ ನಡೆದಿದೆ. ಈ ಕುರಿತ ದಾಖಲೆಗಳು “ಉದಯವಾಣಿ’ಗೆ ಲಭ್ಯವಾಗಿದೆ.

Advertisement

ಮಾಡದ ಕೆಲಸಕ್ಕೆ ಬಿಲ್‌ ಮಂಜೂರು ಮಾಡಿಕೊಂಡಿದ್ದ ಗುತ್ತಿಗೆದಾರ ಹಾಗೂ ಇಂಜಿನಿಯರ್‌ ಎರಡು ವರ್ಷಗಳ ನಂತರ ಒತ್ತಡ ತಾಳಲಾರದೆ ಸೂಚಿತ ಕಾಮಗಾರಿಯನ್ನು ಕಳೆದ ವಾರ ಪೂರೈಸಿದರು! ತಾಲೂಕಿನ ಎಡಜಿಗಳೇಮನೆ ಗ್ರಾಪಂ ವ್ಯಾಪ್ತಿಯ ನಾಡವದ್ದಳ್ಳಿ ಗ್ರಾಮದ ಬೆಂಕಟವಳ್ಳಿಯಿಂದ ಬಲಿಕೇವಿಯ ಎಸ್‌ಸಿ ಕಾಲೋನಿಗೆ ರಸ್ತೆ ನಿರ್ಮಾಣ ಕಾಮಗಾರಿಯಲ್ಲಾದ ಕರಾಮತ್ತು ವಿಚಿತ್ರವಾದುದು. ಎಡಜಿಗಳೇಮನೆ ಗ್ರಾಪಂನ 2017-18ನೇ ಸಾಲಿನ ಎಸೊðà ಅನುದಾನ ಯೋಜನೆಯಡಿ 1.90 ಲಕ್ಷ ರೂ.ನಲ್ಲಿ ಕೆಲಸ ನಿರ್ವಹಿಸಲು ಕಾರ್ಯಾದೇಶ ಪಡೆದ ಗುತ್ತಿಗೆದಾರರ ಕಂಬಳಿಕೊಪ್ಪದ ಪಿ. ವಾಸು ಎಂಬುವವರು 2019ರ ಜನವರಿ 28ರಲ್ಲಿ ಕಾಮಗಾರಿಯನ್ನು ಪೂರೈಸುತ್ತಾರೆ. ರಸ್ತೆ ಹಾಗೂ ಚರಂಡಿ ನಿರ್ಮಾಣದ ಸುಮಾರು ಒಂದೂಕಾಲು ಕಿಮೀ ಕೆಲಸ ಸಮರ್ಪಕವಾಗಿ ಆಗುತ್ತದೆ.

ಮಾಸ್ಟರ್‌ಪ್ಲ್ಯಾನ್‌!: ಇದೇ ವೇಳೆ 2018-19ರ ಸಾಲಿಗೆ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿ ನಿರ್ಮಾಣ ಯೋಜನೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಸಾಗರ ಉಪ ವಿಭಾಗದ ಮೂಲಕ ಜಾರಿಗೊಳ್ಳುತ್ತದೆ. ಐದು ಲಕ್ಷ ರೂ.ಗಳ ಯೋಜನೆಯಡಿ ಇದೇ ಎಡಜಿಗಳೇಮನೆ ಗ್ರಾಪಂನ ಬಲಿಕೇವಿ ಎಸ್‌ಸಿ ರಸ್ತೆಯೇ ಆಯ್ಕೆಯಾಗುತ್ತದೆ. ಮತ್ತದೇ ರಸ್ತೆ ನಿರ್ಮಾಣ, ಚರಂಡಿ, ಆರ್‌ಸಿಸಿ ಪೈಪ್‌ ಅಳವಡಿಕೆ ಹಾಗೂ ಗ್ರಾವೆಲ್‌ ಬಿಚಾವಣೆ ಮಾಡುವ ಕೆಲಸದ ಗುತ್ತಿಗೆ ಎನ್‌. ಕೃಷ್ಣಪ್ಪ ಎಂಬ ಗುತ್ತಿಗೆದಾರರಿಗೆ ಸಿಗುತ್ತದೆ.

ಸ್ವಾರಸ್ಯವೆಂದರೆ, 2019ರ ಜ.28ರಂದು ಮೊದಲ ಸಲ ಕಾಮಗಾರಿ ಪೂರ್ಣಗೊಂಡಿದೆ ಎಂದು ಸ್ಥಳ ತನಿಖೆ ನಡೆಸಿ ಹಸಿರು ನಿಶಾನೆ ತೋರಿದ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಎಂ.ಗುರುಕೃಷ್ಣ ಶೆಣೈ ಅವರೇ ಎರಡನೇ ಬಾರಿ ಅದೇ ವರ್ಷದ ಫೆಬ್ರವರಿ 13ರಂದು ಇದೇ ರಸ್ತೆಯ ಕಾಮಗಾರಿಯನ್ನು ನೋಡಿ ಪರಿಶೀಲಿಸಿ 4.92 ಲಕ್ಷ ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ ಎಂದು ದೃಢೀಕರಿಸುತ್ತಾರೆ!

