Advertisement

ಹನಿದನಿಗೆ ಹನ್ನೊಂದು ವರ್ಷ

10:26 PM Sep 01, 2022 | Team Udayavani |

ಮಂಗಳೂರಿನಲ್ಲಿ ನನ್ನ ಹತ್ತಿರದ ಸಂಬಂಧಿಕರೊಬ್ಬರು ಇದ್ದಾರೆ. ಒಳ್ಳೆಯ ವ್ಯಕ್ತಿ. ಆದರೆ ತೀರಾ ಸಂಕೋಚ ಸ್ವಭಾವ. ಅವರ ಪಕ್ಕ ದಲ್ಲಿ ಕುಳಿತಿದ್ದರೂ ಹೆಚ್ಚು ಮಾತಾಡುವವರಲ್ಲ. ಅಂದ ಮೇಲೆ ದೂರ ವಾಣಿಯಲ್ಲಿ ಮಾತಾಡುವುದು ದೂರವೇ ಉಳಿ ಯಿತು. ಅಂಥವರಿಂದ ಒಂದು ದಿನ ಬೆಳ ಏಳು ಗಂಟೆಗೆ ನನ್ನ ಮೊಬೈಲಿಗೆ ಕರೆ ಬಂತು. ಏನೋ ಕೆಟ್ಟ ಸುದ್ದಿಯೇ ಇರಬೇಕೆಂದು ಅಂಜುತ್ತಲೇ ಕರೆ ಸ್ವೀಕರಿಸಿದೆ. ಅತ್ತ ಕಡೆಯಿಂದ ಪ್ರಶ್ನೆ ತೂರಿ ಬಂತು: “ಇವತ್ತು ಏನು? ಉದಯವಾಣಿಯಲ್ಲಿ ನಿಮ್ಮ ಹನಿದನಿ ಕಾಣುವುದಿಲ್ಲ?’ ನಾನು ಸದ್ಯ ಎಂದು ನಿಟ್ಟುಸಿರು ಬಿಟ್ಟು, “ಬಂದಿರಬೇಕು ನೋಡಿ’ ಎಂದೆ. “ಹೌದಾ? ಹಾಗಾದರೆ ಇನ್ನೊಮ್ಮೆ ನೋಡ್ತೇನೆ’ ಎಂದು ಫೋನ್‌ ಇಟ್ಟರು. ಅನಂತರ ಪುನಃ ಫೋನ್‌ ಮಾಡಿ, “ಬಂದಿದೆ ಮಾರಾಯರೆ. ಇವತ್ತು ಬೇರೆ ಜಾಗದಲ್ಲಿ ಹಾಕಿದ್ದಾರೆ’ ಎಂದರು. ಈ ನನ್ನ ಬಂಧುವಿನಂತೆ ಹನಿದನಿಯನ್ನು ಒಂದು ದಿನವೂ ಮಿಸ್‌ ಮಾಡಿಕೊಳ್ಳಲು ಇಷ್ಟಪಡದ ಓದುಗ ಬಂಧುಗಳು ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ.

Advertisement

ಹನಿಗಾರಿಕೆಯಾಗಿ ಆರಂಭ :

ಆ ದಿನ ನನಗೆ ಚೆನ್ನಾಗಿ ನೆನಪಿದೆ. ಅದು 29-8-2011. ಆಗ ಉದಯವಾಣಿಯಿಂದ ಕರೆ ಯೊಂದು ಬಂತು. “ಗಣೇಶನ ಹಬ್ಬ ಬರ್ತಾ ಇದೆ. ಗಣಪತಿಯ ಬಗ್ಗೆ ಒಂದು ಹೊಸ ಹನಿ ಗವನ ಬರೆದು ಕೊಟ್ಟರೆ ಮುಖಪುಟದಲ್ಲಿ ಪ್ರಕಟಿ ಸುತ್ತೇವೆ’ ಎಂಬ ಆಮಿಷ ಒಡ್ಡಿದರು. ಗಣಪತಿ ನನ್ನ ಅಚ್ಚುಮೆಚ್ಚಿನ ದೇವರು. ಡುಂಡಿರಾಜ ಎಂಬ ನನ್ನ ಹೆಸರೂ ಅವನದೇ. ಹೀಗಾಗಿ ಕೂಡಲೇ ಒಪ್ಪಿಕೊಂಡೆ.

ಸರ್ಪಸುತ್ತು

ನಿಮಗೆ ಗೊತ್ತು

Advertisement

ಸಹಿಸಲಾಗದ ಬೇನೆ

ಸರ್ಪ ಸುತ್ತಿದ್ದರೂ

ನಸುನಗುತ್ತಿರುವ

ಗಣಪನಿಗೆ ವಂದನೆ

-ಎಂಬ ಹನಿಗವನ ಬರೆದು ಕಳುಹಿಸಿದೆ. ಅದು ಗಣೇಶನ ಹಬ್ಬದ ದಿನ “ಉದಯವಾಣಿ’ಯ ಮುಖಪುಟದಲ್ಲಿ ಪ್ರಕಟವಾಯಿತು.

“ಬೆರಳು ತೋರಿಸಿದರೆ ಹಸ್ತವನ್ನೇ ನುಂಗ ವುದು’ ಅಂತಾರಲ್ಲ, ಅಕ್ಷರಶಃ ಹಾಗೆಯೇ ಆಯಿತು. “ಹನಿಗವನದ ದೈನಿಕ ಅಂಕಣವನ್ನೇ ಆರಂ ಭಿಸೋಣ’ ಎಂಬ ಆಫ‌ರ್‌ ಬಂತು. ಭಯ   ದಿಂದಲೇ ಸಮ್ಮತಿಸಿದೆ. ಸೆಪ್ಟಂಬರ್‌ 1, 2011   ರಂದು  ಹನಿಗವನದ ದೈನಿಕ ಅಂಕಣ ಆರಂಭ ವಾಯಿತು. ಈಗ ಅಂಕಣ ಹನ್ನೊಂದು ವರ್ಷ ಗಳನ್ನು  ಯಶಸ್ವಿಯಾಗಿ ಪೂರೈಸಿ ಈಗ ಹನ್ನೆ  ರಡನೇ ವರ್ಷದಲ್ಲಿ  ಮುನ್ನಡೆದಿದೆ. ಪತ್ರಿಕೆಯ ರಜಾ ದಿನಗಳನ್ನು ಹೊರತುಪಡಿಸಿ ಉಳಿದ ಎಲ್ಲ ದಿನಗಳಲ್ಲಿ ಪ್ರತೀ ದಿನವೂ ಒಂದು ಹೊಸ ಹನಿಗವನ ಪ್ರಕಟವಾಗಿದೆ. ಇದೊಂದು ದಾಖಲೆಯೇ ಇರಬಹುದು.

ವಸ್ತು, ವಿಷಯ :