ಈ ಭ್ರಷ್ಟಾಚಾರ ಪ್ರಕರಣದ ವಾಸನೆ ಹಿಡಿದ ಶೆಟ್ಟಿಸರದ ಪ್ರವೀಣ್‌ ಮಾಹಿತಿ ಹಕ್ಕನ್ನು ಬಳಸಿ ಗ್ರಾಪಂ ಹಾಗೂ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗದಿಂದ ದಾಖಲೆಗಳನ್ನು ತೆಗೆಸಿದಾಗ ಹಗರಣ ಬಯಲಿಗೆ ಬಂದಿತು. ಈ ಬಗ್ಗೆ ಪ್ರತಿಕ್ರಿಯಿಸುವ ಅವರು, ನಾನು 2019ರ ಸೆಪ್ಟೆಂಬರ್‌, ಅಕ್ಟೋಬರ್‌ ವೇಳೆಗೇ ಈ ದಾಖಲೆಗಳನ್ನು ಪಡೆದುಕೊಂಡಾಗ ಆಗಿರುವ ಅವ್ಯವಹಾರ ಸ್ಪಷ್ಟವಾಗಿತ್ತು.

Advertisement

ಎರಡನೇ ಗುತ್ತಿಗೆ ಸಂದರ್ಭದಲ್ಲಿ ಒಂದು ದಿನ ಜೆಸಿಬಿ ಬಳಸಿ ಒಂದು ಆರ್‌ಸಿಸಿಪೈಪ್‌ ಹಾಗೂ ಕೆಲವು ಕಡೆ ಚರಂಡಿ ನಿರ್ಮಾಣ ಮಾಡಿದ್ದು ಬಿಟ್ಟರೆ ಯಾವ ಕೆಲಸವೂ ಆಗಿರಲಿಲ್ಲ. ಈಗಾಗಲೇ ಗ್ರಾಪಂ ಯೋಜನೆಯಡಿ ಕೆಲಸವಾದ ಕಾಮಗಾರಿಯನ್ನೇ ಹೊಸ ಯೋಜನೆಯಡಿ ಮಂಜೂರಾತಿ ಪಡೆದು ಹಣ ಲಪಟಾಯಿಸಲು ನಡೆಸಿದ ವಂಚನೆಯ ಪ್ರಕರಣ ಇದಾಗಿತ್ತು ಎಂದು ಪ್ರತಿಪಾದಿಸಿದರು.

ಅವತ್ತು ದಾಖಲೆಯಲ್ಲಿ ಪೂರ್ಣ, ಈಗ ಕೆಲಸ!: ನಾನು ಮಾಹಿತಿ ಪಡೆಯುತ್ತಿದ್ದಂತೆ ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಇಂಜಿನಿಯರ್‌ ನನ್ನನ್ನು ನಿರಂತರವಾಗಿ ಸಂಪರ್ಕಿಸಿದರು. ಪರಿಶಿಷ್ಟ ಜಾತಿಯವರಿಗೆ ಅನ್ಯಾಯ ಆಗಬಾರದು. ಈ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾದವರಿಗೆ ಶಿಕ್ಷೆ ಆಗುವುದು ನಂತರವಾಯಿತು. ನನಗೆ ಆ ರಸ್ತೆಗೆ ಈ ಮಂಜೂರಾದ ಐದು ಲಕ್ಷ ರೂ. ಕೂಡ ವಿನಿಯೋಗವಾಗಿ ಅಭಿವೃದ್ಧಿಯಾಗಬೇಕು ಎಂಬ ಹಠ ಮೂಡಿತ್ತು.

ನಿರಂತರವಾಗಿ ದಾಖಲೆಗಳನ್ನು ಎದುರಿಗಿಟ್ಟು ಆಗ್ರಹ ಮಂಡಿಸಿದ್ದರಿಂದ ಎರಡು ವರ್ಷಗಳ ಸತತ ಒತ್ತಾಯದ ನಂತರ, ಕಳೆದ ವಾರ ಬೆಂಕಟವಳ್ಳಿ ಬಲಿಕೇವಿ ರಸ್ತೆಗೆ ಜಲ್ಲಿಕಲ್ಲು ಹಾಕಿ ಅಭಿವೃದ್ಧಿಪಡಿಸಲಾಗಿದೆ. ಮಾಹಿತಿ ಹಕ್ಕು ಬಳಸಿ ದಾಖಲೆ ಪಡೆದಿದ್ದರಿಂದ ಯಾವ ಹಂತದಲ್ಲೂ, ಹಲವು ಪ್ರಯತ್ನ ನಡೆದರೂ ದಾಖಲೆಗಳನ್ನು ತಿದ್ದಿ ಬಚಾವಾಗುವ ಪ್ರಯತ್ನ ಸಫಲವಾಗಿಲ್ಲ ಎಂದು ಹರ್ಷ ವ್ಯಕ್ತಪಡಿಸಿದರು.

ಮಾ.ವೆಂ.ಸ. ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next