ರಾಜಕೀಯ, ಇತರ ಸಮಕಾಲೀನ ವಿದ್ಯಮಾನ ಗಳು, ಕ್ರೀಡೆ, ಸಿನೆಮಾ, ಸಂಸಾರ, ಚರಿತ್ರೆ, ಪುರಾಣ, ದೇವರು, ಹಬ್ಬಗಳು, ಜಾತಿ, ಧರ್ಮ, ವ್ಯಕ್ತಿ ಗಳು -ಹೀಗೆ ವಿವಿಧ ವಿಷಯಗಳ ಬಗ್ಗೆ ಹನಿ ದನಿಯಲ್ಲಿ ಮುಕ್ತವಾಗಿ ನನ್ನ “ಹನಿಸಿಕೆ’ಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಉದಯವಾಣಿ ನನಗೆ ನೀಡಿದೆ. ಹಾಸ್ಯ, ವಿಡಂಬನೆಗಳ ಎಡೆಯಲ್ಲಿ ಗಂಭೀರ ಚಿಂತನೆಯ ಹನಿಗಳೂ ಪ್ರಕಟವಾಗಿವೆ. ಪ್ರತೀ ದಿನ ಹೊಸ ಕವನ ಹೇಗೆ ಬರೆಯುತ್ತೀರಿ? ವಸ್ತು ಎಲ್ಲಿ ಸಿಗುತ್ತದೆ? ಸ್ಫೂರ್ತಿ ಹೇಗೆ ಬರುತ್ತದೆ? -ಇಂತಹ ಪ್ರಶ್ನೆಗಳನ್ನು ಅಂಕಣದ ಓದುಗರು ಕೇಳು ತ್ತಾರೆ. ಈಚೆಗೆ ಹಿರಿಯ ಕವಿ ತಿರುಮಲೇಶ ರೊಂದಿಗೆ ಮಾತನಾಡುತ್ತಿದ್ದಾಗ ಅವರೂ ಇದೇ ಪ್ರಶ್ನೆ ಕೇಳಿದ್ದರು. ಬಹಳಷ್ಟು ಹನಿಗವನಗಳಿಗೆ ಉದಯವಾಣಿಯಲ್ಲಿ ಬರುವ ಸುದ್ದಿಗಳೇ ನನಗೆ ಸ್ಫೂರ್ತಿ. ಉದಾಹರಣೆಗೆ ಪ್ರಧಾನಿ ಮೋದಿ ಯವರು  ನೋಟ್‌ ಬ್ಯಾನ್‌ ಮಾಡಿದ ವಾರ್ತೆಯ ವಿವರ ಗಳನ್ನು ಓದುತ್ತಿದ್ದಾಗ ಅವರು ರಹಸ್ಯವನ್ನು ಹೇಗೆ ಕಾಪಾಡಿಕೊಂಡರು ಎಂದು ಎಲ್ಲರಂತೆ ನಾನೂ ಆಶ್ಚರ್ಯಪಟ್ಟಿದ್ದೆ. ಆಗ ನನಗೆ ಹೊಳೆದ ಹನಿಗವನ:

ಸ್ವಲ್ಪವೂ ಸುಳಿವು ನೀಡದೆ

ಐನೂರು, ಸಾವಿರದ ನೋಟು

ರದ್ದು ಮಾಡಿದರು ಮೋದಿ

ಗುಟ್ಟು ರಟ್ಟಾಗದಿರಲು

ಕಾರಣ ಅವರ

ಮನೆಯಲ್ಲಿ ಇಲ್ಲ ಮಡದಿ!

ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಳಗೆ ಒಮ್ಮೆ ಒಂದು ಚಿರತೆ ಪ್ರವೇಶಿಸಿದ್ದು ದೊಡ್ಡ ಸುದ್ದಿಯಾ ಗಿತ್ತು. ಅದನ್ನು ಓಡಿಸಲು ವಿವಿಧ ಇಲಾಖೆ  ಯವರು ಮಾಡಿದ ಪ್ರಯತ್ನಗಳ ವಿವರವನ್ನು ಪತ್ರಿಕೆಯಲ್ಲಿ ಓದಿದ ಬಳಿಕ ನಾನು ಬರೆದ ಹನಿಗವನ:

ಕಷ್ಟಪಟ್ಟು ಓಡಿಸಿದರಂತೆ

ಬೆಂಗಳೂರಿನಲ್ಲಿ

ಶಾಲೆಗೆ ಬಂದ ಚಿರತೆಯನ್ನು.

ತಾನಾಗಿಯೇ ಓಡಿಹೋಗುತ್ತಿತ್ತು

ಯಾರಾದರೂ ಹೇಳಿದ್ದರೆ

ಆ ಶಾಲೆಯ ಫೀಸು, ಡೊನೇಶನ್ನು!

ಚಿರತೆಯನ್ನು ಹಿಡಿಯುವ ಸಂದರ್ಭದಲ್ಲಿ ಅದರ ದಾಳಿಗೆ ಸಿಲುಕಿ ಗಾಯಗೊಂಡಿದ್ದ

ವಿಜ್ಞಾನಿ ಡಾ| ಸಂಜಯ ಗುಬ್ಬಿಯವರು  ಈ ಕವನವನ್ನು ಓದಿ ನನಗೆ ಫೋನ್‌ ಮಾಡಿ, “ನಿಮ್ಮ ಕವನ ನನ್ನ ಗಾಯದ ನೋವನ್ನು ಕಡಿಮೆ ಮಾಡಿತು’ ಅಂದಾಗ ಬರೆದದ್ದು ಸಾರ್ಥಕ ಅನ್ನಿಸಿತ್ತು.

ಹನಿಗವನ ಹೊಳೆಯುವ ಹೊತ್ತು :

ಬೆಳಗಿನ 4ರಿಂದ 8ಗಂಟೆಯ ಅವಧಿಯಲ್ಲಿ  ನನಗೆ ಹನಿಗವನಗಳು ಹೆಚ್ಚಾಗಿ ಹೊಳೆಯುತ್ತವೆ. ರಾತ್ರಿ ಎಷ್ಟು ಗಂಟೆಗೆ ಮಲಗಿದರೂ ಬೆಳಗ್ಗೆ 4 ಗಂಟೆಗೆ ಎಚ್ಚರವಾಗುತ್ತದೆ. ಏನು ಬರೆಯಲಿ ಎಂದು ಯೋಚಿಸತೊಡಗುತ್ತೇನೆ. ಮಲಗಿದ್ದಾಗ ಹೊಳೆದದ್ದನ್ನು ಎದ್ದ ಕೂಡಲೇ ಬರೆದಿಡುತ್ತೇನೆ. ಅನಂತರ ವಾಕಿಂಗ್‌ ಮಾಡುವಾಗಲೂ ಕಣ್ಣಿಗೆ ಬೀಳುವ ನಿಸರ್ಗದ ದೃಶ್ಯಗಳು, ಮನುಷ್ಯರು, ಪ್ರಾಣಿಗಳು ಅವುಗಳ ಕುರಿತು ಯೋಚಿಸುವಂತೆ ಮಾಡುತ್ತವೆ. ಯೋಚನೆಯಲ್ಲಿ ಏನಾದರೂ ಹೊಸತು ಇದೆ ಅನ್ನಿಸಿದರೆ ಅದನ್ನು ಕಲಾತ್ಮಕವಾಗಿ ಹೇಗೆ ಹೇಳಬಹುದು ಎಂದು ಚಿಂತಿಸುತ್ತೇನೆ. ಮನಸ್ಸಿನಲ್ಲಿ ಅಸ್ಪಷ್ಟವಾಗಿ ಮೂಡಿದ ಸಾಲುಗಳನ್ನು ಬರೆಯುವಾಗ ತಿದ್ದಿ ತೀಡಿ ಚೆಂದಗೊಳಿಸುತ್ತೇನೆ. ಬೆಳಗಿನ ಜಾವ ಹೊಳೆದ ಕವನಗಳು ಎದ್ದ ಬಳಿಕ ನೆನಪಾಗದೆ ಇರುವುದೂ ಉಂಟು! ವಾಕಿಂಗ್‌ ಬಗ್ಗೆಯೇ ಹೀಗೊಂದು ಹನಿಗವನ ಬರೆದಿದ್ದೆ:

ಮುಂಜಾನೆ ಪಾರ್ಕಿನಲ್ಲಿ

ವಾಕ್‌ ಮಾಡುವವರಲ್ಲಿ

ಮಹಿಳೆಯರು ವಿರಳ

ಪುರುಷರೇ ಬಹಳ

ಏಕೆಂದರೆ ಗಂಡಸರಿಗೆ ಮನೆಯಲ್ಲಿ

ವಾಕ್‌ ಸ್ವಾತಂತ್ರ್ಯ ಇಲ್ಲ!

ಕೆಲವು ದಿನ ಪತ್ರಿಕೆಗಳಲ್ಲಿ ಬರುವ ಸುದ್ದಿ, ನಾಯಕರ ಹೇಳಿಕೆಗಳು ಒಂದಕ್ಕಿಂತ ಹೆಚ್ಚು ಹನಿಗವನಗಳಿಗೆ ಆಹಾರವಾಗುತ್ತವೆ. ಅವುಗಳನ್ನು ಬರೆದು, ಟೈಪಿಸಿ ನನ್ನ ಮೊಬೈಲಿನಲ್ಲಿ ಶೇಖರಿಸಿ ಇಟ್ಟುಕೊಳ್ಳುತ್ತೇನೆ. ಇನ್ನು ಕೆಲವು ದಿನ ಪತ್ರಿಕೆಯ ಸುದ್ದಿಗಳು ಕವನ ರಚನೆಗೆ ಪ್ರೇರಣೆ ನೀಡುವುದಿಲ್ಲ. ಅಂಥ ಬರಗಾಲದ ದಿನಗಳಲ್ಲಿ ಹಿಂದೆ ಶೇಖರಿಸಿಟ್ಟ ಹನಿಗಳಲ್ಲಿ ಒಂದನ್ನು ಕಳಿಸುತ್ತೇನೆ. ಕೊರೋನಾ ಕಾಲದಲ್ಲಿ ಪತ್ರಿಕೆಯಲ್ಲಿ ಕೋವಿಡ್‌ ಬಿಟ್ಟರೆ ಬೇರೆ ಯಾವ ಸುದ್ದಿಗಳೂ ಇರುತ್ತಿರಲಿಲ್ಲ. ಆಗ ಹನಿದನಿಯಲ್ಲಿ ನೂರಕ್ಕೂ ಹೆಚ್ಚು ಹನಿಗವನಗಳಿಗೆ ಅದೇ ವಸ್ತುವಾಯಿತು:

ಕೊರೊನಾ ಕೃಪೆಯಿಂದ

ಎಲ್ಲ ವಿದ್ಯಾರ್ಥಿಗಳೂ

ಪರೀಕ್ಷೆ ಇಲ್ಲದೆ ಪಾಸು

ವರ್ಕ್‌ ಫ್ರಂ ಹೋಮ್‌ನಿಂದಾಗಿ

ಕೆಲವು ದಂಪತಿಗಳಿಗೆ

ನಿರೀಕ್ಷೆ ಇಲ್ಲದೆ ಕೂಸು!

-ಇದು ಕೊರೊನಾ ಹನಿಯ ಒಂದು ಸ್ಯಾಂಪಲ್‌. ಹೀಗೆ ನೋವಲ್ಲೂ ನಗುವನ್ನು ಹೊಮ್ಮಿಸುವ ಕೆಲಸವನ್ನು ಹನಿದನಿ ಮಾಡಿದೆ.

ಓದುಗರ ಪ್ರತಿಕ್ರಿಯೆ :

“ಉದಯವಾಣಿ’ಯಲ್ಲಿ ನಿಮ್ಮ ಹನಿಗವನವನ್ನು ತಪ್ಪದೆ ಓದುತ್ತೇನೆ. ನಾನು ಮೊದಲು ಓದುವುದು ನಿಮ್ಮ ಹನಿದನಿ’ ಎಂದು ಅನೇಕರು ನನ್ನ ಬಳಿ ಹೇಳಿದ್ದಾರೆ. ಹನಿದನಿಯನ್ನು ದಿನವೂ ತಮ್ಮ ವಾಟ್ಸ್‌ಆ್ಯಪ್‌  ಸ್ಟೇಟಸ್‌ನಲ್ಲಿ ಹಾಕಿಕೊಳ್ಳು ವವರಿದ್ದಾರೆ.  ಕದ್ದು ತಮ್ಮ ಹೆಸರಿನಲ್ಲಿ ಫೇಸುºಕ್‌ನಲ್ಲಿ ಪೋಸ್ಟ್‌ ಮಾಡುವವರಿದ್ದಾರೆ. ಕೆಲವೊಮ್ಮೆ ಮೆಚ್ಚುಗೆಯ ಜತೆಗೆ ಬೈಗುಳಗಳೂ ಬಂದದ್ದುಂಟು.   ಹನಿಗವನದ ಅಂಕಣ ಒಂದು ಹೊಸ ಪ್ರಯೋಗ. ಇದು ಇಷ್ಟು ದೀರ್ಘ‌ಕಾಲ ನಡೆಯುತ್ತದೆ ಎಂದು ನಾನು ಊಹಿಸಿರಲಿಲ್ಲ.  ಪತ್ರಿಕೆಯ ಬೆಂಬಲ ಮತ್ತು ಓದುಗರ ಪ್ರೋತ್ಸಾಹವೇ ಈ ಅಂಕಣದ ಯಶಸ್ಸಿಗೆ ಕಾರಣ.

 

ಎಚ್‌. ಡುಂಡಿರಾಜ್‌

Advertisement

Udayavani is now on Telegram. Click here to join our channel and stay updated with the latest news.

Next